Suhas Shetty, PFI, Bajpe Chalo: ಪಿಎಫ್ಐ ಭಯೋತ್ಪಾದಕರೇ ಕೊಲೆ ಕೃತ್ಯ ಎಸಗಿದ್ದಾರೆ, ಹಿಂದುತ್ವವಾದಿಗಳೇ ಇವರ ಟಾರ್ಗೆಟ್, ನಿಷೇಧ ಆಗಿದ್ದರೂ ಚಟುವಟಿಕೆ ಸಕ್ರಿಯ ; ಎನ್ಐಎ ತನಿಖೆಯಿಂದಷ್ಟೇ ಸಂಚುಕೋರರ ಪತ್ತೆ ಸಾಧ್ಯ, ಬಜ್ಪೆಯಲ್ಲಿ ಜನಾಗ್ರಹ ಸಭೆ

25-05-25 10:27 pm       Mangalore Correspondent   ಕರಾವಳಿ

ಸುಹಾಸ್ ಶೆಟ್ಟಿ ಅವರನ್ನು ಯಾವುದೋ ಪ್ರತೀಕಾರಕ್ಕೋ, ಸೇಡಿನ ಕಾರಣಕ್ಕೋ ಕೊಲೆ ಮಾಡಿದ್ದಲ್ಲ. ಪಿಎಫ್ಐ ಭಯೋತ್ಪಾದಕ ಸಂಘಟನೆಯೇ ಈ ಕೃತ್ಯ ಎಸಗಿದ್ದು, ಐದಾರು ತಿಂಗಳಿನಿಂದ ಸಂಚು ರೂಪಿಸಿ ವ್ಯವಸ್ಥಿತವಾಗಿ ಕೊಲೆ ಮಾಡಿದೆ.

ಮಂಗಳೂರು, ಮೇ 25 : ಸುಹಾಸ್ ಶೆಟ್ಟಿ ಅವರನ್ನು ಯಾವುದೋ ಪ್ರತೀಕಾರಕ್ಕೋ, ಸೇಡಿನ ಕಾರಣಕ್ಕೋ ಕೊಲೆ ಮಾಡಿದ್ದಲ್ಲ. ಪಿಎಫ್ಐ ಭಯೋತ್ಪಾದಕ ಸಂಘಟನೆಯೇ ಈ ಕೃತ್ಯ ಎಸಗಿದ್ದು, ಐದಾರು ತಿಂಗಳಿನಿಂದ ಸಂಚು ರೂಪಿಸಿ ವ್ಯವಸ್ಥಿತವಾಗಿ ಕೊಲೆ ಮಾಡಿದೆ. ಹಿಂದು ಸಮಾಜವನ್ನು ಭಯಪಡಿಸುವುದೇ ಇದರ ಉದ್ದೇಶವಾಗಿತ್ತು. ಇದಕ್ಕಾಗಿ ಈ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ನೀಡಬೇಕಾಗಿದೆ ಮತ್ತು ಕೃತ್ಯ ಎಸಗಿದವರು ಯಾರು, ಅದರ ಹಿಂದಿರೋರು ಯಾರೆನ್ನುವುದನ್ನು ಪತ್ತೆಹಚ್ಚಿ ಇನ್ನೆಂದೂ ಇಂತಹ ಕೊಲೆ ಕೃತ್ಯ ಆಗದಂತೆ ಸಂದೇಶ ನೀಡಬೇಕಾಗಿದೆ ಎಂದು ಹಿಂದು ಜಾಗರಣ ವೇದಿಕೆ ಮುಖಂಡ ಶ್ರೀಕಾಂತ್ ಶೆಟ್ಟಿ ಹೇಳಿದ್ದಾರೆ.

ಬಜ್ಪೆಯಲ್ಲಿ ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ವಿಶ್ವ ಹಿಂದು ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಜನಾಗ್ರಹ ಸಭೆಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸಿಗರು ಸುಹಾಸ್ ಶೆಟ್ಟಿಯನ್ನು ರೌಡಿ ಎಂದು ಕರೆದು ಆತನ ಮನೆಗೆ ಹೋಗಲ್ಲ ಎಂದರು. ಆದರೆ ನಾವು ಹೇಳುತ್ತಿದ್ದೇವೆ, ಇಲ್ಲಿ ಸೇರಿದ ನಾನೂ ಸಹಿತ 40 ಪ್ರತಿಶತ ಎಲ್ಲ ಕಾರ್ಯಕರ್ತರೂ ರೌಡಿಗಳೇ ಆಗಿದ್ದಾರೆ. ಆದರೆ ನಾವೆಲ್ಲ ಹಿಂದುತ್ವಕ್ಕಾಗಿ ರೌಡಿ ಪಟ್ಟ ಅಂಟಿಸಿಕೊಂಡವರು. ಯಾರದ್ದೋ ಹಟ್ಟಿಗೆ ನುಗ್ಗಿ ದನ ಕದ್ದಿದ್ದಕ್ಕೋ ಅಥವಾ ಇನ್ಯಾರನ್ನೋ ಕೊಲೆ, ದರೋಡೆ ಮಾಡಿದ್ದಕ್ಕಾಗಿ ಅಲ್ಲ.

