ಬ್ರೇಕಿಂಗ್ ನ್ಯೂಸ್
27-03-26 10:02 pm HK News Staffer ಕ್ರೈಂ
ಮಂಗಳೂರು, ಮಾರ್ಚ್ 27: ಜಿಮ್ ನಲ್ಲಿ ಹುರಿಗೊಳಿಸಿದ ಕಟ್ಟುಮಸ್ತಿನ ದೇಹ, ಆರಡಿ ಎತ್ತರದ ಬಾಲಿವುಡ್ಡಿನ ಜಾನ್ ಅಬ್ರಹಾಂ ಮೀರಿಸುವಂತಹ ಮೈಕಟ್ಟು. ಪೊಲೀಸರ ಭಾಷೆಯಲ್ಲಿ ಟ್ಯಾಬ್ಲೆಟ್ ಆರಿಫ್ ಎಂದೇ ಹೆಸರಾಗಿದ್ದ ನಗರದ ಬಂದರು ಮತ್ತು ಪಾಂಡೇಶ್ವರ ಠಾಣೆಯಲ್ಲಿ ಹಿಂದೆ ರೌಡಿಶೀಟರ್ ಆಗಿದ್ದ ಆರಿಫ್ ಹುಸೇನ್ ಹತ್ಯೆ ಬಂದರು ಪ್ರದೇಶದಲ್ಲಿ ಮಿಂಚು ಹರಿಸಿದೆ. ಯಾಕಂದ್ರೆ, ಕಳೆದ ಏಳೆಂಟು ವರ್ಷಗಳಲ್ಲಿ ಆರಿಫ್ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ರೌಡಿಸಂ ಎನ್ನುವ ಕಾರಣಕ್ಕೆ ಅಂತಹದ್ದೇನೂ ಹವಾ ಎಬ್ಬಿಸಿಕೊಂಡಿದ್ದೂ ಇರಲಿಲ್ಲ.
ಆದರೆ ರೌಡಿಸಂ ಅನ್ನುವ ಲೋಕದಲ್ಲಿ ಹಳೆ- ಹೊಸತಿನ ಲೆಕ್ಕದ ಮಿತಿ ಇಲ್ಲ. ಯಾವಾಗ ಸುಲಭದ ತುತ್ತಾಗುತ್ತಾನೋ ಅದೇ ದಿನ ಕೊನೆಯ ತುತ್ತು ನೆಲಕ್ಕೆ ಉದುರುತ್ತದೆ. ಆರಿಫ್ ಹುಸೇನ್ ಪಾಲಿಗೆ ಆಗಿದ್ದೂ ಅದೇ. ಎತ್ತರದ ನಿಲುವು, ಆಕರ್ಷಕ ಬಾಡಿಯಿಂದಾಗಿ ಸೋಶಿಯಲ್ ಮೀಡಿಯಾದಲ್ಲಿ ಹಲವರು ಈತನ ಪಾಲಿಗೆ ಅಭಿಮಾನಿಗಳೂ ಆಗಿದ್ದರು. ಜಾನ್ ಅಬ್ರಾಹಂ ರೀತಿಯ ಲುಕ್ಕಿಗೆ ಮನ ಸೋಲದವರಿಲ್ಲ. ಬುಲೆಟ್ ಬೈಕಿನಲ್ಲಿ ಕುಳಿತ ಭಂಗಿ, ಎಲ್ಲೋ ನಿಂತಿರೋ ಆಕರ್ಷಕ ಲುಕ್ಕಿನ ಚಂದದ ಫೋಟೋ, ವಿಡಿಯೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.
