ಹರ್ಮುಜ್ ಜಲಸಂಧಿ ಬಂದ್ ; ಭಾರತದ 22 ಹಡಗು ಲಂಗರು, 20 ದಿನಗಳಿಂದ ಸಿಕ್ಕಿಬಿದ್ದಿದ್ದಾರೆ ಮಂಗಳೂರಿನ ನಾವಿಕ ! 

24-03-26 09:24 am       HK News Staffer   ಕರಾವಳಿ

ಗಲ್ಫ್ ಯುದ್ಧ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಸಿಕ್ಕಿಬಿದ್ದಿವೆ. ಈ ಪೈಕಿ 22 ಭಾರತದ್ದೇ ಹಡಗು ಇದೆಯೆಂಬ ಮಾಹಿತಿ ಇದೆ. ಎಲ್ ಪಿಜಿ ಸಾಗಿಸುತ್ತಿರುವ ಒಂದು ಹಡಗಿನಲ್ಲಿ ಮಂಗಳೂರು ಮೂಲದ ನಾವಿಕರೊಬ್ಬರಿದ್ದು 20 ದಿನಗಳಿಂದ ಸಿಕ್ಕಿಬಿದ್ದು ಒದ್ದಾಡುತ್ತಿರುವುದಾಗಿ ತಿಳಿಸಿದ್ದಾರೆ. 

ಮಂಗಳೂರು, ಮಾರ್ಚ್ 24: ಗಲ್ಫ್ ಯುದ್ಧ ಪರಿಣಾಮ ಹೊರ್ಮುಜ್ ಜಲಸಂಧಿಯಲ್ಲಿ ನೂರಾರು ಹಡಗುಗಳು ಸಿಕ್ಕಿಬಿದ್ದಿವೆ. ಈ ಪೈಕಿ 22 ಭಾರತದ್ದೇ ಹಡಗು ಇದೆಯೆಂಬ ಮಾಹಿತಿ ಇದೆ. ಎಲ್ ಪಿಜಿ ಸಾಗಿಸುತ್ತಿರುವ ಒಂದು ಹಡಗಿನಲ್ಲಿ ಮಂಗಳೂರು ಮೂಲದ ನಾವಿಕರೊಬ್ಬರಿದ್ದು 20 ದಿನಗಳಿಂದ ಸಿಕ್ಕಿಬಿದ್ದು ಒದ್ದಾಡುತ್ತಿರುವುದಾಗಿ ತಿಳಿಸಿದ್ದಾರೆ. 

ನಾವು ಅಪಾಯದ ನಡುವೆ ಇದ್ದೇವೆ. ನಮ್ಮನ್ನು ಕರೆತರಲು ಭಾರತೀಯ ನೌಕಾಪಡೆ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಿದೆ. ಆದರೆ ಇಲ್ಲಿನ ಪರಿಸ್ಥಿತಿ ತೀರಾ ಹದಗೆಡುತ್ತಿದೆ. ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನಮ್ಮ ಹಡಗಿನ ಪಕ್ಕದಿಂದಲೇ ಹಾರುತ್ತಿರುವುದನ್ನು ನೋಡುತ್ತಿದ್ದೇವೆ. ನನ್ನ ಕಣ್ಣೆದುರೇ ಒಂದು ಹಡಗು ಕ್ಷಿಪಣಿಯಿಂದ ಬ್ಲಾಸ್ಟ್ ಆಗಿರುವುದನ್ನು ಸಮೀಪದಿಂದ ಕಂಡಿದ್ದೇನೆ ಎನ್ನುತ್ತಾರೆ.

