ಪ್ರಧಾನಿ ಮೋದಿ ನೇಮಿಸಿದ್ದ ಚೌಕಿದಾರರೇ ರಾಮನ ದೇಣಿಗೆ ಕದ್ದಿದ್ದಾರೆ, ಆರೆಸ್ಸೆಸ್ -ಬಿಜೆಪಿಗರು ರಾಮಭಕ್ತರಿಗೆ ಅಪಮಾನ ಮಾಡಿದ್ದಾರೆ ; ಸುಪ್ರೀಂ ಕೋರ್ಟ್ ಜಡ್ಜ್ ನೇತೃತ್ವದಲ್ಲೇ ತನಿಖೆ ಆಗಬೇಕೆಂದು ಕಾಂಗ್ರೆಸ್ ಆಗ್ರಹ

15-07-26 10:03 pm       HK News Staffer   ಕರಾವಳಿ

ತಮ್ಮನ್ನು ಚೌಕಿದಾರ್ ಎಂದು ಹೇಳಿಕೊಂಡಿದ್ದ ಪ್ರಧಾನಿ ಮೋದಿಯವರೇ ನೇಮಿಸಿದ್ದ ಉಪ ಚೌಕಿದಾರರು ಸೇರಿ ರಾಮನ ದೇಗುಲವನ್ನು ಲೂಟಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಬೆಳಗ್ಗೆ ಎಕರೆಗೆ ಎಂಟು ಕೋಟಿಗೆ ಪಡೆದ ಜಾಗವನ್ನು ಮಧ್ಯಾಹ್ನ 16 ಕೋಟಿಗೆ ಮಾರಾಟ ಮಾಡಿದ್ದರು. ರಾಮ ಮಂದಿರದ ಗುತ್ತಿಗೆಯನ್ನು ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರ ಅಳಿಯನಿಗೆ ನೀಡಲಾಗಿತ್ತು. ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಉಸ್ತುವಾರಿಯಲ್ಲೇ ರಾಮನ ಹೆಸರಲ್ಲಿ ಕಳ್ಳತನ ಆಗಿರುವಾಗ ಮೋದಿಯವರು ಯಾಕೆ ಸುಮ್ಮನಿದ್ದಾರೆ, ಇದರಲ್ಲಿ ಪ್ರಧಾನಿ ಕಚೇರಿಯ ಪಾಲು ಇಲ್ಲದಿರಲು ಸಾಧ್ಯವೇ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.

ಮಂಗಳೂರು, ಜುಲೈ 15: ತಮ್ಮನ್ನು ಚೌಕಿದಾರ್ ಎಂದು ಹೇಳಿಕೊಂಡಿದ್ದ ಪ್ರಧಾನಿ ಮೋದಿಯವರೇ ನೇಮಿಸಿದ್ದ ಉಪ ಚೌಕಿದಾರರು ಸೇರಿ ರಾಮನ ದೇಗುಲವನ್ನು ಲೂಟಿ ಮಾಡಿದ್ದಾರೆ. ಅಯೋಧ್ಯೆಯಲ್ಲಿ ಬೆಳಗ್ಗೆ ಎಕರೆಗೆ ಎಂಟು ಕೋಟಿಗೆ ಪಡೆದ ಜಾಗವನ್ನು ಮಧ್ಯಾಹ್ನ 16 ಕೋಟಿಗೆ ಮಾರಾಟ ಮಾಡಿದ್ದರು. ರಾಮ ಮಂದಿರದ ಗುತ್ತಿಗೆಯನ್ನು ಕರ್ನಾಟಕದ ಆರೆಸ್ಸೆಸ್ ಮುಖಂಡರೊಬ್ಬರ ಅಳಿಯನಿಗೆ ನೀಡಲಾಗಿತ್ತು. ಆರೆಸ್ಸೆಸ್ ಮತ್ತು ಬಿಜೆಪಿ ನಾಯಕರ ಉಸ್ತುವಾರಿಯಲ್ಲೇ ರಾಮನ ಹೆಸರಲ್ಲಿ ಕಳ್ಳತನ ಆಗಿರುವಾಗ ಮೋದಿಯವರು ಯಾಕೆ ಸುಮ್ಮನಿದ್ದಾರೆ, ಇದರಲ್ಲಿ ಪ್ರಧಾನಿ ಕಚೇರಿಯ ಪಾಲು ಇಲ್ಲದಿರಲು ಸಾಧ್ಯವೇ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಪ್ರಶ್ನಿಸಿದ್ದಾರೆ.

ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, ರಾಮನ ದೇಣಿಗೆ ಕಳ್ಳತನ ಬಗ್ಗೆ ಎಸ್ಐಟಿ ಮಾಡಿ ತನಿಖೆ ನಡೆಸುತ್ತಿರುವುದರಲ್ಲಿ ಜನರಿಗೆ ವಿಶ್ವಾಸ ಇಲ್ಲ. ಯಾಕಂದ್ರೆ, ಉತ್ತರ ಪ್ರದೇಶದಲ್ಲಿ ಇಂತಹ 84 ಎಸ್ಐಟಿ ನೇಮಕವಾಗಿದ್ದು ಯಾವ ಪ್ರಕರಣದಲ್ಲೂ ತನಿಖಾ ವರದಿ ಬಂದಿಲ್ಲ. ಎರಡು ಸಾವಿರ ಕೋಟಿ ಹಗರಣ ಆಗಿರುವಾಗ ಐಟಿ, ಇಡಿ, ಸಿಬಿಐಗಳು ತನಿಖೆ ಮಾಡಬೇಕಿತ್ತಲ್ವಾ.. ಮೋದಿಯವರು ತಮ್ಮ ಮನ್ ಕಿ ಬಾತ್ ನಲ್ಲಿ ಮಾತನಾಡಬೇಕಿತ್ತಲ್ಲವೇ ಎಂದು ಪ್ರಶ್ನಿಸಿದರು. 

ಎಸ್ಐಟಿ ನೇಮಕ ಮಾಡಿದ ಮುಖ್ಯಮಂತ್ರಿ ಮೇಲೆಯೇ 420 ಕೇಸ್ ಇದೆಯೆಂದ ಸೊರಕೆ, ರಾಮ ದೇವರ ಹೆಸರಿನಲ್ಲಿ ಭಕ್ತರಿಗೆ ಅವಮಾನ ಆಗುವಂತಹ ಕೆಲಸ ಮಾಡಿದ್ದಾರೆ. ಟ್ರಸ್ಟ್ ನಲ್ಲಿ ಯಾರು ಮಹಾಸ್ವಾಮಿಗಳಿದ್ದಾರೆ, ಎಲ್ಲರನ್ನೂ ಹೊರಕ್ಕಟ್ಟಿ ಹೊಸ ಟ್ರಸ್ಟ್ ರಚಿಸಬೇಕು. ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಮಾಡಬೇಕು. ಮೋದಿಯನ್ನು ಸಾಕ್ಷಾತ್ ದೇವರೆಂದು ಹೇಳಿದ ಚಂಪತ್ ರಾಯ್ ನೇತೃತ್ವದಲ್ಲೇ ಕಳ್ಳತನ ಆಗಿದೆಯಲ್ವಾ.. ಅವರನ್ನು ಯಾಕೆ ಬಂಧನ ಮಾಡಿಲ್ಲ ಎಂದು ಪ್ರಶ್ನಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಸಂಯೋಜಕ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, 1989ರ ಬಳಿಕ ಬಿಜೆಪಿಗೆ ರಾಮಧ್ಯಾನ ಶುರುವಾಗಿತ್ತು. ಅದಕ್ಕೂ ಮೊದಲು ರಾಮ ಎಲ್ಲರಿಗೂ ದೇವರಾಗಿದ್ದ. ಅಯೋಧ್ಯೆ ವಿವಾದ ಕುರಿತು ಉಳಿದೆಲ್ಲ ಪಕ್ಷಗಳು ಕೋರ್ಟ್ ತೀರ್ಪನ್ನು ಪಾಲಿಸುತ್ತೇವೆ ಎಂದಿದ್ದರು. ಆದರೆ ಬಿಜೆಪಿ ಮತ್ತು ಆರೆಸ್ಸೆಸ್ ತಮ್ಮ ಧ್ವಜಗಳನ್ನು ಕಟ್ಟಿ ರಾಮನ ಹೆಸರಲ್ಲಿ ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಮಾಡಿ ಮೈಲೇಜ್ ಪಡೆದಿದ್ದವು. ಈಗ ಕೋರ್ಟ್ ತೀರ್ಪಿನಂತೆ ಮಂದಿರ ಆಗಿದ್ದರೂ, ಅದರ ಕೆಲಸ ಪೂರ್ಣ ಆಗುವ ಮೊದಲೇ ರಾಜಕೀಯ ಕ್ರೆಡಿಟ್ ಪಡೆಯಲು ಮೋದಿ ತರಾತುರಿಯಲ್ಲಿ ರಾಷ್ಟ್ರಪತಿ ದ್ರೌಪದಿ ಅವರನ್ನು ಬದಿಗಿರಿಸಿ ಉದ್ಘಾಟನೆಯನ್ನೂ ಮಾಡಿದ್ದರು.