ಇವತ್ತು ನಸುಕಿನಲ್ಲಿ ಎಂದಿನಂತೆ, ತಲಪಾಡಿ ಬಳಿಯ ಅಜ್ಜಿನಡ್ಕದ ಮನೆಯಿಂದ ಆರಿಫ್ ತನ್ನ ಬುಲೆಟ್ ಬೈಕಿನಲ್ಲಿ ಹೊರಟಿದ್ದ. ಆದರೆ ಅಷ್ಟರಲ್ಲೇ ಕೇರಳ ನೋಂದಣಿಯ ಇನ್ನೋವಾ ಕಾರಿನಲ್ಲಿ ಕಾದು ಕುಳಿತಿದ್ದ ಹಂತಕರು ಹಿಂಬಾಲಿಸುತ್ತ ಬಂದಿದ್ದರು. ತೊಕ್ಕೊಟ್ಟು ಫ್ಲೈಓವರ್ ಮೇಲ್ಗಡೆ ಹೊಡೆದರೆ ಎಲ್ಲಿಯೂ ಸಿಸಿಟಿವಿ ಕವರ್ ಆಗಲ್ಲ ಅಂತಾನೇ ಆರಿಫ್ ಚಲಾಯಿಸುತ್ತಿದ್ದ ಬುಲೆಟ್ ಬೈಕಿಗೆ ಡಿಕ್ಕಿಯಾಗಿಸಿದ್ದರು. ನೆಲಕ್ಕೆ ಬಿದ್ದ ಆತ ಏಳುವುದಕ್ಕೂ ಮೊದಲೇ ತಲವಾರು ಬೀಸಿ ಮುಖ, ಕುತ್ತಿಗೆಯನ್ನು ಸೀಳಿದ್ದರು. ಎದುರಾ ಬದುರಾ ಸಿಕ್ಕರೆ ಸುಲಭದಲ್ಲಿ ಮಣಿಸುವ ದೇಹ ಅವನ್ನದ್ದಲ್ಲ ಎನ್ನುವುದು ಬಂದವರಿಗೂ ಗೊತ್ತಿತ್ತು.
ಮಾಹಿತಿ ಪ್ರಕಾರ, ಕಾರಿನಲ್ಲಿ ಆರು ಮಂದಿಯಿದ್ದರು, ಬೈಕಿನಿಂದ ಬೀಳುತ್ತಲೇ ಯದ್ವಾತದ್ವಾ ಕಡಿದು ಆರಿಫ್ ಕತೆ ಮುಗಿಸಿ ಪರಾರಿಯಾಗಿದ್ದರು. ನಸುಕಿನ 3.30ರಿಂದ ನಾಲ್ಕು ಗಂಟೆ ಒಳಗೆ ಮೇಲ್ಸೇತುವೆ ಮಧ್ಯದಲ್ಲೇ ಘಟನೆ ನಡೆದಿದ್ದು, ಆ ಸಂದರ್ಭದಲ್ಲಿ ಸಾಗಿಹೋಗಿದ್ದ ಕಾರುಗಳ ಡ್ಯಾಶ್ ಬೋರ್ಡಿನಲ್ಲಾದ್ರೂ ಇದರ ಸೀನರಿ ಬಂದಿರಲೇಬೇಕು. ಆದರೆ ಈವರೆಗೂ ಅಂಥ ವಿಡಿಯೋಗಳು ಹೊರಗಡೆ ಬಂದಿಲ್ಲ. ಮೇಲ್ಸೇತುವೆ ಎತ್ತರ ಇರುವುದು, ಪಕ್ಕದ ಕಟ್ಟಡಗಳು ತಗ್ಗಿನಲ್ಲಿರುವ ಕಾರಣ ಹೆದ್ದಾರಿಯನ್ನು ಬಿಲ್ಡಿಂಗಿನ ಸಿಸಿಟಿವಿಗಳು ಕವರ್ ಮಾಡಿಲ್ಲ.






