ಬ್ರೇಕಿಂಗ್ ನ್ಯೂಸ್
05-12-22 08:43 pm Giridhar Shetty, Mangaluru ಕರಾವಳಿ
ಮಂಗಳೂರು, ಡಿ.5: ಪೊಲೀಸರು ವೃತ್ತಿಪರತೆ ತೋರದಿದ್ದರೆ, ಅಪರಾಧ ವ್ರಕರಣಗಳಲ್ಲಿ ನಿರ್ಲಕ್ಷ್ಯ ತೋರಿದರೆ ಏನಾಗುತ್ತದೆ ಅನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಒಂದೂವರೆ ವರ್ಷದ ಹಿಂದೆ ಪೋಕ್ಸೋ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿ, ಕ್ರಿಮಿನಲ್ ವಕೀಲರ ಚಾಕಚಕ್ಯತೆ ಮತ್ತು ಪೊಲೀಸರು ಚಾರ್ಜ್ ಶೀಟ್ ನಲ್ಲಿ ಹಾಕಿದ್ದ ದೋಷಗಳಿಂದಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾನೆ. ಅಷ್ಟೇ ಅಲ್ಲ, ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿದ್ದ ಕರ್ಮಕ್ಕೆ ಪೊಲೀಸರೇ ಆತನಿಗೆ ದಂಡದ ರೂಪದಲ್ಲಿ 5 ಲಕ್ಷ ರೂ. ಪರಿಹಾರ ಕಟ್ಟಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.
2021ರ ನವೆಂಬರ್ ತಿಂಗಳಲ್ಲಿ ಮಂಗಳೂರಿನ ಕಂಕನಾಡಿ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿತ್ತು. 16 ವರ್ಷದ ಕಾಲೇಜು ಓದುತ್ತಿದ್ದ ಅಪ್ತಾಪ್ತ ಹುಡುಗಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣ. ಕೃತ್ಯದ ಬಗ್ಗೆ ಮೊದಲು ಗ್ರಾಮಾಂತರ ಠಾಣೆಗೆ ದೂರು ಹೋಗಿ, ಬಳಿಕ ಪಾಂಡೇಶ್ವರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಿರ್ಭಯಾ ಪ್ರಕರಣದ ಬಳಿಕ ಹೆಣ್ಮಕ್ಕಳನ್ನು ಕೈಯಲ್ಲಿ ಮುಟ್ಟಿದರೂ, ಪೋಕ್ಸೋ ಕೇಸು ವಿಧಿಸಲ್ಪಡಬೇಕಾಗಿದ್ದರಿಂದ ಆರೋಪಿ ವಿರುದ್ಧ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ (ಪೋಕ್ಸೋ) 8ನೇ ವಿಧಿ ಅನ್ವಯ ಕೇಸು ದಾಖಲಾಗಿತ್ತು. ಆರೋಪಿಯನ್ನು ನವೀನ್ ಸಿಕ್ವೇರ ಎಂದು ಗುರುತಿಸಿ ಸಂತ್ರಸ್ತ ಬಾಲಕಿ ನೀಡಿದ್ದ ದೂರಿನಂತೆ ಕೇಸು ದಾಖಲಾಗಿತ್ತು. ಅದೇ ಆಧಾರದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ಮಹಿಳಾ ಠಾಣೆಗೆ ಒಪ್ಪಿಸಿದ್ದರು.
