Suhas Shetty Murder Case, Speaker UT Khader, Mangalore: ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; ನನಗೆ ತಿಳಿದಿದ್ದ 'ಸತ್ಯ'ವನ್ನು ಮುಚ್ಚಿಡದೆ ತಿಳಿಸಿದ್ದೇನೆ, ಪೊಲೀಸರು ಅವರ ಕೆಲಸ ಮಾಡಿದ್ದಾರೆ, ಜನರಿಗೆ ನಾನೇನೆಂದು ಗೊತ್ತಿದೆ ; ಸ್ಪೀಕರ್ ಖಾದರ್ ಟಾಂಗ್ 

09-05-25 01:32 pm       Mangalore Correspondent   ಕರಾವಳಿ

ನನ್ನ ಬಗ್ಗೆ ಈ ಜಿಲ್ಲೆಯವರಿಗೆ, ಕ್ಷೇತ್ರದ ಜನರಿಗೆ ಗೊತ್ತಿದೆ. ಅಂದಿನ ವಾತಾವರಣದಲ್ಲಿ ಉದ್ವಿಗ್ನ ಸ್ಥಿತಿ ಕಡಿಮೆಯಾಗಬೇಕೆಂದು ನನಗೆ ತಿಳಿದ ಸತ್ಯವನ್ನು ಹೇಳಿದ್ದೇನೆ.‌ ಪೊಲೀಸರು ಆರೋಪಿಗಳನ್ನು ಹಿಡಿದ ನಂತರ ತಿಳಿಯುತ್ತದೆ ಎಂದೂ ಹೇಳಿದ್ದೆ.‌ ಆನಂತರ, ಪೊಲೀಸರು ಯಾವುದೇ ಅಡಚಣೆ ಇಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ, ಸತ್ಯ ಏನೆಂದು ಹೇಳಿದ್ದಾರೆ. 

ಮಂಗಳೂರು, ಮೇ 9 : ನನ್ನ ಬಗ್ಗೆ ಈ ಜಿಲ್ಲೆಯವರಿಗೆ, ಕ್ಷೇತ್ರದ ಜನರಿಗೆ ಗೊತ್ತಿದೆ. ಅಂದಿನ ವಾತಾವರಣದಲ್ಲಿ ಉದ್ವಿಗ್ನ ಸ್ಥಿತಿ ಕಡಿಮೆಯಾಗಬೇಕೆಂದು ನನಗೆ ತಿಳಿದ ಸತ್ಯವನ್ನು ಹೇಳಿದ್ದೇನೆ.‌ ಪೊಲೀಸರು ಆರೋಪಿಗಳನ್ನು ಹಿಡಿದ ನಂತರ ತಿಳಿಯುತ್ತದೆ ಎಂದೂ ಹೇಳಿದ್ದೆ.‌ ಆನಂತರ, ಪೊಲೀಸರು ಯಾವುದೇ ಅಡಚಣೆ ಇಲ್ಲದೆ ಆರೋಪಿಗಳನ್ನು ಬಂಧಿಸಿದ್ದಾರೆ, ಸತ್ಯ ಏನೆಂದು ಹೇಳಿದ್ದಾರೆ. 

ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಫಾಜಿಲ್ ಕುಟುಂಬವನ್ನು ಸಮರ್ಥಿಸಿ ನೀಡಿದ ಹೇಳಿಕೆ ವಿವಾದಕ್ಕೊಳಗಾದ ಬಗ್ಗೆ ಸ್ಪೀಕರ್ ಯುಟಿ ಖಾದರ್ ಮೇಲಿನಂತೆ ಸ್ಪಷ್ಟನೆ ನೀಡಿದ್ದಾರೆ. ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಕೃತ್ಯ ಮಾಡಿದವರನ್ನು ತಪ್ಪಿಸಿಕೊಳ್ಳದಂತೆ ಪೊಲೀಸರು ಬಂಧಿಸಿದ್ದನ್ನು ಅಭಿನಂದಿಸುತ್ತೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕೆಂದು ಬಯಸುತ್ತೇನೆ ಎಂದು ಹೇಳಿದರು. 

