ಪುತ್ತೂರಿಗೆ ಮೆಡಿಕಲ್ ಕಾಲೇಜು ಅನುಮೋದನೆ, ತುಳು ಭಾಷೆಗೆ ಸ್ಥಾನ ನಿರೀಕ್ಷೆ ; ಮಂಗಳೂರಿನಲ್ಲಿ ಪುತ್ತೂರು ಕಾಂಗ್ರೆಸ್ ನಿಂದ ಸಿಎಂ ಮತ್ತು ಸಚಿವರ ವಿಜಯರಥ ಸಂಭ್ರಮಾಚರಣೆ 

16-09-26 09:56 pm       HK News Desk   ಕರಾವಳಿ

ಮಂಗಳೂರಿನಲ್ಲಿ ಸೆ.18ರಂದು ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸಭೆಯ ಬಳಿಕ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರು ಕಾಂಗ್ರೆಸ್ ನಿಂದ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವರನ್ನು ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದರು.

ಪುತ್ತೂರು, ಸೆ.16 : ಮಂಗಳೂರಿನಲ್ಲಿ ಸೆ.18ರಂದು ಇದೇ ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದ್ದು, ಅದರಲ್ಲಿ ಪುತ್ತೂರು ಮೆಡಿಕಲ್ ಕಾಲೇಜು ಸ್ಥಾಪನೆಗೆ ಅನುಮೋದನೆ ಸಿಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಸಭೆಯ ಬಳಿಕ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ಪುತ್ತೂರು ಕಾಂಗ್ರೆಸ್ ನಿಂದ ಸಿಎಂ ಡಿ.ಕೆ.ಶಿವಕುಮಾರ್ ಮತ್ತು ಸಚಿವರನ್ನು ವಿಜಯರಥದಲ್ಲಿ ಕುಳ್ಳಿರಿಸಿ ಮಂಗಳೂರು ನಗರದಲ್ಲಿ ಸಂಭ್ರಮಾಚರಣೆ ನಡೆಸಲಾಗುವುದು ಎಂದು ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ ತಿಳಿಸಿದರು.

ಕರಾವಳಿಯ ಪ್ರವಾಸೋದ್ಯಮ, ಇತರ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ರಾಜ್ಯ ಸರಕಾರ ಮಂಗಳೂರಿನಲ್ಲಿ ಸಚಿವ ಸಂಪುಟ ಸಭೆಯನ್ನು ನಡೆಸುತ್ತಿದೆ. ತುಳು ಭಾಷೆಗೆ ಅಧಿಕೃತ ಸ್ಥಾನ ನೀಡುವ ನಿಟ್ಟಿನಲ್ಲಿ ಶಾಸಕ ಅಶೋಕ್ ರೈ ಅವರು ಪ್ರಥಮ ಅಧಿವೇಶನದಲ್ಲೇ ಪ್ರಸ್ತಾಪ ಮಾಡಿದ್ದು, ಈ ವಿಚಾರವೂ ಸಂಪುಟದಲ್ಲಿ ಮಂಡನೆಯಾಗಲಿದೆ. ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜಿನ ಜತೆಗೆ ಪಶು ವೈದ್ಯಕೀಯ ಕಾಲೇಜು, 7.50 ಕೋ.ರೂ. ವೆಚ್ಚದ ಆರ್.ಟಿ.ಒ ಟ್ರ್ಯಾಕ್, ಮುಂಡೂರಿನಲ್ಲಿ 9.50 ಕೋ.ರೂ. ವೆಚ್ಚದ ಕ್ರೀಡಾಂಗಣ, 15 ಕೆಪಿಎಸ್ ಶಾಲೆಗಳ ಮಂಜೂರು, 3 ಕೋ.ರೂ. ವೆಚ್ಚದಲ್ಲಿ ಬೀರಮಲೆ ಬೆಟ್ಟ ಅಭಿವೃದ್ಧಿ, ಪುತ್ತೂರು ಹಾಗೂ ಉಪ್ಪಿನಂಗಡಿ ದೇವಸ್ಥಾನಗಳ ಅಭಿವೃದ್ಧಿಗೆ ಪುತ್ತೂರು ಶಾಸಕರು ಆದ್ಯತೆಯ ನೆಲೆಯಲ್ಲಿ ಅನುದಾನ ಬಿಡುಗಡೆಗೊಳಿಸಲಿದ್ದಾರೆ. ಜತೆಗೆ ಮಾಣಿಲದಲ್ಲಿ ಅಂತಾರಾಜ್ಯ ಸಂಪರ್ಕ ಸೇತುವೆ ನಿರ್ಮಾಣಕ್ಕೆ 26 ಕೋ.ರೂ.ಗಳ ಅನುದಾನ ಬಿಡುಗಡೆಗೊಳಿಸಿದ್ದಾರೆ. ಈ ಎಲ್ಲಾ ವಿಚಾರಗಳಿಗೆ ಸಂಬಂಧಿಸಿ ಪುತ್ತೂರು ಕಾಂಗ್ರೆಸ್ ನಿಂದ ಸಂಭ್ರಮಾಚರಣೆ ನಡೆಸಲಿದ್ದೇವೆ ಎಂದವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಜತೆಗೆ ಸಚಿವ ಯು.ಟಿ.ಖಾದರ್ ಅವರು ಮಂಗಳೂರಿನಲ್ಲಿ ಕಾಂಗ್ರೆಸ್ ಪ್ರಮುಖರ ಸಭೆ ನಡೆಸಿ ಕಾಂಗ್ರೆಸ್ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಚಿವ ಸಂಪುಟ ಸಭೆಗೆ ಸಿಎಂ ಸಹಿತ ಸಂಪುಟದ ಸದಸ್ಯರನ್ನು ಸ್ವಾಗತ ಮಾಡಬೇಕು ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ಪುತ್ತೂರಿನಿಂದಲೂ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸಂಪುಟ ಸಭೆಯಲ್ಲಿ ಅನುಮೋದನೆಗೊಳ್ಳುವ ವಿಚಾರಕ್ಕೆ ಸಂಬಂಧಿಸಿ ಬಿಜೆಪಿಯು ಕ್ರೆಡಿಟ್ ತೆಗೆದುಕೊಳ್ಳುವ ಯತ್ನ ನಡೆಸುತ್ತಿದ್ದು, ಇದು ಕಾಂಗ್ರೆಸ್ ಸರಕಾರದ ಸಾಧನೆಯಾಗಿರುವುದರಿಂದ ಬಿಜೆಪಿ ಈ ಕುರಿತು ಸುಮ್ಮನಿರುವುದು ಉತ್ತಮ. ಪುತ್ತೂರಿನಲ್ಲೂ ಬಿಜೆಪಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುವ ಕಾರ್ಯ ಮಾಡುತ್ತಿದೆ ಎಂದು ಆರೋಪಿಸಿದರು. ಕಾಂಗ್ರೆಸ್ ಪ್ರಮುಖರಾದ ರವಿಪ್ರಸಾದ್ ಶೆಟ್ಟಿ ಬನ್ನೂರು, ಸೆರೂನ್ ಸಿಕ್ವೇರಾ, ಅರ್ಷದ್ ದರ್ಬೆ, ಚಂದ್ರಪ್ರಭಾ ಗೌಡ, ಸಾಹಿರ ಬಾನು ಉಪಸ್ಥಿತರಿದ್ದರು.