ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್ದುಪಡಿ ; ಹಿಂಪಡೆಯದಿದ್ದರೆ ಜುಲೈ 5ರಿಂದ ಆಮರಣಾಂತ ಉಪವಾಸ, ಅಣ್ಣಾ ಹಜಾರೆ ಎಚ್ಚರಿಕೆ

23-06-26 10:47 pm       HK News Staffer   ದೇಶ - ವಿದೇಶ

ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು ನಿಯಮಗಳಿಗೆ ಮಾಡಿರುವ ಐದು ತಿದ್ದುಪಡಿಗಳನ್ನು ಹಿಂಪಡೆಯದಿದ್ದರೆ, ಜುಲೈ 5ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ 89ರ ಹರೆಯದ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಎಚ್ಚರಿಕೆ ನೀಡಿದ್ದಾರೆ.

ಮುಂಬೈ, ಜೂನ್ 23: ಮಹಾರಾಷ್ಟ್ರ ಸರಕಾರ ಮಾಹಿತಿ ಹಕ್ಕು ನಿಯಮಗಳಿಗೆ ಮಾಡಿರುವ ಐದು ತಿದ್ದುಪಡಿಗಳನ್ನು ಹಿಂಪಡೆಯದಿದ್ದರೆ, ಜುಲೈ 5ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ 89ರ ಹರೆಯದ ಸಾಮಾಜಿಕ ಹೋರಾಟಗಾರ ಅಣ್ಣಾ ಹಝಾರೆ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಈ ಸಂಬಂಧ ಪತ್ರ ಬರೆದಿರುವ ಅಣ್ಣಾ ಹಝಾರೆ, “ಜೂನ್ 12ರಂದು ಮಾಡಲಾಗಿರುವ ತಿದ್ದುಪಡಿಗಳು ಮಾಹಿತಿ ಹಕ್ಕು ಕಾಯ್ದೆಯ ಆಶಯಗಳನ್ನು ಉಲ್ಲಂಘಿಸುತ್ತದೆ ಹಾಗೂ ಪಾರದರ್ಶಕತೆಯನ್ನು ಇಲ್ಲವಾಗಿಸುತ್ತದೆ” ಎಂದು ಆಕ್ಷೇಪಿಸಿದ್ದಾರೆ. ಮಾಹಿತಿ ಹಕ್ಕು ಅರ್ಜಿಯನ್ನು ಸಲ್ಲಿಸಲು ಏರಿಕೆ ಮಾಡಲಾಗಿರುವ ಶುಲ್ಕವನ್ನೂ ಆಕ್ಷೇಪಿಸಿದ್ದು ಈ ಏರಿಕೆಗೆ ಯಾವುದೇ ತಾರ್ಕಿಕ ಸಮರ್ಥನೆಯಾಗಲಿ ಅಥವಾ ಆರ್ಥಿಕ ವಿಶ್ಲೇಷಣೆಯನ್ನಾಗಲಿ ಒದಗಿಸಿಲ್ಲ ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಮಾಹಿತಿ ಹಕ್ಕು ಕಾಯ್ದೆ ಆದಾಯವನ್ನು ಸೃಷ್ಟಿಸುವ ಕಾನೂನಲ್ಲ. 20 ವರ್ಷಗಳ ಬಳಿಕ ಮಾಹಿತಿ ಹಕ್ಕು ಅರ್ಜಿಯ ಶುಲ್ಕವನ್ನು ಏರಿಕೆ ಮಾಡಿರುವುದಾದರೆ, ಮಾಹಿತಿ ನಿರಾಕರಿಸುವ ಅಧಿಕಾರಿಗಳ ಮೇಲಿನ ದಂಡವನ್ನೇಕೆ ಹೆಚ್ಚಳ ಮಾಡಬಾರದು?” ಎಂದೂ ಅವರು ಪ್ರಶ್ನಿಸಿದ್ದಾರೆ. ಮಾಹಿತಿ ಪಡೆಯಲು ಗುರುತಿನ ಚೀಟಿಯನ್ನು ಕಡ್ಡಾಯಗೊಳಿಸಿರುವುದನ್ನು ವಿರೋಧಿಸಿರುವ ಅಣ್ಣಾ ಹಝಾರೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 6(2)ರ ಅನ್ವಯ ಅರ್ಜಿದಾರರು ಮಾಹಿತಿಯನ್ನು ಪಡೆಯಲು ತಮ್ಮ ವೈಯಕ್ತಿಕ ವಿವರಗಳನ್ನಾಗಲಿ ಅಥವಾ ಕಾರಣಗಳನ್ನಾಗಲಿ ಬಹಿರಂಗಗೊಳಿಸಬೇಕಾದ ಅಗತ್ಯವಿಲ್ಲ. ಇಂತಹ ಷರತ್ತುಗಳು ಮಾಹಿತಿ ಬಯಸುವವರಿಗೆ ಅಪಾಯ ತಂದೊಡ್ಡುತ್ತವೆ” ಎಂದು ಅವರು ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.