ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ರೂ. ; ಪ್ರತಿಭಾ ಕುಳಾಯಿ ಬಹಿರಂಗ ಸವಾಲು !!

08-02-21 12:25 pm       Mangalore Correspondent   ಕರಾವಳಿ

ಬಿಲ್ಲವರಿಗೆ ಅವಮಾನಿಸಿದ ಬಿಜೆಪಿ ಮುಖಂಡನ ಮುಖಕ್ಕೆ ಮಸಿ ಬಳಿದರೆ ಒಂದು ಲಕ್ಷ ರೂ. ನೀಡುವುದಾಗಿ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಮಂಗಳೂರು, ಫೆ.8 : ಬಿಲ್ಲವರಿಗೆ ಅವಮಾನಿಸಿದ ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ಮೂರು ದಿನದೊಳಗೆ ಗರೋಡಿಗೆ ಬಂದು ಕ್ಷಮೆ ಯಾಚನೆ ಮಾಡದಿದ್ದರೆ ನಮ್ಮ ಬಿಲ್ಲವ ಯುವಕರು ಅವರ ಮುಖಕ್ಕೆ ಮಸಿ ಬಳಿಯಲಿದ್ದಾರೆ. ಮಸಿ ಬಳಿಯುವ ಬಿಲ್ಲವನಿಗೆ ಒಂದು ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ಘೋಷಿಸಿದ್ದಾರೆ.

ಕಾಂಗ್ರೆಸ್ ಮಾಜಿ ಕಾರ್ಪೊರೇಟರ್, ಬಿಲ್ಲವ ನಾಯಕಿಯೂ ಆಗಿರುವ ಪ್ರತಿಭಾ ಕುಳಾಯಿ ಅವರು ದಕ್ಷಿಣ ಕನ್ನಡ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ಹೇಳಿಕೆಯ ವಿಚಾರದಲ್ಲಿ ಗರಂ ಆಗಿದ್ದು ಫೇಸ್ಬುಕ್ ಲೈವ್ ಬಂದು ಹಿಂದು ಸಂಘಟನೆ ಸೇರುವ ಬಿಲ್ಲವ ಯುವಕರು ಮತ್ತು ಬಿಜೆಪಿ ನಾಯಕರಿಗೆ ಬಹಿರಂಗ ಸವಾಲು ಬಹಿರಂಗ ಸವಾಲು ಹಾಕಿದ್ದಾರೆ‌.  

ಸಾಯಬೇಕಿದ್ದರೆ ಸಂಘಟನೆ ಸೇರಿಕೊಳ್ಳಿ..! 

"ನನ್ನನ್ನು ಹಿಂದು ವಿರೋಧಿ ಎಂದು ಕೆಲವರು ಬಿಂಬಿಸುತ್ತಾರೆ. ಸಂಘಟನೆ ಸೇರುವ ಬಿಲ್ಲವ ಯುವಕರು ಸಾಯಬೇಕಿದ್ದರೆ ಸಂಘಟನೆ ಸೇರಿಕೊಳ್ಳಿ ಎಂದಿದ್ದೆ. ಆ ಮಾತನ್ನು ಈಗಲೂ ಹೇಳುತ್ತೇನೆ. ಎಷ್ಟೋ ಯುವಕರು ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಕಳೆದ ಬಾರಿ ಕೊಲೆಯಾದ 22 ಮಂದಿಯಲ್ಲಿ 12 ಮಂದಿ ಬಿಲ್ಲವರು. ಜೈಲಿಗೆ ಹೋದ ಬಳಿಕ ಅವರನ್ನು ಬಿಡಿಸಿಕೊಂಡು ಬರುವ ಸಾಮರ್ಥ್ಯವೂ ಬಿಜೆಪಿ ನಾಯಕರಿಗೆ ಇಲ್ಲ. ಇಂಥವರನ್ನು ನಂಬಿಕೊಂಡು ಸಂಘ ಪರಿವಾರದ ಸಂಘಟನೆ ಸೇರಿಕೊಳ್ಳುತ್ತಿದ್ದಾರಲ್ಲಾ.. ಈಗ ಒಂದಷ್ಟು ಮಂದಿಗೆ ಬುದ್ಧಿ ಬಂದಿದೆ.. ಬಿಲ್ಲವರು ಯಾರದೋ ಹೆಸರಿನಲ್ಲಿ ತಮಗೆ ಸಂಬಂಧ ಪಡದ ವಿಚಾರದಲ್ಲಿ ಹೋರಾಡಿ, ಜೈಲು ಸೇರುತ್ತಿದ್ದಾರೆ.. ಬಿಲ್ಲವರು ಇನ್ನು ಮುಂದೆ ಇಂಥ ಕೆಲಸಕ್ಕೆ ಹೋಗಬಾರದು. ತಮ್ಮ ಸಮುದಾಯದ ಘನತೆ ಉಳಿಸಿಕೊಳ್ಳಬೇಕು.. 

