ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸಿಪಿಎಂ ಶಾಸಕ ಪದ್ಮಕುಮಾರ್ ಬಂಧನ, ಚಿನ್ನ ವಂಚನೆಗೆ ಇವರದ್ದೇ ನೇತೃತ್ವ ! 

21-11-25 02:26 pm       HK News Desk   ದೇಶ - ವಿದೇಶ

ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ಮಾಜಿ ಅಧ್ಯಕ್ಷ, ಕಮ್ಯುನಿಸ್ಟ್ ಪಕ್ಷದ ಶಾಸಕ ಎ.ಪದ್ಮಕುಮಾ‌ರ್ ಅವರನ್ನು ಎಸ್‌ಐಟಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ತಿರುವನಂತಪುರಂ, ನ.21 :  ಶಬರಿಮಲೆ ಚಿನ್ನ ಲೂಟಿ ಪ್ರಕರಣದಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ)ಯ ಮಾಜಿ ಅಧ್ಯಕ್ಷ, ಕಮ್ಯುನಿಸ್ಟ್ ಪಕ್ಷದ ಶಾಸಕ ಎ.ಪದ್ಮಕುಮಾ‌ರ್ ಅವರನ್ನು ಎಸ್‌ಐಟಿ ಬಂಧಿಸಿದೆ. ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೆ ಏರಿದೆ.

ಗುರುವಾರ ಬೆಳಗ್ಗೆ ರಹಸ್ಯ ಕೇಂದ್ರಕ್ಕೆ ಕರೆಸಿ ಗಂಟೆಗಳ ಕಾಲ ವಿಚಾರಣೆ ನಡೆಸಿದ ಎಸ್ಐಟಿ ಪೊಲೀಸರು ಸಂಜೆ ವೇಳೆಗೆ ಪದ್ಮಕುಮಾರ್ ಅವರನ್ನು ಬಂಧಿಸಿದೆ. ಸಿಪಿಎಂ ಪತ್ತನಂತಿಟ್ಟ ಜಿಲ್ಲಾ ಸಮಿತಿ ಸದಸ್ಯನಾಗಿರುವ ಪದ್ಮಕುಮಾ‌ರ್ ಕೋನ್ನಿ ಕ್ಷೇತ್ರದ ಶಾಸಕರಾಗಿದ್ದಾರೆ. ಪ್ರಕರಣದಲ್ಲಿ ಬಂಧಿತರಾದ ಎಲ್ಲ ಆರೋಪಿಗಳು ಮತ್ತು ದೇವಸ್ವಂ ನೌಕರರು ಪದ್ಮಕುಮಾರ್ ವಿರುದ್ಧ ಹೇಳಿಕೆ ನೀಡಿದ್ದರು. ಪ್ರಕರಣದಲ್ಲಿ ಬಂಧಿತನಾದ ಒಂದನೇ ಆರೋಪಿ ಉಣ್ಣಿಕೃಷ್ಣನ್ ಪೋಟ್ಟಿಗೆ ಪದ್ಮಕುಮಾರ್ ಚಿನ್ನ ಕಳ್ಳತನಕ್ಕೆ ಸ್ವಾತಂತ್ರ್ಯ ನೀಡಿದ್ದರು ಎಂದು ದೇವಸ್ವಂ ನೌಕರರು ಎಸ್ಐಟಿ ಮುಂದೆ ಹೇಳಿಕೆ ನೀಡಿದ್ದಾರೆ. 

