ಹಣ ದುರ್ಬಳಕೆ ಆರೋಪದ ಒತ್ತಡಕ್ಕೆ ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿ ಆತ್ಮಹತ್ಯೆ ; ವಿಡಿಯೋದಲ್ಲಿ 10 ಮಂದಿಯ ಕಿರುಕುಳದ ಬಗ್ಗೆ ಉಲ್ಲೇಖ

28-03-26 02:56 pm       HK News Staffer   ಕ್ರೈಂ

ಹಣ ದುರ್ಬಳಕೆ ಆರೋಪ ಮತ್ತು ನಿರಂತರ ಕಿರುಕುಳದಿಂದ ಮನ ನೊಂದು ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಜಿಲ್ಲೆಯ ತರೀಕೆರೆಯ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಷಾ (45) ಆತ್ಮಹತ್ಯೆಗೆ ಶರಣಾದ ಮಹಿಳೆ.

ಚಿಕ್ಕಮಗಳೂರು, ಮಾರ್ಚ್ 28 : ಹಣ ದುರ್ಬಳಕೆ ಆರೋಪ ಮತ್ತು ನಿರಂತರ ಕಿರುಕುಳದಿಂದ ಮನ ನೊಂದು ಮಹಿಳಾ ಸಹಕಾರ ಸಂಘದ ಕಾರ್ಯದರ್ಶಿಯೊಬ್ಬರು ಆತ್ಮಹತ್ಯೆಗೆ ಶರಣಾದ ದಾರುಣ ಘಟನೆ ಜಿಲ್ಲೆಯ ತರೀಕೆರೆಯ ಹೆಚ್. ಮಲ್ಲೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಉಷಾ (45) ಆತ್ಮಹತ್ಯೆಗೆ ಶರಣಾದ ಮಹಿಳೆ.

ಆತ್ಮಹತ್ಯೆಗೂ ಮುನ್ನ ಉಷಾ ವಿಡಿಯೋ ಮಾಡಿದ್ದು, “ನನ್ನ ಮೇಲೆ ನಡೆಯುತ್ತಿರುವ ಕಿರುಕುಳವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ” ಎಂದು ಮನಕಲುಕುವ ರೀತಿಯಲ್ಲಿ ಹೇಳಿಕೊಂಡಿದ್ದಾರೆ. ಲೆಕ್ಕಪತ್ರ ಪುಸ್ತಕ ಕಳೆದುಹೋಗಿರುವುದು ತನ್ನಿಂದಾದ ತಪ್ಪು ಎಂದು ಅವರು ವಿಡಿಯೋದಲ್ಲಿ ಒಪ್ಪಿಕೊಂಡಿದ್ದಾರೆ.

2010ರಲ್ಲಿ ಪ್ರಾರಂಭವಾದ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದಲ್ಲಿ ಉಷಾ ಸುಮಾರು 10 ವರ್ಷಗಳಿಂದ ಕಾರ್ಯದರ್ಶಿಯಾಗಿದ್ದರು. ಆದರೆ ಕಳೆದ ಕೆಲವು ವರ್ಷಗಳಿಂದ ಸಂಘದಲ್ಲಿ ಹಣ ದುರ್ಬಳಕೆ ನಡೆದಿದೆ ಎಂಬ ಆರೋಪ ಗ್ರಾಮಸ್ಥರಿಂದ ಕೇಳಿಬರುತ್ತಿತ್ತು. ಇತ್ತೀಚೆಗೆ, 2025ರಲ್ಲಿ ಹೊಸ ಸದಸ್ಯರು ಸಂಘಕ್ಕೆ ಸೇರ್ಪಡೆಯಾದ ನಂತರ ಲೆಕ್ಕಪತ್ರಗಳ ಕುರಿತು ಪ್ರಶ್ನೆಗಳು ತೀವ್ರಗೊಂಡಿದ್ದವು.

ಈ ಹಿನ್ನೆಲೆ ನಡೆದ ಪಂಚಾಯತಿಯಲ್ಲಿ ಲೆಕ್ಕಪತ್ರ ಮಿಸ್ಸಿಂಗ್ ಆಗಿರುವುದನ್ನು ಉಷಾ ಒಪ್ಪಿಕೊಂಡಿದ್ದರು ಎಂದು ತಿಳಿದುಬಂದಿದೆ. ಇದರ ಬಳಿಕ ಅವರ ಮೇಲೆ ಒತ್ತಡ ಮತ್ತು ಆರೋಪಗಳು ಹೆಚ್ಚಾಗಿದ್ದು, ಮಾನಸಿಕವಾಗಿ ಕುಗ್ಗಿದ್ದ ಉಷಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಉಷಾ ಅವರ ಪತಿ ತರೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪತ್ನಿಯ ಸಾವಿಗೆ ಕೆಲವರ ನಿರಂತರ ಕಿರುಕುಳವೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಪತ್ನಿ ಎಲ್ಲಾ ಲೆಕ್ಕಪತ್ರಗಳನ್ನು ನೀಡಿದ್ದರೂ ಸಹ ಕುಟುಂಬದ ಮೇಲೆ ಜೀವ ಬೆದರಿಕೆ ಹಾಕಲಾಗುತ್ತಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಉಷಾ ತಮ್ಮ ವಿಡಿಯೋದಲ್ಲೇ ಸುಮಾರು 10 ಮಂದಿಯ ಹೆಸರನ್ನು ಉಲ್ಲೇಖಿಸಿದ್ದು, ಹೆಚ್. ಮಲ್ಲೇನಹಳ್ಳಿ ಗ್ರಾಮದ ಎಚ್.ಎನ್. ಜಗದೀಶ್ (ದೊಡ್ಡೆರಿ), ದಕ್ಷಿಣಮೂರ್ತಿ, ಎಚ್.ಎಂ. ಯತೀಶ, ಲವಕುಮಾರ, ಕುಮಾರಸ್ವಾಮಿ, ವಿನಯ್ ಕುಮಾರ್, ದರ್ಶನ್ ಕುಮಾರ್ ಎಚ್.ಆರ್., ಮಂಜುನಾಥ, ರಾಜೇಶ್ ಬಿನ್ ಪಾಲಾಕ್ಷಿ ಸೇರಿದಂತೆ ಒಟ್ಟು 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದು, ವಿಡಿಯೋ ಹಾಗೂ ಇತರ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.