ನೌಫಾಲ್ ಗ್ಯಾಂಗ್ ಮೇಲೆ ಡೌಟು
ಡ್ರಗ್ಸ್ ವಹಿವಾಟು, ಕೊನೆಗೆ ಅದೇ ಡ್ರಗ್ಸ್ ಹುಡುಕುತ್ತ ಉಪ್ಪಳಕ್ಕೆ ಹೋಗಿದ್ದಾಗ ನಿಗೂಢ ರೀತಿಯಲ್ಲಿ ಸಾವು ಕಂಡಿದ್ದ ಟೋಪಿ ನೌಫಾಲ್ ಬಜಾಲ್, ಫೈಸಲ್ ನಗರದಲ್ಲಿ ತನ್ನದೇ ಹವಾ ಮೂಡಿಸಿದ್ದ ವ್ಯಕ್ತಿ. ಈತನಿಗೂ ಬಂದರಿನಲ್ಲಿ ಕೋಡು ಮೂಡಿಸಿಕೊಂಡಿದ್ದ ಆರಿಫ್ ಹುಸೇನ್ ಗೂ ಆಗಿ ಬರುತ್ತಿರಲಿಲ್ಲ. ಅದೇ ವೈರತ್ವದಲ್ಲಿ 2022ರಲ್ಲಿ ಇವತ್ತಿನ ರೀತಿಯಲ್ಲೇ ಬುಲೆಟ್ ಬೈಕಿನಲ್ಲಿ ಬರುತ್ತಿದ್ದಾಗ ಟೋಪಿ ನೌಫಾಲ್ ತಂಡವು ದಾಳಿ ನಡೆಸಿ ಆರಿಫ್ ಕೊಲೆಗೆ ಯತ್ನಿಸಿತ್ತು. ಉಚ್ಚಿಲ ಹೆದ್ದಾರಿ ಬಳಿಯಲ್ಲೇ ಘಟನೆ ನಡೆದಿದ್ದು, ಆರಿಫ್ ಓಡಿ ತಪ್ಪಿಸಿಕೊಂಡಿದ್ದರಿಂದ ಅಂದು ಸ್ವಲ್ಪದರಲ್ಲೇ ಸಾವಿನ ದವಡೆಯಿಂದ ಪಾರಾಗಿದ್ದ.
ಆರು ತಿಂಗಳ ಹಿಂದೆ ಅಂದ್ರೆ, 2025ರ ನವೆಂಬರ್ ತಿಂಗಳ ಕೊನೆಯಲ್ಲಿ ಟೋಪಿ ನೌಫಾಲ್ ಮಂಗಳೂರಿನಲ್ಲಿ ಡ್ರಗ್ಸ್ ಸಿಗದೇ, ನಡುರಾತ್ರಿಯಲ್ಲಿ ಉಪ್ಪಳ ಗೇಟ್ ಬಳಿಗೆ ಹೋಗಿದ್ದಾಗ ರೈಲು ಡಿಕ್ಕಿ ಹೊಡೆದು ಸಾವನ್ನಪ್ಪಿದ್ದ ಎನ್ನಲಾಗಿತ್ತು. ಆದರೆ ನೌಫಾಲ್ ಮುಖ, ಕುತ್ತಿಗೆಗೆ ಮಾತ್ರ ಬಿದ್ದಿದ್ದ ಏಟಿನಿಂದಾಗಿ ಯಾರೋ ಕೊಲೆ ಮಾಡಿದ್ದಾರೆಂದೇ ಸಹಚರರು ಭಾವಿಸಿದ್ದರು. ಅಲ್ಲಿನ ಪೊಲೀಸರು ರೈಲು ಡಿಕ್ಕಿ ಹೊಡೆದಿದ್ದಾಗಿ ಹೇಳಿದರೂ, ಅದನ್ನು ಓರಗೆಯ ಜನರು ನಂಬಿರಲಿಲ್ಲ. ಯಾರದ್ದೋ ಹಿಕಮತ್ ನಡೆದಿದೆ ಎಂದೇ ಅನುಮಾನ ಪಟ್ಟಿದ್ದರು ಮತ್ತು ಇದೊಂದು ವ್ಯವಸ್ಥಿತ ರೀತಿಯ ಕೊಲೆಯೆಂದೇ ಸಂಶಯಿಸಿದ್ದರು. ಸಹಜವಾಗೇ ನೌಫಾಲ್ ಜೊತೆಗಿದ್ದವರು ಆರಿಫ್ ಬಗ್ಗೆಯೇ ಅನುಮಾನಿಸಿದ್ದರು.

