ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲಕ್ಷ ರೂ. ಲೂಟಿ ; ಟೆಕ್ಕಿಯನ್ನು ಕರೆಸಿಕೊಂಡು ಡಕಾಯಿತಿ, ಇಬ್ಬರು ಕಾಶ್ಮೀರಿಗಳು ಸೇರಿ 12 ಮಂದಿಯ ಹೆಡೆಮುರಿ ಕಟ್ಟಿದ ಖಾಕಿ

25-06-26 09:40 pm       HK News Staffer   ಕ್ರೈಂ

ಭಾರತೀಯ ನಗದನ್ನು ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸುವುದಾಗಿ ಟೆಕ್ಕಿಯನ್ನು ಕರೆಯಿಸಿಕೊಂಡು 17.64 ಲಕ್ಷ ಡಕಾಯಿತಿ ಮಾಡಿದ್ದ ಇಬ್ಬರು ಕಾಶ್ಮೀರದ ಪ್ರಜೆಗಳು ಸೇರಿ 12 ಮಂದಿ ಆರೋಪಿಗಳನ್ನು ಸಂಜಯನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಬೆಂಗಳೂರು, ಜೂ 25: ಭಾರತೀಯ ನಗದನ್ನು ಡಿಜಿಟಲ್ ಕ್ರಿಪ್ಟೋ ಕರೆನ್ಸಿಯಾಗಿ ಪರಿವರ್ತಿಸುವುದಾಗಿ ಟೆಕ್ಕಿಯನ್ನು ಕರೆಯಿಸಿಕೊಂಡು 17.64 ಲಕ್ಷ ಡಕಾಯಿತಿ ಮಾಡಿದ್ದ ಇಬ್ಬರು ಕಾಶ್ಮೀರದ ಪ್ರಜೆಗಳು ಸೇರಿ 12 ಮಂದಿ ಆರೋಪಿಗಳನ್ನು ಸಂಜಯನಗರ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿಶ್ವಾಸ್ ಎಂಬುವರು ಹಣ ಕಳೆದುಕೊಂಡಿದ್ದು, ಇವರು ನೀಡಿದ ದೂರಿನ ಮೇರೆಗೆ ಕಾಶ್ಮೀರ ಮೂಲದ ಮುಜಾಮಿಲ್ ಹಾಗೂ ಶೋಯೆಬ್ ಜಾವೀದ್, ಡಿ.ಜೆ.ಹಳ್ಳಿ ರೌಡಿಶೀಟರ್ ವಸೀಂಖಾನ್ ಸೇರಿದಂತೆ ಕಾವಲ್ ಬೈರಸಂದ್ರ ಹಾಗೂ ಆರ್.ಟಿ.ನಗರ ರೆಹಮತ್ ನಗರದ ಆರೋಪಿಗಳನ್ನು ಬಂಧಿಸಲಾಗಿದೆ.

ಡಕಾಯಿತರಿಂದ 13.90 ಲಕ್ಷ ನಗದು, ಕೃತ್ಯಕ್ಕೆ ಬಳಸಿದ 6 ದ್ವಿಚಕ್ರ ವಾಹನ, 1 ಕಾರು ಹಾಗೂ 13 ಮೊಬೈಲ್​ಗಳನ್ನು ವಶಕ್ಕೆ ಪಡೆಯಲಾಗಿದೆ. 12 ಮಂದಿ ಆರೋಪಿಗಳ ಪೈಕಿ ಐವರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ಉಳಿದ ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

ಕೊಡಿಗೇಹಳ್ಳಿಯ ದೇವಿನಗರದ ನಿವಾಸಿಯಾಗಿರುವ ದೂರುದಾರ ವಿಶ್ವಾಸ್, ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು. ನಗರದಲ್ಲಿ ಕೆಫೆ ತೆರೆಯಲು ಮುಂದಾಗಿದ್ದರು. ಕಿಚನ್​ಗೆ ಬೇಕಾದ ವಸ್ತುಗಳು ಚೀನಾ ಹಾಗೂ ಜಪಾನ್​ನಲ್ಲಿ ಖರೀದಿಸಿದರೆ ಕಡಿಮೆಗೆ ಸಿಗಲಿದೆ ಎಂದು ಅರಿತುಕೊಂಡಿದ್ದರು. ಈ ವಸ್ತುಗಳನ್ನು ಕೊಂಡುಕೊಳ್ಳಲು ಕ್ರಿಪ್ಟೊ ಕರೆನ್ಸಿ ವ್ಯಾಲೆಟ್ ಮೂಲಕ ಸಂದಾಯ ಮಾಡಬೇಕಿರುವ ವಿಷಯವನ್ನು ಸ್ನೇಹಿತ ಉಮೇಶ್ ಬಳಿ ಹೇಳಿದ್ದರು. ಈ ಬಗ್ಗೆ ಕ್ರಿಪ್ಟೋ ಇಂಡಿಯಾ ಎಫ್ 2ಎಫ್ ವ್ಯಾಟ್ಸಾಪ್ ಗ್ರೂಪ್​ನಲ್ಲಿ ಮಾಹಿತಿ ಸಿಗಲಿದೆ ಎಂದು ಉಮೇಶ್ ಹೇಳಿದ್ದರು.