ಆಗ ಮಹಿಳಾ ಠಾಣೆಯಲ್ಲಿ ಇನ್ಸ್ ಪೆಕ್ಟರ್ ಆಗಿದ್ದ ರೇವತಿ ಮತ್ತು ಸಬ್ ಇನ್ಸ್ ಪೆಕ್ಟರ್ ಆಗಿದ್ದ ರೋಸಮ್ಮ ಅತ್ಯಾಚಾರ ಯತ್ನ (374 ಮತ್ತು 354) ಮತ್ತು ಪೋಕ್ಸೋ ಕಾಯ್ದೆ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಿ, ನೇರವಾಗಿ ಕೋರ್ಟಿಗೆ ಹಾಜರುಪಡಿಸಿ ಜೈಲಿಗೆ ಹಾಕಿದ್ದರು. ಒಂದೇ ಠಾಣೆಯಲ್ಲಿದ್ದರೂ, ಅಧಿಕಾರಿ ಹುದ್ದೆಯಲ್ಲಿದ್ದ ಇಬ್ಬರು ಮಹಿಳೆಯರ ನಡುವೆ ಜಡೆ ಜಟಾಪಟಿ ಇತ್ತು. ಇದರ ಎಫೆಕ್ಟ್ ಠಾಣೆಯ ಮೇಲೂ ಆಗಿತ್ತು. ಇವರ ಕಾರಣದಿಂದ ಠಾಣೆಯ ಇತರೇ ಸಿಬಂದಿ ಕೂಡ ವೃತ್ತಿಪರತೆ ಕಳೆದುಕೊಂಡಿದ್ದರು. ಒಂದೂವರೆ ವರ್ಷದ ಹಿಂದೆ ಠಾಣೆಯ ಒಳಗಿನ ವೈಪರೀತ್ಯ ಹೊರಗೆ ಬಂದು ಮೇಲಧಿಕಾರಿಗಳ ಕುತ್ತಿಗೆ ಹಿಡಿಯುವಂತಾಗಿದ್ದು, ಇದೇ ಠಾಣೆ ಒಳಗೆ ಡ್ಯಾನ್ಸ್ ಮಾಡಿದ ಮತ್ತೊಂದು ವಿಡಿಯೋ ಹೊರಬಂದು ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿದ್ದು ಆನಂತರ ಎಸ್ಐ, ಇನ್ಸ್ ಪೆಕ್ಟರ್ ಸೇರಿ ನಾಲ್ವರು ಸಿಬಂದಿ ಅದೇ ಕಾರಣಕ್ಕೆ ಬೇರೆ ಠಾಣೆಗಳಿಗೆ ಎತ್ತಂಗಡಿ ಆಗಿದ್ದು ಇವರ ಕಾರ್ಯ ಕ್ಷಮತೆಯನ್ನು ಸಾರಿ ಹೇಳಿತ್ತು.
ಇದರ ನಡುವೆಯೇ, ಪೋಕ್ಸೋ ಪ್ರಕರಣದಲ್ಲಿ ಆರೋಪಿ ನವೀನ ಸಿಕ್ವೇರ ವಿರುದ್ಧ ಆರೋಪ ಪಟ್ಟಿ ಕೋರ್ಟಿಗೆ ಸಲ್ಲಿಕೆಯಾಗಿತ್ತು. ಮಹಿಳಾ ಠಾಣೆಯಲ್ಲಿ ಪ್ರತಿ ಪ್ರಕರಣದಲ್ಲಿಯೂ ಎಡವಟ್ಟು ಮಾಡಿಕೊಳ್ತಿದ್ದ ಬಗ್ಗೆ ಕ್ರಿಮಿನಲ್ ವಕೀಲರಿಗೂ ತಿಳಿದಿತ್ತು. ಯಾಕಂದ್ರೆ, ಆ ಠಾಣೆಯಿಂದ ಬರುತ್ತಿದ್ದ ಹೆಚ್ಚಿನ ಅಪರಾಧ ಪ್ರಕರಣಗಳು ಪೊಲೀಸರ ನಿರ್ಲಕ್ಷ್ಯದ ಕಾರಣಕ್ಕೆ ಬಿದ್ದು ಹೋಗುತ್ತಿದ್ದವು. ಉಳ್ಳಾಲದ ಅಂಬ್ಲಮೊಗರು ಮೂಲದ ನವೀನ್ ಸಿಕ್ವೇರ ವಿರುದ್ಧ ಕೋಣಾಜೆ, ಉಳ್ಳಾಲದಲ್ಲಿ ಹತ್ತಕ್ಕೂ ಪ್ರಕರಣಗಳಿದ್ದರೂ, ಅದ್ಯಾವುದನ್ನೂ ಉಲ್ಲೇಖಿಸದೆ ಪೊಲೀಸರು ಚಾರ್ಜ್ ಶೀಟ್ ಹಾಕಿದ್ದರು.
