ಗಿರವಿ ಚಿನ್ನ ಕರಗಿಸಿ ಕೋಟ್ಯಂತರ ರೂ. ಲೂಟಿ, ಎಸ್‌ಡಿಜೆ ಗೋಲ್ಡ್ ಕಂಪನಿಯ ವಂಚನೆ ಬಯಲು, 'ಚಿನ್ನ’ ತಂಬಿಯ ಗೋಲ್ಮಾಲ್‌ಗೆ ಮೈಸೂರು ಮಂದಿಯೇ ಶಾಕ್ !

21-05-26 08:28 pm       HK News Staffer   ಕ್ರೈಂ

ಜನರು ಕಷ್ಟದ ಸಮಯದಲ್ಲಿ ನೆರವಾಗುತ್ತದೆ ಎಂಬ ನಂಬಿಕೆಯಿಂದ ಗಿರವಿ ಇಟ್ಟಿದ್ದ ಚಿನ್ನವೇ ಇದೀಗ ಅವರ ಪಾಲಿಗೆ ಕಣ್ಣೀರಿಗೆ ಕಾರಣವಾಗಿದೆ. ಮೈಸೂರಿನ ಎಸ್‌ಡಿಜೆ ಗೋಲ್ಡ್ ಕಂಪನಿಯ ವಿರುದ್ಧ ಭಾರೀ ವಂಚನೆ ಆರೋಪ ಕೇಳಿಬಂದಿದ್ದು, ಕಂಪನಿ ಮಾಲೀಕ ‘ಚಿನ್ನತಂಬಿ’ ಎನ್ನಲಾಗುತ್ತಿರುವ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಮೈಸೂರು, ಮೇ 21: ಜನರು ಕಷ್ಟದ ಸಮಯದಲ್ಲಿ ನೆರವಾಗುತ್ತದೆ ಎಂಬ ನಂಬಿಕೆಯಿಂದ ಗಿರವಿ ಇಟ್ಟಿದ್ದ ಚಿನ್ನವೇ ಇದೀಗ ಅವರ ಪಾಲಿಗೆ ಕಣ್ಣೀರಿಗೆ ಕಾರಣವಾಗಿದೆ. ಮೈಸೂರಿನ ಎಸ್‌ಡಿಜೆ ಗೋಲ್ಡ್ ಕಂಪನಿಯ ವಿರುದ್ಧ ಭಾರೀ ವಂಚನೆ ಆರೋಪ ಕೇಳಿಬಂದಿದ್ದು, ಕಂಪನಿ ಮಾಲೀಕ ‘ಚಿನ್ನತಂಬಿ’ ಎನ್ನಲಾಗುತ್ತಿರುವ ವ್ಯಕ್ತಿಯ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ನಗರದಲ್ಲಿ ವಿಶ್ವಾಸಾರ್ಹ ಗೋಲ್ಡ್ ಲೋನ್ ಸಂಸ್ಥೆ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಈ ಕಂಪನಿಯಲ್ಲಿ ಸಾವಿರಾರು ಮಂದಿ ತಮ್ಮ ಚಿನ್ನವನ್ನು ಗಿರವಿ ಇಟ್ಟಿದ್ದರು. ಆದರೆ, ಹಣ ಮರುಪಾವತಿಸಲು ಸ್ವಲ್ಪ ವಿಳಂಬವಾದರೂ ಗ್ರಾಹಕರ ಚಿನ್ನವನ್ನು ಕರಗಿಸಿ ಮಾರಾಟ ಮಾಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗ್ರಾಹಕರು ಚಿನ್ನ ಮರಳಿ ಕೇಳಲು ಬಂದಾಗ ಬೆದರಿಕೆ ಹಾಕುವುದು, ಕಡಿಮೆ ಹಣ ನೀಡಿ ಕಳುಹಿಸುವುದು, ತೂಕದಲ್ಲೂ ಮೋಸ ಮಾಡುವುದು ಸೇರಿದಂತೆ ಹಲವು ಅಕ್ರಮಗಳು ನಡೆದಿವೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಕೆಲವರ ಚಿನ್ನವನ್ನು “ನಾವೇ ಖರೀದಿ ಮಾಡಿದ್ದೇವೆ” ಎಂದು ನಕಲಿ ದಾಖಲೆ ಸೃಷ್ಟಿಸಿ ಕೈಕಳಚಿಕೊಳ್ಳಲು ಯತ್ನಿಸಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ವಾರದ ಹಿಂದೆ ಸಾರ್ವಜನಿಕರು ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಸದ್ಯ 80ಕ್ಕೂ ಹೆಚ್ಚು ಮಂದಿ ಮೈಸೂರಿನ ಸಿಸಿಬಿ ಠಾಣೆಗೆ ದೂರು ನೀಡಿದ್ದಾರೆ.

ಸ್ಥಳೀಯರಾದ ವಸಂತ್ ಹಾಗೂ ಇತರ ಪ್ರತಿಭಟನಾಕಾರರು ಮಾತನಾಡಿ, “ನಾವು ಗಿರವಿಗೆ ಚಿನ್ನ ಇಟ್ಟಿದ್ದೆವು. ಈಗ ಅದನ್ನೇ ಕಂಪನಿ ಖರೀದಿ ಮಾಡಿದೆ ಎಂದು ಹೇಳುತ್ತಿದ್ದಾರೆ. ಸಾವಿರಾರು ಜನರಿಗೆ ಇದೇ ರೀತಿ ಮೋಸವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದರೂ ಬೆದರಿಕೆ ಹಾಕಲಾಗುತ್ತಿದೆ. ಸುಮಾರು 8 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆ” ಎಂದು ಆರೋಪಿಸಿದ್ದಾರೆ.

ಮತ್ತೊಂದು ಬೆಚ್ಚಿಬೀಳಿಸುವ ಸಂಗತಿ ಎಂದರೆ, ಆರೋಪಿಯು ಪ್ರತಿದಿನ ಅರ್ಧ ಕೆ.ಜಿ.ಗೂ ಹೆಚ್ಚು ಚಿನ್ನ ಕರಗಿಸುತ್ತಿದ್ದ ಎನ್ನಲಾಗಿದೆ. ಇದರಿಂದ ಅನೇಕ ಕುಟುಂಬಗಳ ಜೀವನ ಸಂಗ್ರಹವೇ ಮಣ್ಣಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಮೇಲ್ನೋಟಕ್ಕೆ ಸುಮಾರು 20 ಕೋಟಿ ರೂ.ಗಳ ವಂಚನೆ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ. ಸದ್ಯ ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಸಿಬಿ ಪೊಲೀಸರು ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ.

ಚಿನ್ನ ಗಿರವಿ ಅಥವಾ ಹಣಕಾಸು ವ್ಯವಹಾರ ಮಾಡುವ ಮೊದಲು ಸಂಸ್ಥೆಯ ವಿಶ್ವಾಸಾರ್ಹತೆ, ಪರವಾನಗಿ ಮತ್ತು ದಾಖಲೆಗಳನ್ನು ಸಂಪೂರ್ಣ ಪರಿಶೀಲಿಸುವುದು ಅತ್ಯಂತ ಮುಖ್ಯ. ಯಾವುದೇ ಹಣಕಾಸು ಸಂಸ್ಥೆಯ ಮೇಲೆ ಅಂಧ ನಂಬಿಕೆ ಇಡುವುದಕ್ಕಿಂತ ಕಾನೂನುಬದ್ಧ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಹಣಕಾಸು ಜಾಗೃತಿ ಮತ್ತು ಎಚ್ಚರಿಕೆಯೇ ಇಂತಹ ವಂಚನೆಗಳಿಂದ ರಕ್ಷಿಸುವ ಪ್ರಮುಖ ಮಾರ್ಗವಾಗಿದೆ.