ಸರ್ಕಾರಿ ನಿವೇಶನ ಸಿಗದ ನೋವು, ವಿವಾದದ ಕಾವು ; ಇಬ್ಬರು ಮಕ್ಕಳಿಗೆ ವಿಷ ನೀಡಿ ತಾಯಿಯೂ ಆತ್ಮಹತ್ಯೆ! ಶಿರಾದಲ್ಲಿ ದುರಂತ

29-08-26 01:02 pm       HK News Staffer   ಕ್ರೈಂ

ಇಬ್ಬರು ಹೆಣ್ಣುಮಕ್ಕಳಿಗೆ ವಿಷ ನೀಡಿ ಬಳಿಕ ತಾನೂ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ನಿವೇಶನಕ್ಕಾಗಿ ವಿಂಗಡಿಸಲಾಗಿದ್ದ ಬಡಾವಣೆಯಲ್ಲಿ ನಡೆದಿದೆ.

ಶಿರಾ , ಆಗಸ್ಟ್ 29: ಇಬ್ಬರು ಹೆಣ್ಣುಮಕ್ಕಳಿಗೆ ವಿಷ ನೀಡಿ ಬಳಿಕ ತಾನೂ ವಿಷ ಸೇವಿಸಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಶಿರಾ ನಗರದ ಡಿಪ್ಲೊಮಾ ಕಾಲೇಜು ಹಿಂಭಾಗದ ಆಶ್ರಯ ನಿವೇಶನಕ್ಕಾಗಿ ವಿಂಗಡಿಸಲಾಗಿದ್ದ ಬಡಾವಣೆಯಲ್ಲಿ ನಡೆದಿದೆ.

ಮೃತರನ್ನು ರಾಬಿಯಾ (32) ಹಾಗೂ ಅವರ ಮಕ್ಕಳಾದ ತಮನ್ನಾ (9) ಮತ್ತು ಸಿಮ್ರಾನ್ (4) ಎಂದು ಗುರುತಿಸಲಾಗಿದೆ. ರಾಬಿಯಾ ಅವರ ಪತಿ ಅಸ್ಲಂ ಪಾಷಾ ಈ ಹಿಂದೆ ಮೃತಪಟ್ಟಿದ್ದರು ಎನ್ನಲಾಗಿದೆ. ನಗರದ ಹೊರವಲಯದ ನಗರಸಭೆಗೆ ಸೇರಿದ ಸರ್ವೇ ನಂ.100ರ ಮನೆಯೊಂದರಲ್ಲಿ ಈ ಘಟನೆ ನಡೆದಿದೆ.

ರಾಬಿಯಾ ನಿವೇಶನಕ್ಕಾಗಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದರು ಎನ್ನಲಾಗಿದೆ. 2025ರಲ್ಲಿ ತುಮಕೂರಿನಲ್ಲಿ ನಡೆದ ಸರ್ಕಾರದ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ತಮ್ಮ ಮನವಿ ಆಲಿಸುವಂತೆ ಒತ್ತಾಯಿಸಿದ್ದರು. ಬಳಿಕ ಸಿಎಂ ಅವರ ಸೂಚನೆಯ ಮೇರೆಗೆ ರಾಬಿಯಾ ಅವರಿಗೆ 20x30 ಅಡಿ ನಿವೇಶನ ಮಂಜೂರು ಮಾಡಲಾಗಿತ್ತು. ಆದರೆ, ಸಿಎಂ ಆದೇಶವಾಗಿ ಸುಮಾರು ಒಂದೂವರೆ ವರ್ಷ ಕಳೆದರೂ ನಿವೇಶನ ನೀಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಎಂದು ರಾಬಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು.