ಯಾರನ್ನು ಕೂಡ ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ‌.‌ ಪ್ರಕರಣ ಸಂಬಂಧಿಸಿ ಎಲ್ಲ ಆರೋಪಿಗಳನ್ನು ಪತ್ತೆಹಚ್ಚಿ ಇಂತಹ ಕೃತ್ಯ ಮುಂದೆ ಆಗದಂತೆ ಮಾಡುವ ಕೆಲಸ ಆಗಬೇಕು. ಆ ಸಮಯದಲ್ಲಿ ನನಗೆ ತಿಳಿದ ಮಾಹಿತಿಯನ್ನು ಗೌಪ್ಯವಾಗಿಡದೆ ಹಂಚಿಕೊಂಡಿದ್ದೇನೆ. ಯಾರು ಏನು ಆರೋಪ ಮಾಡಿದರೂ ಕ್ಷೇತ್ರದ ಜನರು, ಧಾರ್ಮಿಕ ಮುಖಂಡರು ನನ್ನ ಪರವಾಗಿದ್ದಾರೆ. ಟೀಕೆ ಮಾಡೋರು ಮಾಡುತ್ತಾರೆ, ಅದನ್ನು ರಾಜಕೀಯವಾಗಿ ತಗೊಳ್ಳೋದಿಲ್ಲ. ಟೀಕಿಸುವುದು ಅವರವರ ವ್ಯಕ್ತಿತ್ವಕ್ಕೆ ಬಿಟ್ಟ ವಿಚಾರ, ಇವರ ಆರೋಪವನ್ನು ಯಾರು ನಂಬುತ್ತಾರೆ ಅನ್ನೋದು ಕೂಡ ಮುಖ್ಯ. ನನ್ನ ವ್ಯಕ್ತಿತ್ವ ತಿಳಿದವರು ಏನೂ ಅನ್ಕೊಳಲ್ಲ, ಜನರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು. ‌

ಕಳಸದಲ್ಲಿ ಮಹಮ್ಮದ್ ಮುಸ್ತಫಾ ಎಂಬವರು ಕ್ರಿಕೆಟ್ ಮ್ಯಾಚ್ ಗೆ ಕರೆದ ಬಗ್ಗೆ ಕೇಳಿದ ಪ್ರಶ್ನೆಗೆ,  ಕ್ರಿಕೆಟ್ ಮ್ಯಾಚ್ ಗೆ ಎಲ್ಲರೂ ಆಹ್ವಾನಿಸುತ್ತಾರೆ, ಸಾಧ್ಯವಾದರೆ ಹೋಗುತ್ತೇನೆ‌. ಪೋಸ್ಟರ್ ಹಾಕುತ್ತಾರೆ. ನನಗೆ ಅಲ್ಲಿಗೆ ಹೋಗಲು ಆಗಿರಲಿಲ್ಲ. ಪೋಸ್ಟರ್ ಹಾಕಿದರೆ ನನಗೆ ಸಂಬಂಧ ಇದೆಯೆಂದು ಅರ್ಥ ಆಗುತ್ತಾ.. ಯಾರು ಇವತ್ತು ಕೃತ್ಯ ಮಾಡಿದ್ದಾರೋ ಅವರಿಗೆ ಕಠಿಣ ಶಿಕ್ಷೆ ಆಗಬೇಕು. ಜಿಲ್ಲೆಯಲ್ಲಿ ಸೌಹಾರ್ದ ವಾತಾವರಣ ನೆಲೆಸಬೇಕು, ರಾಜಕೀಯ ಮುಖ್ಯ ಅಲ್ಲ ಎಂದರು. 

ವಿದೇಶಿ ಫಂಡಿಂಗ್ ಆಗಿದೆ, ಎನ್ಐಎ ತನಿಖೆ ಆಗಬೇಕೆಂಬ ಒತ್ತಾಯ ಕೇಳಿಬರ್ತಾ ಇದೆಯೆಂಬ ಪ್ರಶ್ನೆಗೆ, ಆಡಳಿತ ಮತ್ತು ಪ್ರತಿ ಪಕ್ಷ ಇದೆ. ಇವರು ಒತ್ತಾಯ ಮಾಡಿದ್ರೆ ಅಗತ್ಯ ಎನಿಸಿದ್ರೆ ತನಿಖೆ ಮಾಡಿಸಬಹುದು‌. ಎನ್ಐಎ ತನಿಖೆ ಮಾಡುವುದಕ್ಕೆ ನಮ್ಮದೇನು ಅಭ್ಯಂತರ ಇಲ್ಲ. ನಾನು ಯಾಕೆ ಆಕ್ಷೇಪ ಮಾಡಬೇಕು, ಏನು ಬೇಕಾದರೂ ಮಾಡಿಕೊಳ್ಳಲಿ. ಇದರ ಕಾರಣಕ್ಕೆ ಸಮಾಜದಲ್ಲಿ ಶಾಂತಿಗೆ ತೊಂದರೆ ಆಗಬಾರದು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು. 