20ಕ್ಕೂ ಹೆಚ್ಚು ಬಾರಿ ಈ ಮಾರ್ಗದಲ್ಲಿ ಪ್ರಯಾಣಿಸಿದ್ದೇನೆ, ಆದರೆ ಇಷ್ಟು ಕಷ್ಟದಲ್ಲಿ ಸಿಲುಕಿರುವುದು ಇದೇ ಮೊದಲ ಬಾರಿ ಎಂದು ಹಡಗಿನ ಪರಿಸ್ಥಿತಿಯನ್ನು ಮೆರೀನ್ ಇಂಜಿನಿಯರ್ ಆಗಿರುವ ಆ ನಾವಿಕ ವಿವರಿಸುತ್ತಾರೆ. 2010ರಿಂದ ವ್ಯಾಪಾರಿ ನೌಕೆಯಲ್ಲಿ ಕೆಲಸ ಮಾಡುತ್ತಿದ್ದು ಭದ್ರತಾ ಕಾರಣಗಳಿಂದ ತಮ್ಮ ಹೆಸರು ಬಹಿರಂಗಪಡಿಸಬಾರದೆಂದು ಮಾಧ್ಯಮ ಸಂಸ್ಥೆಗೆ ಮನವಿ ಮಾಡಿದ್ದಾರೆ.

ಮಂಗಳೂರಿನ ನಮ್ಮ ಮನೆಗಳಲ್ಲಿ ಕುಟುಂಬದವರು ಆತಂಕದಲ್ಲಿದ್ದಾರೆ. ಕಳೆದ ಆರು ತಿಂಗಳಿಂದ ಮನೆಗೆ ಬರಲಾಗಿಲ್ಲ. ಅವರು ನನ್ನ ಬರುವಿಕೆಗೆ ಕಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಭಯಾನಕ ಅನುಭವವನ್ನು ವಿವರಿಸಿದ ಅವರು, ನಾವು ಮಧ್ಯಪೂರ್ವದ ಒಂದು ಬಂದರಿನಲ್ಲಿ ಸರಕು ತುಂಬುತ್ತಿದ್ದಾಗ, ನಮ್ಮ ಹಡಗಿನಿಂದ ಸುಮಾರು 200 ಮೀಟರ್ ದೂರದಲ್ಲಿ ಕ್ಷಿಪಣಿ ಮತ್ತು ಡ್ರೋನ್‌ಗಳು ಬೀಳುತ್ತಿದ್ದವು‌. ಆದರೂ ನಾವು ನಮ್ಮ ಕರ್ತವ್ಯವೆಂದು ಸರಕು ತುಂಬುವ ಕಾರ್ಯ ಮುಂದುವರಿಸಿದ್ದೇವೆ. ನಂತರ ಹಾರ್ಮುಜ್‌ಗೆ ಎರಡು ದಿನಗಳ ಪ್ರಯಾಣದ ಬಳಿಕ, ನಮಗೆ ಲಂಗರು ಹಾಕಲು ಸೂಚಿಸಲಾಗಿದೆ ಎಂದು ಹೇಳಿದರು.

ಪರಸ್ಪರ ದಾಳಿ ಕಾರಣ ಪರಿಸ್ಥಿತಿ ಹದಗೆಟ್ಟಿದ್ದು, ಹಡಗನ್ನು ಲಂಗರು ಹಾಕಲು ಸೂಚಿಸಲಾಗಿದೆ. ಭಾರತೀಯ ನೌಕಾಪಡೆ ಹತ್ತಿರದಿಂದ ಪರಿಸ್ಥಿತಿಯನ್ನು ಗಮನಿಸುತ್ತಿದ್ದು, ಹಡಗುಗಳನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಲು ರಾಜತಾಂತ್ರಿಕ ಮಟ್ಟದಲ್ಲಿ ಮಾತುಕತೆ ನಡೆಸುತ್ತಿವೆ. ಆಹಾರ, ಕುಡಿಯುವ ನೀರು ಮತ್ತು ಇಂಧನ ಸೇರಿದಂತೆ ಅಗತ್ಯ ಸಾಮಗ್ರಿಗಳು ಒಂದು ತಿಂಗಳಿಗೆ ಬೇಕಾಗುವಷ್ಟು ಸಂಗ್ರಹವಿದೆ ಎಂದವರು ಹೇಳಿದ್ದಾರೆ.