ಕೊಲೆಗಾರನೇ ಆಗಿದ್ದರೂ ವಕೀಲರಿಗೆ ಕಕ್ಷಿದಾರ !
ಯಾವುದೇ ಅಪರಾಧ ಪ್ರಕರಣ ಆಗಿದ್ದರೂ, ವಕೀಲರ ಪಾಲಿಗೆ ಆರೋಪಿಗಳು ಕಕ್ಷಿದಾರರು. ಕೊಲೆ ಮಾಡಿದ್ದರೂ ಅವರನ್ನು ಪಾರು ಮಾಡುವುದಷ್ಟೇ ವಕೀಲರ ಗುರಿಯಾಗಿರುತ್ತದೆ. ಪ್ರತಿ ಪ್ರಕರಣದಲ್ಲಿಯೂ ಪೊಲೀಸರು ಕೋರ್ಟಿಗೆ ಸಲ್ಲಿಸುವ ಆರೋಪ ಪಟ್ಟಿ, ಅದರಲ್ಲಿನ ದೋಷಗಳನ್ನು ಹಿಡಿದೇ ಕೋರ್ಟಿನಲ್ಲಿ ವಕೀಲರು ವಾದ ಮಂಡಿಸುತ್ತಾರೆ. ಹೀಗಾಗಿ ಪೊಲೀಸರು ಮತ್ತು ವಕೀಲರು ಕೋರ್ಟಿನ ಕಟಕಟೆಯಲ್ಲಿ ಪರಸ್ಪರ ವಿರುದ್ಧ ಧ್ರುವಗಳು. ಚಾಣಾಕ್ಷ ಕ್ರಿಮಿನಲ್ ವಕೀಲರು ಪೊಲೀಸರ ವೈಫಲ್ಯ, ಅವರು ದಾಖಲಿಸುವ ಆರೋಪಪಟ್ಟಿಯನ್ನೇ ಬಂಡವಾಳ ಮಾಡ್ಕೊಂಡು ಕೇಸು ಗೆಲ್ಲುತ್ತಾರೆ. ನವೀನ್ ಸಿಕ್ವೇರಾ ಪ್ರಕರಣದಲ್ಲಿಯೂ ಆಗಿದ್ದು ಇದೇ.
ಕ್ರಿಮಿನಲ್ ಪ್ರಕರಣದಲ್ಲಿ ಜೊತೆಗಿರಬೇಕಾಗಿದ್ದ ಪೊಲೀಸರು ಮತ್ತು ಸಂತ್ರಸ್ತ ಯುವತಿಯ ತದ್ವಿರುದ್ಧ ಹೇಳಿಕೆಗಳ ಕಾರಣ ವಕೀಲರು ಕೇಸು ಗೆದ್ದಿದ್ದಾರೆ. ಪ್ರಕರಣದ ಆರೋಪ ಪಟ್ಟಿ ಸಲ್ಲಿಸಿದ್ದ ಇನ್ಸ್ ಪೆಕ್ಟರ್ ರೇವತಿ ಮತ್ತು ಮತ್ತವರ ತಂಡದ ಪೊಲೀಸರು ಸೋತಿದ್ದಾರೆ. ಆರೋಪಿಗೆ ಅಂದಾಜು ವಯಸ್ಸೆಷ್ಟು ಎಂದು ಆರೋಪಿ ಪರ ವಕೀಲರು ಕೇಳಿದಾಗ, ಯುವತಿ 26 ಎಂದಿದ್ದಳು. ಅದೇ ಪ್ರಶ್ನೆಗೆ ಇನ್ಸ್ ಪೆಕ್ಟರ್ 46 ಎಂದಿದ್ದು ವಕೀಲರ ವಾದಕ್ಕೆ ಪುಷ್ಟಿ ಸಿಗುವಂತಾಗಿತ್ತು. ಆನಂತರ, ಆರೋಪಿಯನ್ನು ತೋರಿಸಿ ಈತನೇ ಹೌದಾ ಎಂದು ಕೇಳಿದಾಗ, ಯುವತಿ ಗುರುತು ಹಿಡಿಯಲು ಸೋತಿದ್ದಳು. 