ಕಣ್ಣಿಗೆ ಕರಿ ಮೆತ್ತಿಕೊಂಡು ಬುರ್ಖಾದಲ್ಲೇ ಓಡಾಡ್ತಿದ್ದ ಉಳ್ಳಾಲದ ಪಂಟರ್ ಸುರ್ಮೋ ಇಮ್ರಾನ್ ಪೊಲೀಸ್ ಬಲೆಗೆ ; 23 ಕೇಸು -ಕೋರ್ಟ್ ವಾರೆಂಟು, ಪೊಲೀಸರ ಕಣ್ತಪ್ಪಿಸಲು ಮಾರು ವೇಷದಲ್ಲಿದ್ದ ಟಾರ್ಗೆಟ್ ಇಲ್ಯಾಸ್ ಸಹಚರ !

14-07-26 09:10 pm       HK News Staffer   ಕ್ರೈಂ

ಉಳ್ಳಾಲ ಠಾಣೆಯಿಂದ ಕೂಗಳತೆ ದೂರದಲ್ಲಿದ್ದರೂ ಕಣ್ಣಿಗೆ ದಪ್ಪ ಕಾಡಿಗೆ ಹಚ್ಚಿ ಬುರ್ಖಾ ಧರಿಸಿಕೊಂಡು ಖಾಕಿ ತೊಟ್ಟ ಪೊಲೀಸರನ್ನು ಯಾಮಾರಿಸುತ್ತ ಕೋರ್ಟ್ ವಾರೆಂಟಿಗೂ ಕ್ಯಾರೆನ್ನದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಐನಾತಿ ರೌಡಿಯೊಬ್ಬನನ್ನು ಉಳ್ಳಾಲ ಪೊಲೀಸರು ಕಡೆಗೂ ಬಂಧಿಸಿದ್ದಾರೆ.

ಮಂಗಳೂರು, ಜುಲೈ 14: ಉಳ್ಳಾಲ ಠಾಣೆಯಿಂದ ಕೂಗಳತೆ ದೂರದಲ್ಲಿದ್ದರೂ ಕಣ್ಣಿಗೆ ದಪ್ಪ ಕಾಡಿಗೆ ಹಚ್ಚಿ ಬುರ್ಖಾ ಧರಿಸಿಕೊಂಡು ಖಾಕಿ ತೊಟ್ಟ ಪೊಲೀಸರನ್ನು ಯಾಮಾರಿಸುತ್ತ ಕೋರ್ಟ್ ವಾರೆಂಟಿಗೂ ಕ್ಯಾರೆನ್ನದೆ ತಲೆಮರೆಸಿಕೊಂಡು ಓಡಾಡುತ್ತಿದ್ದ ಐನಾತಿ ರೌಡಿಯೊಬ್ಬನನ್ನು ಉಳ್ಳಾಲ ಪೊಲೀಸರು ಕಡೆಗೂ ಬಂಧಿಸಿದ್ದಾರೆ.

ಉಳ್ಳಾಲದ ಮೇಲಂಗಡಿ ನಿವಾಸಿ ಇಮ್ರಾನ್ ಯಾನೆ ಸುರ್ಮೋ ಇಮ್ರಾನ್ ಬಂಧಿತ ಆರೋಪಿ. ಕೊಲೆ, ಕೊಲೆಯತ್ನ, ಕಳ್ಳತನ, ಸುಲಿಗೆ ಹೀಗೆ ಮಂಗಳೂರು ಮತ್ತು ಉಡುಪಿಯಲ್ಲಿ 23ಕ್ಕೂ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವ ಇಮ್ರಾನ್ ಕೈಗೆ ಪೊಲೀಸರ ಕೋಳ ಬಿದ್ದಿದೆ. ಹತ್ತು ವರ್ಷಗಳ ಹಿಂದೆ ಟಾರ್ಗೆಟ್ ಇಲ್ಯಾಸ್ ಗ್ರೂಪಿನಲ್ಲಿ ಸಕ್ರಿಯವಾಗಿದ್ದ ಇಮ್ರಾನ್, ಜೀವ ಭಯದಿಂದಲೋ ಏನೋ ಮರೆಯಲ್ಲಿದ್ದುಕೊಂಡೇ ಕ್ರಿಮಿನಲ್ ಕೃತ್ಯಗಳಲ್ಲಿ ತೊಡಗಿಸಿದ್ದ.

