Bc Road Murder Update, Mangalore: ಏಕಮುಖದ ಪ್ರೀತಿ, ಆಕೆ ತನಗೇ ಸಿಗಬೇಕೆಂಬ ಹುಚ್ಚುತನ ; ಪ್ರೀತಿ ನಿರಾಕರಿಸಿದ್ದಕ್ಕೆ ಮುಗ್ಧ ಹುಡುಗಿಯ ನಡುಬೀದಿಯಲ್ಲೇ ಹತ್ಯೆಗೈದ ಸಂಬಂಧಿಕ, ಅಟ್ಟಾಡಿಸಿ ಕಡಿದು ಓಡ್ತಿದ್ದಾಗ ನೋಡಿಯೇ ನಿಂತುಬಿಟ್ಟ ಜನ!

16-07-26 09:26 pm       HK News Staffer   ಕ್ರೈಂ

ಏಕಮುಖದ ಪ್ರೀತಿ, ಆಕೆ ತನಗೇ ಸಿಗಬೇಕು, ತಾನಲ್ಲದಿದ್ದರೆ ಬೇರೊಬ್ಬನೊಂದಿಗೆ ಆಕೆಯೂ ಬದುಕಿರಲೇಬಾರದು ಅನ್ನುವ ಹುಚ್ಚುತನ ಮತ್ತು ಲಂಪಟ ಪ್ರೀತಿಗೆ ಅಮಾಯಕ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಬಿ.ಸಿ ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿರುವ ಘಟನೆ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ.

ಮಂಗಳೂರು, ಜುಲೈ 16: ಏಕಮುಖದ ಪ್ರೀತಿ, ಆಕೆ ತನಗೇ ಸಿಗಬೇಕು, ತಾನಲ್ಲದಿದ್ದರೆ ಬೇರೊಬ್ಬನೊಂದಿಗೆ ಆಕೆಯೂ ಬದುಕಿರಲೇಬಾರದು ಅನ್ನುವ ಹುಚ್ಚುತನ ಮತ್ತು ಲಂಪಟ ಪ್ರೀತಿಗೆ ಅಮಾಯಕ ಯುವತಿಯೊಬ್ಬಳು ಬಲಿಯಾಗಿದ್ದಾಳೆ. ಬಿ.ಸಿ ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದಿರುವ ಘಟನೆ ಆಸುಪಾಸಿನ ಜನರನ್ನು ಬೆಚ್ಚಿಬೀಳಿಸಿದೆ.

ಕಕ್ಯಪದವು ನಿವಾಸಿಯಾಗಿರುವ ಲಾವಣ್ಯ(21) ಎಂಬ ಹುಡುಗಿ ಎರಡು ತಿಂಗಳ ಹಿಂದಷ್ಟೇ ಕಲ್ಲಡ್ಕದಲ್ಲಿ ಖಾಸಗಿ ಆಸ್ಪತ್ರೆಯೊಂದರ ಮೆಡಿಕಲ್ ಸ್ಟೋರ್ ನಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅದಕ್ಕೂ ಮೊದಲೇ ಆಕೆಯ ದೂರದ ಸಂಬಂಧಿಯಾಗಿದ್ದ 22 ವರ್ಷದ ಚೇತನ್ ಗೌಡ ಎಂಬ ಹುಡುಗ ಯುವತಿಯ ಹಿಂದೆ ಬಿದ್ದಿದ್ದ. ತನ್ನನ್ನು ಪ್ರೀತಿಸಬೇಕು, ತನ್ನನ್ನೇ ಮದುವೆಯಾಗಬೇಕೆಂಬ ಹುಚ್ಚುತನವನ್ನು ಬೆಳೆಸಿಕೊಂಡು ಆಕೆಯನ್ನು ಹಿಂಬಾಲಿಸತೊಡಗಿದ್ದ.

