ಇರಾನ್ ಸಂಘರ್ಷ; ಭಾರತದಲ್ಲಿ ಹಿಂಸಾಚಾರ ಸಾಧ್ಯತೆ, ತುರ್ತು ಕ್ರಮಕ್ಕೆ ಗೃಹ ಇಲಾಖೆಯಿಂದ ಎಲ್ಲ ರಾಜ್ಯಗಳಿಗೆ ಎಚ್ಚರಿಕೆ ರವಾನೆ

02-03-26 02:26 pm       HK News Staffer   ದೇಶ - ವಿದೇಶ

ಇರಾನ್‌ ಮೇಲಿನ ಅಮೆರಿಕ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಉಂಟಾಗಿರುವ ಕ್ಷೋಭೆಯ ವಾತಾವರಣ, ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಂಸಾಚಾರ ಸಾಧ್ಯತೆಗಳಿದ್ದು ಇದರ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಇಲಾಖೆಯಿಂದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.

ನವದೆಹಲಿ, ಮಾರ್ಚ್ 2: ಇರಾನ್‌ ಮೇಲಿನ ಅಮೆರಿಕ ದಾಳಿಯ ಹಿನ್ನೆಲೆಯಲ್ಲಿ ಭಾರತದಲ್ಲಿ ಉಂಟಾಗಿರುವ ಕ್ಷೋಭೆಯ ವಾತಾವರಣ, ಪ್ರತಿಭಟನೆ ಹಿನ್ನೆಲೆಯಲ್ಲಿ ಹಿಂಸಾಚಾರ ಸಾಧ್ಯತೆಗಳಿದ್ದು ಇದರ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಗೃಹ ಇಲಾಖೆಯಿಂದ ಎಲ್ಲಾ ರಾಜ್ಯ ಸರ್ಕಾರಗಳಿಗೆ ಎಚ್ಚರಿಕೆ ರವಾನಿಸಲಾಗಿದೆ.

ಕರ್ನಾಟಕ, ಜಮ್ಮು ಮತ್ತು ಕಾಶೀರ, ಉತ್ತರ ಪ್ರದೇಶ ಸೇರಿದಂತೆ ದೇಶದ ಕೆಲವು ಕಡೆ ಇರಾನ್‌ ನಾಯಕ ಆಲಿ ಖಮೇನಿಯನ್ನು ಹತ್ಯೆ ಮಾಡಿದ ನಂತರ ಶಿಯಾ ಮುಸ್ಲಿಮರು ಭಾರೀ ಪ್ರತಿಭಟನೆ ನಡೆಸಿದ್ದಾರೆ. ಮುಂದಿನ ದಿನಗಳಲ್ಲಿ ಇದು ವ್ಯಾಪಕ ಹಿಂಸಾಚಾರಕ್ಕೆ ಎಡೆಮಾಡುವ ಸಾಧ್ಯತೆ ಇದ್ದು ಕೂಡಲೇ ಬಿಗಿಯಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ  ರಾಜ್ಯಗಳಿಗೆ ಬರೆದ ಪತ್ರದಲ್ಲಿ ಸೂಚಿಸಲಾಗಿದೆ.

ಗೃಹ ಇಲಾಖೆಯಿಂದ ಎಲ್ಲಾ ರಾಜ್ಯಗಳಿಗೆ ಸುತ್ತೋಲೆ ಕಳುಹಿಸಿದ್ದು, ಭದ್ರತಾ ಸಂಸ್ಥೆಗಳು ಜಾಗರೂಕರಾಗಿರಬೇಕು. ಮತ್ತು ಅಶಾಂತಿಯನ್ನು ಪ್ರಚೋದಿಸುವ ಪ್ರಚೋದನಕಾರಿ ಸಂದೇಶಗಳನ್ನು ನೀಡುವ ಇರಾನ್‌ ಪರವಾಗಿರುವ ಬೋಧಕರನ್ನು ಗುರುತಿಸುವಂತೆ ರಾಜ್ಯ ಪೊಲೀಸರಿಗೆ ಸೂಚಿಸಿದೆ. ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಹೆಚ್ಚಿರುವ ಉದ್ವಿಗ್ನತೆ ಮತ್ತು ಪ್ರತೀಕಾರದ ದಾಳಿಗಳ ನಂತರ ಸಂಭಾವ್ಯ ಘಟನೆಗಳನ್ನು ತಪ್ಪಿಸಲು ಮುಂಜಾಗ್ರತಾ ಕ್ರಮಕ್ಕಾಗಿ ಈ ಸೂಚನೆ ನೀಡಲಾಗಿದೆ.

ವಿದೇಶಗಳ ಬೆಳವಣಿಗೆಗಳು, ಧಾರ್ಮಿಕ ಸಭೆಗಳಲ್ಲಿ ಉದ್ರೇಕಕಾರಿ ಭಾಷಣದಿಂದ ದೇಶೀಯವಾಗಿ ದುಷ್ಪರಿಣಾಮ ಬೀರಬಹುದು ಎಂದು ಎಚ್ಚರಿಸಲಾಗಿದೆ. ಅಶಾಂತಿ ಅಥವಾ ಕೋಮು ಉದ್ವಿಗ್ನತೆಯನ್ನು ಉಂಟುಮಾಡುವ ಪ್ರಚೋದನಕಾರಿ ಧರ್ಮೋಪದೇಶಗಳನ್ನು ನೀಡುವವರ ಬಗ್ಗೆ ನಿಗಾ ಇಡುವಂತೆ ಎಲ್ಲಾ ರಾಜ್ಯಗಳಿಗೆ ಸೂಚಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಪರಿಸ್ಥಿತಿ ಉಲ್ಲಂಘನೆಗೆ ಕಾರಣವಾಗುವುದನ್ನು ತಡೆಯಲು ತುರ್ತು ಕ್ರಮಗಳ ಅಗತ್ಯವನ್ನು ಪತ್ರದ ಮೂಲಕ ಕೇಂದ್ರ ಸರ್ಕಾರ ಹೇಳಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಭಾನುವಾರ ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ಕ್ಯಾಬಿನೆಟ್ ಮೀಟಿಂಗ್ ನಡೆದಿತ್ತು. ಇದರ ಬೆನ್ನಲ್ಲೇ ಮುಂಜಾಗ್ರತಾ ಕ್ರಮಕ್ಕೆ ಸೂಚನೆ ನೀಡಲಾಗಿದೆ.