ಜನಸ್ಪಂದನ ಸಭೆಯಲ್ಲೂ ಅಳಲು ತೋಡಿಕೊಂಡಿದ್ದ ರಾಬಿಯಾ

ನಿವೇಶನ ಸಿಗದ ಹಿನ್ನೆಲೆಯಲ್ಲಿ ಅಂದಿನ ಗೃಹ ಸಚಿವ ಡಾ. ಜಿ. ಪರಮೇಶ್ವರ್ ನೇತೃತ್ವದಲ್ಲಿ ತುಮಕೂರಿನಲ್ಲಿ ನಡೆದ ಜನಸ್ಪಂದನ ಸಭೆಯಲ್ಲೂ ರಾಬಿಯಾ ತಮ್ಮ ಅಳಲು ತೋಡಿಕೊಂಡಿದ್ದರು. ಸಿಎಂ ಆದೇಶದ ಹೊರತಾಗಿಯೂ ನಿವೇಶನ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ, ದಯಾಮರಣಕ್ಕೆ ಅನುಮತಿ ನೀಡುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದರು ಎನ್ನಲಾಗಿದೆ. ಈ ವೇಳೆ ರಾಬಿಯಾ ಅವರನ್ನು ಕರೆಸಿ ಸಮಸ್ಯೆ ಆಲಿಸಿದ್ದ ಡಾ. ಜಿ. ಪರಮೇಶ್ವರ್, ಶಿರಾ ನಗರದ ಹೊರವಲಯದಲ್ಲಿ ಸರ್ಕಾರದಿಂದ ನಿವೇಶನ ನೀಡುವ ವ್ಯವಸ್ಥೆ ಮಾಡಿದ್ದರು ಎಂದು ತಿಳಿದುಬಂದಿದೆ.

ನಗರಸಭೆ ಸಭೆಯ ಬಳಿಕ ಹೆಚ್ಚಿದ ವಿವಾದ;

ಇತ್ತೀಚೆಗೆ ಶಿರಾ ನಗರಸಭೆಯ ಸಾಮಾನ್ಯ ಸಭೆಯಲ್ಲೂ ರಾಬಿಯಾಗೆ ನಿವೇಶನ ನೀಡಿರುವ ವಿಚಾರ ಚರ್ಚೆಗೆ ಬಂದಿತ್ತು. ಕೆಲವು ಸದಸ್ಯರು ನಗರಸಭೆ ಆಯುಕ್ತ ರುದ್ರೇಶ್ ಆರ್. ಹಾಗೂ ಅಧ್ಯಕ್ಷ ಜೀಶಾನ್ ಮುಹಮ್ಮದ್ ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದರು. ಅಲ್ಲದೆ, ರಾಬಿಯಾ ನಿರ್ಮಿಸಿದ್ದ ಮನೆ ಅಕ್ರಮವಾಗಿದೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಕೃಷ್ಣಪ್ಪ (ಕಿಟ್ಟಪ್ಪ) ಹಾಗೂ ಮಾಜಿ ನಗರಸಭಾಧ್ಯಕ್ಷ ಬಿ. ಅಂಜಿನಪ್ಪ ಆರೋಪಿಸಿದ್ದರು. ಮನೆ ತೆರವುಗೊಳಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹವನ್ನೂ ನಡೆಸಿದ್ದರು ಎನ್ನಲಾಗಿದೆ. ಈ ಬೆಳವಣಿಗೆಗಳಿಂದ ನೊಂದ ರಾಬಿಯಾ ಆತ್ಮಹತ್ಯೆಯಂತಹ ತೀವ್ರ ನಿರ್ಧಾರ ಕೈಗೊಂಡಿರಬಹುದೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಆದರೆ, ಮೂವರ ಸಾವಿಗೆ ನಿಖರ ಕಾರಣವೇನು ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ.

ಅಧಿಕಾರಿಗಳಿಂದ ಸ್ಥಳ ಪರಿಶೀಲನೆ;

ಘಟನೆ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಗೋಪಾಲ್, ಡಿವೈಎಸ್ಪಿ ಶೇಖರ್ ಹಾಗೂ ಸಿಪಿಐ ಪ್ರವೀಣ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಶಿರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಿವೇಶನ ವಿವಾದ, ಇತ್ತೀಚಿನ ಬೆಳವಣಿಗೆಗಳು ಹಾಗೂ ಮೂವರ ಸಾವಿಗೆ ಕಾರಣವಾದ ಪರಿಸ್ಥಿತಿಗಳ ಕುರಿತು ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.