ರಾಮ ಮಂದಿರವನ್ನ ಸ್ಫೋಟಿಸಲು ಪ್ಲಾನ್ ಮಾಡಿದ್ವಿ ! ; ಹರಿಹರದಲ್ಲಿ ಬಂಧಿತ ಶಂಕಿತ ಉಗ್ರನಿಂದ ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗ

24-06-26 07:53 pm       HK News Staffer   ಕ್ರೈಂ

ಹರಿಹರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಅಂಶಗಳನ್ನು ಹೊರಹಾಕುತ್ತಿದ್ದು, ಇದೀಗ ತನಿಖೆಯಲ್ಲಿ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಸುಹೇಲ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದೇಶದ ಭದ್ರತಾ ಸಂಸ್ಥೆಗಳನ್ನೇ ಬೆಚ್ಚಿಬೀಳಿಸುವಂತಹ ವಿವರಗಳು ಉಲ್ಲೇಖವಾಗಿವೆ.

ದಾವಣಗೆರೆ, ಜೂನ್ 24: ಹರಿಹರದಲ್ಲಿ ಬಂಧಿತನಾಗಿರುವ ಶಂಕಿತ ಉಗ್ರನ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಅಂಶಗಳನ್ನು ಹೊರಹಾಕುತ್ತಿದ್ದು, ಇದೀಗ ತನಿಖೆಯಲ್ಲಿ ಮತ್ತಷ್ಟು ಆತಂಕಕಾರಿ ಮಾಹಿತಿಗಳು ಬೆಳಕಿಗೆ ಬಂದಿವೆ. ಬಂಧಿತ ಆರೋಪಿ ಸುಹೇಲ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ದೇಶದ ಭದ್ರತಾ ಸಂಸ್ಥೆಗಳನ್ನೇ ಬೆಚ್ಚಿಬೀಳಿಸುವಂತಹ ವಿವರಗಳು ಉಲ್ಲೇಖವಾಗಿವೆ.

ಪ್ರಾಥಮಿಕ ತನಿಖೆ ವೇಳೆ ಆರೋಪಿ, “ರಾಮ ಮಂದಿರವನ್ನು ಬಾಂಬ್ ಸ್ಫೋಟದ ಮೂಲಕ ಗುರಿಯಾಗಿಸಲು ಯೋಜನೆ ರೂಪಿಸಿದ್ದೆ” ಎಂದು ಹೇಳಿರುವುದಾಗಿ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪಾಕಿಸ್ತಾನ ಮೂಲದ ‘ರಾಣಾ’ ಎಂಬ ವ್ಯಕ್ತಿಯೊಂದಿಗೆ ಸಂಪರ್ಕದಲ್ಲಿದ್ದ ಎನ್ನುವ ಶಂಕೆಯೂ ವ್ಯಕ್ತವಾಗಿದೆ.

ಆರೋಪಿಯ ಮೊಬೈಲ್ ಫೋನ್ ವಶಕ್ಕೆ ಪಡೆದಿರುವ ಪೊಲೀಸರು ಅದರಲ್ಲಿರುವ ಮಾಹಿತಿಯನ್ನು ಪರಿಶೀಲಿಸಿದಾಗ ಹಲವು ಮಹತ್ವದ ಸುಳಿವುಗಳು ಪತ್ತೆಯಾಗಿವೆ. ವಿಶೇಷವಾಗಿ ವಾಟ್ಸಾಪ್‌ನ ‘ಲಾಕ್‌ಡ್ ಚಾಟ್’ ವಿಭಾಗದಲ್ಲಿ ಪಾಕಿಸ್ತಾನ ಮೂಲದ ದೂರವಾಣಿ ಸಂಖ್ಯೆಯೊಂದು ಪತ್ತೆಯಾಗಿದ್ದು, ಅದು ‘ರಾಣಾ ಜೀ’ ಎಂಬ ಹೆಸರಿನಲ್ಲಿ ಸೇವ್ ಮಾಡಲಾಗಿತ್ತು ಎನ್ನಲಾಗಿದೆ.