ಪೂಜಾರಿ ಕಾಲು ತೊಳೆದು ನೀರು ಕುಡಿಯಿವುದಕ್ಕೂ ಯೋಗ್ಯತೆ ಇಲ್ಲ..‌! 

"ಈಗ ಜಗದೀಶ ಅಧಿಕಾರಿ, ನಮ್ಮ ಪೂಜ್ಯರಾದ ಜನಾರ್ದನ ಪೂಜಾರಿ, ಕೋಟಿ ಚೆನ್ನಯರ ಬಗ್ಗೆ ಅವಹೇಳನ ಮಾಡಿದ್ದಾರೆ. ಇವರು ಪೂಜಾರಿಯವರ ಕಾಲು ಹಿಡಿಯುವುದಲ್ಲ. ಕಾಲು ತೊಳೆದು ನೀರು ಕುಡಿಯುವುದಕ್ಕೂ ಇವರಿಗೆ ಯೋಗ್ಯತೆ ಇಲ್ಲ. ಪೂಜಾರಿಯವರ ಅಂಧಭಕ್ತರಾದ ಹರಿಕೃಷ್ಣ ಬಂಟ್ವಾಳ್ ಈಗೆಲ್ಲಿದ್ದಾರೆ. ಈಗ ಅವರಿಗೆ ತಮ್ಮ ಪೋಸ್ಟ್ ದೊಡ್ಡದಾಯಿತೇ..? ಯಾಕೆ ಅಧಿಕಾರಿ ಮಾತನ್ನು ಖಂಡಿಸಿಲ್ಲ.. ಪೂಜಾರಿಯವರಿಗೆ ಅವಮಾನ ಆಗಿದ್ದಕ್ಕೆ ಕಾಂಗ್ರೆಸ್ ಬಿಟ್ಟಿದ್ದು ಎಂದಿದ್ದರಲ್ಲವೇ? ಈಗ ಯಾಕೆ ನಿಮಗೆ ಮಾತು ಹೊರಬರುತ್ತಿಲ್ಲ. ಬಿಜೆಪಿ ಜಿಲ್ಲಾಧ್ಯಕ್ಷರಾದ ವ್ಯಕ್ತಿಯೂ ಬಿಲ್ಲವನಾಗಿದ್ದು ಮದುವೆ ಕಾಗದ ಕೊಟ್ಟಾಗೆ ಅಧಿಕಾರಿಗೆ ನೋಟಿಸ್ ಕೊಟ್ಟಿದ್ದಾರೆ.  ಇವರಿಗೆ ಜಗದೀಶ ಅಧಿಕಾರಿಯನ್ನು ಪಕ್ಷದಿಂದ ಉಚ್ಚಾಟನೆ ಮಾಡಲು ಧಮ್ ಇಲ್ಲವೇ..? ಇವರಿಗೆ ಬಿಲ್ಲವರ ಓಲೈಕೆ, ಓಟು ಅಷ್ಟೇ ಬೇಕು. ಬಿಜೆಪಿಯಲ್ಲಿರುವ ನಮ್ಮ ಸಮುದಾಯದ ನಾಯಕರು‌ ಮೂಕರಾಗಿದ್ದಾರೆ. ಕಿವುಡರು, ಕುರುಡರಾಗಿದ್ದಾರೆ. ಇಂಥ ಸಂದರ್ಭದಲ್ಲಿ ಏನೂ ಮಾತನಾಡದೆ ಇರುವುದಕ್ಕಾಗಿ ಇವರಿಗೆ ಪೋಸ್ಟ್ ಕೊಟ್ಟಿದ್ದಾರೆ. ಬಾಯಿ ಬಿಚ್ಚದವರಿಗೆ ಮಾತ್ರ ಬಿಜೆಪಿಯಲ್ಲಿ ಪೋಸ್ಟ್ ಸಿಗುತ್ತದೆ... 

