ಮೂಡುಬಿದ್ರೆ ಸಂದೇಶ್ ಕೇಸ್ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಬ್ಬ ಇನ್‌ಸ್ಪೆಕ್ಟರ್ 'ಪಾಪ'ಕಾಂಡ ಬೆಳಕಿಗೆ ; ಲೇಡಿ ರೌಡಿಯನ್ನ ಮಂಚಕ್ಕೆ ಬರುವಂತೆ ನಿರಂತರ ಕಿರುಕುಳ, ಅಶ್ಲೀಲ ಸಂದೇಶ !

26-03-26 03:12 pm       HK News Staffer   ಕ್ರೈಂ

ಮಂಗಳೂರಿನ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಕರ್ಮಕಾಂಡ ಸುದ್ದಿ ಬೆನ್ನಲ್ಲೇ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳ, ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಬೆಂಗಳೂರು, ಮಾರ್ಚ್ 25 : ಮಂಗಳೂರಿನ ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ಕರ್ಮಕಾಂಡ ಸುದ್ದಿ ಬೆನ್ನಲ್ಲೇ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪಾಪಣ್ಣ ವಿರುದ್ಧ ಲೈಂಗಿಕ ಕಿರುಕುಳ, ಅಶ್ಲೀಲ ಸಂದೇಶ ಹಾಗೂ ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.

ಈ ಸಂಬಂಧ ಲೇಡಿ ರೌಡಿಶೀಟರ್ ಯಶಸ್ವಿನಿ, ಬೆಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಗೆ ದೂರು ಸಲ್ಲಿಸಿದ್ದು, ಆರೋಪಿ ಇನ್ಸ್ ಪೆಕ್ಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ದೂರಿನಲ್ಲಿ ಇನ್ಸ್‌ಪೆಕ್ಟರ್ ಪಾಪಣ್ಣ ಕಳೆದ ಕೆಲ ತಿಂಗಳಿನಿಂದ ನಿರಂತರವಾಗಿ ಫೋನ್ ಕರೆಗಳು ಹಾಗೂ ವಾಟ್ಸಾಪ್ ಸಂದೇಶಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆಂದು ದೂರಿದ್ದಾರೆ‌.

ದೂರಿನಲ್ಲಿ ಉಲ್ಲೇಖಿಸಿರುವಂತೆ, ಪಾಪಣ್ಣ ಅವರು ‘ಚಿನ್ನ, ಮುದ್ದು, ಬಂಗಾರಿ’ ಎಂಬ ಉಲ್ಲೇಖಗಳೊಂದಿಗೆ ಅಶ್ಲೀಲ ಮಾತನಾಡಿರುವುದಷ್ಟೇ ಅಲ್ಲದೆ, ‘ಕಿಸ್ ಮಾಡ್ಬೇಕು, ಹಗ್ ಮಾಡ್ಕೊಳ್ಬೇಕು’ ಎಂಬ ರೀತಿಯ ಸಂದೇಶಗಳನ್ನು ಕಳುಹಿಸಿದ್ದಾರೆಂದು ಆರೋಪ ಕೇಳಿಬಂದಿದೆ. ಕಿರುಕುಳಕ್ಕೆ ಪ್ರತಿಕ್ರಿಯಿಸದಿದ್ದಾಗ, ಹಲವಾರು ಬಾರಿ ಬೇರೆ ಬೇರೆ ಸಂಖ್ಯೆಯಿಂದ ಸಂಪರ್ಕ ಸಾಧಿಸಿ ಒತ್ತಡ ಹಾಕಿರುವುದಾಗಿ ಯಶಸ್ವಿನಿ ಆರೋಪಿಸಿದ್ದಾರೆ.

