ಸಹೋದ್ಯೋಗಿ ಮೇಲೆ ಆಸಿಡ್‌ ದಾಳಿ ; ಕೇರಳ ಮೂಲದ ವ್ಯಕ್ತಿಗೆ 10 ವರ್ಷ ಕಠಿಣ ಶಿಕ್ಷೆ ಕೊಡಿಸಿದ ಉಡುಪಿಯ ಖಾಕಿ

01-05-26 07:18 pm       HK News Staffer   ಕ್ರೈಂ

ಕೆಲಸದ ಸ್ಥಳದಲ್ಲಿ ನಡೆದ ಸಣ್ಣ ವಿವಾದವೊಂದು ಗಂಭೀರ ಹಿಂಸಾತ್ಮಕ ಘಟನೆಯಾಗಿ ರೂಪುಗೊಂಡ ಪ್ರಕರಣದಲ್ಲಿ ಕೋರ್ಟ್ ಕಠಿಣ ತೀರ್ಪು ನೀಡಿದೆ. ಕೇರಳ ಮೂಲದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಉಡುಪಿ, ಮೇ 1: ಕೆಲಸದ ಸ್ಥಳದಲ್ಲಿ ನಡೆದ ಸಣ್ಣ ವಿವಾದವೊಂದು ಗಂಭೀರ ಹಿಂಸಾತ್ಮಕ ಘಟನೆಯಾಗಿ ರೂಪುಗೊಂಡ ಪ್ರಕರಣದಲ್ಲಿ ಕೋರ್ಟ್ ಕಠಿಣ ತೀರ್ಪು ನೀಡಿದೆ. ಕೇರಳ ಮೂಲದ ವ್ಯಕ್ತಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ ₹30,000 ದಂಡ ವಿಧಿಸಿ ಆದೇಶ ಹೊರಡಿಸಿದೆ.

ಕೇರಳ ಮೂಲದ ರತೀಶ್ ಕೆ.ಟಿ (42) ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿ. 2022 ಫೆಬ್ರವರಿ 28 ರಂದು ಕೇರಳ ಮೂಲದ ಸುಧೀರ್ ಮತ್ತು ರತೀಶ ಕೆ.ಟಿ. ಅವರು ಚಾರ ಗ್ರಾಮದ ಮ೦ಡಾಡಿಜಡ್ಡುವಿನಲ್ಲಿರುವ ಅಜಿತ್‌ ಅಗಸ್ಟಿನ್ ಎಂಬುವವರ ತೋಟದಲ್ಲಿ ರಬ್ಬ‌ರ್ ಟ್ಯಾಪಿಂಗ್ ಕೆಲಸ ಮಾಡಿಕೊಂಡಿರುವ ಸಂಜೀವ್‌ ಕುಮಾರ್ ಎಂಬಾತನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪಾರ್ಟಿಯಲ್ಲಿ ಸಾಕಷ್ಟು ಮದ್ಯಪಾನ ಮಾಡಿದ್ದು ಇದೇ ವೇಳೆ ಕೆಲಸದ ವಿಚಾರದಲ್ಲಿ ರತೀಶನನ್ನು ಸುಧೀರ್‌ ನಿಂದಿಸಿದ್ದು, ಬಳಿಕ ಇಬ್ಬರ ಮಧ್ಯೆ ಜಗಳ ನಡೆದಿತ್ತು.

ಆ ಜಗಳವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿದ್ದ ಆರೋಪಿ, ಎರಡು ದಿನಗಳ ನಂತರ ಅಂದರೆ 2022 ಮಾರ್ಚ್ 2ರಂದು ರಾತ್ರಿ ಸುಮಾರು 1 ಗಂಟೆ ವೇಳೆಗೆ ನಿದ್ದೆಯಲ್ಲಿದ್ದ ಸುಧೀರ್ ಮೇಲೆ ಬಿಸಿ ರಾಸಾಯನಿಕ ಆಸಿಡ್ ಎರಚಿ ಪರಾರಿಯಾಗಿದ್ದನು. ಘಟನೆಯಲ್ಲಿ ಸುಧೀರ್ ಗಂಭೀರವಾಗಿ ಗಾಯಗೊಂಡಿದ್ದನ್ನು.

ಈ ಸಂಬಂಧ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು. ಸಾಕ್ಷ್ಯಗಳನ್ನು ಪರಿಶೀಲಿಸಿದ ಉಡುಪಿಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ (ಸರ್ಕ್ಯೂಟ್ ಬೆಂಚ್, ಕಾರ್ಕಳ) ಆರೋಪಿಯನ್ನು ದೋಷಿಯಾಗಿ ಘೋಷಿಸಿ ಶಿಕ್ಷೆ ವಿಧಿಸಿದೆ. ಪ್ರಸ್ತುತ ರತೀಶ್ ಹಿರಿಯಡ್ಕ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ.