Bharat Bus fire, Mangalore: ಟೈರ್ ಸ್ಫೋಟ; ಹಾಸನದಲ್ಲಿ ಹೊತ್ತಿ ಉರಿದ ಮಂಗಳೂರು ಮೂಲದ ಭಾರತ್ ಬಸ್, 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು ! ಡ್ರೈವರ್ ಸಮಯಪ್ರಜ್ಞೆಯಿಂದ ಉಳಿದ ಜೀವಗಳು

16-05-26 04:46 pm       HK News Staffer   ಕ್ರೈಂ

ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯ ಶಾಂತಿಗ್ರಾಮ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಟೈರ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ..

ಹಾಸನ, ಮೇ 16: ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ಗೆ ಶುಕ್ರವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿಯ ಶಾಂತಿಗ್ರಾಮ ಸಮೀಪ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಟೈರ್ ಸ್ಫೋಟಗೊಂಡು ಕ್ಷಣಾರ್ಧದಲ್ಲಿ ಬಸ್ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ. ಆದರೆ ಪ್ರಯಾಣಿಕನೊಬ್ಬನ ಸಮಯಪ್ರಜ್ಞೆ ಮತ್ತು ಚಾಲಕನ ಚಾಕಚಕ್ಯತೆಯಿಂದ ಬಸ್‌ನಲ್ಲಿದ್ದ 36 ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಪ್ರಯಾಣದ ವೇಳೆ ಮೊದಲು ಬಸ್‌ನ ಟೈರ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಈ ವೇಳೆ ಸಣ್ಣ ಸ್ಫೋಟದ ಶಬ್ದ ಕೇಳಿಬಂದಿದೆ. ಅನುಮಾನಗೊಂಡ ಪ್ರಯಾಣಿಕನೊಬ್ಬ ಕಿಟಕಿಯ ಪರದೆ ಸರಿಸಿ ನೋಡಿದಾಗ ಚಕ್ರದ ಭಾಗದಲ್ಲಿ ಬೆಂಕಿ ಹೊತ್ತಿಕೊಂಡಿರುವುದು ಗಮನಕ್ಕೆ ಬಂದಿದೆ. ತಕ್ಷಣ ಆತ ಚಾಲಕ ಹಾಗೂ ಇತರ ಪ್ರಯಾಣಿಕರಿಗೆ ಮಾಹಿತಿ ನೀಡಿದ್ದಾನೆ. ಪರಿಸ್ಥಿತಿಯ ಗಂಭೀರತೆ ಅರಿತ ಚಾಲಕ ಬಸ್ ಅನ್ನು ತಕ್ಷಣವೇ ರಸ್ತೆ ಬದಿಗೆ ನಿಲ್ಲಿಸಿದ್ದಾರೆ.

ಆ ವೇಳೆ ನಿದ್ದೆಯಲ್ಲಿದ್ದ ಪ್ರಯಾಣಿಕರು ಆತಂಕದಿಂದ ಎಚ್ಚರಗೊಂಡು ಅವಸರವಾಗಿ ಬಸ್‌ನಿಂದ ಕೆಳಗಿಳಿದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಇಡೀ ಬಸ್‌ಗೆ ವ್ಯಾಪಿಸಿ ಧಗಧಗನೆ ಹೊತ್ತಿ ಉರಿದಿದೆ. ಪ್ರಯಾಣಿಕರ ಪ್ರಾಣ ಉಳಿದಿದ್ದರೂ, ಲಗೇಜ್‌, ಮೊಬೈಲ್ ಹಾಗೂ ಇತರೆ ಬೆಲೆಬಾಳುವ ವಸ್ತುಗಳು ಬೆಂಕಿಗಾಹುತಿಯಾಗಿವೆ.

ಘಟನೆಯ ಮಾಹಿತಿ ದೊರೆಯುತ್ತಿದ್ದಂತೆ ಹಾಸನ ಹಾಗೂ ಶಾಂತಿಗ್ರಾಮ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸಪಟ್ಟರು. ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಬಸ್ ಬಹುತೇಕ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿದ ಬಳಿಕ ಬೆಂಕಿಯನ್ನು ಸಂಪೂರ್ಣ ಹತೋಟಿಗೆ ತರಲಾಯಿತು.


ಮಧ್ಯರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಕಷ್ಟಕ್ಕೀಡಾದ ಪ್ರಯಾಣಿಕರಿಗೆ ಹಾಸನ ಪೊಲೀಸರು ಹಾಗೂ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡಿ ಮತ್ತೊಂದು ಬಸ್ ಮೂಲಕ ಸುರಕ್ಷಿತವಾಗಿ ಬೆಂಗಳೂರಿಗೆ ಕಳುಹಿಸಿದರು. ಘಟನೆಯ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಕಿ ಕಾಣಿಸಿಕೊಳ್ಳಲು ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ಮುಂದುವರಿದಿದೆ.

ಬೆಂಕಿ ಭಾರೀ ರಭಸದಿಂದ ಹಬ್ಬುತ್ತಿದ್ದಂತೆ, ಸ್ಥಳೀಯರು ಕೂಡ ಸಹಾಯಕ್ಕೆ ಧಾವಿಸಿದರು. ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಶಾಂತಿಗ್ರಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆ ಬಗ್ಗೆ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಅಗ್ನಿಶಾಮಕ ಸಿಬ್ಬಂದಿ ತುರ್ತು ಕಾರ್ಯಾಚರಣೆಯಲ್ಲಿ ತೊಡಗಿ, ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಹರಸಾಹಸ ಪಡಿದರು. ಆದಾಗ್ಯೂ, ಬೆಂಕಿಯ ಉರಿಯ ರಭಸಕ್ಕೆ ಆ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿತ್ತು. ಕೆಲವೇ ಕ್ಷಣಗಳಲ್ಲಿ ಬಸ್ ನೊಳಗಿನ ಸಾಮಾನು, ಸೀಟುಗಳು, ಸ್ಲೀಪರ್ ಕೋಚ್ ವಿಭಾಗಗಳು ಎಲ್ಲವೂ ಬೆಂಕಿಗಾಹುತಿಯಾದವು.

ನಮ್ಮ ಪ್ರಾಣ ಪಣಕ್ಕೆ ಇಟ್ಟು ಬಸ್‌ ಹೋದರೂ ಪರವಾಗಿಲ್ಲ ಮೊದಲು ಪ್ರಯಾಣಿಕರ ಪ್ರಾಣ ಕಾಪಾಡಬೇಕು ಅಂತಾ ತುಂಬಾ ರಿಸ್ಕ್ ತೆಗೆದುಕೊಂಡುದ್ದೇನೆ ಎಂದರು. ಸ್ಲೀಪರ್ ಬಸ್ ಸಂಪೂರ್ಣವಾಗಿ ಕರಕಲಾಗಿದ್ದು, ಬಸ್‌ನಲ್ಲಿದ್ದ ಎಲ್ಲಾ ಪ್ರಯಾಣಿಕರ ಪ್ರಾಣ ಉಳಿಯುತ್ತು ಅನ್ನೋ ಸಮಾಧಾನವಿದೆ ಅಂತಾ ಚಾಲಕ ಫಕ್ರುದ್ದೀನ್ ಹೇಳಿದರು ಸದ್ಯ ಚಾಲಕನ ಸಾಹಸಕ್ಕೆ ಎಲ್ಲೆಡೆ ಮಚ್ಚುಗೆ ವ್ಯಕ್ತವಾಗುತ್ತಿದೆ.