ಡಿಜಿಟಲ್ ಸಾಕ್ಷ್ಯಗಳಿಂದ ಬಲವಾದ ದೂರು

ಸಂತ್ರಸ್ತೆ ವಾಟ್ಸಾಪ್ ಚಾಟ್ ಸ್ಕ್ರೀನ್‌ಶಾಟ್‌ಗಳು ಹಾಗೂ ಆಡಿಯೋ ದಾಖಲೆಗಳನ್ನು ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾಳೆ. ಈ ಎಲೆಕ್ಟ್ರಾನಿಕ್ ಸಾಕ್ಷ್ಯಾಧಾರಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡುವ ಸಾಧ್ಯತೆಯಿದೆ. ಪ್ರಕರಣವನ್ನು ಬಹಿರಂಗಪಡಿಸಿದರೆ, ದೂರುದಾರೆಯನ್ನು ಹಾಗೂ ಅವರ ಮಕ್ಕಳನ್ನೂ ಸುಪಾರಿ ನೀಡಿ ಕೊಲೆ ಮಾಡಿಸುವುದಾಗಿ ಇನ್ಸ್‌ಪೆಕ್ಟರ್ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮನೆಗೆ ಬರುವುದಾಗಿ ಹೇಳಿ ಹಲವಾರು ಬಾರಿ ಕರೆ ಮಾಡಿ ಕಿರುಕುಳ ನೀಡಿರುವುದಾಗಿಯೂ ದೂರಿನಲ್ಲಿ ತಿಳಿಸಿದ್ದಾರೆ.

2017ರಲ್ಲಿ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಇನ್ಸ್‌ಪೆಕ್ಟರ್ ಆಗಿದ್ದಾಗಲೇ ಪಾಪಣ್ಣ, ಯಶಸ್ವಿನಿಯ ಸಂಪರ್ಕ ಪಡೆದು ಕರೆ, ಮೆಸೇಜ್ ಮಾಡುತ್ತಿದ್ದರಂತೆ. ಆ ಸಮಯದಲ್ಲಿ ಕಿರಿಕಿರಿ ತಾಳಲಾರದೆ ಆತನ ಸಂಖ್ಯೆಯನ್ನು ಯಶಸ್ವಿನಿ ಬ್ಲಾಕ್ ಮಾಡಿದ್ದರು. ಆದರೆ 2026ರ ಜನವರಿಯಿಂದ, ಪಾಪಣ್ಣ ಕೋಣನಕುಂಟೆ ಠಾಣೆಗೆ ವರ್ಗಾವಣೆಯಾದ ನಂತರ ಮತ್ತೆ ಕಿರುಕುಳ ಶುರುವಾಗಿದ್ದು, ಬೇರೆ ಬೇರೆ ಸಂಖ್ಯೆಗಳ ಮೂಲಕ ಸಂಪರ್ಕ ಸಾಧಿಸಿ ಕಾಟ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ಇದರ ಜೊತೆಗೆ, ತನ್ನ ವಿರುದ್ಧ ಯಾರೂ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಪಾಪಣ್ಣ ದರ್ಪ ತೋರಿದ್ದಾರೆಂಬ ಆರೋಪವೂ ಕೇಳಿಬಂದಿದೆ. ತನ್ನ ಪತ್ನಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಬಂಧಿ ಎಂಬ ಹೇಳಿಕೆಯನ್ನು ನೀಡಿ ಪ್ರಭಾವ ಬೀರುವ ಪ್ರಯತ್ನ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸ್ ಇಲಾಖೆಯ ನೈತಿಕತೆಗೆ ಪ್ರಶ್ನೆ

ಈ ಘಟನೆ ಪೊಲೀಸ್ ಇಲಾಖೆಯ ನೈತಿಕತೆ ಹಾಗೂ ಜವಾಬ್ದಾರಿತನದ ಮೇಲೆ ಗಂಭೀರ ಪ್ರಶ್ನೆ ಎತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ಅನೇಕ ಆರೋಪಗಳು ಕೇಳಿಬಂದಿರುವ ಹಿನ್ನೆಲೆ, ಈ ಪ್ರಕರಣವೂ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ. ದೂರಿನ ಹಿನ್ನೆಲೆಯಲ್ಲಿ ಇನ್‌ಸ್ಪೆಕ್ಟರ್ ವಿರುದ್ಧ ಇಲಾಖಾ ತನಿಖೆ ನಡೆಸಿ ವರದಿ ನೀಡುವಂತೆ ದಕ್ಷಿಣ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣನವರಿಗೆ ನಗರ ಪೊಲೀಸ್‌ ಕಮಿಷನ‌ರ್ ಸೀಮಂತ್ ಕುಮಾರ್ ಸಿಂಗ್ ಸೂಚಿಸಿದ್ದಾರೆ.