46 ವರ್ಷದ ಆರೋಪಿಯ ಮುಖದಲ್ಲಿ ಬೆಳ್ಳಗಿನ ಗಡ್ಡ ಬೆಳೆದಿರುವುದು ಮತ್ತು ಯುವತಿ ಹೇಳುತ್ತಿರುವ ಯುವಕನಲ್ಲಿ ಇಂಥ ಗಡ್ಡ ಇರುವುದು ಸಾಧ್ಯವಿಲ್ಲ. ಹೀಗಾಗಿ ಯುವತಿ ಖಚಿತವಾಗಿಯೇ ಹೇಳುತ್ತಿದ್ದಾಳೆ ಎಂಬ ವಕೀಲರ ವಾದಕ್ಕೆ ಮನ್ನಣೆ ಸಿಕ್ಕಿತ್ತು. ಅಷ್ಟೇ ಅಲ್ಲ, ಪೊಲೀಸರು ನಿರಪರಾಧಿಯನ್ನು ಬಂಧಿಸಿ ಜೈಲಿನಲ್ಲಿಟ್ಟಿದ್ದಾರೆ. ಅಪರಾಧಿಗೆ ಶಿಕ್ಷೆಯಾಗದಿದ್ದರೂ ಪರವಾಗಿಲ್ಲ. ನಿರಪರಾಧಿಗೆ ಶಿಕ್ಷೆ ಆಗಬಾರದು ಅನ್ನುತ್ತದೆ ನಮ್ಮ ಕಾನೂನು. ಹಾಗಿರುವಾಗ ನಮ್ಮ ಪೊಲೀಸರು ಆರೋಪಿಯ ಪೂರ್ವಾಪರ ವಿಚಾರಿಸದೆ, ಆತನ ಹೇಳಿಕೆಯನ್ನೂ ಪಡೆಯದೇ ಗ್ರಾಮಾಂತರ ಪೊಲೀಸರು ಹಿಡಿದು ಕೊಟ್ಟ ಆರೋಪಿಯನ್ನು ಜೈಲಿಗೆ ತಳ್ಳಿದ್ದಾರೆ. ಇವರಿಗೆ ಸೂಕ್ತ ದಂಡ ವಿಧಿಸಬೇಕು ಎಂದು ನ್ಯಾಯಾಧೀಶರಲ್ಲಿ ಕೇಳಿಕೊಂಡಿದ್ದಾರೆ.
ಆರೋಪಿ ಪರ ವಕೀಲರ ಸಮರ್ಥ ವಾದ, ಯುವತಿ ಮತ್ತು ಪೊಲೀಸರ ಪರ ಇರಬೇಕಾದ ಪಬ್ಲಿಕ್ ಪ್ರಾಸಿಕ್ಯೂಟರ್ ಕರ್ತವ್ಯದಲ್ಲಿ ಸೋತಿದ್ದು ನ್ಯಾಯಾಧೀಶರು ಪೊಲೀಸರ ವಿರುದ್ಧವೇ ದಂಡ ವಿಧಿಸಲು ಹಾದಿ ಮಾಡಿಕೊಟ್ಟಿತ್ತು. ಭಾರತೀಯ ಕಾನೂನಿನಲ್ಲಿ ನ್ಯಾಯಾಧೀಶರು ಪೊಲೀಸರು ನೀಡುವ ಸಾಕ್ಷ್ಯ ಮತ್ತು ವಕೀಲರ ವಾದ ಮಂಡನೆಯನ್ನೇ ಆಧಾರವಾಗಿಟ್ಟು ತೀರ್ಪು ಕೊಡುತ್ತಾರೆ. ಇದೇ ನೀತಿಯಡಿ, ಆರೋಪಿ ನವೀನ್ ಸಿಕ್ವೇರಾನನ್ನು ಖುಲಾಸೆಗೊಳಿಸಿದ್ದಲ್ಲದೆ, ನಿರಪರಾಧಿಯನ್ನು ಜೈಲಿನಲ್ಲಿಟ್ಟಿದ್ದಾರೆಂದು ವಕೀಲರು ಸಾಬೀತು ಪಡಿಸಿದ್ದರಿಂದ ಇಬ್ಬರು ಪೊಲೀಸ್ ಅಧಿಕಾರಿಗಳಿಗೆ ಐದು ಲಕ್ಷ ರೂ. ದಂಡ ವಿಧಿಸಿದ್ದಾರೆ. ಅಲ್ಲದೆ, ದಂಡವನ್ನು ಆರೋಪಿಗೆ ನೀಡುವಂತೆ ಆದೇಶ ಮಾಡಿದ್ದು ಪೊಲೀಸರಿಗೆ ಕಪಾಳಮೋಕ್ಷ ಮಾಡಿದಂತಾಗಿದೆ. ಬಹುಶಃ ಇಂತಹ ನಿದರ್ಶನ ಈ ಹಿಂದೆ ಯಾವತ್ತು ಮಂಗಳೂರಿನಲ್ಲಿ ಆಗಿದ್ದಿಲ್ಲ. ಮಂಗಳೂರಿನ ಪೊಲೀಸರ ವೃತ್ತಿಪರತೆ ಮತ್ತು ಕರ್ತವ್ಯ ನಿಷ್ಠೆಗೆ ಕನ್ನಡಿ ಹಿಡಿಯುವಂತೆ ತೀರ್ಪು ಕೊಟ್ಟಿದ್ದಾರೆ. ಇದರಿಂದ ಒಂದೆಡೆ ಪೊಲೀಸರ ಮೇಲಿನ ನಂಬಿಕೆ ಹೋಗುವಂತಾಗಿದ್ದರೆ, ಹಾಗಾದ್ರೆ ನೈಜ ಆರೋಪಿ ಯಾರು, ಆತನನ್ನು ಪತ್ತೆ ಮಾಡಬೇಡವೇ ಎನ್ನುವ ಪ್ರಶ್ನೆ ಹುಟ್ಟುವಂತೆ ಮಾಡಿದೆ.
ಹಾಗಾದ್ರೆ ನೈಜ ಆರೋಪಿ ಯಾರು ?
ಸಾಮಾನ್ಯವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರು ಏನೇ ಸಾಕ್ಷ್ಯ ಒದಗಿಸಿದರೂ, ಕೊನೆಗೆ ಗೆಲ್ಲುವುದು ಕ್ರಿಮಿನಲ್ ವಕೀಲರೇ ಆಗಿರುತ್ತಾರೆ. ಪಬ್ಲಿಕ್ ಪ್ರಾಸಿಕ್ಯೂಟರ್ ಸಮರ್ಥನಿದ್ದರೆ ಮಾತ್ರ, ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯಾಗುತ್ತದೆ. ಸದ್ರಿ ಪ್ರಕರಣದಲ್ಲಿ ನವೀನ್ ಸಿಕ್ವೇರಾ ಆರೋಪಿ ಅಲ್ಲ ಎಂದಾದರೆ, ನೈಜ ಆರೋಪಿ ಯಾರು ಅನ್ನುವ ಪ್ರಶ್ನೆ ಬರುತ್ತದೆ. ಯಾಕಂದ್ರೆ, ಈ ಪ್ರಕರಣದಲ್ಲಿ ದೂರು ನೀಡಿದವರು ಅಪರಾಧದ ಬಗ್ಗೆ ಅರಿವು ಹೊಂದಿದ್ದ 16 ವರ್ಷದ ಬಾಲಕಿ. ಅದಲ್ಲದೆ, ಆರೋಪಿಗೂ ಯುವತಿಯ ಸೋದರನಿಗೂ ಸಂಪರ್ಕ ಇತ್ತು. ಜೊತೆಗೇ ಕೆಲಸ ಮಾಡಿಕೊಂಡಿದ್ದರು ಅನ್ನುವ ಕಾರಣದಿಂದ ಆರೋಪಿ ಬಗ್ಗೆ ತಿಳಿದಿದ್ದರಿಂದಲೇ ಪೊಲೀಸರು ಅರೆಸ್ಟ್ ಮಾಡಿದ್ದರು. ಆದರೆ ಪೊಲೀಸರು ಮಾಡಿದ್ದ ಎಡವಟ್ಟಿನ ಕಾರಣಕ್ಕೆ ನ್ಯಾಯಾಲಯ ಮತ್ತು ಕ್ರಿಮಿನಲ್ ವಕೀಲರು ಚೆನ್ನಾಗಿಯೇ ಜಾಡಿಸಿಬಿಟ್ಟಿದ್ದಾರೆ. ಹೀಗಿದ್ದರೂ, ಪ್ರಕರಣದ ಬಗ್ಗೆ ಕೇಳಿದರೆ ಗ್ರಾಮಾಂತರ ಪೊಲೀಸರು ಆರೋಪಿ ಆತನೇ ಎಂದು ಹೇಳುತ್ತಾರೆ. ಚಾರ್ಜ್ ಶೀಟಲ್ಲಿ ಮಾಡಿದ್ದ ಎಡವಟ್ಟು ಮತ್ತು ಯುವತಿಯ ಉಲ್ಟಾ ಹೇಳಿಕೆಯಿಂದಾಗಿ ಇಂಥ ಸ್ಥಿತಿಯಾಗಿದೆ ಎನ್ನುತ್ತಾರೆ.
