ರಾಮಲಿಂಗಾ ರೆಡ್ಡಿ ಕಚೇರಿ ಎದುರಲ್ಲಿ ಪ್ರತಿಭಟನೆ ; ಕಾರಿಗೆ ಅಡ್ಡಲಾಗಿ ಮಲಗಿ ಕಾರ್ಯಕರ್ತರ ಹೈಡ್ರಾಮಾ, ಪೊಲೀಸರೊಂದಿಗೆ ತಳ್ಳಾಟ, ಪದಾಧಿಕಾರಿಗಳಿಂದ ಪಕ್ಷಕ್ಕೆ ರಾಜೀನಾಮೆ, ಆಕ್ರೋಶ

05-06-26 05:23 pm       HK News Staffer   ಕರ್ನಾಟಕ

ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆರಳಿದ ಅವರ ಬೆಂಬಲಿಗರು, ಬೆಂಗಳೂರಿನ ಕೋರಮಂಗಲದಲ್ಲಿರುವ ರೆಡ್ಡಿಯವರ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ, ಹೈಡ್ರಾಮಾ ನಡೆಸಿದರು.

ಬೆಂಗಳೂರು, ಜೂನ್ 5: ಹಿರಿಯ ಕಾಂಗ್ರೆಸ್ ನಾಯಕ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆರಳಿದ ಅವರ ಬೆಂಬಲಿಗರು, ಬೆಂಗಳೂರಿನ ಕೋರಮಂಗಲದಲ್ಲಿರುವ ರೆಡ್ಡಿಯವರ ಕಚೇರಿ ಮುಂಭಾಗದಲ್ಲಿ ಭಾರೀ ಪ್ರತಿಭಟನೆ, ಹೈಡ್ರಾಮಾ ನಡೆಸಿದರು.

ರಾಮಲಿಂಗಾ ರೆಡ್ಡಿ ಅವರಿಗೆ ಅನ್ಯಾಯವಾಗಿದೆ ಎಂದು ಘೋಷಣೆಗಳನ್ನು ಕೂಗುತ್ತ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟನೆ ನಡೆಸಿದರು. ಜಲಸಂಪನ್ಮೂಲ ಖಾತೆ ನೀಡಲಾಗಿದ್ದರೂ, ನಗರಾಭಿವೃದ್ಧಿ ಖಾತೆ ಬಯಸಿದ್ದ ರಾಮಲಿಂಗಾ ರೆಡ್ಡಿ ಅವರಿಗೆ ಖಾತೆ ಬದಲಾವಣೆಯಿಂದ ನೋವಾಗಿದ್ದು, ಆತ್ಮಸಾಕ್ಷಿಗೆ ವಿರುದ್ಧವಾಗಿ ಕೆಲಸ ಮಾಡಲಾರೆ ಎಂದು ರಾಜೀನಾಮೆ ನೀಡಿದ್ದರು. 

ಪ್ರತಿಭಟನೆಯ ಸಂದರ್ಭದಲ್ಲಿ ಬೆಂಬಲಿಗರು ರಾಮಲಿಂಗಾ ರೆಡ್ಡಿ ಅವರ ಕಾರಿಗೆ ಅಡ್ಡಬಿದ್ದು, ನ್ಯಾಯಕ್ಕಾಗಿ ಆಗ್ರಹಿಸಿದರು. ಈ ವೇಳೆ, ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ತಳ್ಳಾಟ ಸಂಭವಿಸಿದ್ದು, ಪರಿಸ್ಥಿತಿ ಬಿಗಡಾಯಿಸಿತ್ತು. ಬಳಿಕ ಪರಿಸ್ಥಿತಿಯನ್ನು ಹತೋಟಿಗೆ ತರಲಾಯಿತು. ಹೈಕಮಾಂಡ್ ಮತ್ತು ರಾಜ್ಯ ನಾಯಕರು ಕೂಡಲೇ ಮಧ್ಯಪ್ರವೇಶಿಸಿ ರಾಮಲಿಂಗಾ ರೆಡ್ಡಿ ಅವರಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಬೆಂಬಲಿಗರು ಒತ್ತಾಯಿಸಿದ್ದಾರೆ.

ಪದಾಧಿಕಾರಿಗಳಿಂದ ಪಕ್ಷಕ್ಕೆ ರಾಜಿನಾಮೆ

ರಾಮಲಿಂಗಾ ರೆಡ್ಡಿಯವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ಕಚೇರಿಯಲ್ಲಿ ಹೈಡ್ರಾಮಾವೇ ನಡೆದಿದ್ದು ಬೆಂಗಳೂರು ನಗರ, ವಾರ್ಡ್ ವ್ಯಾಪ್ತಿಯ ಹಲವಾರು ಕಾಂಗ್ರೆಸ್ ಪದಾಧಿಕಾರಿಗಳು ಪಕ್ಷಕ್ಕೆ ರಾಜೀನಾಮೆ ನೀಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.