ವೈಟ್ ಫೀಲ್ಡ್ ಬೇಡ, ಡಾರ್ಕ್ ಫೀಲ್ಡ್ ಮಾಡ್ರೀ..! ಎತ್ತರ ಇದ್ದೀರಿ ಅಂತ ಕಾನೂನು ನಿಮಗಿಂತ ಎತ್ತರ ಇರೋದನ್ನು ಮರ್ತಿದ್ದೀರಾ.. ಸಮವಸ್ತ್ರ ಹಾಕಿದ್ದೀರಿ ಅಂತ ಏನ್ ಬೇಕಾದ್ರೂ ಮಾಡೋದಾ..? ಹೈಕೋರ್ಟ್ ಚಾಟಿ

31-08-26 09:51 am       HK News Staffer   ಕ್ರೈಂ

ಕಾನೂನು ಮೀರಿ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಎಳೆತಂದ ಪ್ರಕರಣ ಒಂದರಲ್ಲಿ ಹೈಕೋರ್ಟ್ ಜಸ್ಟೀಸ್ ನಾಗಪ್ರಸನ್ನ ವೈಟ್ ಫೀಲ್ಡ್ ಪೊಲೀಸರನ್ನು ಜಾಡಿಸಿದ್ದಾರೆ. ಡಿಸಿಪಿ ಸೈದುಲ್ ಅದಾವತ್ ಎಂಬ ಅಧಿಕಾರಿಯನ್ನು ಕರೆದು ನೀವು ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ, ನಿಮಗಿಂತ ಕಾನೂನು ಎತ್ತರದಲ್ಲಿದೆ ಅನ್ನುವುದು ನೆನಪಿರಲಿ ಎಂದು ಜಾಡಿಸಿದ್ದಲ್ಲದೆ, ಕಾನೂನು ಮೀರಿ ಬಂಧನ ಮಾಡದಂತೆ ಕಡ್ಡಾಯ ಮಾರ್ಗಸೂಚಿ ಹೊರಡಿಸುವಂತೆ ಡಿಜಿಪಿಗೆ ಆದೇಶ ಮಾಡಿದ್ದಾರೆ.

ಬೆಂಗಳೂರು, ಆ.31: ಕಾನೂನು ಮೀರಿ ವ್ಯಕ್ತಿಯೊಬ್ಬರನ್ನು ವಶಕ್ಕೆ ಪಡೆದು ಠಾಣೆಗೆ ಎಳೆತಂದ ಪ್ರಕರಣ ಒಂದರಲ್ಲಿ ಹೈಕೋರ್ಟ್ ಜಸ್ಟೀಸ್ ನಾಗಪ್ರಸನ್ನ ವೈಟ್ ಫೀಲ್ಡ್ ಪೊಲೀಸರನ್ನು ಜಾಡಿಸಿದ್ದಾರೆ. ಡಿಸಿಪಿ ಸೈದುಲ್ ಅದಾವತ್ ಎಂಬ ಅಧಿಕಾರಿಯನ್ನು ಕರೆದು ನೀವು ಪದೇ ಪದೇ ಕಾನೂನು ಉಲ್ಲಂಘನೆ ಮಾಡುತ್ತಿದ್ದೀರಿ, ನಿಮಗಿಂತ ಕಾನೂನು ಎತ್ತರದಲ್ಲಿದೆ ಅನ್ನುವುದು ನೆನಪಿರಲಿ ಎಂದು ಜಾಡಿಸಿದ್ದಲ್ಲದೆ, ಕಾನೂನು ಮೀರಿ ಬಂಧನ ಮಾಡದಂತೆ ಕಡ್ಡಾಯ ಮಾರ್ಗಸೂಚಿ ಹೊರಡಿಸುವಂತೆ ಡಿಜಿಪಿಗೆ ಆದೇಶ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಏರ್ಪಾಟಾಗಿದ್ದ ಹಾಸ್ಯನಟ ಕುನಾಲ್ ಕರ್ಮಾ ಅವರ ಶೋ ರದ್ದುಪಡಿಸುವಂತೆ ಮತ್ತು ಅದಕ್ಕೆ ಅವಕಾಶ ನೀಡದಂತೆ ಹಿಂದು ಜನಜಾಗೃತಿ ಸಂಘಟನೆಯ ಮೋಹನ್ ಗೌಡ ಎಂಬವರು ವೈಟ್ ಫೀಲ್ಡ್ ಠಾಣೆಗೆ ದೂರು ನೀಡಿದ್ದರು. ತೀವ್ರ ಆಕ್ಷೇಪ ಬಂದ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಇದರ ಬಗ್ಗೆ ಮೋಹನ್ ಗೌಡ, ಹಿಂದುಗಳ ಒಗ್ಗಟ್ಟಿನ ಹೋರಾಟಕ್ಕೆ ಸಂದ ಜಯವೆಂದು ಫೇಸ್ಬುಕ್ ಪೋಸ್ಟ್ ಹಾಕಿದ್ದರು. ಇದೇ ನೆಪದಲ್ಲಿ ವೈಟ್ ಫೀಲ್ಡ್ ಠಾಣೆ ಪೊಲೀಸರು ಮೋಹನ್ ಗೌಡ ವಿರುದ್ಧ ಸುಮೊಟೊ ಪ್ರಕರಣ ದಾಖಲಿಸಿದ್ದರು. ವಿಚಾರಣೆಗೆ ಹಾಜರಾಗಲು ನೋಟೀಸ್ ನೀಡುವ ಬದಲು ಉಡುಪಿಗೆ ಬಂದಿದ್ದ ಇಬ್ಬರು ಎಸ್ಐ ಮತ್ತು ಇಬ್ಬರು ಪೊಲೀಸ್ ಸಿಬಂದಿ ಮಧ್ಯರಾತ್ರಿಯೇ ಮೋಹನ್ ಗೌಡ ಅವರನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದರು.

