Bhaskar Rao, Cm Siddaramaiah, DK Shivakumar: ಸಿದ್ದರಾಮಯ್ಯ ಒಬ್ಬ ವೀಕ್, ಅಸಹಾಯಕ ಮುಖ್ಯಮಂತ್ರಿ ; ಪೊಲೀಸರ ನೈತಿಕ ಸ್ಥೈರ್ಯವನ್ನೇ ಕುಗ್ಗಿಸಿದ್ದಾರೆ, ಡಿಕೆಶಿ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು, ಸಿದ್ದು ಹೇಡಿ, ಡಿಕೆ ಅಪರಾಧಿ, ಭಾಸ್ಕರ್ ರಾವ್ ಕಿಡಿ ! 

07-06-25 08:04 pm       HK News Desk   ಕರ್ನಾಟಕ

ದಯಾನಂದ್ ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸರ್ಕಾರದ ವಿರುದ್ಧ ಗುಡುಗಿದರು.

ಮೈಸೂರು, ಜೂ.07: ದಯಾನಂದ್ ಮೇಲೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು. ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಭಾಸ್ಕರ್ ರಾವ್ ಸರ್ಕಾರದ ವಿರುದ್ಧ ಗುಡುಗಿದರು.

ಸಿದ್ದರಾಮಯ್ಯ ವೀಕ್, ಅಸಹಾಯಕ ಮುಖ್ಯಮಂತ್ರಿ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ ಬಹಳ ಸ್ಟ್ರಾಂಗ್ ಇದ್ರು. ಈಗ ಸಂಪೂರ್ಣವಾಗಿ ಕಳೆದು ಹೋಗಿದ್ದಾರೆ. ಇಡೀ ಪ್ರಕರಣದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ಅಪರಾಧಿ ಸ್ಥಾನದಲ್ಲಿ ನಿಲ್ಲಬೇಕಿದೆ. ತಪ್ಪು ಮಾಡಿರುವವರೇ ಇವರು. ಕೇಂದ್ರ ಸರ್ಕಾರ ಕೊಟ್ಟ ಕಾನೂನನ್ನು ದುರುಪಯೋಗಪಡಿಸಿಕೊಂಡು ಐಎಎಸ್ ಅಧಿಕಾರಿಗಳ ಅಮಾನತು ಮಾಡಿದ್ದಾರೆ ಎಂದು ಟೀಕಿಸಿದರು.

ಇದು ದಯಾನಂದ್‌ಗೆ ಸೀಮಿತವಾದ ವಿಚಾರವಲ್ಲ. ಇಡೀ ಪೊಲೀಸ್ ಇಲಾಖೆ ಮಾಡಿದ ಕಗ್ಗೊಲೆ. ಪೊಲೀಸರ ನೈತಿಕ ಸ್ಥೈರ್ಯವನ್ನೇ ಸಿದ್ದರಾಮಯ್ಯ ಕುಗ್ಗಿಸಿದ್ದಾರೆ. ಹೀಗೆ ಎಷ್ಟು ಜನರ ಮೇಲೆ ಕ್ರಮ ತೆಗೆದುಕೊಳ್ಳುತ್ತಾ ಹೋಗುತ್ತೀರಾ? ತೀರಾ ಅವಮಾನಕರ ರೀತಿಯಲ್ಲಿ ದಯಾನಂದ್ ಅವರನ್ನ ನಡೆಸಿಕೊಂಡಿದ್ದೀರಾ. ಅವರ ಮೇಲೆ ನಿಮಗೆ ಕೋಪ ಬಂದಿದ್ದರೆ ವರ್ಗಾವಣೆ ಮಾಡಬಹುದಿತ್ತು, ಕಡ್ಡಾಯ ರಜೆ ಮೇಲೆ ಕಳುಹಿಸಬಹುದಿತ್ತು. ಅದನ್ನ ಬಿಟ್ಟು ಅಮಾನತು ಮಾಡಿದ್ದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಐಪಿಎಲ್ ಏನು ರಾಜ್ಯ ಮತ್ತು ದೇಶದ ಪಂದ್ಯಾವಳಿನಾ? ಅದೊಂದು ಕ್ಲಬ್ ಪಂದ್ಯ ಅಷ್ಟೇ. ಅದಕ್ಕೆ ಡಿ.ಕೆ.ಶಿವಕುಮಾರ್ ಹೋಗಿದ್ದೇನು, ಮುತ್ತಿಕಿದ್ದೇನು, ಬಾವುಟ ಹಿಡಿದಿದ್ದೇನು. ಇದೆಲ್ಲಾ ಮುಖ್ಯಮಂತ್ರಿಗೆ ಗೊತ್ತಾಗಲಿಲ್ವಾ? ಕಾಂಗ್ರೆಸ್ ಹೈಕಮಾಂಡ್ ಬಿಗಿಯಾಗಿದ್ರೆ ಈ ಸಿಎಂ, ಡಿಸಿಎಂ, ಗೃಹ ಸಚಿವರನ್ನ ಅಧಿಕಾರದಿಂದ ಕೆಳಗಿಳಿಸಬೇಕು ಎಂದು ಆಗ್ರಹಿಸಿದರು.

ಯಾವುದೊ ಆಫ್ರಿಕಾ ದೇಶದಲ್ಲಿ ಹೆಣಗಳನ್ನ ಹೊತ್ತುಕೊಂಡು ಹೋದ ರೀತಿಯಲ್ಲಿ ಬೆಂಗಳೂರಿನಲ್ಲಿ ಹೊತ್ತಿಕೊಂಡು ಹೋಗಲಾಗಿದೆ ಎಂದು ಟೀಕಿಸಿದರು.

