ಹೆದ್ದಾರಿ ಬದಿ ವ್ಯಾಪಾರಿಗಳ ವಿರುದ್ಧ ಕಾರ್ಯಾಚರಣೆಗಿಳಿದ ಹೈವೇ ಪ್ರಾಧಿಕಾರ ; ಕಲ್ಲಾಪಿನಲ್ಲಿ ಅನಧಿಕೃತ ಮೀನು ಮಾರುಕಟ್ಟೆ ತೆರವು, ಸೂಪರ್ ಬಝಾರ್ ಸಹೋದರರ ಮೊಸಳೆ ಕಣ್ಣೀರು !

06-08-26 08:09 pm       HK News Staffer   ಕರಾವಳಿ

ರಾ.ಹೆ. 66ರ ಕಲ್ಲಾಪುವಿನಲ್ಲಿ ಸುಮಾರು ಹತ್ತು ವರುಷಗಳಿಂದ ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದ ಮೀನು ಮಾರುಕಟ್ಟೆಯನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೊನೆಗೂ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.

ಉಳ್ಳಾಲ, ಆ.6 : ರಾ.ಹೆ. 66ರ ಕಲ್ಲಾಪುವಿನಲ್ಲಿ ಸುಮಾರು ಹತ್ತು ವರುಷಗಳಿಂದ ಅನಧಿಕೃತವಾಗಿ ವಹಿವಾಟು ನಡೆಸುತ್ತಿದ್ದ ಮೀನು ಮಾರುಕಟ್ಟೆಯನ್ನ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕೊನೆಗೂ ಕಾರ್ಯಾಚರಣೆ ನಡೆಸಿ ತೆರವುಗೊಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 66 ರ ಕಲ್ಲಾಪು ಎಂಬಲ್ಲಿ ಕಳೆದ ಹತ್ತು ವರ್ಷಗಳಿಂದ ಮುಸ್ತಾಫ ಎಂಬವರು ರಸ್ತೆ ಬದಿಯಲ್ಲಿ ಅನಧಿಕೃತ ಮೀನು ಮಾರುಕಟ್ಟೆಯನ್ನ ತೆರೆದು ವಹಿವಾಟು ನಡೆಸುತ್ತಿದ್ದರು. ಸ್ಥಳೀಯ ಸೂಪರ್ ಬಝಾರ್ ಒಂದರ ಮಾಲೀಕನ ಸಹೋದರ ಹೆದ್ದಾರಿ ಅಂಚಿನ ಪ್ರದೇಶವನ್ನ ತನ್ನ ಜಾಗವೆಂದು ಹೇಳಿ ಲಕ್ಷಾಂತರ ರೂ. ಬಾಡಿಗೆ ಪಡೆದು ಅನಧಿಕೃತ ಮಾರುಕಟ್ಟೆ ನಡೆಸಲು ಅವಕಾಶ ನೀಡಿದ್ದ. ಇದೀಗ ಹೆದ್ದಾರಿ ಸರ್ವಿಸ್ ರಸ್ತೆ ನಿರ್ಮಾಣದ ಕಾರಣವೊಡ್ಡಿ ಫೀಲ್ಡಿಗಿಳಿದ ಹೆದ್ದಾರಿ ಪ್ರಾಧಿಕಾರವು ದಶಕಗಳಿಂದ‌ ಕಲ್ಲಾಪಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಅನಧಿಕೃತ ಮಾರುಕಟ್ಟೆಯನ್ನ ತೆರವುಗೊಳಿಸಿದೆ. 

ಗುರುವಾರ ಬೆಳಗ್ಗೆ ಕಲ್ಲಾಪುವಿಗೆ ಜೆಸಿಬಿ ಯಂತ್ರಗಳೊಂದಿಗೆ ಬಂದ ಹೆದ್ದಾರಿ ಗುತ್ತಿಗೆ ಕಾಮಗಾರಿಯ ತಂಡವು ಮಾರುಕಟ್ಟೆ ತೆರವಿಗೆ ಮುಂದಾಗಿದ್ದು, ಈ ವೇಳೆ ಮೀನು ಮಾರಾಟಗಾರರು ಹಾಗೂ ಸೂಪರ್ ಬಝಾರ್ ಸಹೋದರರು ಅವರಲ್ಲಿ ನಕ್ರಾ ಮಾಡಿದ್ದಾರೆ. ಸ್ಥಳಕ್ಕೆ ಹೆದ್ದಾರಿ ಪ್ರಾಧಿಕಾರದ ಯೋಜನಾಧಿಕಾರಿ ಅಬ್ದುಲ್ಲ ಜಾವೇದ್ ಅಜ್ಮಿ ಅವರು ಖುದ್ದು ಭೇಟಿ ನೀಡಿದ್ದು, ತಕ್ಷಣವೇ ಮಾರುಕಟ್ಟೆ ತೆರವಿಗೆ ಸಿಬ್ಬಂದಿಗಳಲ್ಲಿ ಸೂಚಿಸಿದ್ದಾರೆ. ಈ ವೇಳೆ ಸುಪರ್ ಬಝಾರ್ ಸೋದರರು ಮಧ್ಯ ಪ್ರವೇಶಿಸಿದ್ದು ಉತ್ತರ ಭಾರತ ಮೂಲದ ಅಧಿಕಾರಿ ಜಾವೆದ್ ಅಜ್ಮಿಯನ್ನುದ್ಧೇಶಿಸಿ ವೋ ಲೋಗ್ ಗರೀಬ್ ಹೈ ಸಾಬ್ ಅಂತ ಹೇಳಿ ಮೀನು ಮಾರಾಟಗಾರರ ಪರ ಮೊಸಳೆ ಕಣ್ಣೀರು ಸುರಿಸಿ ಕಾರ್ಯಾಚರಣೆ ತಡೆಯಲು ಯತ್ನಿಸಿದ್ದಲ್ಲದೆ, ಸಚಿವರೊಬ್ಬರಿಗೆ ಕರೆ ಮಾಡಿ ಅಧಿಕಾರಿಗೆ ಮೊಬೈಲ್ ಕೊಟ್ಟು ಮಾತನಾಡಿಸಿದ್ದಾರೆ. 

