ಶಿವಮೊಗ್ಗದ ಒಂದೇ ಕುಟುಂಬದ ನಾಲ್ವರು ನಿಗೂಢ ನಾಪತ್ತೆ, ತಿಂಗಳಾದರೂ ಸಿಗದ ಸುಳಿವು ; ಆತಂಕದಲ್ಲಿ ಸಂಬಂಧಿಕರು, ಪೊಲೀಸರಿಂದ ತೀವ್ರ ಶೋಧ

20-05-26 09:53 am       HK News Staffer   ಕ್ರೈಂ

ಶಿವಮೊಗ್ಗ ನಗರದ ಬುದ್ಧನಗರ ಪ್ರದೇಶದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಹಾಗೂ ಮೊಹಮ್ಮದ್ ಆದಿಲ್ (32) ಕಾಣೆಯಾಗಿರುವ ಕುಟುಂಬಸ್ಥರು.

ಶಿವಮೊಗ್ಗ, ಮೇ 19: ಶಿವಮೊಗ್ಗ ನಗರದ ಬುದ್ಧನಗರ ಪ್ರದೇಶದಲ್ಲಿ ವಾಸವಿದ್ದ ಒಂದೇ ಕುಟುಂಬದ ನಾಲ್ವರು ಸದಸ್ಯರು ಕಳೆದ ಒಂದು ತಿಂಗಳಿನಿಂದ ನಾಪತ್ತೆಯಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಮೊಹಮ್ಮದ್ ಇಕ್ಬಾಲ್ (62), ನಸ್ರತ್ ಬಾನು (54), ಮೊಹಮ್ಮದ್ ಫಾಜಿಲ್ (35) ಹಾಗೂ ಮೊಹಮ್ಮದ್ ಆದಿಲ್ (32) ಕಾಣೆಯಾಗಿರುವ ಕುಟುಂಬಸ್ಥರು.

ಕುಟುಂಬದ ನಾಲ್ವರು ಏಪ್ರಿಲ್ 15ರಿಂದಲೇ ಮನೆ ಬಿಟ್ಟು ಹೋಗಿದ್ದು, ಆರಂಭದಲ್ಲಿ ಸಂಬಂಧಿಕರು “ಇವತ್ತು ಬರುತ್ತಾರೆ, ನಾಳೆ ಬರುತ್ತಾರೆ” ಎಂದು ಕಾದು ಕುಳಿತಿದ್ದರು. ಆದರೆ ದಿನಗಳು ಕಳೆದರೂ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡ ಕುಟುಂಬಸ್ಥರು ಕೊನೆಗೆ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ.

ನಾಪತ್ತೆಯಾದವರ ಬಗ್ಗೆ ಸಂಬಂಧಿಕರು ಎಲ್ಲ ಕಡೆ ಹುಡುಕಾಟ ನಡೆಸಿದರೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಹ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ಶೋಧ ಕಾರ್ಯ ಮುಂದುವರಿಸಿದ್ದಾರೆ.

ಪೊಲೀಸರ ಪ್ರಕಟಣೆ ಪ್ರಕಾರ, 62 ವರ್ಷದ ಮೊಹಮ್ಮದ್ ಇಕ್ಬಾಲ್ ಅವರು ಸುಮಾರು 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದಾರೆ. ಅವರೊಂದಿಗೆ ಕಾಣೆಯಾಗಿರುವ ನಸ್ರತ್ ಬಾನು ಅವರು 5.2 ಅಡಿ ಎತ್ತರ, ದಪ್ಪ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಸೀಳು ತುಟಿಯ ಗುರುತು ಹೊಂದಿದ್ದಾರೆ ಎಂದು ತಿಳಿಸಲಾಗಿದೆ.

ಇದೇ ಕುಟುಂಬದ ಯುವಕರಾದ 35 ವರ್ಷದ ಮೊಹಮ್ಮದ್ ಫಾಜಿಲ್ ಸುಮಾರು 5.6 ಅಡಿ ಎತ್ತರ, ತೆಳ್ಳನೆಯ ಮೈಕಟ್ಟು ಮತ್ತು ಬಿಳಿ ಮೈಬಣ್ಣ ಹೊಂದಿದ್ದು, ಎದೆಯ ಭಾಗದಲ್ಲಿ ಚರ್ಮಗಂಟಿನ ಗುರುತು ಇದೆ ಎನ್ನಲಾಗಿದೆ. 32 ವರ್ಷದ ಮೊಹಮ್ಮದ್ ಆದಿಲ್ 5.4 ಅಡಿ ಎತ್ತರ, ದಪ್ಪ ಮೈಕಟ್ಟು ಹಾಗೂ ಎಣ್ಣೆಗೆಂಪು ಮೈಬಣ್ಣ ಹೊಂದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ನಾಲ್ವರು ಎಲ್ಲಿಗೆ ತೆರಳಿದ್ದಾರೆ? ಸ್ವಯಂ ಇಚ್ಛೆಯಿಂದ ಮನೆ ಬಿಟ್ಟಿದ್ದಾರೆಯೇ? ಅಥವಾ ಬೇರೆ ಏನಾದರೂ ಅನಾಹುತ ಸಂಭವಿಸಿದ್ದೆಯೇ? ಎಂಬ ಪ್ರಶ್ನೆಗಳು ಇದೀಗ ಹಲವರಲ್ಲಿ ಕುತೂಹಲ ಮತ್ತು ಆತಂಕ ಮೂಡಿಸಿವೆ.

ಈ ಕುರಿತು ಸಾರ್ವಜನಿಕರಲ್ಲಿ ಯಾರಿಗಾದರೂ ಮಾಹಿತಿ ಲಭ್ಯವಾದಲ್ಲಿ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯ 08182-261414, 9972426144, 9480803345 ಅಥವಾ 6264571710 ಸಂಖ್ಯೆಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ.

ಯಾರಾದರೂ ಕುಟುಂಬ ಸದಸ್ಯರು ಅಥವಾ ಪರಿಚಿತರು ಅಸಹಜವಾಗಿ ಸಂಪರ್ಕ ಕಡಿತ ಮಾಡಿಕೊಂಡು ಕಾಣೆಯಾಗಿದ್ದರೆ ಅದನ್ನು ನಿರ್ಲಕ್ಷಿಸದೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವುದು ಅತ್ಯಂತ ಮುಖ್ಯ. ಸಮಯಕ್ಕೆ ಸರಿಯಾದ ಮಾಹಿತಿ ಮತ್ತು ಜಾಗೃತಿಯಿಂದ ಅನೇಕ ಅನಾಹುತಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ.