‘ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ನಂಗೆ ಗೊತ್ತಿದೆ! ; ಹಾಸನ ಡಿಸಿಗೆ ರೇವಣ್ಣ ಖಡಕ್ ಎಚ್ಚರಿಕೆ 

29-08-26 10:47 pm       HK News Desk   ಕರ್ನಾಟಕ

ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಮತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ದಬ್ಬಾಳಿಕೆ ನಡೆಸಿದರೆ ಅದನ್ನು ಹೇಗೆ ‘ರಿಪೇರಿ’ ಮಾಡಬೇಕು ಎಂಬುದು ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಹಾಸನ , ಆಗಸ್ಟ್ 29: ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಎಚ್.ಡಿ. ರೇವಣ್ಣ ಮತ್ತೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲಾಧಿಕಾರಿ ದಬ್ಬಾಳಿಕೆ ನಡೆಸಿದರೆ ಅದನ್ನು ಹೇಗೆ ‘ರಿಪೇರಿ’ ಮಾಡಬೇಕು ಎಂಬುದು ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೇವಣ್ಣ, ಗ್ರಾಮ ಪಂಚಾಯಿತಿ ಚುನಾವಣೆಯ ಮೀಸಲು ನಿಗದಿ ವಿಚಾರವನ್ನು ಪ್ರಸ್ತಾಪಿಸಿ ಜಿಲ್ಲಾಡಳಿತದ ಕಾರ್ಯವೈಖರಿ ವಿರುದ್ಧ ಅಸಮಾಧಾನ ಹೊರಹಾಕಿದರು.

‘ಮೀಸಲು ಬದಲಾಯಿಸಿದ್ದು ಯಾಕೆ?’

ಮೀಸಲು ನಿಗದಿ ಸಂಬಂಧ ಜಿಲ್ಲಾಧಿಕಾರಿಗಳು ತಹಸೀಲ್ದಾರ್‌ಗೆ ಪತ್ರ ಬರೆದು ವರದಿ ಪಡೆದ ಬಳಿಕ ಮತ್ತೆ ಮೀಸಲಾತಿಯಲ್ಲಿ ಬದಲಾವಣೆ ಮಾಡಿರುವುದು ಏಕೆ ಎಂದು ರೇವಣ್ಣ ಪ್ರಶ್ನಿಸಿದರು. “ಮೀಸಲು ಬದಲಾವಣೆ ಮಾಡುವಾಗ ನಿರ್ದಿಷ್ಟ ಕಾರಣ ನೀಡಬೇಕಲ್ಲವೇ? ದೃಢೀಕೃತ ಪ್ರತಿಯನ್ನು ಕೇಳಿದರೂ ಇನ್ನೂ ನೀಡುತ್ತಿಲ್ಲ” ಎಂದು ಅವರು ಆಕ್ಷೇಪಿಸಿದರು.

ಮೀಸಲು ವಿಚಾರದಲ್ಲಿ ರೈತರಿಗೆ ಅಥವಾ ಸಾರ್ವಜನಿಕರಿಗೆ ತೊಂದರೆಯಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ ಅವರು, ಆಗಸ್ಟ್ 31ರೊಳಗೆ ಮೀಸಲು ಬದಲಾವಣೆ ಮಾಡದಿದ್ದರೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

‘ಅಧಿಕಾರಿಗಳು ಕೆಲಸ ಮಾಡೋಕೆ ಆಗ್ತಿಲ್ಲ’

ಹಾಸನ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಹಾಗೂ ಹೆಚ್ಚುವರಿ ಜವಾಬ್ದಾರಿಗಳ ಬಗ್ಗೆಯೂ ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು. “ಆರು ತಿಂಗಳ ಕಾಲ ಎಡಿಸಿ ಇರಲಿಲ್ಲ. ಜಗದೀಶ್ ಎಂಬುವವರು ಬಂದು ಎರಡೇ ದಿನದಲ್ಲಿ ಹೋದರು. ಒಂದೇ ವಾರದಲ್ಲಿ ರಜೆ ಹಾಕಿ ಹೋದರು. ಸಕಲೇಶಪುರ ಎಸಿಯೂ ಒಂದು ತಿಂಗಳು ಇರಲಿಲ್ಲ. ಹಾಸನದ ಎಡಿಸಿ, ಎಸ್‌ಎಲ್‌ಎಒ, ಸಕಲೇಶಪುರ ಎಸಿ ಸೇರಿದಂತೆ ಹಲವು ಅಧಿಕಾರಿಗಳು ಹೋಗಿದ್ದಾರೆ. ಕೆಲವೆಡೆ ಇಬ್ಬರು-ಮೂರು ಕಡೆ ಚಾರ್ಜ್ ಕೊಟ್ಟಿದ್ದಾರೆ. ಅಧಿಕಾರಿಗಳು ಕೆಲಸ ಮಾಡುವುದಕ್ಕೂ ಆಗುತ್ತಿಲ್ಲ” ಎಂದು ಆರೋಪಿಸಿದರು. ಇದೇ ವೇಳೆ ಜಿಲ್ಲಾಧಿಕಾರಿ ವಿರುದ್ಧ ತಮ್ಮ ಹಿಂದಿನ ಹೇಳಿಕೆಯನ್ನು ಮುಂದುವರಿಸಿದ ರೇವಣ್ಣ, “ಅವರು ದಬ್ಬಾಳಿಕೆ ಮಾಡಲಿ, ರಿಪೇರಿ ಮಾಡೋದು ಗೊತ್ತಿದೆ” ಎಂದು ಎಚ್ಚರಿಕೆ ನೀಡಿದರು.

ತಮ್ಮ ವಿರುದ್ಧ ಜಿಲ್ಲಾಧಿಕಾರಿ ಕಚೇರಿಗೆ ಹೋಗಿ ಒತ್ತಡ ಹೇರಿದ್ದಾರೆ ಎಂಬ ಆರೋಪಗಳಿದ್ದರೆ ಅದನ್ನು ಸ್ಪಷ್ಟಪಡಿಸಲಿ ಎಂದು ರೇವಣ್ಣ ಸವಾಲು ಹಾಕಿದರು. “ನಾನು ಡಿಸಿ ಆಫೀಸ್‌ಗೆ ಹೋಗಿದ್ದೇನೋ ಇಲ್ಲವೋ ಅನ್ನೋದನ್ನು ಹೇಳಲಿ. ರೈತರಿಗೆ ತೊಂದರೆ ಕೊಡಲು ನಾನು ಬಿಡಲ್ಲ” ಎಂದು ಹೇಳಿದರು.

ಹಾಸನ ಜಿಲ್ಲೆಯಲ್ಲಿ ಕೃಷಿ ಪರಿಸ್ಥಿತಿಯ ಬಗ್ಗೆಯೂ ರೇವಣ್ಣ ಆತಂಕ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ 7.35 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದ್ದರೂ, ಕೇವಲ 14 ಹೆಕ್ಟೇರ್ ಮಾತ್ರ ಬಿತ್ತನೆಯಾಗಿದೆ ಎಂದು ಅವರು ತಿಳಿಸಿದರು. ಬಿತ್ತನೆಯಾಗಿರುವ ಬೆಳೆಗಳ ಪೈಕಿ ಬಹುತೇಕ ಬೆಳೆಗಳು ನಾಶವಾಗಿದ್ದು, ರಾಗಿ ಬಿತ್ತನೆಯನ್ನೂ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು. ಬೇಲೂರು ಮತ್ತು ಆಲೂರು ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಏಕೆ ಸೇರಿಸಿಲ್ಲ? ಎಂದು ಪ್ರಶ್ನಿಸಿದ ಅವರು, ಜಿಲ್ಲೆಯಲ್ಲಿ ರೈತರ ಸಮಸ್ಯೆಗಳನ್ನು ಕೇಳುವವರೇ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಜಿಲ್ಲೆಯಲ್ಲಿ ಹೇಳೋರಿಲ್ಲ, ಕೇಳೋರಿಲ್ಲ ಎನ್ನುವಂತಾಗಿದೆ. ನಾನು ಹಳ್ಳಿ ಭಾಷೆಯಲ್ಲಿ ಮಾತನಾಡಿದರೆ ಅವರು ಬೈತಾರೆ ಅಂತಾರೆ” ಎಂದು ರೇವಣ್ಣ ವ್ಯಂಗ್ಯವಾಡಿದರು. ಮೀಸಲು ನಿಗದಿ ವಿವಾದ, ಅಧಿಕಾರಿಗಳ ವರ್ಗಾವಣೆ ಹಾಗೂ ರೈತರ ಸಮಸ್ಯೆಗಳ ವಿಚಾರದಲ್ಲಿ ಜಿಲ್ಲಾಡಳಿತದ ವಿರುದ್ಧ ರೇವಣ್ಣ ಅವರ ಆಕ್ರೋಶ ಇದೀಗ ಮತ್ತಷ್ಟು ತೀವ್ರಗೊಂಡಿದ್ದು, ಆ.31ರ ಗಡುವಿನ ಬಳಿಕ ಅವರು ಯಾವ ರೀತಿಯ ಹೋರಾಟಕ್ಕೆ ಮುಂದಾಗಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.