ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡಿಕೆಶಿ ಜೊತೆ ಎರಡೂವರೆ ಗಂಟೆ ಮಾತುಕತೆ, ಖಾತೆ ಬದಲಾವಣೆ ಸುಳಿವು? ‘ಮಿಸ್ ಕಮ್ಯೂನಿಕೇಶನ್’ ಎಂದ ರೆಡ್ಡಿ ; ಹೈಕಮಾಂಡ್ ನಿರ್ಧಾರದತ್ತ ಎಲ್ಲರ ಚಿತ್ತ

06-06-26 12:49 pm       HK News Staffer   ಕರ್ನಾಟಕ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡೇ ದಿನದಲ್ಲಿ ಭುಗಿಲೆದ್ದಿದ್ದ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಕೈತಪ್ಪಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಸಿಎಂ ಡಿಕೆಶಿ ಸೇರಿದಂತೆ ಕಾಂಗ್ರೆಸ್ ವರಿಷ್ಠರು ನಡೆಸಿದ ಪ್ರಯತ್ನಗಳು ಫಲ ನೀಡಿರುವ ಲಕ್ಷಣಗಳು ಕಾಣಿಸುತ್ತಿವೆ.

ಬೆಂಗಳೂರು, ಜೂನ್ 06: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರ ರಚನೆಯಾದ ಎರಡೇ ದಿನದಲ್ಲಿ ಭುಗಿಲೆದ್ದಿದ್ದ ಸಚಿವ ರಾಮಲಿಂಗಾರೆಡ್ಡಿ ರಾಜೀನಾಮೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಕೈತಪ್ಪಿದ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಮಲಿಂಗಾರೆಡ್ಡಿ ಅವರನ್ನು ಮನವೊಲಿಸಲು ಸಿಎಂ ಡಿಕೆಶಿ ಸೇರಿದಂತೆ ಕಾಂಗ್ರೆಸ್ ವರಿಷ್ಠರು ನಡೆಸಿದ ಪ್ರಯತ್ನಗಳು ಫಲ ನೀಡಿರುವ ಲಕ್ಷಣಗಳು ಕಾಣಿಸುತ್ತಿವೆ.

ಮೂಲಗಳ ಪ್ರಕಾರ, ರಾಮಲಿಂಗಾರೆಡ್ಡಿ ತಮ್ಮ ರಾಜೀನಾಮೆಯನ್ನು ಬಹುತೇಕ ವಾಪಸ್ ಪಡೆಯಲು ಒಪ್ಪಿದ್ದಾರೆ ಎನ್ನಲಾಗುತ್ತಿದೆಯಾದರೂ, ಈ ಬಗ್ಗೆ ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಅಲ್ಲದೇ ಅವರು ಜಲಸಂಪನ್ಮೂಲ ಖಾತೆಯಲ್ಲೇ ಮುಂದುವರಿಯುತ್ತಾರೆಯೇ ಅಥವಾ ಖಾತೆ ಬದಲಾವಣೆ ಆಗುತ್ತದೆಯೇ ಎಂಬುದು ಇನ್ನೂ ಸಸ್ಪೆನ್ಸ್ ಆಗಿದೆ.