ಉಳ್ಳಾಲದಲ್ಲಿ ಹತ್ತು ವರ್ಷಗಳ ಹಿಂದೆ ಟಾರ್ಗೆಟ್ ಇಲ್ಯಾಸ್ ಗ್ರೂಪ್ ಪ್ರಬಲ ಗ್ಯಾಂಗ್ ಆಗಿಯೇ ಬೆಳೆದಿತ್ತು. ಆದರೆ ಜೊತೆಗಿದ್ದವರಲ್ಲೇ ಒಡಕು ಮೂಡಿದ್ದರಿಂದ ಇಲ್ಯಾಸ್ ತನ್ನವರಿಂದಲೇ ಕೊಲೆಯಾಗಿದ್ದ. ಆನಂತರ, ಇಲ್ಯಾಸ್ ಕೊಲೆಗೆ ಪ್ರತೀಕಾರ ತೀರಿಸಲೇಬೇಕು ಎಂದು ಹೇಳುತ್ತ ತಿರುಗಾಡುತ್ತಿದ್ದ ಇಮ್ರಾನ್, ಇದಕ್ಕಾಗಿ ವಿದೇಶದಲ್ಲಿದ್ದ ಇಲ್ಯಾಸ್ ಗೆಳೆಯರಿಂದ ಸಾಕಷ್ಟು ಹಣವನ್ನೂ ಸಂಗ್ರಹಿಸಿದ್ದ ಅನ್ನುವ ಮಾತುಗಳಿವೆ. ಇಲ್ಯಾಸ್ ಕೊಲೆಗಾರರನ್ನು ಬಿಡೋದಿಲ್ಲ ಎನ್ನುತ್ತಿದ್ದು ಬಿಟ್ಟರೆ ಪ್ರತೀಕಾರದ ಕೆಲಸ ಮಾಡಿರಲಿಲ್ಲ. ಅಷ್ಟೊಂದು ಗುಂಡಿಗೆಯನ್ನೂ ಇಮ್ರಾನ್ ಗಟ್ಟಿ ಮಾಡಿಕೊಂಡಿರಲಿಲ್ಲ. 

ಲ್ಯಾನ್ಸಿ ಮರ್ಡರ್ ಕೇಸ್ ಆರೋಪಿ

2008ರಲ್ಲಿ ಬಬ್ಬುಕಟ್ಟೆಯ ನಿತ್ಯಾಧರ ನಗರ ನಿವಾಸಿ ಆಟೋ ಚಾಲಕ ಲ್ಯಾನ್ಸಿ ಡಿಸೋಜ ಕೊಲೆ ಪ್ರಕರಣದಲ್ಲಿ ಇಮ್ರಾನ್ ಕೂಡ ಪ್ರಮುಖ ಆರೋಪಿಯಾಗಿದ್ದ. ನಿತ್ಯಾಧರ್ ಹೆಸರಿನ ಆಟೋ ಓಡಿಸುತ್ತಿದ್ದ ಹಿಂದು ಯುವಕನೊಬ್ಬ ಮುಸ್ಲಿಂ ಮಹಿಳೆಯ ಸಂಗ ಮಾಡುತ್ತಾನೆಂಬ ಕೋಪದಲ್ಲಿ ಆತನ ಹತ್ಯೆಗೆ ಸಂಚು ರೂಪಿಸಿದ್ದರು. ಆದರೆ, ನಿತ್ಯಾಧರ್ ಹೆಸರಿನ ಆಟೋ ಬೆನ್ನತ್ತಿದ್ದ ಇಮ್ರಾನ್ ಸಹಚರರು ಮಿಸ್ ಆಗಿ ಲ್ಯಾನ್ಸಿ ಡಿಸೋಜನನ್ನು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಜೈಲು ಸೇರಿದ್ದರು. ಆನಂತರ, ಕೊಲೆ ಪ್ರಕರಣ ಕೋರ್ಟಿನಲ್ಲಿ ಸಾಬೀತಾಗದೆ ಆರೋಪಿಗಳು ಖುಲಾಸೆಗೊಂಡಿದ್ದರು.

