ಯುದ್ಧಪೀಡಿತ ಮಧ್ಯಪ್ರಾಚ್ಯದಿಂದ ಪಾರಾಗಲು ಪ್ರತಿ ಸೀಟ್‌ಗೆ 3 ಕೋಟಿಗೂ ಅಧಿಕ ಪಾವತಿ ! ರಜೆಯನ್ನು ಎಂಜಾಯ್‌ ಮಾಡಲು ಟೂರ್ ಹೋದವರಿಗೆ ಸಂಕಷ್ಟ

03-03-26 04:30 pm       HK News Staffer   ದೇಶ - ವಿದೇಶ

ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ದಾಳಿಗೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಪರಿಣಾಮವಾಗಿ ದುಬೈ, ಅಬುಧಾಬಿ ಹಾಗೂ ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶದ ಪ್ರಮುಖ ನಗರಗಳು ತೀವ್ರ ಆತಂಕದಕ್ಕೆ ಒಳಗಾಗಿವೆ. ಐಷಾರಾಮಿ ಜೀವನಶೈಲಿಗೆ ಪ್ರಸಿದ್ಧವಾಗಿದ್ದ ಈ ನಗರಗಳು ತಾತ್ಕಾಲಿಕವಾಗಿ ಅಸ್ಥಿರತೆಯ ಸಂಕೇತಗಳಾಗಿ ಬದಲಾಗಿದೆ.‌

ರಿಯಾದ್, ಮಾರ್ಚ್ 3: ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ವಿರುದ್ಧ ನಡೆಸಿದ ‘ಆಪರೇಷನ್ ಎಪಿಕ್ ಫ್ಯೂರಿ’ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ತಾರಕಕ್ಕೇರಿದೆ. ದಾಳಿಗೆ ಪ್ರತಿಯಾಗಿ ಇರಾನ್ ನಡೆಸುತ್ತಿರುವ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಪರಿಣಾಮವಾಗಿ ದುಬೈ, ಅಬುಧಾಬಿ ಹಾಗೂ ಬಹ್ರೇನ್ ಸೇರಿದಂತೆ ಗಲ್ಫ್ ಪ್ರದೇಶದ ಪ್ರಮುಖ ನಗರಗಳು ತೀವ್ರ ಆತಂಕದಕ್ಕೆ ಒಳಗಾಗಿವೆ. ಐಷಾರಾಮಿ ಜೀವನಶೈಲಿಗೆ ಪ್ರಸಿದ್ಧವಾಗಿದ್ದ ಈ ನಗರಗಳು ತಾತ್ಕಾಲಿಕವಾಗಿ ಅಸ್ಥಿರತೆಯ ಸಂಕೇತಗಳಾಗಿ ಬದಲಾಗಿದೆ.‌

ಅಂತರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಗಲ್ಫ್ ರಾಷ್ಟ್ರಗಳಲ್ಲಿ ಸಿಲುಕಿರುವ ಬಹುರಾಷ್ಟ್ರೀಯ ಕಂಪನಿಗಳ ಉನ್ನತಾಧಿಕಾರಿಗಳು ಮತ್ತು ಅತಿ ಶ್ರೀಮಂತ ವ್ಯಕ್ತಿಗಳು ತುರ್ತು ನಿರ್ಗಮನಕ್ಕಾಗಿ ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದು, ಒಂದೇ ಪ್ರಯಾಣಕ್ಕೆ ಸುಮಾರು 2,60,000 ಪೌಂಡ್‌ ವರೆಗೆ ಪಾವತಿಸುತ್ತಿದ್ದಾರೆ. ಪ್ರವಾಸ, ವ್ಯವಹಾರ ಅಥವಾ ಧಾರ್ಮಿಕ ಕಾರಣಗಳಿಂದ ಆಗಮಿಸಿದ್ದವರಿಗೆ ಈ ಪರಿಸ್ಥಿತಿ ಅನಿರೀಕ್ಷಿತ ಸಂಕಷ್ಟ ಉಂಟುಮಾಡಿದೆ.

ರಿಯಾದ್ ಏಕೈಕ ಕಾರ್ಯಾಚರಣೆಯ ಕೇಂದ್ರ‌:

