ವಿನಾಯಕ ಬಾಳಿಗಾ‌ ಕೊಲೆಗೆ ಹತ್ತು ವರ್ಷ ; ವೆಂಕಟರಮಣ ದೇವಸ್ಥಾನದ ದುಡ್ಡು ತಿಂದವರ ವಿರುದ್ಧ ಪ್ರತಿಭಟಿಸಿದ್ದು ಬಾಳಿಗ ಅಪರಾಧವೇ..? ಪ್ರಶ್ನೆ ಮಾಡಿದ್ದಕ್ಕೆ ಕೊಲೆ ಮಾಡಿದ್ದೀರಾ..?

23-03-26 01:11 pm       HK News Staffer   ಕರಾವಳಿ

"ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಓರ್ವ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಹುಟ್ಟಾ ಕಾಂಗ್ರೆಸ್ಸಿಗನಾದ ನಾನು ಬೀದಿಗೆ ಬಂದಿದ್ದೇನೆ. ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಬಿ.ಕೆ ಹರಿಪ್ರಸಾದ್ ಯಾಕೆ ಮಾತಾಡಲ್ಲ ಎಂದು ಆರ್ಎಸ್ಎಸ್ ನಾಯಕರು, ಬಿಜೆಪಿ ನಾಯಕರು ನನ್ನನ್ನು ಯಾವಾಗಲೂ ಪ್ರಶ್ನಿಸುತ್ತಿರುತ್ತಾರೆ.

ಮಂಗಳೂರು, ಮಾರ್ಚ್ 22: "ನನ್ನ ಜೀವನದಲ್ಲಿ ಇಂತಹ ದಿನ ಬರುತ್ತದೆ ಎಂದು ನಾನು ಕನಸಿನಲ್ಲಿಯೂ ಯೋಚಿಸಿರಲಿಲ್ಲ. ಓರ್ವ ಬಿಜೆಪಿ ಕಾರ್ಯಕರ್ತನ ಸಾವಿಗೆ ನ್ಯಾಯ ಕೇಳಿ ಹುಟ್ಟಾ ಕಾಂಗ್ರೆಸ್ಸಿಗನಾದ ನಾನು ಬೀದಿಗೆ ಬಂದಿದ್ದೇನೆ. ಹಿಂದೂಗಳ ಮೇಲೆ ದೌರ್ಜನ್ಯವಾದಾಗ ಬಿ.ಕೆ ಹರಿಪ್ರಸಾದ್ ಯಾಕೆ ಮಾತಾಡಲ್ಲ ಎಂದು ಆರ್ಎಸ್ಎಸ್ ನಾಯಕರು, ಬಿಜೆಪಿ ನಾಯಕರು ನನ್ನನ್ನು ಯಾವಾಗಲೂ ಪ್ರಶ್ನಿಸುತ್ತಿರುತ್ತಾರೆ. ಇಂದು ಮಂಗಳೂರಿನ ನೆಲದಲ್ಲಿ ಹಿಂದುತ್ವದ, ಬಿಜೆಪಿಯ ಪ್ರಾಮಾಣಿಕ ಕಾರ್ಯಕರ್ತನ ಕೊಲೆಗೆ ನ್ಯಾಯ ಕೇಳುತ್ತಿದ್ದೇನೆ. ಆರ್ಎಸ್ಎಸ್, ಬಿಜೆಪಿಯವರು ನಮ್ಮ ಪ್ರಶ್ನೆಗಳಿಗೆ ಉತ್ತರ ಕೊಡಬೇಕು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ಹೇಳಿದ್ದಾರೆ. ‌