ಹಿಂದು ಕಾರ್ಯಕರ್ತನನ್ನು ರೌಡಿಯೆಂದು ಜರೆದ ರಾಜ್ಯದ ಗೃಹ ಸಚಿವರು ಗೋಲ್ಡ್ ಸ್ಮಗ್ಲಿಂಗ್ ಮಾಡಿದವರಿಗೆ 40 ಲಕ್ಷ ರೂಪಾಯಿ ನೀಡಿದ್ದಕ್ಕಾಗಿ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕಾಂಗ್ರೆಸಿನಲ್ಲಿ ಅದೆಷ್ಟು ರೌಡಿಗಳು ಅಧಿಕಾರ ಸ್ಥಾನದಲ್ಲಿದ್ದಾರೆ. ಆದರೆ ಇಲ್ಲಿ ಗೋವಿಗಾಗಿ, ಹಿಂದುತ್ವಕ್ಕಾಗಿ ಹೋರಾಟ ನಡೆಸಿದವರು ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ರೌಡಿಗಳಾಗಿದ್ದಾರೆ. ಭಯೋತ್ಪಾದಕರ ಕೈಯಲ್ಲಿ ಕೊಲೆಯಾದ ಸಂದರ್ಭದಲ್ಲಿ ರೌಡಿಗಳೆಂದು ಜರೆದು ಕಾಂಗ್ರೆಸಿಗರು ಅವರ ಮನೆಗೂ ಭೇಟಿ ಕೊಡಲಿಲ್ಲ. ಇಂತಹ ಸ್ಥಿತಿ ಇನ್ಯಾವತ್ತೂ ಬರಬಾರದು ಎನ್ನುವ ಕಾರಣಕ್ಕೆ ನಾವು ಎನ್ಐಎ ತನಿಖೆಗೆ ಕೋರುತ್ತಿದ್ದೇವೆ. ಕೊಲೆ ಕೃತ್ಯದಲ್ಲಿ ಸ್ಥಳೀಯ ಪೊಲೀಸರದ್ದೇ ಕೈವಾಡ ಇರುವ ಶಂಕೆ ಇರುವುದರಿಂದ ಎನ್ಐಎ ತನಿಖೆಯಾದರೆ ಹಿಂದಿರುವ ಎಲ್ಲ ಶಕ್ತಿಯೂ ಹೊರಗೆ ಬರುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

ಕೇರಳದ ಎನ್ ಡಿಎಫ್, ಕರ್ನಾಟಕದ ಕೆಎಫ್ ಡಿ ಸೇರಿ ಪಿಎಫ್ಐ ಹುಟ್ಟಿಕೊಂಡಿತ್ತು. 2047ರ ವೇಳೆಗೆ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಗುರಿಯಿಟ್ಟು ಈ ಸಂಘಟನೆ ಹುಟ್ಟಿತ್ತು. ಪಿಎಫ್ಐ ಹಣೆಪಟ್ಟಿ ನಿಷೇಧ ಆಗಿದ್ದರೂ, ಇದರ ಕಾರ್ಯ ಚಟುವಟಿಕೆ ಎಲ್ಲ ಕಡೆಯೂ ವಿಸ್ತರಣೆಗೊಳ್ಳುತ್ತಿದೆ. ಹಿಂದುತ್ವಕ್ಕಾಗಿ ಕೆಲಸ ಮಾಡುವವರನ್ನು ಟಾರ್ಗೆಟ್ ಮಾಡಿ ಕೊಲ್ಲುವುದು, ಹಿಂದುಗಳನ್ನು ಭಯಪಡಿಸುವುದು, ಆಮೂಲಕ ಸಮಾಜದಲ್ಲಿ ಪ್ರಭುತ್ವ ಸಾಧಿಸುವುದು ಇವರ ಅಜೆಂಡಾ. ಇದೇ ಅಜೆಂಡಾ ಇಟ್ಟುಕೊಂಡು ಸಾವಿರ ವರ್ಷಗಳಿಂದಲೂ ಭಾರತದ ಸಂಸ್ಕೃತಿಯ ಮೇಲೆ ದಾಳಿಯಾಗಿತ್ತು. ಆದರೆ ನಮ್ಮ ಸಂಸ್ಕೃತಿಯೇ ನಮ್ಮನ್ನು ರಕ್ಷಣೆ ಮಾಡುತ್ತ ಬಂದಿದೆ. ಇವರ ರಕ್ತದಾಹಕ್ಕೆ ನಮ್ಮಲ್ಲಿ ರಕ್ತ ಕೊಡುವವರು ಇದ್ದಾರೆ, ಆ ಶಕ್ತಿಯನ್ನು ಜಗನ್ಮಾತೆ ಹಿಂದು ಸಮಾಜಕ್ಕೆ ನೀಡಿದ್ದಾಳೆ. ಆದರೆ ರಕ್ತ ಚೆಲ್ಲಿದ್ದು ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹಿಂದು ಸಮಾಜದ್ದು ಎಂದು ಶ್ರೀಕಾಂತ್ ಶೆಟ್ಟಿ ಹೇಳಿದರು.  

