ಸೋಶಿಯಲ್ ಮೀಡಿಯಾ ಸ್ಟಾರ್ ಚಿನ್ನು ಪಾಪು ಸಾವಿನ ಬೆನ್ನಲ್ಲೇ ಪ್ರಿಯಕರ ಆತ್ಮಹತ್ಯೆ ; ಲಿವಿಂಗ್ ಟುಗೆದರ್, ಪೊಲೀಸ್ ವಿಚಾರಣೆ, ಕಾಸರಗೋಡಿನಲ್ಲಿ ಡಬಲ್ ಡೆತ್ ಮಿಸ್ಟರಿ ! 

16-02-26 12:53 pm       HK Staffer   ದೇಶ - ವಿದೇಶ

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಾಪು ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ‘ಚಿನ್ನು ಪಾಪು’ ಎಂದೇ ಖ್ಯಾತಿ ಪಡೆದ ಕೆ. ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಆಕೆಯ ಆಪ್ತ ಸ್ನೇಹಿತನಾಗಿದ್ದ ಸಂದೇಶ್ ಎಂಬ ಯುವಕ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. 

ಕಾಸರಗೋಡು, ಫೆ.16: ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಚಿನ್ನು ಪಾಪು ಸಾವಿನ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ. ‘ಚಿನ್ನು ಪಾಪು’ ಎಂದೇ ಖ್ಯಾತಿ ಪಡೆದ ಕೆ. ರೇಷ್ಮಾ ಆತ್ಮಹತ್ಯೆ ಮಾಡಿಕೊಂಡ ವಾರದಲ್ಲೇ ಆಕೆಯ ಆಪ್ತ ಸ್ನೇಹಿತನಾಗಿದ್ದ ಸಂದೇಶ್ ಎಂಬ ಯುವಕ ನೇಣು ಬಿಗಿದು ಸಾವಿಗೆ ಶರಣಾಗಿದ್ದಾನೆ. 

ಕಾಸರಗೋಡು ಉಳಿಯತ್ತಡ್ಕ ನಿವಾಸಿ ಸಂದೇಶ್ ಮೃತ ವ್ಯಕ್ತಿ. ಗಂಡನಿಂದ ದೂರವಾಗಿದ್ದ ಚಿನ್ನು ಕಳೆದ ನಾಲ್ಕು ತಿಂಗಳಿನಿಂದ ಸಂದೇಶ್ ಜೊತೆ ಕಾಸರಗೋಡಿನ ಕೂಡ್ಲು ಆಜಾದ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು ಎಂದು ತಿಳಿದುಬಂದಿದೆ. ಗಂಡನಿಂದ ವಿಚ್ಚೇದನ ಪಡೆದ ಬಳಿಕ ರೇಷ್ಮಾ ಅವರು ತನ್ನ ನಾಲ್ಕು ವರ್ಷದ ಮಗುವನ್ನು ತವರಿನಲ್ಲಿ ಬಿಟ್ಟಿದ್ದರು. ಈಕೆಯ ತವರು ಮನೆ ಸುಳ್ಯ ಗಡಿಭಾಗ ಅಡೂರಿನಲ್ಲಿತ್ತು. 

26 ವರ್ಷದ ರೇಷ್ಮಾ ಫೆಬ್ರವರಿ 9ರಂದು ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೇಣು ಬಿಗಿದ ಸ್ಥಿತಿಯಲ್ಲಿ ರೇಷ್ಮಾ ಮೃತದೇಹ ಪತ್ತೆಯಾಗಿತ್ತು. ನೆರೆಮನೆಯವರು ನೋಡಿದಾಗ ರೇಷ್ಮಾ ಸಾವಿಗೆ ಶರಣಾಗಿದ್ದು ಪತ್ತೆಯಾಗಿತ್ತು. ಕೆಲಸಕ್ಕೆಂದು ಮನೆಯಿಂದ ಹೊರ ಹೋಗಿದ್ದ ಸಂದೇಶ್‌ ರೇಷ್ಮಾಗೆ ಕರೆ ಮಾಡಿದ್ದ. ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಚಿನ್ನು ಪಾಪು ಎಂಬ ಹೆಸರಲ್ಲಿ ರೇಷ್ಮಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಇನ್ ಸ್ಟಾ ಒಂದರಲ್ಲೇ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದರು.

ರೇಷ್ಮಾ ಸಾವಿನ ಪ್ರಕರಣದ ತನಿಖೆಯ ಭಾಗವಾಗಿ ಪೊಲೀಸರು ರೇಷ್ಮಾ ಸ್ನೇಹಿತ ಸಂದೇಶ್ ವಶಕ್ಕೆ ಪಡೆದು ಹೇಳಿಕೆಯನ್ನು ದಾಖಲಿಸಿದ್ದರು. ಆತ್ಮಹತ್ಯೆಗೆ ಪ್ರಚೋದನೆ ಕೇಸು ದಾಖಲಿಸಿ ಸಂದೇಶ್ ಬಂಧನಕ್ಕೆ ತಯಾರಿ ನಡೆಸಿದ್ದರು. ಆದರೆ ಸಾಕಷ್ಟು ಸಾಕ್ಷ್ಯ ಸಿಕ್ಕಿರಲಿಲ್ಲ ಎನ್ನಲಾಗಿದೆ. ಇದರ ಬೆನ್ನಲ್ಲೇ ಉಳಿಯತ್ತಡ್ಕದ ಮನ್ನಿಪಾಡಿಯಲ್ಲಿರುವ ತನ್ನ ಮನೆಯಲ್ಲಿ ಸಂದೇಶ್‌ ಕೂಡ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ರೇಷ್ಮಾ ಸಾವಿನ ನಂತರ ಸಂದೇಶ್ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದ. ಇಬ್ಬರು ಜೊತೆಗೆ ವಾಸವಿದ್ದರು ಎಂಬ ನೆಲೆಯಲ್ಲಿ ಆಕೆಯ ಸಾವಿಗೇನು ಕಾರಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಪ್ರಕಾರ ರೇಷ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ದೃಢಪಟ್ಟಿದೆ.‌ ಮತ್ತೊಂದು ಮೂಲದ ಪ್ರಕಾರ ಚಿನ್ನು ಆತ್ಮಹತ್ಯೆಗೆ ಸಂದೇಶ್ ಜೊತೆ ಉಂಟಾದ ಜಗಳ ಕಾರಣ ಎಂಬ ಆರೋಪವೂ ಇದೆ. ಆಕೆಯ ಕುಟುಂಬಸ್ಥರು ಕೂಡ ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದರಿಂದ ಸಂದೇಶ್‌ ನನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಆದರೆ ಚಿನ್ನು ಪಪ್ಪು ಸಾವಿನ ತನಿಖೆ ಪೂರ್ಣಗೊಳ್ಳುವ ಮೊದಲೇ ಸಂದೇಶ್ ಸಾವಿಗೀಡಾಗಿದ್ಸು ಪ್ರಕರಣ ಮತ್ತಷ್ಟು ಗೊಂದಲ ಮೂಡಿಸಿದೆ.

A week after the alleged suicide of social media influencer Chinnu Papu, another tragic death has deepened the mystery in Kasaragod. Her close friend and live-in partner, identified as Sandesh, was found dead by suicide at his residence.