ಚೀಪ್ ರೇಟ್ ಗಿಮಿಕ್ ಕಾರ್ಯಕ್ರಮ:

ಐಪಿಎಲ್ ಮ್ಯಾಚ್ ಗೆದ್ದಿರುವುದನ್ನು ವಿಜೃಂಭಣೆಯಿಂದ ಆಚರಿಸಬೇಕಿತ್ತು. ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ತರಾತುರಿಯಲ್ಲಿ ಮಾಡಿದ್ದು ಸರಿಯಲ್ಲ. ಆರ್​​ಸಿಬಿ ಹೆಸರಿನಲ್ಲಿ ಕನ್ನಡಿಗರು ಇರುವುದು ಇಬ್ಬರೇ ಆದರೂ ಕನ್ನಡಿಗರ ಭಾವನೆ ಹೆಚ್ಚಾಗಿದೆ. ಆರ್​​ಸಿಬಿ ಟೀಂ ಹೈಜಾಕ್ ಮಾಡಿಕೊಳ್ಳಲು ಸರ್ಕಾರ ಯತ್ನಿಸಿದೆ. ಡಿಪಿಆರ್ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿದ್ದಾರೆ. ಇದು ಬೆಟ್ಟಿಂಗ್​​ನಿಂದ ಗೆದ್ದು ಬಂದಿದ್ದಾರಾ ಎಂಬ ಅನುಮಾನ ಮೂಡುತ್ತದೆ. ಇವರೇನು ಹಣ ಹೂಡಿದ್ರಾ? ಎಂದು ಪ್ರಶ್ನಿಸಿದರು.

ಪರಸ್ಪರ ಹೊಂದಾಣಿಕೆ ಇಲ್ಲದ್ದೇ ಇಷ್ಟಕ್ಕೆಲ್ಲ ಕಾರಣ:

ಬೆಂಗಳೂರಿನಲ್ಲಿ‌ ಏಳು ಏಜೆನ್ಸಿಗಳದ್ದೂ ತಪ್ಪಿದೆ. ಪರಸ್ಪರ ಒಬ್ಬರಿಗೊಬ್ಬರು ಹೊಂದಾಣಿಕೆ ಇಲ್ಲದೆ ಕಾರ್ಯಕ್ರಮ ಮಾಡಿದ್ದರಿಂದ ಯಡವಟ್ಟಾಗಿದೆ. ಬೆಂಗಳೂರಿನಲ್ಲಿ ರಾತ್ರಿಯಿಡೀ ಸಂಭ್ರಮ ನಡೆಸಿ ಮರುದಿನ ಕಾರ್ಯಕ್ರಮ ನಡೆಸಿದ್ದು ತಪ್ಪು. ನೂರು ಆಂಬ್ಯುಲೆನ್ಸ್, ಸ್ಟ್ರೆಚರ್, ಹಗ್ಗ, ಕ್ರೌಡ್ ಕಟ್ಟಿಂಗ್ ಉಪಕರಣ ಇಟ್ಟುಕೊಳ್ಳಬೇಕು. ಇಂಟೆಲಿಜೆನ್ಸ್ ಫೇಲ್ ಆದ‌ ಮೇಲೆ ಕಾನೂನು ಸುವ್ಯವಸ್ಥೆ ಆದ್ರೂ ಕಾರ್ಯನಿರ್ವಹಿಸಬೇಕಿತ್ತು. ಆರ್​ಸಿಬಿ ತಂಡ ಕರ್ನಾಟಕ ಮತ್ತು ಭಾರತ ತಂಡವಲ್ಲ. ಇದೊಂದು ಖಾಸಗಿ ಕ್ಲಬ್. ಹರಾಜು ಹಾಕಿ ಖರೀದಿಸಿರುವ ತಂಡ. ನಾವು ಸಮವಸ್ತ್ರ ಹಾಕಿದ ಮೇಲೆ ದೊರೆ ವಿರುದ್ಧ ಮಾತನಾಡಲ್ಲ. ದೊರೆ ಕೊಟ್ಟ ತೀರ್ಮಾನವೇ ಅಂತಿಮ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಭಾಸ್ಕರ್ ರಾವ್ ಪರೋಕ್ಷ ವಾಗ್ದಾಳಿ ನಡೆಸಿದರು.

ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿ:

ಇಂಟೆಲಿಜೆನ್ಸ್ ಹೆಡ್ ಅಮಾನತ್ತು ವಿಚಾರವನ್ನು ಖುರ್ಚಿಯ ಮೇಲೆ ಕುಳಿತ ದೊರೆಯನ್ನು ಕೇಳಬೇಕು. ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಸರಿಯಲ್ಲ. ಸಿಎಂಗೆ ಯಾರು ಅಡ್ವೈಸ್ ಮಾಡುತ್ತಿದ್ದಾರೋ ಗೊತ್ತಿಲ್ಲ. ಇದನ್ನು ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ನಿವೃತ್ತ ನ್ಯಾಯಾಧೀಶರ ತನಿಖೆ‌ ಬೇಡ. ಹಾಲಿ ನ್ಯಾಯಾಧೀಶರಿಂದ ತನಿಖೆ ಮಾಡಿಸಿಬೇಕು. ನಗರ ಪೊಲೀಸ್ ಆಯುಕ್ತ ದಯಾನಂದ್ ಉತ್ತಮ ಅಧಿಕಾರಿ, ಅವರನ್ನು ಅಮಾನತ್ತು ಮಾಡಿದ್ದು ಸರಿಯಲ್ಲ ಎಂದರು.

In a scathing critique of the Karnataka government, retired IPS officer and former Bengaluru Police Commissioner Bhaskar Rao lashed out at Chief Minister Siddaramaiah, calling him a "weak and helpless leader" who has failed to uphold the morale and integrity of the police force.