ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳೆ ಶ್ರೀಧನ್ಯಾ ಸುರೇಶ್ ಕಾಸರಗೋಡು ಜಿಲ್ಲಾಧಿಕಾರಿ

12-09-26 05:53 pm       HK News Staffer   ಕರ್ನಾಟಕ

ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕೃಷಿ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಕಾಸರಗೋಡು, ಸೆ.12: ಕಾಸರಗೋಡು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಶ್ರೀಧನ್ಯಾ ಸುರೇಶ್ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಕಾಸರಗೋಡು ಜಿಲ್ಲಾಧಿಕಾರಿಯಾಗಿದ್ದ ಅರ್ಜುನ್ ಪಾಂಡ್ಯನ್ ಅವರನ್ನು ಕೃಷಿ ಇಲಾಖೆಯ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ. 

ಪ್ರವಾಸೋದ್ಯಮ ಇಲಾಖೆಯ ಹೆಚ್ಚುವರಿ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀಧನ್ಯಾ ಸುರೇಶ್ ಅವರು ಗಡಿ ಜಿಲ್ಲೆಯ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ. ವಯನಾಡಿನ 'ಕುರಿಚ್ಯ' ಎಂಬ ಬುಡಕಟ್ಟು ಸಮುದಾಯಕ್ಕೆ ಸೇರಿದ ಶ್ರೀಧನ್ಯಾ ದೇಶದ ಅತ್ಯುನ್ನತ ಸಿವಿಲ್ ಸರ್ವೀಸ್ (ಐಎಎಸ್) ಪರೀಕ್ಷೆ ತೇರ್ಗಡೆಯಾದ ಕೇರಳದ ಮೊದಲ ಬುಡಕಟ್ಟು ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 

ತೀರಾ ಕನಿಷ್ಠ ಸೌಲಭ್ಯಗಳೂ ಇಲ್ಲದ, ದಿನಗೂಲಿ ನೌಕರರ ಕುಟುಂಬದಲ್ಲಿ ಜನಿಸಿದ ಶ್ರೀಧನ್ಯಾ, ಮಲಯಾಳ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ್ದು ಆರ್ಥಿಕ ಮುಗ್ಗಟ್ಟಿನ ನಡುವೆಯೂ ಐಎಎಸ್ ಅಧಿಕಾರಿಯಾಗಬೇಕೆಂಬ ಕನಸನ್ನು ಕಠಿಣ ಪರಿಶ್ರಮದಿಂದ ನನಸಾಗಿಸಿಕೊಂಡವರು.

2018ರ ಯುಪಿಎಸ್‌ಸಿ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ 410ನೇ ರ್ಯಾಂಕ್ ಪಡೆಯುವ ಮೂಲಕ ದೇಶದ ಗಮನ ಸೆಳೆದಿದ್ದರು. ದೆಹಲಿಯಲ್ಲಿ ನಡೆದ ಸಂದರ್ಶನಕ್ಕೆ ಹೋಗಲು ಹಣವಿಲ್ಲದಿದ್ದಾಗ ಊರಿನ ಜನರೇ ಹಣ ಒಟ್ಟುಗೂಡಿಸಿ ನೆರವಾಗಿದ್ದರು. ಸಾಮಾನ್ಯ ಹಳ್ಳಿಯೊಂದರಿಂದ ತೊಡಗಿ ಕಠಿಣ ಪರಿಸ್ಥಿತಿಗಳನ್ನು ಮೆಟ್ಟಿ ನಿಂತು ಜಿಲ್ಲೆಯ ಅತ್ಯುನ್ನತ ಅಧಿಕಾರದ ಗದ್ದುಗೆ ತಲುಪಿರುವ ಇವರೀಗ ಕಾಸರಗೋಡಿನ ಜಿಲ್ಲಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.