ಬೆಂಗಳೂರು ಖಾತೆಗಾಗಿ ರಾಮಲಿಂಗಾರೆಡ್ಡಿ ಬಂಡಾಯ: ಮನವೊಲಿಸಿ, ಒಪ್ಪದಿದ್ರೆ ರಾಜೀನಾಮೆ ಅಂಗೀಕರಿಸಿ- ಖಡಕ್‌ ಸಂದೇಶ ಕೊಟ್ಟ ರಾಹುಲ್‌ ಗಾಂಧಿ

05-06-26 06:19 pm       HK News Staffer   ಕರ್ನಾಟಕ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ ಹಿನ್ನೆಲೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಆಘಾತ ನೀಡಿದ್ದಾರೆ.

ಬೆಂಗಳೂರು, ಜೂನ್ 05: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಕಾಂಗ್ರೆಸ್ ಸರ್ಕಾರದಲ್ಲಿ ಖಾತೆ ಹಂಚಿಕೆ ಬೆನ್ನಲ್ಲೇ ಅಸಮಾಧಾನದ ಹೊಗೆ ಭುಗಿಲೆದ್ದಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಕೈತಪ್ಪಿದ ಹಿನ್ನೆಲೆ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಸರ್ಕಾರಕ್ಕೆ ಆರಂಭದಲ್ಲೇ ದೊಡ್ಡ ಆಘಾತ ನೀಡಿದ್ದಾರೆ.

ಕೋರಮಂಗಲದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಮಲಿಂಗಾರೆಡ್ಡಿ, ತಮ್ಮ ನಿರ್ಧಾರ ಅಚಲ ಎಂದು ಸ್ಪಷ್ಟಪಡಿಸಿದ್ದು, “ಯಾರನ್ನೂ ಭೇಟಿಯಾಗುವ ಪ್ರಶ್ನೆಯೇ ಇಲ್ಲ” ಎಂದು ಹಠ ಹಿಡಿದಿದ್ದಾರೆ ಎನ್ನಲಾಗಿದೆ. ಇದರಿಂದ ಸರ್ಕಾರ ರಚನೆಯಾದ ಕೇವಲ ಮೂರು ದಿನಗಳಲ್ಲೇ ಕಾಂಗ್ರೆಸ್‌ಗೆ ಮೊದಲ ದೊಡ್ಡ ರಾಜಕೀಯ ಸಂಕಷ್ಟ ಎದುರಾಗಿದೆ.

ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು
ಬೆಂಗಳೂರು ನಗರಾಭಿವೃದ್ಧಿ ಇಲಾಖೆ ರಾಜ್ಯದ ಅತ್ಯಂತ ಪ್ರಭಾವಿ ಖಾತೆಗಳಲ್ಲಿ ಒಂದಾಗಿದೆ. ಈ ಖಾತೆಯ ವ್ಯಾಪ್ತಿಯಲ್ಲಿ ಜಿಬಿಎ, ಬಿಎಂಆರ್‌ಸಿಎಲ್, ಬಿಬಿಎಂಪಿ, ಬಿಡಿಎ ಹಾಗೂ ಜಲಮಂಡಳಿ ಸೇರಿದಂತೆ ಪ್ರಮುಖ ಸಂಸ್ಥೆಗಳು ಬರುತ್ತವೆ. ಬೆಂಗಳೂರು ಅಭಿವೃದ್ಧಿಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ಹರಿದುಬರುವ ಕಾರಣ ಈ ಖಾತೆಗೆ ರಾಜಕೀಯವಾಗಿ ವಿಶೇಷ ಮಹತ್ವವಿದೆ.

