ದೇಶದ ಸಿರಿವಂತ ಸಿಎಂ ಆಗಲಿದ್ದಾರೆ 'ಕನಕಪುರ ಬಂಡೆ' ಡಿಕೆ ಶಿವಕುಮಾರ್ ! ಶ್ರೀಮಂತ ಸಿಎಂಗಳಲ್ಲಿ ಮೂವರೂ ದಕ್ಷಿಣ ಭಾರತೀಯರೇ !

31-05-26 09:23 pm       HK News Staffer   ಕರ್ನಾಟಕ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ದೇಶದಲ್ಲೇ ಅತ್ಯಂತ ಸಿರಿವಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ದೇಶದ ಸಿರಿವಂತ ಶಾಸಕರ ಕುರಿತು, ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2025ರಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅಧಿಕೃತವಾಗಿ ಹೆಚ್ಚಿನ ಸಂಪತ್ತು ಘೋಷಿಸಿಕೊಂಡವರ ಮಾಹಿತಿಗಳಿದ್ದವು.‌

ಬೆಂಗಳೂರು, ಮೇ 31: ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಡಿ.ಕೆ. ಶಿವಕುಮಾರ್ ದೇಶದಲ್ಲೇ ಅತ್ಯಂತ ಸಿರಿವಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ದೇಶದ ಸಿರಿವಂತ ಶಾಸಕರ ಕುರಿತು, ಅಸೋಸಿಯೇಷನ್ ​​ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) 2025ರಲ್ಲಿ ಬಿಡುಗಡೆ ಮಾಡಿದ್ದ ವರದಿಯಲ್ಲಿ ಅಧಿಕೃತವಾಗಿ ಹೆಚ್ಚಿನ ಸಂಪತ್ತು ಘೋಷಿಸಿಕೊಂಡವರ ಮಾಹಿತಿಗಳಿದ್ದವು.‌

ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿದ ಪ್ರಮಾಣಪತ್ರಗಳನ್ನು ವಿಶ್ಲೇಷಿಸಿ ತಯಾರಿಸಿದ್ದ ವರದಿಯಲ್ಲಿ ದೇಶದ ಶ್ರೀಮಂತ ಶಾಸಕರ ಪಟ್ಟಿಯಲ್ಲಿ ಮಹಾರಾಷ್ಟ್ರದ ಘಾಟ್‌ಕೋಪರ್ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪರಾಗ್‌ ಶಾ ಅಗ್ರಸ್ಥಾನದಲ್ಲಿದ್ದಾರೆ. 2024ರ ಚುನಾವಣೆಯಲ್ಲಿ ಬರೋಬ್ಬರಿ ₹ 3,383 ಕೋಟಿ ಆಸ್ತಿ ಘೋಷಣೆ ಮಾಡಿದ್ದರು. ರಾಮನಗರ ಜಿಲ್ಲೆಯ ಕನಕಪುರ ಕ್ಷೇತ್ರವನ್ನು ಪ್ರತಿನಿಧಿಸುವ ಡಿ.ಕೆ. ಶಿವಕುಮಾರ್ ಎರಡನೇ ಸ್ಥಾನದಲ್ಲಿದ್ದು, ತಮ್ಮ ಬಳಿ ₹ 1,413 ಕೋಟಿ ಮೊತ್ತದ ಆಸ್ತಿ ಇದೆ ಎಂದು 2023ರ ವಿಧಾನಸಭಾ ಚುನಾವಣೆ ವೇಳೆ ಪ್ರಮಾಣಪತ್ರ ಸಲ್ಲಿಸಿದ್ದರು. ಕರ್ನಾಟಕದವರೇ ಆದ ಕೆ.ಎಚ್‌. ಪುಟ್ಟಸ್ವಾಮಿ ಗೌಡ (ಗೌರಿಬಿದನೂರು ಕ್ಷೇತ್ರ – ₹ 1,267 ಕೋಟಿ), ಪ್ರಿಯಾ ಕೃಷ್ಣ (ಗೋವಿಂದರಾಜನಗರ ಕ್ಷೇತ್ರ – ₹ 1,267 ಕೋಟಿ) ನಂತರದ ಸ್ಥಾನಗಳಲ್ಲಿ ಇದ್ದಾರೆ.

ಮೂವರು ಸಿರಿವಂತರೂ ದಕ್ಷಿಣದವರೇ!

2025ರ ಎಡಿಆರ್ ವರದಿ ಪ್ರಕಾರ, ಡಿ.ಕೆ.ಶಿವಕುಮಾರ್ ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಎನಿಸಿಕೊಳ್ಳಲಿದ್ದಾರೆ. ಅವರ ಬಳಿ ಇರುವ ಒಟ್ಟು ಆಸ್ತಿಯಲ್ಲಿ ₹ 1,140 ಕೋಟಿ ಸ್ಥಿರಾಸ್ತಿಯಾಗಿದ್ದು, ಉಳಿದ ₹ 273 ಕೋಟಿ ಮೌಲ್ಯದ ಚರಾಸ್ತಿ ಸೇರಿದ್ದಾಗಿ ಮೂರು ವರ್ಷಗಳ ಹಿಂದೆ ಘೋಷಿಸಲಾಗಿತ್ತು. 

ಆಂಧ್ರಪ್ರದೇಶದ ಎನ್‌. ಚಂದ್ರಬಾಬು ನಾಯ್ಡು ಅವರು ಶ್ರೀಮಂತ ಮುಖ್ಯಮಂತ್ರಿಗಳ ಸಾಲಿನಲ್ಲಿ ಸದ್ಯ ಅಗ್ರಸ್ಥಾನದಲ್ಲಿದ್ದಾರೆ. 2024ರ ವಿಧಾನಸಭೆ ಚುನಾವಣೆಗೂ ಮುನ್ನ ಅವರು ₹ 931 ಕೋಟಿ ಆಸ್ತಿ ಘೋಷಣೆ ಮಾಡಿಕೊಂಡಿದ್ದರು. ಅವರನ್ನು ಜೂನ್ 3ರಂದು ಪ್ರಮಾಣ ಸ್ವೀಕರಿಸಿದ ಬಳಿಕ ಡಿಕೆಶಿ ಹಿಂದಿಕ್ಕಲಿದ್ದಾರೆ. 648 ಮೊತ್ತದ ಅಧಿಕೃತ ಆಸ್ತಿ ಘೋಷಿಸಿರುವ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಸಿರಿವಂತ ಸಿಎಂಗಳ ಪೈಕಿ ಮೂರನೇ ಸ್ಥಾನದಲ್ಲಿದ್ದಾರೆ. ಇವರು ಮೂವರೂ ದಕ್ಷಿಣ ಭಾರತದವರೇ ಎಂಬುದು ವಿಶೇಷ.