ಆರ್.ಟಿ.ಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯಾಗಿ 10 ವರುಷ ಸಂದ ನೆನಪಿನಲ್ಲಿ ವೆಂಕಟರಮಣ ದೇವಳದಿಂದ ಬಾಳಿಗಾ ಮನೆಯವರೆಗೆ ನಡೆದ ಮೆರವಣಿಗೆ, ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು. ಬಿಜೆಪಿ ಕಾರ್ಯಕರ್ತ ವಿನಾಯಕ ಬಾಳಿಗರ ಪರಿಚಯ ನನಗಿಲ್ಲ. ವಿನಾಯಕ ಬಾಳಿಗ ಮಾಹಿತಿ ಹಕ್ಕು ಕಾರ್ಯಕರ್ತರಾಗಿದ್ದರು. ದೇವಸ್ಥಾನದ ಹಣದಲ್ಲಿ ಆರೆಸ್ಸೆಸ್, ನಮೋ ಬ್ರಿಗೇಡ್ ನಾಯಕರು ನಡೆಸಿದ ಭ್ರಷ್ಟಾಚಾರವನ್ನು ಬಯಲಿಗೆಳೆದಿದ್ದಕ್ಕಾಗಿ ಅವರನ್ನು ಅಮಾನುಷವಾಗಿ ಕೊಲೆ ಮಾಡಲಾಗಿತ್ತು. 2016 ಮಾರ್ಚ್ 21ರಂದು ಬಿಜೆಪಿ ಬೂತ್ ಮಟ್ಟದ ಕಾರ್ಯಕರ್ತ ಬಾಳಿಗ ಅವರನ್ನು ಅವರ ಮನೆಯ ಮುಂದೆಯೇ ಕೊಚ್ಚಿ ಕೊಲೆಗೈದ ಪ್ರಕರಣದಲ್ಲಿ ಮೊದಲ ಆರೋಪಿ ನಮೋ ಬ್ರಿಗೇಡ್ ಅಧ್ಯಕ್ಷ ನರೇಶ್ ಶೆಣೈಯಾಗಿದ್ದು ಇಂತಹ ವ್ಯಕ್ತಿಯನ್ನು ಬಿಜೆಪಿ ಶಾಸಕರು ಜೊತೆಗೆ ನಿಂತು ರಕ್ಷಣೆ ಮಾಡುತ್ತಿದ್ದಾರೆ ಎಂದು ಹೇಳಿದರು. ‌

  

ಇಷ್ಟಕ್ಕೂ ವಿನಾಯಕ ಬಾಳಿಗ ಮಾಡಿದ ಅಪರಾಧವೇನು? ಲವ್ ಜಿಹಾದ್ ಮಾಡಿದ್ರಾ? ಗೋ ಸಾಗಾಟ ಮಾಡಿದ್ದಾರಾ? ಯಾವ ಹಿಂದೂ ವಿರೋಧಿ ಕೆಲಸ ಮಾಡಿದ್ರು ಅಂತ ನೀವು ವಿನಾಯಕ ಬಾಳಿಗರನ್ನು ಕೊಲೆ ಮಾಡಿದ್ರಿ ? ನಮಗೆ ಉತ್ತರ ಬೇಕಾಗಿದೆ. ತಾನು ನಂಬಿರುವ ವೆಂಕಟರಮಣ ದೇವಸ್ಥಾನದಲ್ಲಿ ದೇವರ ದುಡ್ಡನ್ನು ತಿಂದವರ ವಿರುದ್ಧ ಪ್ರತಿಭಟಿಸಿದ್ದು ವಿನಾಯಕ ಬಾಳಿಗ ಮಾಡಿದ ಅಪರಾಧವೇ.. ದೇವಸ್ಥಾನದ ದುಡ್ಡು ಎಲ್ಲಿ ಹೋಗುತ್ತೆ ಅಂತ ವಿನಾಯಕ ಬಾಳಿಗ ತೋರಿಸಿಕೊಟ್ಟಿದ್ದರು. ಅಲ್ಲದೆ, ಪ್ರಶ್ನೆಯನ್ನೂ ಮಾಡಿದ್ದರು. ಪ್ರಶ್ನೆ ಮಾಡಿದ್ದಕ್ಕಾಗಿಯೇ ವಿನಾಯಕ ಬಾಳಿಗನ ಕೊಲೆಯಾಯಿತು ಎಂದು ಪೊಲೀಸರು ಕೋರ್ಟಿಗೆ ಸಲ್ಲಿಸಿರುವ ಚಾರ್ಜ್ ಶೀಟ್ ಹೇಳುತ್ತದೆ. ಮುಜರಾಯಿ ದೇವಸ್ಥಾನದ ಕಾಣಿಕೆ ಹುಂಡಿ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ವೆಂಕಟರಮಣ ದೇವರ ಕಾಣಿಕೆ ಡಬ್ಬದ ಬಗ್ಗೆಯೂ ಮಾತನಾಡಬೇಕಲ್ವಾ? ಎಂದು ಬಿ.ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದರು.

ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ತನ್ನ ಬೂತ್ ಮಟ್ಟದ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆಯ ಸಂದರ್ಭದಲ್ಲಿ ಬಿಜೆಪಿ ಬಾಯಿ ಮುಚ್ಚಿ ಕೂತಿತ್ತು, ಪ್ರಾಮಾಣಿಕ ಕಾರ್ಯಕರ್ತನನ್ನು ಭ್ರಷ್ಟಾಚಾರಿ ಎಂದು ಬಿಂಬಿಸಲು, ಆ ಮೂಲಕ ಕೊಲೆಗಡುಕರನ್ನು ರಕ್ಷಿಸಲು ವ್ಯವಸ್ಥಿತ ಪಿತೂರಿ ನಡೆಸಲಾಗಿತ್ತು. ಆ ಸಂದರ್ಭ ಜಿಲ್ಲೆಯ ಜನಪರ ಸಂಘಟನೆಗಳು ಒಂದಾಗಿ ಬೀದಿಗೆ ಇಳಿಯದಿರುತ್ತಿದ್ದರೆ ಪ್ರಕರಣ ಮುಚ್ಚಿ ಹೋಗುತ್ತಿತ್ತು. ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತನ ಕೊಲೆಗೆ ನ್ಯಾಯ ಕೇಳಿ ಎಡಪಂಥೀಯರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದರೆ, ಬಿಜೆಪಿ ಶಾಸಕರು ಕೊಲೆಗಾರರ ರಕ್ಷಣೆಗೆ ಪಿತೂರಿ ಮಾಡುತ್ತಿದ್ದಾರೆ. ಇದು ಬಿಜೆಪಿಯ ನಿಜ ಸ್ವರೂಪ ಎಂದು ಆಪಾದಿಸಿದರು.

ಹಿರಿಯ ಚಿಂತಕ ಪ್ರೊ.ನರೇಂದ್ರ ನಾಯಕ್ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ಮನೋವೈದ್ಯರಾದ ಡಾ. ಪಿ.ವಿ ಭಂಡಾರಿ, ಅಮೃತ ಶೆಣೈ, ಬಿ. ಶೇಖರ್, ಡಿಎಸ್ಎಸ್ ಹಿರಿಯ ಮುಖಂಡರಾದ ಎಂ.ದೇವದಾಸ್ , ಎಂ.ಜಿ ಹೆಗಡೆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಬಾಳಿಗಾ ಸೋದರಿಯರಾದ ಅನುರಾಧ ಬಾಳಿಗ, ಹರ್ಷ ಬಾಳಿಗ, ಮಾಜಿ ಉಪಮೇಯರ್ ನಮಿತಾ ಡಿ. ರಾವ್, ಕಾರ್ಮಿಕ ಮುಖಂಡರಾದ ಚಿತ್ತರಂಜನ್ ಶೆಟ್ಟಿ, ಸುನೀಲ್ ಕುಮಾರ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ವಿ. ಕುಕ್ಯಾನ್, ಕರುಣಾಕರ್, ಡಿವೈಎಫ್ಐ ಮುಖಂಡರಾದ ನವೀನ್ ಕೊಂಚಾಡಿ, ತಯ್ಯೂಬ್ ಬೆಂಗರೆ, ನಿತಿನ್ ಕುತ್ತಾರ್, ಮನೋಜ್ ವಾಮಂಜೂರು, ಚರಣ್ ಶೆಟ್ಟಿ ಪಂಜಿಮೊಗರು, ಡಿಎಸ್ಎಸ್ ಮುಖಂಡರಾದ ರಘು ಎಕ್ಕಾರ್, ಸದಾಶಿವ ಪಡುಬಿದ್ರೆ, ಎಸ್.ಎಲ್ ಪಿಂಟೋ, ಪ್ರಮೀಳಾ ಶಕ್ತಿನಗರ, ಅಸುಂತ  ಡಿಸೋಜ, ಸರೋಜಿನಿ ಬಂಟ್ವಾಳ, ಭಾರತಿ ಬೋಳಾರ, ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ್, ಶ್ಯಾಮ್ ಸುಂದರ್, ಪ್ರಭಾಕರ್ ಕಾಪಿಕಾಡ್, ಸಮರ್ಥ್ ಭಟ್,  ಮಾಜಿ ಕಾರ್ಪೋರೇಟರ್ ರವೂಫ್ ಬಜಾಲ್, ಪ್ರಕಾಶ್ ಸಾಲ್ಯಾನ್, ಪದ್ಮನಾಭ ಅಮೀನ್, ಬಿ ವಿಶ್ವನಾಥ್, ಪದ್ಮನಾಭ ಪಣಿಕರ್, ದಯಾನಂದ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ದೇಶಪ್ರೇಮಿ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಂತೋಷ್ ಬಜಾಲ್ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು.