ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ ; ಮೂರು ದಿನ ಮಳೆ ಮುನ್ಸೂಚನೆ, ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಇಳೆಗೆ ಸ್ವಲ್ಪ ತಂಪು !

28-03-26 09:08 pm       HK News Staffer   ಕರಾವಳಿ

ಕರಾವಳಿಯ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಕೆಲವು ಕಡೆ ಸಿಡಿಲು ಮಿಂಚು ಸಹಿತ ಅರ್ಧ ಗಂಟೆ ಮಳೆಯಾಗಿದ್ದು ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಇಳೆಗೆ ಬೇಸಗೆ ಮಳೆ ಸ್ವಲ್ಪ ತಂಪು ನೀಡಿದೆ.

ಮಂಗಳೂರು, ಮಾರ್ಚ್ 28: ಕರಾವಳಿಯ ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಯ ಹಲವೆಡೆ ಶನಿವಾರ ಸಂಜೆ ಉತ್ತಮ ಮಳೆಯಾಗಿದೆ. ಕೆಲವು ಕಡೆ ಸಿಡಿಲು ಮಿಂಚು ಸಹಿತ ಅರ್ಧ ಗಂಟೆ ಮಳೆಯಾಗಿದ್ದು ತೀವ್ರ ಬಿಸಿಲಿನಿಂದ ಕಂಗೆಟ್ಟಿದ್ದ ಇಳೆಗೆ ಬೇಸಗೆ ಮಳೆ ಸ್ವಲ್ಪ ತಂಪು ನೀಡಿದೆ. 

ಮಂಗಳೂರಿನಲ್ಲಿ ಜಿಟಿ ಜಿಟಿ ಮಳೆ ಮತ್ತು ಸಿಡಿಲು ಮಿಂಚು ಜೋರಾಗಿಯೇ ಇತ್ತು. ಮಂಜೇಶ್ವರ ಭಾಗದಲ್ಲಿ ಸಂಜೆ ಆರು ಗಂಟೆ ವೇಳೆಗೆ ಅರ್ಧ ಗಂಟೆ ಉತ್ತಮ ಮಳೆಯಾಗಿದ್ದರೆ, ಪುತ್ತೂರು, ಸುಳ್ಯದಲ್ಲಿ ಸಾಧಾರಣ ಮಳೆಯಾಗಿದೆ. ಉಪ್ಪಿನಂಗಡಿ ಭಾಗದಲ್ಲಿ ಉತ್ತಮ ಮಳೆಯಾಗಿದೆ. ಮೂಡುಬಿದ್ರೆ ಭಾಗದಲ್ಲಿ ಮೋಡದ ವಾತಾವರಣ ಮತ್ತು ಸಿಡಿಲು ಮಿಂಚಿನ ಆರ್ಭಟ ಮಾತ್ರ ಇತ್ತು. ಮಳೆ ಹನಿ ಬೀಳಲಿಲ್ಲ. 

ಇದೇ ವೇಳೆ, ಹವಾಮಾನ ಇಲಾಖೆ ಕರಾವಳಿ ಜಿಲ್ಲೆಗಳು ಮತ್ತು ಚಿಕ್ಕಮಗಳೂರು, ಹಾಸನ, ಕೊಡಗು ಭಾಗದಲ್ಲಿ ಮೂರು ದಿನಗಳ ಕಾಲ ಆಲಿಕಲ್ಲು ಸಹಿತ ಮಳೆಯಾಗುವ ಮುನ್ಸೂಚನೆ ನೀಡಿದೆ. ಶನಿವಾರ ಸಂಜೆ ವೇಳೆಗೆ ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಯ ಕೆಲವು ಕಡೆ ಭಾರೀ ಮಳೆಯಾಗಿದೆ.  

ಮಾರ್ಚ್ ತಿಂಗಳ ನಡುವಲ್ಲಿ ಭಾರೀ ಬಿಸಿಲಿನ ಕಾರಣ ಬೇಸಗೆಯಲ್ಲಿ ಮಳೆಯಾಗುವುದು ವಾಡಿಕೆ. ವಿಪರೀತ ಬಿಸಿಲಿನ ಕಾರಣ ಮಳೆಯಾಗಿದ್ದು ಬಿಸಿಲ ಬೇಗೆಗೆ ಕಂಗೆಟ್ಟಿದ್ದ ಜನರು, ಇತರೇ ಜೀವಿಗಳಿಗೆ ಸ್ವಲ್ಪ ತಂಪು ನೀಡಿದೆ. ಕರಾವಳಿ ಭಾಗದಲ್ಲಿ ಹಗಲಿನ ವೇಳೆ 39-40 ಡಿಗ್ರಿ ತಾಪಮಾನವಿದ್ದು ಭಾರೀ ಸೆಕೆಯಿಂದಾಗಿ ಪರಿತಾಪ ಪಡುವಂತಾಗಿದೆ.