ಪೊಲೀಸರ ಕ್ರಮ ಪ್ರಶ್ನಿಸಿ ಮೋಹನ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಪ್ರಕರಣ ಸಂಬಂಧಿಸಿ ಪೊಲೀಸ್ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿದ ನ್ಯಾಯಾಧೀಶರು, ಏನ್ರೀ ನೀವು ಕಾನೂನು ಮೀರಿ ವಶಕ್ಕೆ ಪಡೆಯೋದು ಮಾಡ್ತಿದ್ದೀರಾ.. ನೀವು ಪೊಲೀಸ್ ಸಮವಸ್ತ್ರ ಹಾಕಿದ್ದೀರೆಂದು ಯಾವುದೇ ನಾಗರಿಕನ ಸ್ವಾತಂತ್ರ್ಯ ಕಸಿಯುವ ಅಧಿಕಾರ ಇಲ್ಲ ಎಂದು ತೀವ್ರ ತರಾಟೆಗೆತ್ತಿಕೊಂಡಿದ್ದಾರೆ.

ವೈಟ್ ಫೀಲ್ಡ್ ಸ್ಟೇಶನ್ ಬಗ್ಗೆ ಹಲವು ದೂರುಗಳು ಬರ್ತಾನೇ ಇವೆ. ಯಾಕೆ ನೀವು ಕಾನೂನು ಪಾಲನೆ ಮಾಡುತ್ತಿಲ್ಲ. ಅಲ್ಲಿ ಒಂದು ಪ್ರಕರಣದಲ್ಲಿ ಸಿಸಿಟಿವಿ ಇಲ್ಲ. ಅದಕ್ಕೆ ಪವರ್ ಕಟ್, ಕರೆಂಟ್ ಇಲ್ಲ ಎನ್ನುವ ನೆಪ ಹೇಳುತ್ತೀರಿ. ನಿಮ್ಮ ವರ್ತನೆಯೇ ಸಂಶಯ ಬರ್ತಾ ಇದೆ. ನಿಮ್ಮದು ವೈಟ್ ಫೀಲ್ಡ್ ಅಲ್ಲ, ಡಾರ್ಕ್ ಫೀಲ್ಡ್ ಸ್ಟೇಶನ್ ಅಂತ ಮಾಡಿ ಎಂದು ಜಸ್ಟಿಸ್ ನಾಗಪ್ರಸನ್ನ ಗರಂ ಆಗಿದ್ದಾರೆ. ನೀವು ನೋಟೀಸ್ ಸರ್ವ್ ಮಾಡಿರುವಾಗ ಅದರಲ್ಲಿ ಹೇಳಿರುವಷ್ಟು ದಿನ ಕಾಯಬೇಕಿತ್ತಲ್ವಾ. ಯಾಕೆ ನೀವು ಉಡುಪಿಗೆ ಹೋಗಿ ಅವರನ್ನು ಕಾರಿನಲ್ಲಿ ತರಬೇಕಿತ್ತು. ಪೊಲೀಸ್ ಅಂದ್ರೆ ಏನ್ ಬೇಕಾದ್ರೂ ಮಾಡಬಹುದು ಅಂದ್ಕೊಂಡಿದ್ದೀರಾ ಎಂದು ಪ್ರಶ್ನಿಸಿದರು.

