ಉಳ್ಳಾಲ ರಸ್ತೆಯಲ್ಲಿ ಫಿಶ್ ಮೀಲ್ ಆಯಿಲ್ ಸೋರಿಕೆ ; ಫ್ಯಾಕ್ಟರಿ ಮಾಲೀಕರ ವಿರುದ್ಧ ಕ್ರಮಕ್ಕೆ ಸ್ಪೀಕರ್ ಖಾದರ್ ಸೂಚನೆ, ಕಂಟೇನರ್ ಮಾಲೀಕನಿಂದಲೇ ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಲು ಆದೇಶ

15-05-26 12:21 pm       HK News Staffer   ಕ್ರೈಂ

ಉಳ್ಳಾಲ ರಾಜ ರಸ್ತೆಯಲ್ಲಿ ಫಿಶ್ ಮಿಲ್ ಆಯಿಲ್ ಸೋರಿಕೆಯಾಗಿರುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬಿದ್ದು ಹಲವರು ಗಾಯಗೊಂಡಿರುವುದಕ್ಕೆ ಸ್ಪೀಕರ್ ಯು.ಟಿ.ಖಾದರ್ ವಿಷಾದ ವ್ಯಕ್ತಪಡಿಸಿದ್ದು....

ಉಳ್ಳಾಲ, ಮೇ 15: ಉಳ್ಳಾಲ ರಾಜ ರಸ್ತೆಯಲ್ಲಿ ಫಿಶ್ ಮಿಲ್ ಆಯಿಲ್ ಸೋರಿಕೆಯಾಗಿರುವುದರಿಂದ ದ್ವಿಚಕ್ರ ವಾಹನಗಳು ಜಾರಿ ಬಿದ್ದು ಹಲವರು ಗಾಯಗೊಂಡಿರುವುದಕ್ಕೆ ಸ್ಪೀಕರ್ ಯು.ಟಿ.ಖಾದರ್ ವಿಷಾದ ವ್ಯಕ್ತಪಡಿಸಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪ್ರಕರಣಕ್ಕೆ ಸಂಬಂಧಿಸಿದ ಕಂಟೈನರ್ ಹಾಗೂ ಫಿಶ್ ಮೀಲ್ ಫ್ಯಾಕ್ಟರಿ ಮಾಲಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಿದ್ದಾರೆ. ಘಟನೆಯಿಂದ ಗಾಯಗೊಂಡವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಕಂಟೈನರ್‌ಗೆ ಸಂಬಂಧಿಸಿದ ಫ್ಯಾಕ್ಟರಿ ಮಾಲಕರು ಭರಿಸಬೇಕೆಂದು ಅವರು ಆದೇಶಿಸಿದ್ದಾರೆ.

ಗುರುವಾರ ರಾತ್ರಿ ಕೋಟೆಪುರದಿಂದ ಮಂಗಳೂರು ಬಂದರಿಗೆ ಫಿಶ್ ಮೀಲ್ ಆಯಿಲನ್ನು ಒಯ್ಯುತ್ತಿದ್ದ ಬೃಹತ್ ಕ್ಯಾಂಟರ್ ಒಂದರಲ್ಲಿ ಉಂಟಾದ ತಾಂತ್ರಿಕ ದೋಷದಿಂದ ಭಾರೀ ಪ್ರಮಾಣದ ಫಿಶ್ ಆಯಿಲ್ ರಸ್ತೆಯಲ್ಲೇ ಸೋರಿಕೆಯಾಗಿತ್ತು. ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ವರೆಗೂ ಫಿಶ್ ಆಯಿಲ್ ಸೋರಿಕೆಯಾಗಿದ್ದು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಜಾರಿ ಬಿದ್ದು ಗಂಭೀರ ಗಾಯಗೊಂಡು ವಿವಿಧ ಆಸ್ಪತ್ರೆಗಳಿಗೆ ದಾಖಲಾಗಿದ್ದರು.