ಇದೇ ಕಾರಣಕ್ಕೆ ರಾಮಲಿಂಗಾರೆಡ್ಡಿ ಈ ಖಾತೆಗಾಗಿ ಪಟ್ಟು ಹಿಡಿದಿದ್ದರು. “ನಾನು ಬೆಂಗಳೂರಿನ ಎಂಟು ಬಾರಿ ಆಯ್ಕೆಯಾದ ಶಾಸಕ. ನಗರದ ಇಂಚಿಂಚೂ ನನಗೆ ಗೊತ್ತು. ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ದುಡಿದಿದ್ದೇನೆ. ಬೆಂಗಳೂರು ಅಭಿವೃದ್ಧಿಗೆ ನನ್ನದೇ ಕೊಡುಗೆ ಇದೆ” ಎಂಬುದು ಅವರ ವಾದವಾಗಿದೆ.

ಸಂಪರ್ಕಕ್ಕೆ ಸಿಗದ ರಾಮಲಿಂಗಾರೆಡ್ಡಿ
ರಾಜೀನಾಮೆ ನೀಡಿದ ಬಳಿಕ ರಾಮಲಿಂಗಾರೆಡ್ಡಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಪರಿಸ್ಥಿತಿ ಶಮನಗೊಳಿಸಲು ಸಿಎಂ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹಿರಿಯ ನಾಯಕರು ಸಂಪರ್ಕಿಸಲು ಪ್ರಯತ್ನಿಸಿದರೂ ಅವರ ಮೊಬೈಲ್ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ.

ರಾಹುಲ್ ಗಾಂಧಿಯವರ ಖಡಕ್ ಸೂಚನೆ
ರಾಜ್ಯದಲ್ಲಿ ಉಂಟಾಗಿರುವ ಈ ಬೆಳವಣಿಗೆಯನ್ನು ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರ ಗಮನಕ್ಕೆ ತರಲಾಗಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಹಾಗೂ ಇತರ ನಾಯಕರು ಪರಿಸ್ಥಿತಿಯ ಬಗ್ಗೆ ವಿವರಿಸಿದ ಬಳಿಕ ರಾಹುಲ್ ಗಾಂಧಿ ಕಠಿಣ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ.
ರಾಜ್ಯಸಭಾ ಚುನಾವಣೆ ಸಂಬಂಧ ಬೆಂಗಳೂರಿಗೆ ಆಗಮಿಸಿದ್ದ ವೇಳೆ ಈ ವಿಚಾರವನ್ನು ಚರ್ಚಿಸಿದ ಅವರು, “ಮೊದಲು ಚರ್ಚೆ ಮಾಡಿ ಮನವೊಲಿಸಿ. ಮನವೊಲಿಕೆಗೆ ಬಗ್ಗದಿದ್ದರೆ ರಾಜೀನಾಮೆ ಅಂಗೀಕರಿಸಿ” ಎಂದು ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.
    
ಡಿಕೆಶಿ ಸರ್ಕಾರಕ್ಕೆ ಆರಂಭದಲ್ಲೇ ಅಗ್ನಿಪರೀಕ್ಷೆ
ಒಂದೆಡೆ ಹೊಸ ಸಚಿವ ಸಂಪುಟದ ಕಾರ್ಯಾರಂಭ, ಮತ್ತೊಂದೆಡೆ ಖಾತೆ ಹಂಚಿಕೆ ಅಸಮಾಧಾನದಿಂದ ಹಿರಿಯ ನಾಯಕರ ಬಂಡಾಯ ಕಾಂಗ್ರೆಸ್ ಹೈಕಮಾಂಡ್‌ಗೆ ತಲೆನೋವಾಗಿ ಪರಿಣಮಿಸಿದೆ. ರಾಮಲಿಂಗಾರೆಡ್ಡಿ ಮನವೊಲಿಕೆಗೆ ಒಪ್ಪುತ್ತಾರಾ ಅಥವಾ ಅವರ ರಾಜೀನಾಮೆ ಅಂಗೀಕಾರವಾಗುತ್ತದೆಯಾ ಎಂಬುದು ಇದೀಗ ರಾಜ್ಯ ರಾಜಕೀಯದ ಕುತೂಹಲದ ಕೇಂದ್ರಬಿಂದುವಾಗಿದೆ.