ಈಗ ಆರಿಫ್ ಹುಸೇನ್ ಕೊಲೆಯಾದಾಗಲೂ ಹಿಂದೆ ಕೊಲೆಗೆ ಯತ್ನಿಸಿದ್ದವರ ನೌಫಾಲ್ ಗ್ಯಾಂಗ್ ಮೇಲೆಯೇ ಅನುಮಾನ ಬಂದಿದೆ. ಉಳ್ಳಾಲ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರಿಫ್ ಪುತ್ರ ನೀಡಿರುವ ದೂರಿನಲ್ಲಿ ನೌಫಾಲ್ ಸಹಚರನಾಗಿದ್ದ ಮಹಮ್ಮದ್ ರಿಫಾತ್ ಆಲಿ ಮತ್ತು ಸಹಚರರು ಎಂದು ಹಂತಕರನ್ನು ಅನುಮಾನಿಸಿದ್ದಾರೆ. ಸದ್ಯಕ್ಕೆ ಕೊಲೆ ಕೃತ್ಯದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ಡಿಕ್ಕಿಪಡಿಸಿ ಪರಾರಿಯಾಗಿರುವ ಕೇರಳ ನೋಂದಣಿಯ ಇನ್ನೋವಾ ಕಾರು ವಿಟ್ಲ ಠಾಣೆ ವ್ಯಾಪ್ತಿಯ ಬುಡೋಳಿ ಎಂಬಲ್ಲಿ ರಸ್ತೆ ಬದಿ ಪತ್ತೆಯಾಗಿದೆ. ಹೀಗಾಗಿ ಕೃತ್ಯ ಎಸಗಿದವರು ಅಲ್ಲಿಂದ ಬೇರೆ ಕಾರಿನಲ್ಲಿ ಪರಾರಿಯಾಗಿದ್ದಾರೆಂಬ ಅನುಮಾನ ಇದೆ.
ಚಾಕು ಇಟ್ಟುಕೊಂಡೇ ಓಡಾಡ್ತಿದ್ದ ಆರಿಫ್
ಆರಿಫ್ ಹುಸೇನ್ ಇತ್ತೀಚೆಗೆ ಇನ್ನೊಂದು ತಂಡದವರ ಜೊತೆಗೆ ಮಾತಿಗೆ ಮಾತು ಬೆಳೆಸಿ ಮತ್ತೆ ವೈರತ್ವ ಹುಟ್ಟಿತ್ತು ಎನ್ನುವ ಸುದ್ದಿ ಇದೆ. ಇದೇ ಕಾರಣಕ್ಕೋ ಏನೋ ಆರಿಫ್ ತಾನೆಲ್ಲಿ ಹೋಗುತ್ತಿದ್ದರೂ, ಸೊಂಟದಲ್ಲಿ ಸಣ್ಣ ಚೂರಿಯನ್ನು ಆತ್ಮರಕ್ಷಣೆಗೆಂದು ಇಟ್ಟುಕೊಂಡಿದ್ದ. ಕೊಲೆಯಾದ ಸಂದರ್ಭದಲ್ಲೂ ಸೊಂಟದಲ್ಲಿ ಚೂರಿ ಇದ್ದುದನ್ನು ಸ್ಥಳದಲ್ಲಿದ್ದವರು ಗಮನಿಸಿದ್ದಾರೆ.
