Moodbidri Suicide, Mangalore: ಮೂಡುಬಿದ್ರೆ ; ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ ಪ್ರಿಯಕರ ತಾನೂ ಆತ್ಮಹತ್ಯೆ ! 

28-05-25 11:16 pm       Mangalore Correspondent   ಕರಾವಳಿ

​​​​​ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ, ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ನಡೆದಿದೆ.

ಮಂಗಳೂರು, ಮೇ 28 : ವಿವಾಹಿತ ಮಹಿಳೆಯನ್ನು ಬಾವಿಗೆ ದೂಡಿ, ಪ್ರಿಯಕರ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಮೂಡಬಿದಿರೆ ತಾಲೂಕಿನ ಬಡಗಮಿಜಾರು ಮರಕಡ ಎಂಬಲ್ಲಿ ನಡೆದಿದೆ.

ಬಡಗಮಿಜಾರು ನಿವಾಸಿ ವಿವಾಹಿತ ಮಹಿಳೆ ನಮಿಕ್ಷಾ ಶೆಟ್ಟಿ (29) ಹಾಗೂ ಆಕೆಯ ಪ್ರೇಮಿ ಎನ್ನಲಾದ ನಿಡ್ಡೋಡಿ ಮೂಲದ ಪ್ರಶಾಂತ್ ಮೃತಪಟ್ಟವರು ಎಂದು ತಿಳಿದುಬಂದಿದೆ. ನಮೀಕ್ಷಾಗೆ ಮದುವೆಯಾಗಿದ್ದು, ಇಬ್ಬರು ಪುಟ್ಟ ಗಂಡು ಮಕ್ಕಳಿದ್ದಾರೆ. ಪತಿ ಸತೀಶ್ ಪೂನಾದಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಪ್ರಶಾಂತ್ ಮೂಲತಃ ಬಾಗಲಕೋಟೆ ನಿವಾಸಿಯಾಗಿದ್ದು, ಮದುವೆಯಾಗಿ ವಿಚ್ಛೇದನ ಆಗಿದೆ. ನಮೀಕ್ಷಾ ಶೆಟ್ಟಿಗೆ ಇನ್ ಸ್ಟಾ ಗ್ರಾಂ ಮೂಲಕ ಪ್ರಶಾಂತ್ ಪರಿಚಯವಾಗಿತ್ತು.

ನಮೀಕ್ಷಾ ಗಂಡನ ಜೊತೆ ಸಂಸಾರ ಸರಿ ಹೋಗದೆ ಮಕ್ಕಳೊಂದಿಗೆ ತಂದೆಯ ಮನೆಯಲ್ಲಿಯೇ ವಾಸವಾಗಿದ್ದರು‌. ಪ್ರಿಯಕರ ಪ್ರಶಾಂತ್, ನಮೀಕ್ಷಾ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಬುಧವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮತ್ತೆ ಬಂದಿದ್ದು, ಈ ಸಂದರ್ಭದಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆ ಎನ್ನಲಾಗಿದೆ. 

ಇಬ್ಬರ ನಡುವಿನ ಜಗಳ ತಾರಕಕ್ಕೆ ಏರಿದ್ದು ಪ್ರೇಯಸಿ ನಮೀಕ್ಷಾಳನ್ನು ಬಾವಿಗೆ ದೂಡಿದ್ದು ಬಳಿಕ ಆಕೆಯ ಮಗು ನೋಡಿದ ಹಿನ್ನೆಲೆ ಪ್ರಶಾಂತ್ ತಾನೂ ಬಾವಿಗೆ ಹಾರಿದ್ದಾನೆ ಎಂದು ಹೇಳಲಾಗುತ್ತಿದೆ. ಅಗ್ನಿಶಾಮಕ ಸಿಬ್ಬಂದಿ ಮೃತದೇಹವನ್ನು ಬಾವಿಯಿಂದ ಮೇಲೆತ್ತಿದ್ದು ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Moodbidri Incident, Woman Found in Well, Man Dies by Suicide.