ಉಜಿರೆ ಜಾತ್ರೆಗೆ ಬಂದಿದ್ದ ಮುಸ್ಲಿಂ ಬಾಲಕನ ಅಪಹರಿಸಿ ಹಲ್ಲೆ ; ಹಿಂದು ಸಂಘಟನೆ ಕಾರ್ಯಕರ್ತರ ಕೃತ್ಯ ಆರೋಪ, ಶೋಧಕ್ಕಿಳಿದ ಬೆಳ್ತಂಗಡಿ ಪೊಲೀಸರು

19-03-26 12:16 pm       HK News Staffer   ಕ್ರೈಂ

ಜಾತ್ರೆಗೆ ಬಂದಿದ್ದ ಅನ್ಯಮತೀಯ 17 ವರ್ಷದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆಗೈದ ಘಟನೆ ಬೆಳ್ತಂಗಡಿಯ ಉಜಿರೆ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.‌ 

ಬೆಳ್ತಂಗಡಿ, ಮಾರ್ಚ್ 19: ಜಾತ್ರೆಗೆ ಬಂದಿದ್ದ ಅನ್ಯಮತೀಯ 17 ವರ್ಷದ ಅಪ್ರಾಪ್ತ ಬಾಲಕನನ್ನು ಅಪಹರಿಸಿ ಹಲ್ಲೆಗೈದ ಘಟನೆ ಬೆಳ್ತಂಗಡಿಯ ಉಜಿರೆ ಬಳಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.‌ 

ಒಂದು ವಾರದ ಹಿಂದೆ ಮಾರ್ಚ್ 11ರಂದು ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಜಾತ್ರೆಗೆ ಬಾಲಕ ತನ್ನ ಸ್ನೇಹಿತರೊಂದಿಗೆ ಬಂದಿದ್ದು ರಥಬೀದಿಯಲ್ಲಿ ಜಾಯಿಂಟ್ ವೀಲ್ ನೋಡಲು ಹೋಗಿದ್ದ. ಈ ವೇಳೆ, ಹಿಂದು ಹುಡುಗಿಯರ ಜೊತೆಗೆ ಬಂದಿದ್ದಾನೆಂದು ಆಕ್ಷೇಪಿಸಿದ ಅಲ್ಲಿದ್ದ ಕೆಲವರು ಬಾಲಕನನ್ನು ಬೈಕ್‌ನಲ್ಲಿ‌ ಅಪಹರಿಸಿ ಹಲ್ಲೆ‌ ನಡೆಸಿರುವ ಆರೋಪ ಕೇಳಿಬಂದಿದೆ. ಬೈಕಿನಲ್ಲಿ ದೂರ ಕರೆತಂದು ಹಲ್ಲೆಗೈದು ನಿಂದಿಸಿ ಬಾಲಕನಿಂದ ತಾನೇ ಜಾತ್ರಾ ಸ್ಥಳದಲ್ಲಿ ತಪ್ಪು ಮಾಡಿರುವುದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡು ಆತನನ್ನು ಬಿಟ್ಟು ಕಳುಹಿಸಿದ್ದರು. 

ಘಟನೆಯಿಂದ ಭಯಗೊಂಡಿದ್ದ ಬಾಲಕ ಕೆಲವು ದಿನಗಳ ಬಳಿಕ ತನ್ನ ಮನೆಯಲ್ಲಿ ತಿಳಿಸಿದ್ದಾನೆ.‌ ಇದರಂತೆ, ಮಾರ್ಚ್‌ 18ರಂದು ಘಟನೆಯ ಬಗ್ಗೆ ಬಾಲಕನ ಪೋಷಕರು ಬೆಳ್ತಂಗಡಿ ಪೊಲೀಸ್ ಠಾಣೆಗೆ‌ ದೂರು ನೀಡಿದ್ದಾರೆ. ‌ದೂರಿನಲ್ಲಿ ಹಿಂದೂ ಸಂಘಟನೆಗೆ ಸೇರಿದ ಗೌರವ್ ಶೆಟ್ಟಿ, ರಮೇಶ್ ಹಾಗೂ ಇತರರು ಸೇರಿಕೊಂಡು ಬಾಲಕನನ್ನು ಅಪಹರಿಸಿ ಹಲ್ಲೆ‌ ನಡೆಸಿದ್ದಾರೆಂದು ದೂರಲಾಗಿದೆ. ದೂರಿನ‌ ಆಧಾರದ ಮೇಲೆ ಎಫ್ಐಆರ್ ದಾಖಲಿಸಿ ತನಿಖೆ ಕೈಗೆತ್ತಿಕೊಂಡ ಬೆಳ್ತಂಗಡಿ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.