ಗುಂಪು ಥಳಿತಕ್ಕೆ ಸಾವು ಪ್ರಕರಣ ; ಕೇರಳ ಮೂಲದ ಯುವಕನೆಂದು ಗುರುತು ಪತ್ತೆ, ಮತ್ತೆ ಐವರ ಬಂಧನ, ದೇಶ ವಿರೋಧಿ ಘೋಷಣೆ ಕೂಗಿದ್ದಕ್ಕೆ ಹಲ್ಲೆ

30-04-25 11:26 am       Mangalore Correspondent   ಕರಾವಳಿ

ಕುಡುಪು ಬಳಿಯಲ್ಲಿ ಯುವಕರ ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಗೀಡಾದ ಪ್ರಕರಣದಲ್ಲಿ ಸಂತ್ರಸ್ತ ಯುವಕನ ಗುರುತು ಪತ್ತೆಯಾಗಿದ್ದು ಕೇರಳದ ವಯನಾಡ್ ಮೂಲದ ಅಶ್ರಫ್ ಎಂದು ಗುರುತಿಸಲಾಗಿದೆ.‌ 

ಮಂಗಳೂರು, ಎ.30 : ಕುಡುಪು ಬಳಿಯಲ್ಲಿ ಯುವಕರ ಗುಂಪಿನಿಂದ ಥಳಿತಕ್ಕೊಳಗಾಗಿ ಹತ್ಯೆಗೀಡಾದ ಪ್ರಕರಣದಲ್ಲಿ ಸಂತ್ರಸ್ತ ಯುವಕನ ಗುರುತು ಪತ್ತೆಯಾಗಿದ್ದು ಕೇರಳದ ವಯನಾಡ್ ಮೂಲದ ಅಶ್ರಫ್ ಎಂದು ಗುರುತಿಸಲಾಗಿದೆ.‌ 

ವಯನಾಡ್ ಜಿಲ್ಲೆಯ ಸುಲ್ತಾನ್ ಬತ್ತೇರಿ ಬಳಿಯ ಪುಲಪ್ಪಳ್ಳಿ ನಿವಾಸಿಯೆಂದು ಪ್ರಾಥಮಿಕ ಮೂಲಗಳಿಂದ ತಿಳಿದುಬಂದಿದ್ದು ಯುವಕನ ಗುರುತು ಪತ್ತೆಗಾಗಿ ಕುಟುಂಬ ಸದಸ್ಯರು ಮಂಗಳೂರಿಗೆ ಆಗಮಿಸಲಿದ್ದಾರೆ. ಪ್ರಕರಣ ಸಂಬಂಧಿಸಿ ಈಗಾಗಲೇ 15 ಜನರನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಇದೀಗ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಯತಿರಾಜ್, ಸಚಿನ್, ಅನಿಲ್, ಸುಶಾಂತ್, ಆದರ್ಶ್ ಬಂಧಿತರು.

ಎಪ್ರಿಲ್ 27ರ ಭಾನುವಾರ ಸಂಜೆ ಕುಡುಪು ಮೈದಾನದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಯುವಕ ದೇಶ ವಿರೋಧಿ‌ ಘೋಷಣೆ ಕೂಗಿದ ವಿಷಯದಲ್ಲಿ ವಾಗ್ವಾದ ನಡೆಸಿ ಸ್ಥಳೀಯ ಯುವಕರು ಹಲ್ಲೆ ನಡೆಸಿದ್ದರು. ಗುಂಪು ಸೇರಿ ಥಳಿಸಿ ಅಲ್ಲಿಯೇ ಬಿಟ್ಟು ಹೋಗಿದ್ದರಿಂದ ಹಲ್ಲೆಗೀಡಾದ ಯುವಕ ಬಳಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾಗಿ ಪ್ರಕರಣ ದಾಖಲಾಗಿದೆ. 

ಮುಸ್ಲಿಂ ಯುವಕನೆಂದು ಧರ್ಮ ದ್ವೇಷದಲ್ಲಿ ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ. ಆದರೆ ಸಾವಿಗೀಡಾದ ವ್ಯಕ್ತಿ ಯಾರೆಂದೇ ಗುರುತು ಸಿಕ್ಕಿರಲಿಲ್ಲ. ಸ್ಥಳೀಯ ಪೊಲೀಸರು ಹೇಳದಿದ್ದರೂ, ಗೃಹ ಸಚಿವ ಪರಮೇಶ್ವರ್ ಪಾಕಿಸ್ತಾನ ಜೊಂದಾಬಾದ್ ಘೋಷಣೆ ಕೂಗಿದ್ದಕ್ಕಾಗಿ ಹಲ್ಲೆ ನಡೆಸಿದ್ದರು ಎಂದಿದ್ದಾರೆ. ‌ಹೀಗಾಗಿ ಮುಸ್ಲಿಂ ಎನ್ನುವುದಕ್ಕಿಂತಲೂ ದೇಶಕ್ಕೆ ವಿರುದ್ಧವಾಗಿ ಘೋಷಣೆ ಹಾಕಿದ್ದಕ್ಕಾಗಿ ಯುವಕರು ಹಲ್ಲೆ ನಡೆಸಿದ್ದರೆಂಬುದು ಕಂಡುಬರುತ್ತದೆ.

Kudupu Mob Lynching Murder Case, Five More Arrested for Assault Over Alleged Anti National Slogans.