ಮಂಗಳೂರು ಪೊಲೀಸರ ತನಿಖೆಯ ಮೇಲೆ ನಂಬಿಕೆ ಇಲ್ಲ, ಇವರದ್ದು ಚೈನ್ ಲಿಂಕ್ ; ವೇಶ್ಯೆ ಎಂದಿದ್ದಕ್ಕೆ ಮಾನನಷ್ಟ ಕೇಸ್, ಸುಮತಿ ನಾಯ್ಕ್ ಹೇಳಿಕೆ

20-03-26 09:44 pm       HK News Staffer   ಕರಾವಳಿ

ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಸುಮತಿ ನಾಯ್ಕ್, ಮಂಗಳೂರು ಪೊಲೀಸರು‌ ನಡೆಸುವ ತನಿಖೆಯ ಮೇಲೆ ನಂಬಿಕೆ ಇಲ್ಲ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮೇಲೆಯೂ ನಂಬಿಕೆ ಇಲ್ಲ. ಇನ್ಸ್ ಪೆಕ್ಟರ್ ಸಂದೇಶ್ ಅಮಾನತು ಮಾಡೋದಲ್ಲ, ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಂಗಳೂರು, ಮಾರ್ಚ್ 20: ಮೂಡುಬಿದ್ರೆ ಇನ್ಸ್ ಪೆಕ್ಟರ್ ಸಂದೇಶ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿರುವ ಸುಮತಿ ನಾಯ್ಕ್, ಮಂಗಳೂರು ಪೊಲೀಸರು‌ ನಡೆಸುವ ತನಿಖೆಯ ಮೇಲೆ ನಂಬಿಕೆ ಇಲ್ಲ. ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮೇಲೆಯೂ ನಂಬಿಕೆ ಇಲ್ಲ. ಇನ್ಸ್ ಪೆಕ್ಟರ್ ಸಂದೇಶ್ ಅಮಾನತು ಮಾಡೋದಲ್ಲ, ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ. 

ಮೂಡುಬಿದ್ರೆ ಇನ್ಸ್ಪೆಕ್ಟರ್ ಸಂದೇಶ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಹೊರಿಸಿ ಮಹಿಳಾ ಆಯೋಗಕ್ಕೆ ದೂರು ನೀಡಿದ್ದ ಸುಮತಿ ನಾಯ್ಕ್, ಹಲವಾರು ಮಹಿಳೆಯರಿಗೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದಲ್ಲಿ ಸಂದೇಶ ಅವರನ್ನು ಬಂಧಿಸಬೇಕು.‌ ಎಸಿಪಿ ಶ್ರೀಕಾಂತ್ ಅವರು ಕೂಡ ಈ ಪ್ರಕರಣದಲ್ಲಿ ಅಮಾನತ್ತಾಗಬೇಕು, ಇನ್ಸ್ ಪೆಕ್ಟರ್, ಎಸಿಪಿ, ಕಮಿಷನರ್ ಅವರದ್ದು ಚೈನ್ ಲಿಂಕ್. ಇವರ ತನಿಖೆಯ ಬಗ್ಗೆ ನಮಗೆ ನಂಬಿಕೆ ಇಲ್ಲ ಎಂದು ಹೇಳಿದ್ದಾರೆ. 

ಇವರ ಮೇಲೆ ನಂಬಿಕೆ ಇಲ್ಲವೆಂದೇ ಡಿಜಿಪಿ ಸಲೀಂ ಅವರಿಗೆ ಮನವಿ ಮಾಡಿದ್ದೇವೆ. ಇವರ ಬದಲು ದ.ಕ ಎಸ್ಪಿ ಡಾ.ಅರುಣ್ ನೇತೃತ್ವದಲ್ಲಿ ತನಿಖೆ ನಡೆದರೂ ಒಪ್ಪುತ್ತೇವೆ. ಅಥವಾ ಇಲಾಖೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರಿಂದ ಪ್ರಕರಣದ ತನಿಖೆ‌ ನಡೆಸಬೇಕು. ಈ ಪ್ರಕರಣದಲ್ಲಿ ಸಾಕ್ಷಿಗಳಿದ್ದರೂ ಸಾಕ್ಷಿ ಇಲ್ಲ ಅಂತ ಪೊಲೀಸ್ ತನಿಖೆ ಹೇಳಿದೆ. ಆದರೆ ನಾವು ಇಷ್ಟೆಲ್ಲ ಹೇಳಿದ ಮೇಲೂ ಪೊಲೀಸರು ಸಾಕ್ಷಿ ಇಲ್ಲ ಎಂದರೆ ಇವರನ್ನು ನಂಬುವುದು ಹೇಗೆ ಎಂದು ಪ್ರಶ್ನಿಸಿದರು. 