ಇದೇ ಕಾರಣಕ್ಕೆ ಕೆಲವೊಮ್ಮೆ ಭಾರತದ ಕಾನೂನು ದುರ್ಬಲ ಎಂದು ಹಲುಬುವುದಿದೆ. ಆದರೆ ಅದೇ ಕಾನೂನನ್ನು ಸಮರ್ಥವಾಗಿ ಬಳಸ್ಕೊಂಡಲ್ಲಿ ಎಂಥದ್ದೇ ನಿಷ್ಣಾತ ಅಪರಾಧಿಯೇ ಆಗಿದ್ದರೂ ಗಲ್ಲಿಗೇರಿಸಬಲ್ಲ ತಾಕತ್ತು ನಮ್ಮ ಸಂವಿಧಾನಕ್ಕಿದೆ. ಸದ್ರಿ ಪ್ರಕರಣದಲ್ಲಿ ನ್ಯಾಯಾಧೀಶರು, ಆರೋಪಿ ಯಾರೆಂದು ಪತ್ತೆ ಮಾಡುವಂತೆ ಆದೇಶ ಮಾಡಿಲ್ಲ. ಮಾಡುತ್ತಿದ್ದರೆ, ಕತೆ ಬೇರೆ ಆಗಿರುತ್ತಿತ್ತೋ ಏನೋ. ಯಾಕಂದ್ರೆ, ಪೋಕ್ಸೋ ಪ್ರಕರಣದಲ್ಲಿ 164 ಸೆಕ್ಷನ್ ಅಡಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದ ಯುವತಿ ಸುಳ್ಳು ದೂರು ನೀಡಿದಳೇ ಎಂದು ಪ್ರತಿಯಾಗಿ ಕೇಸು ಹಾಕುವ ಅವಕಾಶವೂ ಪೊಲೀಸರಿಗಿತ್ತು. ಕೇವಲ ಸಿಕ್ವೇರ ಎನ್ನುವ ಸರ್ ನೇಮ್ ಮತ್ತು ಆತನ ವರ್ಷದ ಕಾರಣಕ್ಕೆ ಕೇಸು ಬಿದ್ದು ಹೋಗಬೇಕಿಲ್ಲ. ಕೆಲವರ ನಿರ್ಲಕ್ಷ್ಯ, ಕೋರ್ಟಿಗೆ ಬೇಕಾದ ಸಾಕ್ಷ್ಯದ ಕೊರತೆ ಕಾರಣಕ್ಕೆ ಕೇಸು ಬಿದ್ದು ಹೋಗುತ್ತದೆ. ಈ ಪ್ರಕರಣದಲ್ಲಿಯೂ ಅದೇ ಆಗಿಬಿಟ್ಟಿದೆ. ಈ ಬಗ್ಗೆ ಕೇಸು ಗೆದ್ದ ವಕೀಲ ರಾಜೇಶ್ ಅಮ್ಟಾಡಿ ಅವರಲ್ಲಿ ಹಾಗಾದರೆ ನೈಜ ಆರೋಪಿ ಯಾರೆಂದು ಕೇಳಿದರೆ, ಭಾರತದ ಕ್ರೈಮ್ ಇತಿಹಾಸದಲ್ಲೇ ಆರೋಪಿ ಯಾರೆಂದು ನಮ್ಮ ಕೋರ್ಟ್ ಕೇಳಿದ್ದಿಲ್ಲ. ನಮ್ಮ ಕೆಲಸ ನಾವು ಮಾಡಿದ್ದೇವೆ ಅಷ್ಟೇ ಎನ್ನುತ್ತಾರೆ. ಇದೇ ದುರಂತ ನೋಡಿ.