ಶಾಸಕ ಉಮಾನಾಥ ಕೋಟ್ಯಾನ್ ಮಾನತಾಡಿ, ಸುಹಾಸ್ ಶೆಟ್ಟಿಯನ್ನು ಕೊಲ್ಲುವುದಾಗಿ ಒಂದು ತಿಂಗಳ ಹಿಂದೆಯೇ ಸ್ಕೆಚ್ ಹಾಕಿದ್ದ ವಿಡಿಯೋ ವೈರಲ್ ಆಗಿದೆ. ಹಾಗಾದ್ರೆ, ನಮ್ಮ ಪೊಲೀಸರಿಗೆ ಯಾಕೆ ಇದು ತಿಳಿಯಲಿಲ್ಲ. ಅವರನ್ನು ಯಾಕೆ ಬಂಧಿಸಲಿಲ್ಲ ಎಂದು ಪ್ರಶ್ನಿಸಿದರು. ಅಲ್ಲದೆ, ಬಜ್ಪೆಯ ಒಂದು ಫ್ಲಾಟಿನಲ್ಲಿ ಹಳೆ ರೌಡಿಗಳು, ಪಿಎಫ್ಐ ಕಾರ್ಯಕರ್ತರೇ ತುಂಬಿಕೊಂಡಿದ್ದಾರೆ. ಅದರ ಎದುರಲ್ಲಿಯೇ ಕೊಲೆ ಕೃತ್ಯ ಆಗಿದೆ. ಕೊಲೆಗೂ ಮುನ್ನ ಸುಹಾಸ್ ಶೆಟ್ಟಿಯ ಬಗ್ಗೆ ಪೊಲೀಸರೇ ಮಾಹಿತಿ ಕೊಟ್ಟಿರುವ ಸಂಶಯ ಇದೆ. ಹೀಗಾಗಿ ಸ್ಥಳೀಯ ಪೊಲೀಸರ ಬಗ್ಗೆ ನಂಬಿಕೆ ಇಲ್ಲದಾಗಿದ್ದು, ಎನ್ಐಎ ತನಿಖೆಯಿಂದಷ್ಟೇ ಇದರ ಹಿಂದಿರುವ ಸತ್ಯ ತಿಳಿಯಬಹುದಾಗಿದೆ ಎಂದರು.

ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಪುರುಷೋತ್ತಮ ಆರ್, ಭುಜಂಗ ಕುಲಾಲ್, ಶಿವಾನಂದ ಮೆಂಡನ್, ಸುಹಾಸ್ ಶೆಟ್ಟಿ ತಾಯಿ ಸುಲೋಚನಾ ಶೆಟ್ಟಿ, ತಂದೆ ಮೋಹನ್ ಶೆಟ್ಟಿ ಇದ್ದರು. ಮಳೆಯ ನಡುವೆಯೂ ಸಾವಿರಾರು ಕಾರ್ಯಕರ್ತರು ಸೇರಿದ್ದು, ಸುಹಾಸ್ ಶೆಟ್ಟಿ ಪರವಾಗಿ ಕಾಂಗ್ರೆಸ್ ಸರಕಾರಕ್ಕೆ ಹಕ್ಕೊತ್ತಾಯ ಮಾಡಿದ್ದಾರೆ.

PFI Terrorists Behind the Murder of Suhas Shetty, thousands gather at Bajpe Chalo in Mangalore.