ತಡರಾತ್ರಿ 2.5 ಗಂಟೆ ಸಂಧಾನ ಸಭೆ

ಶುಕ್ರವಾರ ತಡರಾತ್ರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ರಾಮಲಿಂಗಾರೆಡ್ಡಿ ನಡುವೆ ಸುಮಾರು ಎರಡೂವರೆ ಗಂಟೆಗಳ ಕಾಲ ಒನ್-ಟು-ಒನ್ ಮಾತುಕತೆ ನಡೆದಿದೆ. ಈ ವೇಳೆ ಉಂಟಾಗಿದ್ದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಸಿಎಂ ಸುದೀರ್ಘ ಚರ್ಚೆ ನಡೆಸಿದ್ದಾರೆ. ಮಾತುಕತೆ ಬಳಿಕ ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, “ಸಿಎಂ ಏನು ಹೇಳಿದ್ದಾರೋ ಅದನ್ನೇ ನಾನು ಹೇಳುತ್ತೇನೆ. ಎಲ್ಲವೂ ನಿವಾರಣೆಯಾಗಿದೆ” ಎಂದಷ್ಟೇ ಹೇಳಿ, ರಾಜೀನಾಮೆ ವಾಪಸ್ ಪಡೆಯುವ ಬಗ್ಗೆ ಅಥವಾ ಜಲಸಂಪನ್ಮೂಲ ಖಾತೆಯಲ್ಲಿ ಮುಂದುವರಿಯುವ ಬಗ್ಗೆ ಯಾವುದೇ ಸ್ಪಷ್ಟನೆ ನೀಡಲಿಲ್ಲ.

‘ಇದು ಫ್ಯಾಮಿಲಿ ಪ್ರಾಬ್ಲಂ’ ಎಂದ ಡಿಕೆಶಿ 

ಇನ್ನೊಂದೆಡೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕೂಡ ಭಿನ್ನಮತವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. “ನಾನು, ರಾಮಲಿಂಗಾರೆಡ್ಡಿ ಮತ್ತು ರೇವಣ್ಣ 1980ರ ದಶಕದಿಂದ ಸ್ನೇಹಿತರು. ನಾವು ಪಕ್ಷದಲ್ಲಿ ಬೆಳೆದವರು. ಬೆಂಗಳೂರಿನ ಅಭಿವೃದ್ಧಿಗಾಗಿ ಕೆಲಸ ಮಾಡುವವರು. ಇದು ಫ್ಯಾಮಿಲಿ ಪ್ರಾಬ್ಲಂ. ಎಲ್ಲರೂ ಕೂತು ಮಾತನಾಡಿದ್ದೇವೆ. ಸಮಸ್ಯೆ ಪರಿಹಾರವಾಗಿದೆ,” ಎಂದು ಡಿಕೆಶಿ ಹೇಳಿದ್ದಾರೆ.

ಖಾತೆ ಬದಲಾವಣೆ ವಿಚಾರದಲ್ಲಿ ರಾಮಲಿಂಗಾರೆಡ್ಡಿ ಒಪ್ಪಿಕೊಂಡಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮಿಸ್ ಕಮ್ಯೂನಿಕೇಶನ್ ಆಗಿದೆ” ಎಂದಷ್ಟೇ ಹೇಳಿ ಹೆಚ್ಚಿನ ಮಾಹಿತಿ ಬಹಿರಂಗಪಡಿಸಲಿಲ್ಲ.

ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ರೆಡ್ಡಿ ಪಟ್ಟು
ಸಂಪೂರ್ಣ ವಿವಾದದ ಕೇಂದ್ರಬಿಂದು ಬೆಂಗಳೂರು ಅಭಿವೃದ್ಧಿ ಖಾತೆಯಾಗಿದೆ. ಬಿಬಿಎಂಪಿ, ಬಿಡಿಎ, ಬಿಎಂಆರ್‌ಸಿಎಲ್, ಜಲಮಂಡಳಿ ಸೇರಿದಂತೆ ಬೆಂಗಳೂರಿನ ಪ್ರಮುಖ ಅಭಿವೃದ್ಧಿ ಸಂಸ್ಥೆಗಳು ಈ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಇದನ್ನು ಸರ್ಕಾರದ ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಅಂತಿಮ ನಿರ್ಧಾರವನ್ನು ಪಕ್ಷದ ರಾಷ್ಟ್ರೀಯ ನಾಯಕತ್ವವೇ ತೆಗೆದುಕೊಳ್ಳಲಿದೆ ಎನ್ನುವ ಸಂದೇಶವನ್ನು ಡಿಕೆಶಿ ರವಾನಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ವಲಯದಲ್ಲಿ ಎಲ್ಲರ ಚಿತ್ತ ಹೈಕಮಾಂಡ್ ನಿರ್ಧಾರದತ್ತ ನೆಟ್ಟಿದೆ.