ಘಟನೆಯಿಂದ ಉದ್ರಿಕ್ತಗೊಂಡ ಸ್ಥಳೀಯರು ಫಿಶ್ ಮೀಲ್ ಆಯಿಲ್ ಸಾಗಿಸುತ್ತಿದ್ದ ಕ್ಯಾಂಟರನ್ನ ಉಳ್ಳಾಲ ಬೈಲಿನಲ್ಲಿ ಅಡ್ಡ ಹಾಕಿ ಪ್ರತಿಭಟಿಸಿದ್ದಾರೆ. 

​​​​

ಸುಮಾರು ನಲ್ವತ್ತು ಲಕ್ಷ ರೂಪಾಯಿ ಮೌಲ್ಯದ ಆಯಿಲ್ ಹೊತ್ತೊಯ್ಯುತ್ತಿದ್ದ ಕ್ಯಾಂಟರ್ ಲಾರಿಯಿಂದ ಆಯಿಲ್ ಸೋರಿಕೆಯಾಗುತ್ತಲೇ ಇದ್ದು ಆಯಿಲನ್ನು ಬೇರೊಂದು ಕ್ಯಾಂಟರ್ ಗೆ ತುಂಬಿಸಲಾಗಿದೆ. ಕ್ಯಾಂಟರ್ ಅವಾಂತರದಿಂದಾಗಿ ಉಳ್ಳಾಲ ಅಬ್ಬಕ್ಕ ಸರ್ಕಲ್ ನಿಂದ ಉಳ್ಳಾಲ ಬೈಲ್ ತನಕ ಏಕಮುಖ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಗೊಳಿಸಲಾಗಿದೆ. ರಸ್ತೆಯುದ್ದಕ್ಕೂ ಸೋರಿಕೆಯಾಗಿರುವ ಭಾರೀ ಜಿಡ್ಡಿನ ಫಿಶ್ ಆಯಿಲನ್ನ  ಸ್ವಚ್ಚಗೊಳಿಸುವುದೇ ಸವಾಲಾಗಿದ್ದು, ಸ್ಥಳೀಯರು ಮರದ ಮಿಲ್ ಗಳ ಗರಗಸದ ಹುಡಿಯನ್ನ ರಸ್ತೆಗೆ ಚೆಲ್ಲಿ ಮುಂಜಾಗೃತಾ ಕ್ರಮ ವಹಿಸಿದ್ದಾರೆ.

ಘಟನೆಗೆ ಕಾರಣವಾದ ಕ್ಯಾಂಟರ್ ವಿರುದ್ಧ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ನಗರ ಪ್ರದೇಶದಲ್ಲಿ ತಲೆ ಎತ್ತಿರುವ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗಳಿಂದ ಇಲ್ಲಿನ ಜನರು ನಿತ್ಯವೂ ತೊಂದರೆ ಅನುಭವಿಸುತ್ತಿದ್ದಾರೆ. ಫ್ಯಾಕ್ಟರಿಗಳ ತ್ಯಾಜ್ಯ ಸಮುದ್ರಕ್ಕೆ ಬಿಡುವುದರಿಂದ‌ ಜಲಚರಗಳ ಮಾರಣ ಹೋಮ ನಡೆಯುತ್ತಿರುವುದಲ್ಲದೆ, ಫ್ಯಾಕ್ಟರಿಗಳಿಗೆ ದಿನನಿತ್ಯ ಸಾಗುವ ವಾಹನಗಳು ರಸ್ತೆಗೆ ದುರ್ವಾಸನೆಯುಕ್ತ ಮೀನಿನ‌ ತ್ಯಾಜ್ಯವನ್ನ ಸುರಿಸುತ್ತಿದೆ. ಫ್ಯಾಕ್ಟರಿಗಳಿಂದ ಹೊರ ಸೂಸುವ ದುರ್ನಾತವು ಉಳ್ಳಾಲ ಮಾತ್ರವಲ್ಲದೆ ಸಮೀಪದ ಮಂಗಳಾದೇವಿ ಪರಿಸರಕ್ಕೂ ವ್ಯಾಪಿಸಿದೆ.