ಸಚಿವರ ಮಾತಿಗೂ ವಿಚಲಿತರಾಗದ ಹೆದ್ದಾರಿ ಯೋಜನಾಧಿಕಾರಿ ತಾವು ಅಭಿವೃದ್ಧಿ ಕಾಮಗಾರಿಗೆ ಸಹಕರಿಸಬೇಕೆಂದು ಸಚಿವರಿಗೆ ಫೋನಲ್ಲೇ ಮನವರಿಸಿದ್ದಾರೆ. ಸೂಪರ್ ಬಝಾರ್ ಬ್ರದರ್ಸ್ ಗಳನ್ನ ಉದ್ಧೇಶಿಸಿ ಮಾತನಾಡಿದ ಜಾವೆದ್ ಅಜ್ಮಿಯವರು ಅನಧಿಕೃತ ಮೀನು ಮಾರುಕಟ್ಟೆ ತೆರವುಗೊಳಿಸಲು ಈಗಾಗಲೇ ನಿಮಗೆ ನಾಲ್ಕು ತಿಂಗಳುಗಳಿಂದ ನೋಟೀಸು ನೀಡಲಾಗಿದೆ. ಹಾಗಾಗಿ ನಿಮ್ಮ‌ ವಿರುದ್ಧ ದಂಡ ಹಾಕುವ ಪ್ರಕರಣ ಇದಾಗಿದೆಯೆಂದು ಎಚ್ಚರಿಕೆ ನೀಡಿದ್ದು, ಇಂದೇ ಮಾರುಕಟ್ಟೆ ತೆರವುಗೊಳಿಸುವಂತೆ ಆದೇಶಿಸಿದ ಪರಿಣಾಮ ಬೇರೆ ದಾರಿ ಕಾಣದ ಸೂಪರ್ ಬ್ರದರ್ಸ್ ಗಳು ತಾವಾಗಿಯೇ ಮಾರುಕಟ್ಟೆಯನ್ನ ತೆರವುಗೊಳಿಸಿದ್ದಾರೆ.

ಹೆದ್ದಾರಿ ಸಂಚಾರಕ್ಕೆ ಕಂಟಕವಾಗಿದ್ದ ಮಾರುಕಟ್ಟೆ 

ಆರಂಭದಲ್ಲಿ ಕಲ್ಲಾಪು ಹೆದ್ದಾರಿ ಬದಿಯಲ್ಲಿ ಟೆಂಪೋ ಒಂದರಲ್ಲಿ ಮೀನು ಮಾರಾಟ ನಡೆಸುತ್ತಿದ್ದ ಮುಸ್ತಾಫ ಎಂಬವರು ಸ್ಥಳೀಯ ಸುಪರ್ ಬಝಾರ್ ಸಹೋದರನಿಗೆ ಬಾಡಿಗೆ ಕೊಟ್ಟು ಹೆದ್ದಾರಿ ಬದಿಯಲ್ಲೇ ಶೀಟ್ ಅಳವಡಿಸಿ ಮೀನು ಮಾರುಕಟ್ಟೆಯನ್ನೇ ತೆರೆದು ದಿನಕ್ಕೆ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುತ್ತಿದ್ದ. ಮೀನು ಖರೀದಿಗೆ ಬರುವ ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನ ಪಾರ್ಕಿಂಗ್ ನಡೆಸುತ್ತಿದ್ದರಿಂದ ಹೆದ್ದಾರಿಯಲ್ಲಿ ನಿತ್ಯವೂ ಟ್ರಾಫಿಕ್ ತೊಡಕು ಉಂಟಾಗುತ್ತಿತ್ತು. ಈ ಬಗ್ಗೆ ಹೆಡ್ ಲೈನ್ ಕರ್ನಾಟಕವು ವರದಿ ಪ್ರಕಟಿಸಿ ಹೆದ್ದಾರಿ ಅಧಿಕಾರಿಗಳನ್ನ ಜಾಗೃತಗೊಳಿಸುವ ಕಾರ್ಯ ನಡೆಸಿತ್ತು.