ಉಳ್ಳಾಲದಲ್ಲಿ ಕುಖ್ಯಾತ ರೌಡಿಯಾಗಿದ್ದರೂ, ಇಲ್ಯಾಸ್ ಹತ್ಯೆ ಬಳಿಕ ಇಮ್ರಾನ್ ಕ್ರಿಮಿನಲ್ ಕೃತ್ಯಗಳಿಂದಲೇ ದೂರ ಉಳಿದಿದ್ದ. ಆದರೆ ಹಳೆಯ ಪ್ರಕರಣಗಳಲ್ಲಿ ಕೋರ್ಟಿನಿಂದ ವಾರೆಂಟ್ ಆಗಿದ್ದರಿಂದ ಮತ್ತೆ ಜೈಲು ಸೇರಬೇಕಾಗುತ್ತದೆ ಎಂಬ ಭಯದಲ್ಲಿ ಬಸ್ಸಿನಲ್ಲಿ ಬುರ್ಖಾ ಹಾಕ್ಕೊಂಡು ಓಡಾಡುತ್ತಿದ್ದ. ಕಣ್ಣಿಗೆ ಕಾಡಿಗೆ (ಹಿಂದಿಯಲ್ಲಿ ಸುರ್ಮೋ) ಹಾಕಿ ಓಡಾಡುತ್ತಿದ್ದ ಕಾರಣ ಓರಗೆಯ ಗೆಳೆಯರೇ ಈತನಿಗೆ ಸುರ್ಮೋ ಇಮ್ರಾನ್ ಎಂದು ಹೆಸರಿಟ್ಟಿದ್ದರು. ಬರೀ ಇಮ್ರಾನ್ ಎಂದರೆ ಉಳ್ಳಾಲದ ಜನರಿಗೆ ಗೊತ್ತಾಗುತ್ತಿರಲಿಲ್ಲ. ಸುರ್ಮೋ ಇಮ್ರಾನ್ ಎಂದರಷ್ಟೇ ಯಾರು ಕೇಳಿದರೂ ಥಟ್ಟನೆ ಹೇಳುವಷ್ಟು ಕುಖ್ಯಾತಿ ಹೊಂದಿದ್ದ.

ಇಂಥ ಇಮ್ರಾನ್ ಉಳ್ಳಾಲ, ಮಂಗಳೂರಿನಲ್ಲಿ ಓಡಾಡಿಕೊಂಡಿದ್ದರೂ, ಪೊಲೀಸರ ಕಣ್ಣಿಗೆ ಬೀಳದಂತೆ ಎಚ್ಚರ ವಹಿಸಿದ್ದ. ಟಾರ್ಗೆಟ್ ಇಲ್ಯಾಸ್ ಕೊಲೆಯಾಗಿ, ಆತನನ್ನು ಕೊಲೆಗೈದವರೂ ಕೊಲೆಯಾಗಿ ಹೋದರೂ ಇಮ್ರಾನ್ ಮಾತ್ರ ಯಾರ ಉಸಾಬರಿಯೂ ಇಲ್ಲದೆ ತಣ್ಣಗೇ ಇದ್ದುಬಿಟ್ಟಿದ್ದ. ವಿರೋಧಿಗಳ ಮತ್ತು ಪೊಲೀಸರ ಕಣ್ಣಿಗೆ ಬೀಳದಿರಲಿ ಎಂದು ಬುರ್ಖಾ ತೊಟ್ಟು ಓಡಾಡುವುದನ್ನೇ ಕರಗತ ಮಾಡಿದ್ದ. ಆದರೆ ಯಾವತ್ತಿಗೂ ಮಾಡಿದ ಕರ್ಮ ಬಿಟ್ಟೋಗಲ್ಲ ಎನ್ನುವಂತೆ ಹಳೆಯ ಕೇಸುಗಳ ಕಾರಣಕ್ಕೆ ಸುರ್ಮೋ ಇಮ್ರಾನ್ ಮತ್ತೆ ಜೈಲು ಸೇರಿದ್ದಾನೆ.