ಒಂದು ತಿಂಗಳ ಹಿಂದೆ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿದ್ದ ವಿಶ್ವಾಸ್, ಕ್ರಿಪ್ಟೊ ಕರೆನ್ಸಿ ಎಕ್ಸ್ ಚೇಂಜ್ ಬಗ್ಗೆ ಗ್ರೂಪ್​ನಲ್ಲಿ ವಿಚಾರಿಸಿದ್ದರು. ಜೂ.8ರಂದು ಆರೋಪಿ ಮುಜಾಮಿಲ್ ಕರೆ ಮಾಡಿ ಪರಿಚಯಿಸಿಕೊಂಡು ಭಾರತೀಯ ನಗದನ್ನು ಡಿಜಿಟಲ್ ಕ್ರಿಪ್ಟೊ ಕರೆನ್ಸಿಯಾಗಿ ಬದಲಾಯಿಸಿಕೊಡುವುದಾಗಿ ಹೇಳಿದ್ದ. ಇದರಂತೆ ಮನೆಗೆ ಬಂದ ಆರೋಪಿಯು ನಂಬಿಕೆ ಹುಟ್ಟಿಸಲು ಮೊದಲು 2.5 ಲಕ್ಷ ಹಣವನ್ನ ಕ್ರಿಪ್ಟೊ ಕರೆನ್ಸಿಯಾಗಿ ಪರಿವರ್ತಿಸಿ ವರ್ಗಾವಣೆ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಬೈಕ್​ನಲ್ಲಿ ಬಂದಿದ್ದ ಮುಜಾಮಿಲ್, ಕಾರಿನಲ್ಲಿ ಕುಳಿತುಕೊಳ್ಳದೆ ಡೋರ್ ಓಪನ್ ಮಾಡಿ ನಿಂತುಕೊಂಡಿದ್ದ. ಕೆಲವೇ ಹೊತ್ತಿನಲ್ಲಿ ಐದಾರು ಬೈಕ್​ನಲ್ಲಿ ಸುಮಾರು 12 ಮಂದಿ ಡಕಾಯಿತರು ಕಾರನ್ನು ಅಡ್ಡಗಟ್ಟಿ ತಮ್ಮ ಮೇಲೆ ಹಲ್ಲೆ ಮಾಡಿ ಹಣ ಲಪಟಾಯಿಸಿ ಪರಾರಿಯಾಗಿದ್ದರು. ಈ ಸಂಬಂಧ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಸಂಜಯನಗರ, ಜೆ.ಸಿ.ನಗರ, ಆರ್.ಟಿನಗರ, ಹೆಬ್ಬಾಳ ಇನ್​ಸ್ಪೆಕ್ಟರ್ ಒಳಗೊಂಡ ವಿಶೇಷ ತಂಡಗಳು ಕಾರ್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸಿವೆ ಎಂದು ಹಿರಿಯ ಪೊಲೀಸ್ ಆಧಿಕಾರಗಳು ತಿಳಿಸಿದ್ದಾರೆ.

ಕಾಶ್ಮೀರ ಮೂಲದ ಮುಜಾಮಿಲ್, ಶೋಯೆಬ್ ಜಾವೇದ್ ಶೈಕ್ಷಣಿಕ ಉದ್ದೇಶಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಅಕ್ರಮವಾಗಿ ಹಣ ಸಂಪಾದಿಸಲು ಕ್ರಿಪ್ಟೊ ಕರೆನ್ಸಿ ವಾಟ್ಸಾಪ್​ನಲ್ಲಿ ಸದಸ್ಯರಾಗಿದ್ದರು. ಈ ವೇಳೆ ಸ್ಥಳೀಯ ಆರೋಪಿಗಳನ್ನು ಪರಿಚಯಿಸಿಕೊಂಡಿದ್ದ. ಬಂಧಿತ ಆರೋಪಿಗಳ ಪೈಕಿ ವಸೀಂಖಾನ್ ಡಿ.ಜೆ.ಹಳ್ಳಿ ಠಾಣೆಯ ರೌಡಿಶೀಟರ್ ಆಗಿದ್ದು, ಈತನ ವಿರುದ್ಧ 13ಕ್ಕೂ ಹೆಚ್ಚು ಪ್ರಕರಣ ದಾಖಲಾಗಿವೆ. ರಿಯಾಕತ್ ಷರೀಫ್, ರಿಯಾನ್, ಕರೀಂ ಖಾನ್ ವಿರುದ್ಧ ನಗರ ಹಲವು ಪೊಲೀಸ್ ಠಾಣೆಗಳಲ್ಲಿ ಅಪರಾಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.