ಇರಾನ್‌ನ ಪ್ರತೀಕಾರ ದಾಳಿಗಳ ಬೆನ್ನಲ್ಲೇ ದುಬೈ ಹಾಗೂ ದೋಹಾ ಸೇರಿದಂತೆ ಅನೇಕ ರಾಷ್ಟ್ರಗಳು ತಮ್ಮ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮುಚ್ಚಿವೆ. ಸಾವಿರಾರು ವಿಮಾನಗಳ ಸಂಚಾರ ರದ್ದುಗೊಂಡಿದೆ. ಈ ಹಿನ್ನೆಲೆ, ಸೌದಿ ಅರೇಬಿಯಾದ ರಾಜಧಾನಿ ರಿಯಾದ್ ಮಾತ್ರ ಪ್ರಮುಖ ನಿರ್ಗಮನ ಕೇಂದ್ರವಾಗಿ ಹೊರಹೊಮ್ಮಿದೆ. ಅಲ್ಲಿನ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನೂ ಕಾರ್ಯ ನಿರ್ವಹಿಸುತ್ತಿರುವುದರಿಂದ ಪ್ರಯಾಣಿಕರು ರಸ್ತೆ ಮಾರ್ಗದ ಮೂಲಕ ರಿಯಾದ್ ತಲುಪಲು ಹರಸಾಹಸ ಪಡುತ್ತಿದ್ದಾರೆ.

ರಸ್ತೆ ಮಾರ್ಗದಲ್ಲಿ ನಿರ್ಗಮನ ಪ್ರಯತ್ನ: 

ದುಬೈ ಹಾಗೂ ಇತರ ನಗರಗಳಿಂದ ರಿಯಾದ್‌ಗೆ ತಲುಪಲು ಖಾಸಗಿ ಭದ್ರತಾ ಸಂಸ್ಥೆಗಳ ಸೇವೆ ಪಡೆಯಲಾಗುತ್ತಿದೆ. ವಿಶೇಷವಾಗಿ ಎಸ್‌ಯುವಿ ವಾಹನಗಳ ಬೇಡಿಕೆ ಏರಿಕೆಯಾಗಿದ್ದು, ಬಾಡಿಗೆ ದರಗಳು ಗಗನಕ್ಕೇರಿವೆ. ರಿಯಾದ್ ತಲುಪಿದ ಬಳಿಕ ಅಲ್ಲಿಂದ ಯುರೋಪ್ ಸೇರಿದಂತೆ ಇತರ ಖಂಡಗಳಿಗೆ ಚಾರ್ಟರ್ಡ್ ವಿಮಾನಗಳ ಮೂಲಕ ಪ್ರಯಾಣಿಸುತ್ತಿದ್ದಾರೆ.

ರಂಜಾನ್ ಹಿನ್ನೆಲೆಯಲ್ಲಿ ಉಮ್ರಾ ಯಾತ್ರೆಗೆ ತೆರಳಿದವರು, ಕುಟುಂಬ ಭೇಟಿ ಹಾಗೂ ವ್ಯವಹಾರ ನಿಮಿತ್ತ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದ ಸಾವಿರಾರು ಭಾರತೀಯರು ಅನಿಶ್ಚಿತತೆಯಲ್ಲಿ ಸಿಲುಕಿದ್ದಾರೆ. ಹೋಳಿ ಹಬ್ಬ ಹಾಗೂ ಸ್ಪ್ರಿಂಗ್ ಬ್ರೇಕ್ ರಜೆಗಾಗಿ ದುಬೈಗೆ ತೆರಳಿದ್ದ ಪ್ರವಾಸಿಗರು ವಿಮಾನ ರದ್ದತಿಯಿಂದಾಗಿ ಸಂಕಷ್ಟ ಅನುಭವಿಸುತ್ತಿದ್ದಾರೆ. ಪರ್ಯಾಯ ಮಾರ್ಗವಾಗಿ ಪ್ಯಾರಿಸ್, ಫ್ರಾಂಕ್‌ಫರ್ಟ್ ಅಥವಾ ಅಡಿಸ್ ಅಬಾಬಾ ಮೂಲಕ ಪ್ರಯಾಣಿಸಲು ಸೂಚನೆ ನೀಡಲಾಗುತ್ತಿದ್ದರೂ, ಅತಿಯಾದ ಬೇಡಿಕೆಯ ಕಾರಣ ಸೀಟುಗಳ ಲಭ್ಯತೆ ಕಡಿಮೆಯಾಗಿದೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ನಡೆಸಿದ ದಾಳಿಯಲ್ಲಿ ಇರಾನ್‌ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿ ಮೃತಪಟ್ಟಿದ್ದು, ಇದಕ್ಕೆ ಪ್ರತಿಯಾಗಿ ಇರಾನ್ ಅಮೆರಿಕದ ಮಿತ್ರ ರಾಷ್ಟ್ರಗಳ ಮೇಲೆ ಸತತ ದಾಳಿಗಳನ್ನು ನಡೆಸುತ್ತಿದೆ. ಪರಿಣಾಮವಾಗಿ ಮಧ್ಯಪ್ರಾಚ್ಯದ ಭದ್ರತಾ ಸ್ಥಿತಿ ಕೈಮೀರಿ ಹೋಗಿದ್ದು, ಜಾಗತಿಕ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ವ್ಯಕ್ತವಾಗಿದೆ.