ಇದಲ್ಲದೆ ಉನ್ನಿಕೃಷ್ಣನ್ ಪೋಟ್ಟಿಯ ಸಂಬಂಧಿಕರು, ಸ್ನೇಹಿತರು ದೇವಸ್ವಂ ಅಧ್ಯಕ್ಷರ ಕೊಠಡಿಯನ್ನು ಬಳಸುತ್ತಿದ್ದರು. ಅವರಿಗೆ ಪೂಜೆ ಹಾಗೂ ಬುಕ್ಕಿಂಗ್‌ನಲ್ಲಿ ವಿಶೇಷ ಪ್ರಾಶಸ್ತ್ರ ನೀಡಲಾಗುತ್ತಿತ್ತು ಎಂದು ನೌಕರರು ವಿಶೇಷ ತನಿಖಾ ತಂಡಕ್ಕೆ ತಿಳಿಸಿದ್ದಾರೆ. ಪೋಟ್ಟಿ ಮತ್ತು ಪದ್ಮಕುಮಾ‌ರ್ ನಡುವೆ ಹಣಕಾಸಿನ ವಹಿವಾಟು ನಡೆದಿರುವ ಬಗ್ಗೆಯೂ ಎಸ್‌ಐಟಿಗೆ ಸೂಚನೆ ಲಭಿಸಿದೆ.

ದ್ವಾರಪಾಲಕ ಶಿಲ್ಪ, ಬಾಗಿಲ ಚೌಕಟ್ಟಿನ ಚಿನ್ನದ ಪದರವನ್ನು ತಾಮ್ರವಾಗಿ ಉಲ್ಲೇಖಿಸುವ ಆದೇಶವನ್ನು ಪದ್ಮ ಕುಮಾ‌ರ್ ಅವರ ಸೂಚನೆಯಂತೆ ನೀಡಲಾಗಿದೆ ಎಂದು ಬಂಧಿತ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಪದ್ಮಕುಮಾರ್ ಅವರ ಆರ್ಥಿಕ ವ್ಯವಹಾರಗಳ ಬಗ್ಗೆಯೂ ಎಸ್‌ಐಟಿ ತನಿಖೆ ನಡೆಸುತ್ತಿದೆ. ಇದೀಗ ಮಂಡಳಿ ಅಧ್ಯಕ್ಷರಾಗಿದ್ದ ಪದ್ಮಕುಮಾರ್ ಅವರನ್ನು ಬಾಗಿಲು ಚೌಕಟ್ಟಿನ ಪದರದ ಚಿನ್ನ ಲೂಟಿ ಪ್ರಕರಣದಲ್ಲಿ ಎಂಟನೇ ಆರೋಪಿಯನ್ನಾಗಿ ಎಸ್‌ಐಟಿ ಹೆಸರಿಸಿದೆ. ಪದ್ಮಕುಮಾ‌ರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡು ಬಾರಿ ನೋಟಿಸ್ ಜಾರಿ ಮಾಡಿತ್ತು. ಎನ್.ವಾಸು ಬಂಧನದ ಬಳಿಕ ಎರಡನೇ ಬಾರಿ ನೋಟಿಸ್ ನೀಡಲಾಗಿತ್ತು. ಎನ್.ವಾಸು ಟಿಡಿಬಿ ಆಯುಕ್ತರಾಗಿದ್ದಾಗ ಪದ್ಮ ಕುಮಾರ್ ಅಧ್ಯಕ್ಷರಾಗಿದ್ದರು. ಪ್ರಕರಣದಲ್ಲಿ ಇದುವರೆಗೆ ಉಣ್ಣಿಕೃಷ್ಣನ್ ಪೋಟ್ಟಿ, ಟಿಡಿಬಿ ಮಾಜಿ ಆಡಳಿತ ಅಧಿಕಾರಿ ಮುರಾರಿ ಬಾಬು, ಮಾಜಿ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಸುಧೀಶ್ ಕುಮಾರ್, ಮಾಜಿ ಆಯುಕ್ತ ಮತ್ತು ಅಧ್ಯಕ್ಷ ಎನ್.ವಾಸು ಅವರನ್ನು ಬಂಧಿಸಲಾಗಿದೆ. ಪದ್ಮಕುಮಾರ್ ಅವರನ್ನು ರಾತ್ರಿ ಕೊಲ್ಲಂ ವಿಜಿಲೆನ್ಸ್ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

In a major development in the Sabarimala gold loot case, the Special Investigation Team (SIT) has arrested A. Padmakumar, former President of the Travancore Devaswom Board (TDB) and present CPM MLA from Konni constituency. With this, the total number of arrests in the case has risen to five.