ಇಷ್ಟೆಲ್ಲ ಆಗಿದ್ದರೂ, ಈಗ ರಾಮನ ದೇಗುಲದಲ್ಲಿ ದೇಣಿಗೆ ಕಳ್ಳತನಕ್ಕೂ ತಮಗೂ ಸಂಬಂಧ ಇಲ್ಲವೆಂದು ಬಿಜೆಪಿ, ಆರೆಸ್ಸೆಸ್ ಹೇಳ್ತಾ ಇದೆ. ತಮ್ಮದೇ ನಾಯಕರಾಗಿದ್ದ ಚಂಪತ್ ರಾಯ್, ಅನಿಲ್ ಮಿಶ್ರಾ ಅಂಥವರನ್ನು ಟ್ರಸ್ಚಿಗೆ ನೇಮಿಸಿದ್ದರು. ಹೀಗಾಗಿ ಪ್ರಧಾನ ಮಂತ್ರಿ ಕಚೇರಿಗೂ ಈ ಕಳ್ಳತನಕ್ಕೂ ನೇರ ಸಂಬಂಧ ಇದೆಯೆಂದುವ ಹೇಳಬೇಕಾಗುತ್ತದೆ. ಆದರೆ ಈಗ ಪ್ರಮುಖರನ್ನು ಬಂಧಿಸದೆ ಕೇವಲ ಕಾಲಾಳುಗಳನ್ನು ಮಾತ್ರ ಬಂಧಿಸಿದ್ದಾರೆ. ರಾಮನ ಹೆಸರಿನ ಕಳ್ಳತನ ಸುಪ್ರೀಂ ಕೋರ್ಟ್ ತೀರ್ಪಿಗೆ, ರಾಮನಿಗಾಗಿ ಕರಸೇವೆ ಮಾಡಿ ಮೃತಪಟ್ಟ ಸಾವಿರಾರು ಮಂದಿಯ ಕುಟುಂಬಸ್ಥರಿಗೆ ಮಾಡಿದ ಅವಮಾನ. ಕರಸೇವಕರ ಚಿತಾಭಸ್ಮ ಎಂದು ಹೇಳಿ ದೇಶಾದ್ಯಂತ ಕೊಂಡೊಯ್ದು ದೇಣಿಗೆ ಸಂಗ್ರಹಿಸಿದ್ದರು.

ಅಯೋಧ್ಯೆಗೆ ದೇಣಿಗೆ ಕೊಡುವ ಬದಲು ಬಡವರಿಗೆ ಮನೆ ಕಟ್ಟಿಸಿಕೊಡಿ. ಪಾರದರ್ಶಕತೆ ತೋರಿಸಲು ಆರೆಸ್ಸೆಸ್ ನೋಂದಣಿ ಮಾಡಿ ಎಂದ ಉಡುಪಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಕಾಂಗ್ರೆಸ್ ಅಭಿನಂದಿಸುತ್ತದೆ ಎಂದ ಸುಧೀರ್ ಕುಮಾರ್, ಆರೆಸ್ಸೆಸ್ ನಾಯಕ ಹೊಸಬಾಳೆಯವರು ಬರೀ ನೋವಾಗಿದೆ ಎಂದು ಹೇಳುವುದಲ್ಲ. ಅವರು ದೇಶದ ಜನರಿಗೆ ದ್ರೋಹ ಮಾಡಿದ್ದಾರೆ. ಚಂಪತ್ ರಾಯ್ ಇವರದ್ದೇ ಜನ ಅಲ್ಲವಾ.. ಯಾಕೆ ಅವರನ್ನು ಬಂಧಿಸಿಲ್ಲ. ಎಸ್ಐಟಿ ವರದಿಯಲ್ಲಿ ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಬಗ್ಗೆ ಯಾಕೆ ಉಲ್ಲೇಖ ಇಲ್ಲ ಎಂದು ಪ್ರಶ್ನಿಸಿದರು. ಗೋಷ್ಟಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್, ಜೆಆರ್ ಲೋಬೊ, ಶುಭೋದಯ ಆಳ್ವ ಮತ್ತಿತರರು ಇದ್ದರು.