ಅಧಿಕಾರಿಗೆ ಮೂರು ದಿನಗಳ ಗಡುವು 

"ಜಗದೀಶ ಅಧಿಕಾರಿ ಎಲ್ಲೋ ಕೋಣೆಯಲ್ಲಿ ಕುಳಿತು ಕ್ಷಮೆ ಯಾಚಿಸುವುದಲ್ಲ. ಜಿಲ್ಲೆಯ ಯಾವುದೇ ಗರೋಡಿಗಾದ್ರೂ ಹೋಗಿ, ಅಲ್ಲಿ ತಪ್ಪು ಕಾಣಿಕೆ ಹಾಕಬೇಕು. ಬಿಲ್ಲವರಲ್ಲಿ ಬಹಿರಂಗ ಕ್ಷಮೆ ಯಾಚಿಸಬೇಕು. ಇನ್ನು ಯಾರು ಕೂಡ ಬಿಲ್ಲವರ ಬಗ್ಗೆ ಕೇವಲವಾಗಿ ಮಾತನ್ನು ಆಡಬಾರದು. ಅಧಿಕಾರಿಗೆ ಮೂರು ದಿನಗಳ ಟೈಮ್ ಕೊಡ್ತೇನೆ. ಅಧಿಕಾರಿ ಕ್ಷಮೆ ಯಾಚಿಸದಿದ್ದರೆ ನಮ್ಮ ಬಿಲ್ಲವ ಯುವಕರು ಆತನ ಮುಖಕ್ಕೆ ಮಸಿ ಬಳಿಯಲಿದ್ದಾರೆ. ಮಸಿ ಬಳಿಯುವ ಬಿಲ್ಲವನಿಗೆ ನಾನೇ ನಗದು ಒಂದು ಲಕ್ಷ ರೂಪಾಯಿ ಬಹುಮಾನ ನೀಡುತ್ತೇನೆ.." 

ಮುಂದಿನ ಚುನಾವಣೆಯಲ್ಲಿ ನೋಡಿಕೊಳ್ತೇವೆ..! 

"ಬಿಜೆಪಿ ನಾಯಕರಿಗೂ ಇದೇ ವೇಳೆ ಎಚ್ಚರಿಕೆ ನೀಡುತ್ತೇನೆ.  ಜಗದೀಶ್ ಅಧಿಕಾರಿಯನ್ನು ಕೂಡಲೇ ಪಕ್ಷದಿಂದ ತೆಗೆದು ಹಾಕಬೇಕು. ಇಲ್ಲದೇ ಇದ್ದರೆ ಈ ಜಿಲ್ಲೆಯಲ್ಲಿ  60 ಶೇ. ಮತದಾರರನ್ನು ಹೊಂದಿರುವ ಬಿಲ್ಲವರು ಮುಂದಿನ ಚುನಾವಣೆಯಲ್ಲಿ ಏನು ಮಾಡುತ್ತಾರೆಂದು ನೋಡಿಕೊಳ್ಳಿ." 

ಜನಾರ್ದನ ಪೂಜಾರಿ ಮತ್ತು ಕೋಟಿ ಚೆನ್ನಯ್ಯರ ವಿರುದ್ಧ ಜಗದೀಶ್ ಅಧಿಕಾರಿ ಕೀಳಾಗಿ ಮಾತನಾಡಿದ್ದ ಆಡಿಯೋ ವೈರಲ್ ಆಗಿತ್ತು. ಹೀಗಾಗಿ ಬಿಲ್ಲವ ಮುಖಂಡರು, ಕಾಂಗ್ರೆಸ್ ನಾಯಕರು ಜಗದೀಶ್ ಅಧಿಕಾರಿ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಹಿರಂಗ ಕ್ಷಮೆ ಯಾಚನೆಗೆ ಒತ್ತಾಯಿಸಿದ್ದಾರೆ. ಈ ನಡುವೆ, ಪ್ರತಿಭಾ ಕುಳಾಯಿ ಮಸಿ ಬಳಿಯಲು ಕರೆ ಕೊಟ್ಟಿದ್ದಾರೆ.

Read: ಬಿಲ್ಲವರು, ಕೋಟಿ ಚೆನ್ನಯರ ಬಗ್ಗೆ ಅವಹೇಳನ ; ಬಿಜೆಪಿ ಮುಖಂಡ ಜಗದೀಶ ಅಧಿಕಾರಿ ವಿರುದ್ಧ ಭುಗಿಲೆದ್ದ ಆಕ್ರೋಶ

Mangalore Prathibha Kulai to offer one lakhs to those who throw ink on Jagadish Adhikari for his haughty comments on koti chennaya. Her video has gone viral on social media.