ಕಡಬ ; ಪತ್ನಿಯನ್ನು ಕಡಿದು ಕೊಂದು ನೇಣು ಬಿಗಿದು ಸಾವಿಗೆ ಶರಣಾದ ಪತಿ! ಅತ್ತು ಕರೆದು‌ ಶವದ ಪಕ್ಕದಲ್ಲೇ ಮಲಗಿದ ಮಗು !

20-06-26 09:13 pm       HK News Staffer   ಕ್ರೈಂ

ಪತ್ನಿಯನ್ನು ಪತಿಯೇ ಕತ್ತಿಯಿಂದ ಕಡಿದು ಕೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪೇಟೆಯ ಕಜೆ ಎಂಬಲ್ಲಿ ನಡೆದಿದ್ದು ಎರಡು ವರ್ಷದ ಕಂದಮ್ಮ ಅನಾಥವಾಗಿ ಪರಿಣಮಿಸಿದೆ.‌

ಮಂಗಳೂರು, ಜೂನ್ 20 : ಪತ್ನಿಯನ್ನು ಪತಿಯೇ ಕತ್ತಿಯಿಂದ ಕಡಿದು ಕೊಂದು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಪೇಟೆಯ ಕಜೆ ಎಂಬಲ್ಲಿ ನಡೆದಿದ್ದು ಎರಡು ವರ್ಷದ ಕಂದಮ್ಮ ಅನಾಥವಾಗಿ ಪರಿಣಮಿಸಿದೆ.‌ 

ಬಜಗೋಳಿ ನಿವಾಸಿ ದಿನೇಶ್ ಹಾಗೂ ಸಿದ್ದಕಟ್ಟೆ ನಿವಾಸಿ ಸಂಗೀತಾ ಮೃತಪಟ್ಟ ದಂಪತಿ. ಪತಿ ದಿನೇಶ್ ಮತ್ತು ಪತ್ನಿ ಸಂಗೀತಾ ನಡುವೆ ಆಗಿಂದಾಗ್ಗೆ ಕೌಟುಂಬಿಕ ಕಲಹ ನಡೆಯುತ್ತಿದ್ದು ಜೂನ್ 19ರ ರಾತ್ರಿ ಪತಿಯೇ ಪತ್ನಿಯನ್ನು ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ದಂಪತಿ ಇಬ್ಬರೂ ಸೇರಿಕೊಂಡು ಆಲಂಕಾರು ಪೇಟೆಯಲ್ಲಿ ಹೋಟೆಲ್ ನಡೆಸುತ್ತಿದ್ದರು. ಎರಡು ವರ್ಷದ ಮಗುವಿನೊಂದಿಗೆ ಕಜೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಹೊಟೇಲ್ ಬಂದ್ ಮಾಡಿದ್ದು ದಂಪತಿ ನಡುವೆ ವೈಮನಸ್ಸಿನಿಂದ ಕಲಹ ಉಂಟಾಗಿತ್ತು. ‌ಹೀಗಾಗಿ ಒಂದು ತಿಂಗಳಿನಿಂದ ದಿನೇಶ್ ಮನೆ ಬಿಟ್ಟು ತೆರಳಿದ್ದ. ನಿನ್ನೆ ಏಕಾಏಕಿ ಮನೆಗೆ ಮರಳಿದ್ದು ಪತ್ನಿಯ ಜೊತೆಗೆ ಜಗಳವಾಡಿ ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. 

ಇಂದು ಬೆಳಗ್ಗೆ ಮನೆಯಲ್ಲಿ ಯಾವುದೇ ಚಲನವಲನ ಇರಲಿಲ್ಲ. ಸಂಗೀತಾ ತವರು ಮನೆಯಿಂದ ಕರೆ ಮಾಡಿದಾಗ ಮೊಬೈಲ್ ಸ್ವೀಕರಿಸಿರಲಿಲ್ಲ. ಸಂಶಯದಿಂದ ಇವರ ಮನೆ ಕಡೆಗೆ ಬಂದಿದ್ದು ಒಳಗಿನಿಂದ ಬಾಗಿಲು ಹಾಕಿದ್ದನ್ನು ಒಡೆದು ನೋಡಿದಾಗ ಸಂಗೀತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ದಿನೇಶ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗು ತಾಯಿ ಮೃತಪಟ್ಟಿರುವುದನ್ನು ತಿಳಿಯದೆ ಎರಡು ವರ್ಷದ ಮಗು ಅತ್ತು ಅತ್ತು ಶವದ ಪಕ್ಕದಲ್ಲಿಯೇ ಮಲಗಿತ್ತು.‌ ಕಡಬ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ದಂಪತಿ ದುರಂತ ಸಾವಿಗೀಡಾದ ಹಿನ್ನೆಲೆಯಲ್ಲಿ ಎರಡು ವರ್ಷದ ಹೆಣ್ಣು ಮಗು ಅನಾಥವಾಗಿದೆ.