ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇಶಕ್ಕೆ ಹಿಂತಿರುಗಲು ಬಯಸಲ್ಲ ; ಮಾಜಿ ಪ್ರಧಾನಿ ಶೇಖ್ ಹಸೀನಾ 

30-10-25 03:20 pm       HK News Desk   ದೇಶ - ವಿದೇಶ

ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ, ಬಾಂಗ್ಲಾದೇಶಕ್ಕೆ ಮತ್ತೆ ಹೋಗುವುದಿಲ್ಲ ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ನವದೆಹಲಿ, ಅ.30 : ಭಾರತದಲ್ಲಿ ಸ್ವತಂತ್ರವಾಗಿ ಧೈರ್ಯದಿಂದ ಬದುಕುತ್ತಿದ್ದೇನೆ, ಬಾಂಗ್ಲಾದೇಶಕ್ಕೆ ಮತ್ತೆ ಹೋಗುವುದಿಲ್ಲ ಎಂದು ಬಾಂಗ್ಲಾದೇಶ ಮಾಜಿ ಪ್ರಧಾನಿ ಶೇಖ್ ಹಸೀನಾ ಹೇಳಿದ್ದಾರೆ.

ರಾಯಿಟರ್ಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶೇಖ್ ಹಸೀನಾ, 'ತಾವು ದೆಹಲಿಯಲ್ಲಿ ಸ್ವತಂತ್ರಳಾಗಿದ್ದೇನೆ. ಅದೇ ರೀತಿ ಎಚ್ಚರಿಕೆಯಿಂದ ವಾಸಿಸುತ್ತಿದ್ದು, ಭಾರತವನ್ನು ತೊರೆಯುವ ಯಾವುದೇ ಉದ್ದೇಶವನ್ನು ಹೊಂದಿಲ್ಲ ಎಂದು ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಬಾಂಗ್ಲಾದೇಶದ ರಾಷ್ಟ್ರೀಯ ಚುನಾವಣೆ, ಅವಾಮಿ ಲೀಗ್ ಪಕ್ಷ, ಮಾನವೀಯತೆಯ ವಿರುದ್ಧದ ಅಪರಾಧಗಳ ಆರೋಪಗಳ ಬಗ್ಗೆ ಮಾತನಾಡಿದ ಶೇಖ್ ಹಸೀನಾ, ಅಲ್ಲಿನ ಸರ್ಕಾರ ಕಾನೂನುಬದ್ಧವಾಗಿದ್ದರೆ, ಸಂವಿಧಾನವನ್ನು ಎತ್ತಿಹಿಡಿಯುತ್ತಿದ್ದರೆ ಮತ್ತು ಕಾನೂನು- ಸುವ್ಯವಸ್ಥೆ ನಿಜವಾಗಿಯೂ ಮೇಲುಗೈ ಸಾಧಿಸಿದ್ದರೆ, ನಾನು ಬಾಂಗ್ಲಾದೇಶಕ್ಕೆ ಹೋಗಲು ಇಷ್ಟಪಡುತ್ತೇನೆ ಎಂದರು. 

ಅವಾಮಿ ಲೀಗ್ ಮೇಲಿನ ನಿಷೇಧ ಅನ್ಯಾಯ ಮಾತ್ರವಲ್ಲ, ಅದು ಸ್ವಯಂ ಸೋಲಿಗೆ ಕಾರಣವೂ ಆಗಿದೆ ಎಂದು ಹೇಳಿದ ಶೇಖ್ ಹಸೀನಾ, 'ಒಂದು ವೇಳೆ ತಮ್ಮ ಅವಾಮಿ ಲೀಗ್ ಪಕ್ಷವು 2026ರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡದಿದ್ದರೆ, ಅದರ ಲಕ್ಷಾಂತರ ಬೆಂಬಲಿಗರು ಬಾಂಗ್ಲಾದೇಶದಲ್ಲಿ ಚುನಾವಣೆಗಳನ್ನು ಬಹಿಷ್ಕರಿಸುತ್ತಾರೆ. ಲಕ್ಷಾಂತರ ಜನರು ಅವಾಮಿ ಲೀಗ್ ಅನ್ನು ಬೆಂಬಲಿಸುತ್ತಾರೆ. ಆದ್ದರಿಂದ ಪರಿಸ್ಥಿತಿ ಹಾಗೆಯೇ ಇದ್ದರೆ, ಅವರು ಮತ ಚಲಾಯಿಸುವುದಿಲ್ಲ. ಕೆಲಸ ಮಾಡುವ ರಾಜಕೀಯ ವ್ಯವಸ್ಥೆ ಬೇಕಾದರೆ ನೀವು ಲಕ್ಷಾಂತರ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಶೇಖ್ ಹಸೀನಾ ಎಚ್ಚರಿಸಿದ್ದಾರೆ.

ಅಂದಹಾಗೆ ಬಾಂಗ್ಲಾದೇಶದಲ್ಲಿ ನಾಗರಿಕ ಸೇವಾ ಕೋಟಾ ವ್ಯವಸ್ಥೆಯ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆಗಳ ನಂತರ 78 ವರ್ಷದ ನಾಯಕಿ ಶೇಖ್ ಹಸೀನಾ ಕಳೆದ ವರ್ಷ ಆಗಸ್ಟ್‌ನಲ್ಲಿ ಢಾಕಾದಿಂದ ಪಲಾಯನ ಮಾಡಿದ್ದರು. ಪಲಾಯನ ಬಳಿಕ ಭಾರತಕ್ಕೆ ಓಡಿ ಬಂದಿದ್ದ ಅವರು ದೆಹಲಿಯಲ್ಲಿ ಆಶ್ರಯ ಪಡೆದಿದ್ದಾರೆ. ಶೇಖ್ ಹಸೀನಾ ಅವರ ಪದಚ್ಯುತಿಯ ನಂತರ, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಮಹಮ್ಮದ್ ಯೂನಸ್ ನೇತೃತ್ವದ ಮಧ್ಯಂತರ ಸರ್ಕಾರವು ಬಾಂಗ್ಲಾದೇಶವನ್ನು ಆಳುತ್ತಿದೆ. ಫೆಬ್ರವರಿ 2027ರಲ್ಲಿ ರಾಷ್ಟ್ರೀಯ ಚುನಾವಣೆಗಳನ್ನು ನಡೆಸುವುದಾಗಿ ಘೋಷಣೆ ಮಾಡಿದೆ.

Former Bangladesh Prime Minister Sheikh Hasina has said that she is living freely and fearlessly in India and has no intention of returning to Bangladesh.