ಅಡ್ಡ ಮತದಾನ; ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡುತ್ತಾರೆ, ಮತ್ತೆ ಹೊರಗೆ ಬಂದು ಅಣ್ಣಪ್ಪನಲ್ಲಿ ಕ್ಷಮೆ ಕೇಳ್ತಾರೆ, ಆಗ ಏನ್ ಮಾಡ್ತೀರಾ ವಿಜಯೇಂದ್ರ ? ಹಿಂದೆ ಬಿಜೆಪಿ ಕುದುರೆ ವ್ಯಾಪಾರ ನಡೆಸಿದ್ದನ್ನ ಒಪ್ಪಿಕೊಂಡ ಈಶ್ವರಪ್ಪ !

22-06-26 08:18 pm       HK News Staffer   ಕರ್ನಾಟಕ

ಹಿಂದೆ ಕಾಂಗ್ರೆಸ್​​ನ 17 ಶಾಸಕರಿಗೆ ಹಣ ಕೊಟ್ಟು ಕರೆತಂದು ಚುನಾವಣೆ ನಡೆಸಿದ್ದೆವು ಎಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಿಜೆಪಿ ಕುದುರೆ ವ್ಯಾಪಾರ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ.

ಶಿವಮೊಗ್ಗ, ಜೂ 22: ಹಿಂದೆ ಕಾಂಗ್ರೆಸ್​​ನ 17 ಶಾಸಕರಿಗೆ ಹಣ ಕೊಟ್ಟು ಕರೆತಂದು ಚುನಾವಣೆ ನಡೆಸಿದ್ದೆವು ಎಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ, ಬಿಜೆಪಿ ಕುದುರೆ ವ್ಯಾಪಾರ ನಡೆಸಿದ್ದನ್ನು ಒಪ್ಪಿಕೊಂಡಿದ್ದಾರೆ. 

ಶಿವಮೊಗ್ಗ ಪ್ರೆಸ್ ಟ್ರಸ್ಟ್ ಭವನದಲ್ಲಿಂದು ಕ್ರಾಸ್ ವೋಟಿಂಗ್​ ಕುರಿತು ಪ್ರತಿಕ್ರಿಯಿಸಿ, ಆಡಳಿತ ಹಾಗೂ ವಿರೋಧ ಪಕ್ಷಗಳು ಅಭಿವೃದ್ದಿ ಬಗ್ಗೆ ಚರ್ಚೆ ನಡೆಸಬೇಕಿತ್ತು. ದುರಾದೃಷ್ಟ ಅಂದ್ರೆ ರಾಜ್ಯದಲ್ಲಿ ಶಾಸಕರುಗಳನ್ನು ಖರೀದಿಸುವ ಕೆಲಸ ಮುಂದುವರೆದಿದೆ. ಕ್ರಾಸ್ ವೋಟಿಂಗ್​ ಹಿಂದೆ ಭ್ರಷ್ಟಾಚಾರ ನಡೆದಿರುವುದು ಹೊರಬರಲಿ ಎಂದು ಆಗ್ರಹಿಸಿದರು.

ಈ ಹಿಂದೆ 17 ಜನ ಹಣ ತೆಗೆದುಕೊಂಡು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದು ಚುನಾವಣೆಯಲ್ಲಿ ಗೆದ್ದರು‌. ಇದರಿಂದ ಬಿಜೆಪಿ ಸರ್ಕಾರ ಹಾಳಾಗಿ ಹೋಯ್ತು. ಇದು ತಾತ್ಕಾಲಿಕ ಯಶಸ್ಸು ಅಷ್ಟೇ. ಬಿಜೆಪಿ ಸರ್ಕಾರಕ್ಕೆ ಬಂದ ಪರಿಸ್ಥಿತಿ ಕಾಂಗ್ರೆಸ್ ಸರ್ಕಾರಕ್ಕೆ ಬರುತ್ತದೆ‌. ಯಾರು ಕ್ರಾಸ್ ವೋಟಿಂಗ್​ ಮಾಡಿದ್ದಾರೆಂದು ಸಿಎಂ ತನಿಖೆಗೆ ಆದೇಶಿಸಬೇಕು ಎಂದರು