ಇದರ ಜೊತೆಗೆ ಉರ್ದು ಮಿಶ್ರಿತ ಹಿಂದಿ ಭಾಷೆಯಲ್ಲಿ ನಡೆದಿರುವ ಹಲವು ಧ್ವನಿ ಸಂದೇಶಗಳು ತನಿಖಾಧಿಕಾರಿಗಳ ಗಮನ ಸೆಳೆದಿವೆ. ಅವುಗಳಲ್ಲಿ “ನಾನು ರಾಮ ಮಂದಿರವನ್ನು ಬಾಂಬ್‌ನಿಂದ ಸ್ಫೋಟಿಸಲು ಬಯಸುತ್ತೇನೆ” ಎಂಬ ಅಂಶವಿರುವ ಆಡಿಯೋ ಕ್ಲಿಪ್ ಕೂಡ ಪತ್ತೆಯಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ. ಇದೇ ರೀತಿಯ ಇನ್ನೂ ಹಲವು ಧ್ವನಿ ಸಂದೇಶಗಳು ಮೊಬೈಲ್‌ನಲ್ಲಿ ಲಭ್ಯವಾಗಿದ್ದು, ಅವುಗಳ ಸತ್ಯಾಸತ್ಯತೆಯನ್ನು ತಜ್ಞರ ಮೂಲಕ ಪರಿಶೀಲಿಸಲಾಗುತ್ತಿದೆ.

ಮೊಬೈಲ್ ಪರಿಶೀಲನೆ ವೇಳೆ ಆರೋಪಿ ವಿವಿಧ ವಾಟ್ಸಾಪ್ ಸಾರ್ವಜನಿಕ ಚಾನೆಲ್‌ಗಳಿಗೆ ಚಂದಾದಾರನಾಗಿದ್ದ ಸಂಗತಿಯೂ ಬೆಳಕಿಗೆ ಬಂದಿದೆ. ಆ ಚಾನೆಲ್‌ಗಳಲ್ಲಿ ಶಸ್ತ್ರಾಸ್ತ್ರ ಹಿಡಿದಿರುವ ವ್ಯಕ್ತಿಗಳ ಚಿತ್ರಗಳು, ಉಗ್ರ ಚಟುವಟಿಕೆಗಳಿಗೆ ಹೋಲುವ ದೃಶ್ಯಗಳು ಹಾಗೂ ಅನುಮಾನಾಸ್ಪದ ವಿಷಯಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 113(3) ಹಾಗೂ 197(1) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಭಯೋತ್ಪಾದಕ ಕೃತ್ಯ ನಡೆಸುವ ಉದ್ದೇಶದಿಂದ ಸಂಚು ರೂಪಿಸಿರುವ ಶಂಕೆಯ ಹಿನ್ನೆಲೆಯಲ್ಲಿ ತನಿಖೆಯನ್ನು ಮತ್ತಷ್ಟು ತೀವ್ರಗೊಳಿಸಲಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಹೆಚ್.ಟಿ. ಶೇಖರ್, “ಸುಮಾರು 15 ದಿನಗಳ ಹಿಂದೆ ಆರೋಪಿ ಖಾಸಗಿ ಕಾರ್ಖಾನೆಯೊಂದರಲ್ಲಿ ಕೆಲಸಕ್ಕಾಗಿ ಹರಿಹರಕ್ಕೆ ಬಂದಿದ್ದ. ಕಾರ್ಖಾನೆ ಸಮೀಪದ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ. ಅನುಮಾನಾಸ್ಪದ ಚಲನವಲನಗಳ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸಿದಾಗ ಹಲವು ಮಾಹಿತಿಗಳು ಲಭ್ಯವಾಗಿವೆ. ಮೊಬೈಲ್ ಫೋನ್ ಪರಿಶೀಲನೆಯಿಂದ ಮತ್ತಷ್ಟು ಮಹತ್ವದ ಅಂಶಗಳು ಬೆಳಕಿಗೆ ಬಂದಿವೆ” ಎಂದು ತಿಳಿಸಿದ್ದಾರೆ.

ಸದ್ಯ ಆರೋಪಿ ಸಂಪರ್ಕದಲ್ಲಿದ್ದ ವ್ಯಕ್ತಿಗಳು ಯಾರು, ವಿದೇಶಿ ಸಂಪರ್ಕಗಳಿವೆಯೇ, ಯಾವುದೇ ಸಂಘಟಿತ ಜಾಲದ ಭಾಗವಾಗಿದ್ದಾನೆಯೇ ಎಂಬ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.