ಕುದ್ರೋಳಿಯ ಖಾವಂಜಿ ಕಾಕ ಬಂದರಿನಲ್ಲಿ ಮೀನು ವ್ಯಾಪಾರಿಯಾಗಿ ಹೆಸರು ಗಳಿಸಿದವರು. ಅವರ ಮಕ್ಕಳಲ್ಲಿ ಹಿರಿಯವನೇ ಆರಿಫ್ ಹುಸೇನ್. ತಂದೆಯಿಂದ ಬಂದ ಬಳುವಳಿ ಎನ್ನುವಂತೆ ಬಂದರಿನ ಧಕ್ಕೆಯಲ್ಲಿ ಆರಿಫ್ ತನ್ನದೇ ವ್ಯಾಪಾರ ಮಾಡಿಕೊಂಡಿದ್ದ. ತಂದೆ ಈಗ ಪ್ಯಾರಾಲಿಸಿಸ್ ಆಗಿ ಮನೆಯಲ್ಲಿದ್ದಾರೆ. ಆದರೆ ಮಗನ ಮೈಕಟ್ಟು, ವ್ಯಾಪಾರದ ಬಗ್ಗೆ ತುಂಬ ಆಸ್ಥೆ ಹೊಂದಿದ್ದರು. ಆತನ ವಿಡಿಯೋಗಳನ್ನೂ ಷೇರ್ ಮಾಡುತ್ತಿದ್ದರು. ಒಂದು ತುಳು ಸಿನಿಮಾದಲ್ಲೂ ಸೈಡ್ ಆಕ್ಟರ್ ಆಗಿ ಕಾಣಿಸಿಕೊಂಡಿದ್ದ ಆರಿಫ್ ಹುಸೇನ್ ಗೆ ಮಂಗಳೂರಿನಲ್ಲಿ ಹಿಂದು ಗೆಳೆಯರೂ ಇದ್ದರು. ಮಂಗಳೂರು ದಸರಾದ ಶಾರದೋತ್ಸವ ಹುಲಿ ವೇಷದ ಟ್ಯಾಬ್ಲೋದಲ್ಲಿ ತನ್ನ ಆಕರ್ಷಕ ಮೈಕಟ್ಟಿನ ಕಾರಣಕ್ಕೆ ಬೌನ್ಸರ್ ರೀತಿ ಜೊತೆಗೆ ನಿಂತು ಪೋಸು ಕೊಡುತ್ತಿದ್ದ. ಶುಕ್ರವಾರ ಸಂಜೆ ಮೃತದೇಹವನ್ನು ಅತ್ತಾವರದ ತಮ್ಮ ಮನೆಗೆ ತಂದಾಗ ಜನಸಾಗರವೇ ನೆರೆದಿತ್ತು. ಇದರ ವಿಡಿಯೋ ಜಾಲತಾಣದಲ್ಲಿ ಹರಿದಾಡಿದ್ದು ಅನೇಕ ಅಭಿಮಾನಿಗಳಿದ್ದರೆನ್ನುವುದನ್ನು ಸೂಚಿಸುತ್ತದೆ.
ಆರಿಫ್ ಹುಸೇನ್ ಅಪರಾಧ ಲೋಕಕ್ಕೆ ಹೋಗದೆ ತನ್ನ ಆಕರ್ಷಕ ನಿಲುವು ಇಟ್ಟುಕೊಂಡೇ ಬಾಲಿವುಡ್ ಹೋಗುತ್ತಿದ್ದರೆ ಮತ್ತೊಬ್ಬ ಜಾನ್ ಅಬ್ರಹಾಂ ಆಗುತ್ತಿದ್ದರೋ ಏನೋ.. ಆದರೆ ಓರಗೆಯವರ ಸಹವಾಸ ದೋಷದಿಂದಾಗಿ ಸಣ್ಣಪುಟ್ಟ ಅಪರಾಧ ಚಟುವಟಿಕೆಯಿಂದ ರೌಡಿ ಪಟ್ಟಕ್ಕೇರಿ ಕೊನೆಗೆ ನಡುಬೀದಿಯಲ್ಲಿ ಹೆಣ ಆಗುವಂತಾಗಿದೆ.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am