ಸೆ.8-9 ರಂದು ಎಲ್ಲ ರಾಜ್ಯಗಳ ಸ್ಪೀಕರ್ ಸಮಾವೇಶ 

ಅಖಿಲ ಭಾರತ ಮಟ್ಟದಲ್ಲಿ ಎಲ್ಲ ರಾಜ್ಯಗಳು ಮತ್ತು ಲೋಕಸಭೆಯ ಸ್ಪೀಕರ್ ಮತ್ತು ಉಪ ಸ್ಪೀಕರ್ ಗಳ ಸಮಾವೇಶವನ್ನು ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಸೆಪ್ಟಂಬರ್ 8, 9, 10ರಂದು ಬೆಂಗಳೂರಿನಲ್ಲಿ ಸಮಾವೇಶ ಸಂಘಟಿಸಲು ತೀರ್ಮಾನಿಸಲಾಗಿದೆ. 24 ವರ್ಷಗಳ ಬಳಿಕ ಇಂತಹ ಸಮಾವೇಶವನ್ನು ಮಾಡಲಾಗುತ್ತಿದ್ದು ಲೋಕಸಭೆ ಸ್ಪೀಕರ್ ಜೊತೆಗೆ ಮಾತನಾಡಿದ್ದೇನೆ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದ್ದಾರೆ. 

ಸಮಾವೇಶ ಬಳಿಕ 11ರಂದು ಸ್ಪೀಕರ್ ಗಳ ಪ್ರವಾಸ ಹಮ್ಮಿಕೊಂಡಿದ್ದು ಮಂಗಳೂರು, ಮೈಸೂರು ಅಥವಾ ಹಳೆಬೀಡು ಒಂದು ಜಾಗಕ್ಕೆ ಹೋಗಲು ಅವಕಾಶ ಇರುತ್ತದೆ. ದೇಶದ ಎಲ್ಲ ರಾಜ್ಯಗಳ ಎರಡೂ ಸದನಗಳ ಸಭಾಪತಿ, ಉಪ ಸಭಾಪತಿ, ಲೋಕಸಭೆ ಸ್ಪೀಕರ್, ಡೆಪ್ಯುಟಿ ಸ್ಪೀಕರ್, ಜೊತೆಗೆ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ಭಾಗವಹಿಸುತ್ತಾರೆ. ಪ್ರಜಾಪ್ರಭುತ್ವ ಬಗ್ಗೆ ಮತ್ತು ಅಧಿವೇಶನದಲ್ಲಿ ಸ್ಪೀಕರ್ ಪಾತ್ರಗಳ ಬಗ್ಗೆ ಚರ್ಚೆ ನಡೆಯುತ್ತದೆ. ಏನೆಲ್ಲ ವಿಚಾರ ಚರ್ಚೆಯಾಗಬೇಕೆಂದು ಲೋಕಸಭೆ ಸ್ಪೀಕರ್ ನಿರ್ಣಯ ಮಾಡುತ್ತೇವೆ. ಸೆ.8ರಂದು ಸಂಜೆ 6.30ಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಲೋಕಸಭಾ ಸ್ಪೀಕರ್ ಸಮಾವೇಶಕ್ಕೆ ಚಾಲನೆ ಕೊಡುತ್ತಾರೆ. ಉದ್ಘಾಟನೆಗೆ ಶಾಸಕರನ್ನೂ ಕರೆಯುತ್ತೇವೆ ಎಂದು ಖಾದರ್ ಹೇಳಿದರು.

Suhas Shetty Murder Case, I’ve Shared the Truth I Knew, Police Have Done Their Job, People Know Who I Am, Speaker Khader Responds in Mangalore.