ಉಳ್ಳಾಲ ತೀರಕ್ಕೆ ಅಪ್ಪಳಿಸಿದ ಬೂತಾಯಿ ಮೀನುಗಳ ರಾಶಿ ! ಪ್ಲಾಸ್ಟಿಕ್, ಗೋಣಿ ಚೀಲಗಳಲ್ಲಿ ಬಾಚಿ ತುಂಬಿಸಿಕೊಂಡ ಸ್ಥಳೀಯರು

17-07-26 07:22 pm       HK News Staffer   ಕರಾವಳಿ

ಉಳ್ಳಾಲ ಸಮುದ್ರ ತೀರಕ್ಕೆ ರಾಶಿ ರಾಶಿ ಬೂತಾಯಿ ಮೀನುಗಳು ಬಂದು ಅಪ್ಪಳಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಉಳ್ಳಾಲ, ಜು.17: ಉಳ್ಳಾಲ ಸಮುದ್ರ ತೀರಕ್ಕೆ ರಾಶಿ ರಾಶಿ ಬೂತಾಯಿ ಮೀನುಗಳು ಬಂದು ಅಪ್ಪಳಿಸಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.

ಶುಕ್ರವಾರ ಬೆಳಗ್ಗೆ 11.30ರ ವೇಳೆಗೆ ಉಳ್ಳಾಲ ಸಮುದ್ರ ಕಿನಾರೆಯಲ್ಲಿ ರಾಶಿ ರಾಶಿ ಬೂತಾಯಿ ಮೀನುಗಳು ದಡಕ್ಕೆ ಅಪ್ಪಳಿಸಿವೆ. ಸುಮಾರು ಅರ್ಧ ತಾಸಿನ ವರೆಗೂ ಮೀನುಗಳು ತೀರಕ್ಕೆ ಅಪ್ಪಳಿಸಿದ್ದು ಸ್ಥಳೀಯರು ಹಾಗೂ ಬೀಚಲ್ಲಿ ಪಹರೆ ಕಾಯುತ್ತಿದ್ದ ಗೃಹ ರಕ್ಷಕ ಹಾಗೂ ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳು ಮೀನುಗಳನ್ನ ಪ್ಲಾಸ್ಟಿಕ್ ಲಕೋಟೆ, ಗೋಣಿ ಚೀಲಗಳಲ್ಲಿ ತುಂಬಿಸಿದ್ದಾರೆ. ಇನ್ನು ಕೆಲವರು ತೀರದಲ್ಲಿ ಸಿಕ್ಕ ಬೂತಾಯಿ ಮೀನುಗಳನ್ನ ಸಂಗ್ರಹಿಸಿ ಮಾರಾಟ ನಡೆಸಿ ಸಾವಿರಾರು ರೂಪಾಯಿಗಳನ್ನ ಸಂಪಾದಿಸಿದ್ದಾರೆ.

ಸಮುದ್ರ ತೀರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಮಂಜೇಶ್ವರದ ಯಾಂತ್ರೀಕೃತ ನಾಡ ದೋಣಿಗಳು ವೇಗದಲ್ಲಿ ಹಾದು ಹೋದ ಪರಿಣಾಮ ಮೋಟಾರು ಯಂತ್ರದ ಸದ್ದಿಗೆ ಬೂತಾಯಿ ಮೀನುಗಳ ಹಿಂಡು ಏಕಾಏಕಿ ದಡಕ್ಕೆ ಅಪ್ಪಳಿಸಿರಬಹುದು ಎಂದು ಸ್ಥಳೀಯ ಮೀನುಗಾರರೊಬ್ಬರು ಹೇಳಿದ್ದಾರೆ. 

ಆದರೆ ಮಳೆಗಾಲದಲ್ಲಿ ಈ ರೀತಿ ಬೂತಾಯಿ ಮೀನುಗಳ ರಾಶಿ ಬಂದು ಬೀಳುತ್ತಿರುವುದು ಹಿಂದೆಯೂ ನಡೆದಿತ್ತು. ಪಣಂಬೂರು, ಮಲ್ಪೆಯಲ್ಲಿ ಮೀನುಗಳು ರಾಶಿ ರಾಶಿಯಾಗಿ ಬಂದು ದಡಕ್ಕೆ ಅಪ್ಪಳಿಸಿದ್ದವು. ಮೀನುಗಳು ಹಿಂಡಾಗಿ ಹೋಗುವ ಸಂದರ್ಭದಲ್ಲಿ ತೀರದತ್ತ ಬಂದರೆ ಅಬ್ಬರದ ಅಲೆಗಳಿಗೆ ಸಿಲುಕಿ ಮೇಲಕ್ಕೆ ಎಸೆಯಲ್ಪಡುತ್ತವೆ.