ಸಾಕಷ್ಟು ಪ್ರಕರಣಗಳಲ್ಲಿ ಇನ್ಸ್‌ಪೆಕ್ಟರ್ ಸಂದೇಶ್ ಮತ್ತು ಮೇಲಾಧಿಕಾರಿಗಳ ವಿರುದ್ಧ ತನಿಖೆ ಆಗಬೇಕು. ನಾವು ಪೊಲೀಸ್ ಕಮಿಷನರಿಗೆ ಸಾಕ್ಷಿಗಳನ್ನು ತೋರಿಸಿದ್ದೇವೆ. ಅದನ್ನು ಅವರು ನೋಡಿದ್ದಾರೆ. ಹೆಚ್ಚಿನದ್ದಕ್ಕೆ ಮೂಡುಬಿದ್ರೆ ಠಾಣೆಯ ಸಿಸಿ ಕ್ಯಾಮೆರಾಗಳನ್ನು ನೋಡಿದರೆ ಸಾಕು, ಅವರಿಗೆ ಸಾಕಷ್ಟು ಸಾಕ್ಷ್ಯ ಸಿಗುತ್ತೆ ಎಂದು ಹೇಳಿದ ಸುಮತಿ ನಾಯ್ಕ್, ಪೊಲೀಸ್ ಡ್ರೆಸ್ ನಲ್ಲಿ ಅಸಭ್ಯ ವರ್ತಿಸಿದ ವಿಡಿಯೋ ಇದ್ರೂ ಯಾಕೆ ಎಫ್ಐಆರ್ ಮಾಡಿಲ್ಲ? ಎಂದು ಪ್ರಶ್ನಿಸಿದರು. 

ಪೊಲೀಸ್ ಇನ್ಸ್ಪೆಕ್ಟರ್ ಸಂದೇಶ್ ಹಾಗೂ ನನ್ನ ಸಹೋದರಿ ಪ್ರಪುಲ್ಲಾ ನನ್ನ ವಿರುದ್ಧ ವೇಶ್ಯೆ ಅಂತ ಆರೋಪ ಮಾಡಿದ್ದಾರೆ. ಬೆಂಗಳೂರಿನ ಮಡಿವಾಳ ಠಾಣೆಯಲ್ಲಿ ಇರುವ ಎಫ್ಐಆರ್ ತೋರಿಸಿದ್ದಾರೆ. ಆದರೆ ನನ್ನ ವಿರುದ್ಧ ಯಾವುದೇ ರೀತಿ ಪ್ರಕರಣ ಇಲ್ಲ ಅಂತ ಮಡಿವಾಳ ಠಾಣೆಯವರೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅಕ್ಕ ಪ್ರಫುಲ್ಲ ನಾಯಕ್ ಇನ್ಸ್ ಪೆಕ್ಟರ್ ಸಂದೇಶ್ ಕೈಗೊಂಬೆಯಾಗಿದ್ದಾರೆ. ಹಾಗಾಗಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. 

2012ರಲ್ಲಿ ಮಡಿವಾಳದಲ್ಲಿ ದಾಖಲಾಗಿರುವ ಎಫ್ಐಆರ್ ನಲ್ಲಿ ಸುಮತಿ ಅಂತ ಇರೋ ಹೆಸರು ನನ್ನದಲ್ಲ. ವೇಶ್ಯೆ ಅನ್ನುವ ಆರೋಪಕ್ಕೆ ಇವರ ವಿರುದ್ಧ ಮಾನನಷ್ಟ ಮೋಕದ್ದಮೆ ಹೂಡುತ್ತೇನೆ ಎಂದ ಸುಮತಿ ನಾಯ್ಕ್, ಮಂಗಳೂರು ಪೊಲೀಸ್ ಕಮಿಷನರ್ ನೇತೃತ್ವದಲ್ಲಿ ‌ನಡೆಯುವ ತನಿಖೆಯನ್ನು ನಾವು ಒಪ್ಪುವುದಿಲ್ಲ. ಅದರ ಮೇಲೆ‌ ನಂಬಿಕೆಯೂ ಇಲ್ಲ. ಮಹಿಳಾ‌ ಆಯೋಗ ನನ್ನೊಂದಿಗೆ ನಿಂತಿದೆ. ಹಾಗಾಗಿ ನ್ಯಾಯ ಸಿಗುವ ನಂಬಿಕೆ ಇದೆ ಎಂದು ಪ್ರಕರಣದ ಸಂತ್ರಸ್ತೆ ಎನ್ನಲಾದ ಸುಮತಿ ಹೇಳಿದ್ದಾರೆ.