ಆದರೆ ಹುಡುಗಿ ಮಾತ್ರ ಸಪೂರ ದೇಹದ ಚೇತನ್ ಗೌಡನನ್ನು ಮದುವೆಯಾಗಲು ನಿರಾಕರಿಸಿದ್ದಳು ಎನ್ನಲಾಗಿದೆ. ಆತ ಫೋನ್ ಮಾಡಿದರೆ ರಿಸೀವ್ ಮಾಡುತ್ತಿರಲಿಲ್ಲ. ಏನೇನೋ ಮೆಸೇಜ್ ಮಾಡಿ ಹಿಂದೆ ಬಿದ್ದಿದ್ದರಿಂದ ಹುಡುಗಿಯೂ ಬೆದರಿ ಹೋಗಿದ್ದಳು. ಇಂದು ತನ್ನ ಜೊತೆಗೆ ಬರದಿದ್ದರೆ ಕೊಂದು ಬಿಡುತ್ತೇನೆಂಬ ಬೆದರಿಕೆಯನ್ನೂ ಹಾಕಿದ್ದನೆಂದು ಹೇಳಲಾಗುತ್ತಿದೆ. ಸಂಜೆ ಮೆಡಿಕಲ್ ನಿಂದ ಹೊರಡುವಾಗಲೇ ಈ ಬಗ್ಗೆ ಹುಡುಗಿ ತನ್ನ ಹತ್ತಿರದ ಸಂಬಂಧಿಕರಿಗೆ ತಿಳಿಸಿದ್ದಳು. ಎಂದಿನಂತೆ ಬಿಸಿ ರೋಡಿಗೆ ಬಂದು ಕಕ್ಯಪದವು ಹೋಗುವ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿದ್ದಾಗಲೇ ಚೇತನ್ ಕಾರಿನಲ್ಲಿ ಬಂದಿದ್ದನ್ನು ಆಕೆ ಕಂಡಿದ್ದಳು. ಹೊರಗಡೆಯಿಂದ ಬಸ್ಸಿನಿಂದ ಇಳಿದು ಬಾ ಎಂದು ಹೇಳುತ್ತಾ ಬರುತ್ತಿದ್ದುದನ್ನು ನೋಡಿದ ಆಕೆ ನಿಂತಿದ್ದ ಬಸ್ಸಿನಿಂದ ಕೆಳಕ್ಕಿಳಿದು ಓಟಕ್ಕೆ ಶುರು ಮಾಡಿದ್ದಳು. ಆದರೆ ಅಷ್ಟರಲ್ಲೇ ತನ್ನ ಕೈಲಿದ್ದ ಕತ್ತಿಯಿಂದ ಆಕೆಯ ಕತ್ತಿಗೆ ಬೀಸಿದ್ದು ಕೆಳಕ್ಕೆ ಕುಸಿದು ಬಿದ್ದಾಗಲೂ ಆಕೆಯ ಮೇಲೆ ಕತ್ತಿಯಿಂದ ಯದ್ವಾತದ್ವಾ ಕಡಿದಿದ್ದಾನೆ. ಈ ವೇಳೆ, ಬಸ್ ನಿಲ್ದಾಣದಲ್ಲಿ ಅಷ್ಟೇನೂ ಜನರು ಇಲ್ಲದಿದ್ದರೂ ಇದ್ದವರು ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿದ್ದರೇ ವಿನಾ ತಡೆಯುವ ಕೆಲಸ ಮಾಡಿರಲಿಲ್ಲ. ಸ್ಥಳದಲ್ಲೇ ಕುಸಿದು ಬಿದ್ದ ಯುವತಿ ಸಾವು ಕಂಡಿದ್ದಳು.

ಕೃತ್ಯ ಎಸಗಿ ಅಲ್ಲಿಂದ ಓಡುತ್ತಿರುವ ವಿಡಿಯೋ ಕೂಡ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ. ಆತ ತಾನು ಬಂದಿದ್ದ ಕಾರಿನಲ್ಲೇ ತೆರಳಿದ್ದು ಎಲ್ಲಾದರೂ ಹೋಗಿ ಸಾವಿಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆರೋಪಿ ಚೇತನ್ ಗೌಡ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ನಿವಾಸಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಕೊಲೆಯಾದ ಕೂಡಲೇ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದು ಮಾಂಸದ ಮುದ್ದೆಯಾದಗಿ ಬಿದ್ದಿದ್ದ ಹುಡುಗಿಯ ಶವವನ್ನು ಬಟ್ಟೆಯಲ್ಲಿ ಮುಚ್ಚಿ ಆಸ್ಪತ್ರೆಗೆ ಸಾಗಿಸಿದ್ದರು.