ಧರ್ಮಸ್ಥಳ ಕೋಟಿ‌ ಕೋಟಿ ಭಕ್ತರು ಸೇರುವ ಸ್ಥಳ. ಮಂಜುನಾಥನ ಭಕ್ತಿಯನ್ನು ಒರೆಗೆ ಹಚ್ಚಬೇಡಿ. ಇಲ್ಲಿ ಅನ್ಯಾಯವಾಗಿದೆ‌ ಅಂತ ವಿಜಯೇಂದ್ರ ಅವರು ಧರ್ಮಸ್ಥಳಕ್ಕೆ ಹೋಗುವುದನ್ನು ಕೈಬಿಡಬೇಕು ಎಂದು ನಾನು ವೈಯಕ್ತಿಕ ಸಲಹೆ ನೀಡುತ್ತೇನೆ. ಈಗ ಧರ್ಮಸ್ಥಳದಲ್ಲಿ ಶಾಸಕರು ಬಂದು ಆಣೆ ಮಾಡುತ್ತಾರೆ. ನಂತರ ಹೊರಗೆ ಬಂದು ಅಣ್ಣಪ್ಪನಲ್ಲಿ ಕ್ಷಮೆ ಕೇಳುತ್ತಾರೆ. ಆಗ ಏನು ಮಾಡುತ್ತಾರೆ?. ಹಿಂದೆ ಯಡಿಯೂರಪ್ಪ ಮತ್ತು ಕುಮಾರಸ್ವಾಮಿ ಧರ್ಮಸ್ಥಳದಲ್ಲಿ ಆಣೆ ಮಾಡಿದ್ದು ತಪ್ಪು ಎಂದು ಹೇಳಿದರು.

ಗೃಹ ಸಚಿವ ಖರ್ಗೆ ವಿರುದ್ಧ ವಾಗ್ದಾಳಿ: 

ಅರ್ಬನ್ ನಕ್ಸಲರ ರೀತಿ ಹರಿಪ್ರಸಾದ್ ಹಾಗೂ ಪ್ರಿಯಾಂಕ್​ ಖರ್ಗೆ ಮಾತನಾಡುತ್ತಿದ್ದಾರೆ. ಇವರು ಹಿರಣ್ಯ ಕಶ್ಯಪ ರೀತಿ ನಡೆದುಕೊಳ್ಳುತ್ತಿದ್ದಾರೆ. ಇವರು ಸೋನಿಯಾ, ರಾಹುಲ್ ಅವರ ಗುಲಾಮರು. ದೇಶದಲ್ಲಿ ಮೂರು ರಾಜ್ಯದಲ್ಲಿ ಮಾತ್ರ ಆಡಳಿತದಲ್ಲಿರುವ ನೀವು ಮುಂದೆ ಕಾಣೆಯಾಗಿ ಹೋಗುತ್ತೀರಿ ಎಂದರು.

ಪ್ರಿಯಾಂಕ್​​ ಖರ್ಗೆ ತನ್ನ ಇಲಾಖೆಯ ಕೆಲಸ ಬಿಟ್ಟು ಆರ್​​ಎಸ್​ಎಸ್​ ತೆಗಳುವ ಕೆಲಸ ಮಾಡುತ್ತಿದ್ದಾರೆ‌‌‌. ಹರಿಪ್ರಸಾದ್ ನಿನ್ನೆ ಅಧಿಕಾರ ಸ್ವೀಕಾರ ಮಾಡುವಾಗ ಆರ್​​ಎಸ್​​ಎಸ್ ಬಗ್ಗೆಯೇ ಹೆಚ್ಚು ಮಾತನಾಡಿದ್ದಾರೆ ಎಂದು ಹೇಳಿದರು.