Mangalore court ordered two women police officers to pay fine of Rs five lac for arresting a wrong person and keeping him in judicial custody for one year. Pocso Court announced the verdict and asked the Inspector of Police Revathi and Sub-Inspector of Police Rosamma PP to pay the fine amount from their salaries for arresting the wrong person of the same name as the accused in a POCSO case. The amount will be handed over to the victim as compensation.
25-06-25 01:09 pm
HK News Desk
Bangalore, Reels, Death: 12 ವರ್ಷದ ಪ್ರೀತಿ ಜಗಳದ...
24-06-25 10:42 pm
Chikkamagaluru Student Suicide, Uniform: ಚಿಕ್...
24-06-25 10:15 pm
Tumakuru Suicide, Instagram Reels: ರೀಲ್ಸ್ ವಿಚ...
24-06-25 08:16 pm
FIR Ex MP Anantkumar Hegde: ಕಾರು ಓವರ್ ಟೇಕ್ ಮಾ...
24-06-25 05:23 pm
25-06-25 11:10 am
HK News Desk
ಇರಾನ್ –ಇಸ್ರೇಲ್ ಕದನ ವಿರಾಮ ಘೋಷಿಸಿದ ಡೊನಾಲ್ಡ್ ಟ್ರ...
24-06-25 12:03 pm
ಅಮೆರಿಕದ ಮೇಲೆ ತಿರುಗಿಬಿದ್ದ ಇರಾನ್ ! ಕತಾರ್ನಲ್ಲಿರ...
24-06-25 01:02 am
NEET ಪರೀಕ್ಷೆಯಲ್ಲಿ ಮಗಳಿಗೆ ಕಡಿಮೆ ಅಂಕ ; ಕೂಲಿನಿಂದ...
23-06-25 08:54 pm
Rapper Tommy Genesis, Controversy: ಹಿಂದು ದೇವತ...
23-06-25 04:37 pm
24-06-25 09:49 pm
Mangalore Correspondent
Mangalore, College Student Suicide: ಕಲಿಕೆಯಲ್ಲ...
24-06-25 01:36 pm
Iran Qatar, War, Mangalore Flight: ಗಲ್ಫ್ ರಾಷ್...
24-06-25 11:19 am
Zakariya Jokatte, Mangalore: ಮಂಗಳೂರಿನಲ್ಲಿ ಸ್ಕ...
23-06-25 11:01 pm
Udupi BJP, Kishore Kumar: ಉಡುಪಿ ಬಿಜೆಪಿಯಲ್ಲಿ ಬ...
23-06-25 10:28 pm
24-06-25 09:51 pm
HK News Desk
Bangalore Chit Fund Scam, 10 Crore: ಚೀಟಿ ಹೆಸ್...
24-06-25 07:39 pm
Davanagere Rape: ಮನೆಯ ಮುಂದೆ ಆಟವಾಡುತ್ತಿದ್ದ 7 ವ...
23-06-25 08:51 pm
Manipal, Udupi Murder: ಮಣಿಪಾಲ ; ಹೆತ್ತ ತಾಯಿಯನ್...
23-06-25 11:47 am
Sandhya Pavithra Nagaraj Fraud; ಸೌಜನ್ಯಾ ಹೆಸರಿ...
21-06-25 08:58 pm