ಆಗಸ್ಟ್ 27ಕ್ಕೆ ಬರಲು ಹೇಳಿ 25ಕ್ಕೆ ಅರೆಸ್ಟ್ ಮಾಡೋದು ಅಂದ್ರೆ ಏನ್ರೀ ಅರ್ಥ. ನೀವು ಸಮವಸ್ತ್ರ ಹಾಕಿದ್ದೀರಿ ಅಂತ ಏನು ಬೇಕಾದ್ರೂ ಮಾಡಬಹುದು ಅಂದ್ಕೊಂಡಿದ್ದೀರಾ. ನೀವು ಯಾವತ್ತೂ ಕಾನೂನು ಮೀರಿ ಹೋಗಕ್ಕಾಗಲ್ಲ ಎಂದು ಜಸ್ಟಿಸ್ ಹೇಳಿದರು. ಈ ವೇಳೆ, 35(3) ಪ್ರಕಾರ ನೋಟೀಸ್ ಕೊಡಲಾಗಿತ್ತು ಎಂದು ವಕೀಲರು ಹೇಳಿದಾಗ, ಅದರಲ್ಲಿ ಮೂರು ದಿನ ಎಂದು ಹೇಳಿದ ಮೇಲೆ ವಶಕ್ಕೆ ತಗೊಳ್ಳುವ ಅರ್ಜೆನ್ಸಿ ಯಾಕಿತ್ತು ಹೇಳ್ರೀ ಎಂದು ಕೇಳಿದರು.

ಯಾರು ತನಿಖಾಧಿಕಾರಿ ಎಂದು ಕೇಳಿದ ಜಸ್ಟಿಸ್, ಅಧಿಕಾರಿ ಎತ್ತರವಾಗಿರುವುದನ್ನು ನೋಡಿ, ನೀವು ಎತ್ತರ ಇದ್ದೀರಿ ಅಂತ ಕಾನೂನು ನಿಮಗಿಂತ ಎತ್ತರ ಇದೆ ಅನ್ನೋದು ಮರೆತಿದ್ದೀರಾ. ಇಲಾಖಾ ತನಿಖೆಗೆ ಆರ್ಡರ್ ಮಾಡ್ಬೇಕಾ.. ಇದು ನಿಮ್ಮ ಸೇವೆಯಲ್ಲಿ ಕಪ್ಪು ಚುಕ್ಕೆ ಆಗುತ್ತೆ ಅಂತ ತಿಳಿದಿದೆ ತಾನೇ. ಶಾಂತಿಗೆ ಧಕ್ಕೆ ಅನ್ನೋದು ಒಂದೇ ರಾತ್ರಿಯಲ್ಲಿ ಆಗಿಹೋಗತ್ತಾ.. ಈ ರೀತಿ ಮುಂದೆ ಯಾವತ್ತೂ ಮಾಡಬೇಡಿ ಎಂದು ಗದರಿದರು.

ಎರಡು ದಿನಗಳ ಹಿಂದಷ್ಟೇ ಸಿವಿಲ್ ಪ್ರಕರಣದಲ್ಲಿ ಸಾಕ್ಷಿ ವ್ಯಕ್ತಿಯೊಬ್ಬರನ್ನು ಅಕ್ರಮವಾಗಿ ಬಂಧಿಸಿದ್ದಕ್ಕಾಗಿ ವೈಟ್ ಫೀಲ್ಡ್ ವಿಭಾಗದ ಡಿಸಿಪಿ ಮತ್ತು ಎಸಿಪಿ ಹಾಗೂ ತನಿಖಾಧಿಕಾರಿಗೆ ಹೈಕೋರ್ಟ್ 3 ಲಕ್ಷ ದಂಡ ವಿಧಿಸಿತ್ತು. ಅಧಿಕಾರಿಗಳ ಸ್ವಂತ ಜೇಬಿನಿಂದಲೇ ದಂಡ ಪಾವತಿಸುವಂತೆ ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮತ್ತೆರಡು ದಿನದಲ್ಲೇ ಅದೇ ವಿಭಾಗದ ಪೊಲೀಸರ ಎಡವಟ್ಟು ಕೋರ್ಟ್ ಮೆಟ್ಟಿಲೇರಿದ್ದರಿಂದ ಸಹಜವಾಗಿಯೇ ಜಸ್ಟಿಸ್ ಗರಂ ಆಗಿದ್ದರು. ಕೊನೆಗೆ ಇಂತಹ ದುರ್ನಡತೆ ಸಹಿಸಲು ಸಾಧ್ಯವಿಲ್ಲ. ಇದಕ್ಕಾಗಿ ಸಾಮಾಜಿಕ ಮಾಧ್ಯಮಗಳ ಪೋಸ್ಟ್ ಗಳಿಗೆ ಸಂಬಂಧಿಸಿ ಬೇಕಾಬಿಟ್ಟಿ ಬಂಧನ ಆಗುವುದನ್ನು ತಪ್ಪಿಸಲು ಬಿಎನ್ಎಸ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಹೇಳಿ ಪೊಲೀಸ್ ಅಧಿಕಾರಿಗಳಿಗೆ ಮಾರ್ಗಸೂಚಿ ಹೊರಡಿಸುವಂತೆ ಡಿಜಿಪಿಗೆ ಆದೇಶ ಮಾಡಿದರು.