Mangalore Rain: ಭಾರೀ ಮಳೆಯ ನಡುವೆ ಬಂಟ್ವಾಳದಲ್ಲಿ ವ್ಯಕ್ತಿ ನಾಪತ್ತೆ ; ತೋಡಿಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ, ಎನ್ ಡಿಆರ್ ಎಫ್ ತಂಡದಿಂದ ಹುಡುಕಾಟ

02-08-26 09:42 pm       HK News Desk   ಕರಾವಳಿ

ಭಾರೀ ಮಳೆಯ ನಡುವೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ವ್ಯಕ್ತಿಯೊಬ್ಬರು ನೀರು ಹರಿಯುವ ತೋಡಿಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಇವರ ಪತ್ತೆಗಾಗಿ ಎನ್ ಡಿಆರ್ ಎಫ್ ತಂಡ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.

ಬಂಟ್ವಾಳ, ಆಗಸ್ಟ್ 2: ಭಾರೀ ಮಳೆಯ ನಡುವೆ ಬಂಟ್ವಾಳ ತಾಲೂಕಿನ ರಾಯಿ ಎಂಬಲ್ಲಿ ವ್ಯಕ್ತಿಯೊಬ್ಬರು ನೀರು ಹರಿಯುವ ತೋಡಿಗೆ ಬಿದ್ದು ಕೊಚ್ಚಿ ಹೋಗಿರುವ ಶಂಕೆ ವ್ಯಕ್ತವಾಗಿದ್ದು ಇವರ ಪತ್ತೆಗಾಗಿ ಎನ್ ಡಿಆರ್ ಎಫ್ ತಂಡ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ. 

ರಾಯಿ ಗ್ರಾಮದ ಪಾಂಚಕೋಡಿ ನಿವಾಸಿ ಜೋಸೆಫ್ ಪಿಂಟೋ ಎಂಬವರ ಪುತ್ರ ಜೀವನ್ ಪಿಂಟೋ (48) ಆಗಸ್ಟ್ 1ರ ರಾತ್ರಿ ಮನೆ ಬಳಿಯ ತೋಡಿನಲ್ಲಿ ಬಿದ್ದು ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಅವರ ಚಪ್ಪಲಿ ಮತ್ತು ಟಾರ್ಚ್ ಶನಿವಾರ ರಾತ್ರಿ ಮನೆ ಸಮೀಪ ತುಂಬಿ ಹರಿಯುತ್ತಿರುವ ತೋಡಿನ ಬಳಿ ಪತ್ತೆಯಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. 

ವಿದೇಶದಲ್ಲಿದ್ದ ಜೀವನ್ ಪಿಂಟೊ ಕೆಲವು ತಿಂಗಳ ಹಿಂದೆಯಷ್ಟೇ ಊರಿಗೆ ಬಂದಿದ್ದು, ಇದೇ ತಿಂಗಳು ಮತ್ತೆ ವಿದೇಶಕ್ಕೆ ಮರಳುವವರಿದ್ದರು. ತಮ್ಮ ಮನೆಯಿಂದ ಸ್ವಲ್ಪವೇ ದೂರದಲ್ಲಿರುವ ಮಾವನ ಮನೆಗೆ ಆಗಸ್ಟ್ 1ರ ರಾತ್ರಿ ಸುಮಾರು 7.30ರ ವೇಳೆ ನಡೆದುಕೊಂಡು ಹೊರಟಿದ್ದರು. ಧಾರಾಕಾರ ಮಳೆ ಹಾಗೂ ಕತ್ತಲು ಇರುವ ಹಿನ್ನೆಲೆಯಲ್ಲಿ ಟಾರ್ಚ್ ಹಿಡಿದುಕೊಂಡು ತೋಡಿನ ಮೇಲೆ ಹಾಕಿರುವ ಮರದ ಸೇತುವೆಯಲ್ಲಿ ನಡೆದು ತೆರಳಿದ್ದರು. ಆದರೆ ಅವರು ಎಷ್ಟು ಹೊತ್ತಾದರೂ ತಲುಪಿರದ ಹಿನ್ನೆಲೆ ಹುಡುಕಾಟ ನಡೆಸಿದಾಗ, ಅವರ ಚಪ್ಪಲಿ ಮತ್ತು ಟಾರ್ಚ್ ತೋಡಿನಲ್ಲಿ ಪತ್ತೆಯಾಗಿದೆ. 

ತೋಡಿನಲ್ಲಿ ಕಾಲು ಜಾರಿ ಬಿದ್ದಿರಬಹುದೇ ಎಂಬ ಶಂಕೆಯಿಂದ ಹುಡುಕಾಟ ಆರಂಭಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದು, ಸ್ಥಳೀಯರು ಸೇರಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನ ವರೆಗೂ ಹುಡುಕಾಟ ನಡೆಸಿದ್ದಾರೆ. ಭಾನುವಾರ ದಿನವಿಡೀ ಎನ್ ಡಿಆರ್ ಎಫ್ ತಂಡದ ಸದಸ್ಯರು ಹುಡುಕಾಟ ನಡೆಸಿದ್ದು ಸಂಜೆಯ ವರೆಗೂ ಜೀವನ್ ಪಿಂಟೋ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.