ಬಾಂಗ್ಲಾನ್ನರು ಅನ್ನುವ ಶಂಕೆಯಿದ್ದರೆ ಪೊಲೀಸರಿಗೆ ತಿಳಿಸಿ, ಯಾರೇ ಆಗಲಿ ಪೊಲೀಸ್ ಕೆಲಸ ಮಾಡಲು ಹೋದರೆ ಕಠಿಣ ಕ್ರಮ ; ಕಮಿಷನರ್ ಸುಧೀರ್ ರೆಡ್ಡಿ ವಾರ್ನಿಂಗ್

15-07-26 09:03 pm       HK News Staffer   ಕರಾವಳಿ

ಬಾಂಗ್ಲಾದೇಶಿ ನಿವಾಸಿಗಳು ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಕೊಟ್ಟು ತನಿಖೆ ಮಾಡಿಸಲು ಸ್ವತಂತ್ರರಿದ್ದಾರೆ. ಹಾಗಂತ, ತಾವಾಗಿಯೇ ತನಿಖೆ ಮಾಡಲು ಹೋದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.

ಮಂಗಳೂರು, ಜುಲೈ 15: ಬಾಂಗ್ಲಾದೇಶಿ ನಿವಾಸಿಗಳು ಎಲ್ಲಿಯಾದರೂ ಕಂಡುಬಂದಲ್ಲಿ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ಕೊಟ್ಟು ತನಿಖೆ ಮಾಡಿಸಲು ಸ್ವತಂತ್ರರಿದ್ದಾರೆ. ಹಾಗಂತ, ತಾವಾಗಿಯೇ ತನಿಖೆ ಮಾಡಲು ಹೋದರೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಎಚ್ಚರಿಸಿದ್ದಾರೆ.

ಬಾಂಗ್ಲಾನ್ನರ ಪತ್ತೆ ಹಿನ್ನೆಲೆಯಲ್ಲಿ ಹೇಳಿಕೆ ನೀಡಿರುವ ಪೊಲೀಸ್ ಕಮಿಷನರ್, ಬಾಂಗ್ಲಾನ್ನರು ಅನ್ನುವ ಶಂಕೆಯಲ್ಲಿ ಪರಿಶೀಲನೆ ಕೈಗೊಳ್ಳಲು ಪೊಲೀಸರಿಗೆ ಮಾತ್ರ ಅಧಿಕಾರ ಇದೆ. ಅವರನ್ನು ವಶಕ್ಕೆ ಪಡೆದು ಗಡೀಪಾರು ಮಾಡುವ ಅಧಿಕಾರವನ್ನೂ ಪೊಲೀಸ್ ಇಲಾಖೆ ಹೊಂದಿದೆ. ಆದರೆ ಬಾಂಗ್ಲಾದೇಶಿ ನಿವಾಸಿಗಳು ಅನ್ನುವ ಗುಮಾನಿಯಲ್ಲಿ ಯಾರಾದ್ರೂ ಪೊಲೀಸರ ಕೆಲಸ ಮಾಡಲು ಹೋದರೆ ಕಾನೂನು ಕ್ರಮಕ್ಕೆ ಸಿಲುಕಬೇಕಾಗುತ್ತದೆ. ಆ ರೀತಿ ಮಾಡುವುದು ಕಲಂ 341 ಮತ್ತು 506 ಪ್ರಕಾರ ಅಪರಾಧವಾಗುತ್ತದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಇದೇ ರೀತಿ ಕೆಲವರು ಬಾಂಗ್ಲಾನ್ನರು ಅನ್ನುವ ಶಂಕೆಯಲ್ಲಿ ಉತ್ತರ ಭಾರತದ ಕಾರ್ಮಿಕರನ್ನು ವಿಚಾರಣೆ ಮಾಡಲು ಹೋಗಿ ಜೈಲು ಸೇರುವ ಸ್ಥಿತಿಯಾಗಿತ್ತು ಎಂದು ಉಲ್ಲೇಖಿಸಿರುವ ಕಮಿಷನರ್, ಯಾರನ್ನೇ ಆಗಲಿ ಗುರುತಿನ ಕಾರ್ಡ್ ತೋರಿಸುವಂತೆ ಪೀಡಿಸುವುದು ಆತನ ಖಾಸಗಿತನದ ಹಕ್ಕಿನ ಉಲ್ಲಂಘನೆ ಆಗುತ್ತದೆ ಎಂದು ಹೇಳಿದ್ದಾರೆ. ಅಲ್ಲದೆ, ನಾವು ದಾಳಿ ಮಾಡುತ್ತೇವೆಂದು ಹೇಳಿಕೊಂಡು ಯಾರಾದ್ರೂ ಕಾನೂನು ಕೈಗೆತ್ತಿಕೊಂಡರೆ ಬಂಧಿಸಿ ಕ್ರಮ ಜರುಗಿಸಲಾಗುವುದು. ವಲಸಿಗರು ಅನ್ನುವ ನೆಪದಲ್ಲಿ ಪರಿಶೀಲಿಸುವ ಅಧಿಕಾರ ಇದೆಯೇ, ಇಲ್ಲವೇ ಎಂಬುದನ್ನು ಆನಂತರ ಕೋರ್ಟಿನಲ್ಲಿ ತೋರಿಸಿಕೊಳ್ಳಬೇಕಷ್ಟೇ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಹಿಂದು ಸಂಘಟನೆ ಪರ ಮುಖಂಡ ಪುನೀತ್ ಕೆರೆಹಳ್ಳಿ ಎಂಬವರು ಮಂಗಳೂರಿನಲ್ಲಿ ಬಾಂಗ್ಲಾನ್ನರ ಮೇಲೆ ದಾಳಿ ಮಾಡುತ್ತೇವೆ ಎಂದು ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಯಾರದ್ದೇ ಹೆಸರೆತ್ತದೆ ವಾರ್ನಿಂಗ್ ಮಾಡಿದ್ದಾರೆ.