ಬೋಳೂರಿನಲ್ಲಿ ದೈವನರ್ತನ ಮಾಡಿದ್ದು ಕ್ರಿಸ್ತಿಯನ್ ಅಲ್ಲ, ಪಂಬದ ಸಮುದಾಯದ್ದೇ ವ್ಯಕ್ತಿ, ಸುದ್ದಿಗೋಷ್ಟಿಯಲ್ಲಿ ಜಾತಿ ಪ್ರಮಾಣಪತ್ರ ಬಿಡುಗಡೆ, ಪ್ರಚಾರಕ್ಕಾಗಿ ಆರೋಪ ಮಾಡಿದ್ದಾರೆಂದು ತಿರುಗೇಟು

18-03-26 03:38 pm       HK News Staffer   ಕರಾವಳಿ

ಕ್ರಿಸ್ತಿಯನ್ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದಾರೆಂಬ ಆರೋಪದ ಬಗ್ಗೆ ಸ್ವತಃ ದೈವ ನರ್ತಕರೇ ಸ್ಪಷ್ಟನೆ ನೀಡಿದ್ದು ದೈವ ನರ್ತನ ಮಾಡಿದ್ದ ಸುಶಾಂತ್ ಪಂಬದ ಕ್ರಿಸ್ತಿಯನ್ ಅಲ್ಲ, ಒಬ್ಬ ಹಿಂದು ಆಚರಣೆ, ಜಾತಿ ಪದ್ಧತಿಗೆ ಒಳಪಟ್ಟ ಯುವಕನಾಗಿದ್ದು ಅದಕ್ಕೆ ಬೇಕಾದ ದಾಖಲೆಯೂ ನಮ್ಮಲ್ಲಿದೆ ಎಂದು ಹೇಳಿದ್ದಾರೆ. ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ.

ಮಂಗಳೂರು, ಮಾರ್ಚ್ 18: ಕ್ರಿಸ್ತಿಯನ್ ಯುವಕನಿಂದ ದೈವ ನರ್ತನ ಸೇವೆ ಮಾಡಿಸಿದ್ದಾರೆಂಬ ಆರೋಪದ ಬಗ್ಗೆ ಸ್ವತಃ ದೈವ ನರ್ತಕರೇ ಸ್ಪಷ್ಟನೆ ನೀಡಿದ್ದು ದೈವ ನರ್ತನ ಮಾಡಿದ್ದ ಸುಶಾಂತ್ ಪಂಬದ ಕ್ರಿಸ್ತಿಯನ್ ಅಲ್ಲ, ಒಬ್ಬ ಹಿಂದು ಆಚರಣೆ, ಜಾತಿ ಪದ್ಧತಿಗೆ ಒಳಪಟ್ಟ ಯುವಕನಾಗಿದ್ದು ಅದಕ್ಕೆ ಬೇಕಾದ ದಾಖಲೆಯೂ ನಮ್ಮಲ್ಲಿದೆ ಎಂದು ಹೇಳಿದ್ದಾರೆ. ಮಾರ್ಚ್ 13 ರಂದು ಸುದ್ದಿಗೋಷ್ಠಿ ನಡೆಸಿದ್ದ ಡಾ.ರತಿ ಅವರಿಗೆ ಈ ಮೂಲಕ ತಿರುಗೇಟು ನೀಡಿದ್ದಾರೆ. 

ಕರಾವಳಿಯಲ್ಲಿ ದೈವ ನರ್ತನ ಸೇವೆಯನ್ನು ಪಂಬದ, ಪಾಣಾರ ಸುಮಾರು 16 ಜಾತಿಗಳವರು ಮಾಡಬೇಕೇ ವಿನಾ ಬೇರೆಯವರು ಮಾಡುವಂತಿಲ್ಲ‌. ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೈವಕ್ಕೆ ಕ್ರಿಶ್ಚಿಯನ್ ಮಹಿಳೆಗೆ ಹುಟ್ಟಿದ ಯುವಕನಿಂದ ನರ್ತನ ಸೇವೆ ಮಾಡಲಾಗಿದೆ ಎಂದು ದೈವ ನರ್ತನದ ಬಗ್ಗೆ ಸಂಶೋಧನೆ ನಡೆಸಿರುವ ಡಾ.ರತಿ ಆರೋಪಿಸಿದ್ದರು. ಸುಶಾಂತ್ ಪಂಬದ ಜಾತಿಗೆ ಸೇರಿದವನೆಂದು ಜಾತಿ ಪ್ರಮಾಣಪತ್ರ ನಮ್ಮಲ್ಲಿದ್ದು ಹುಟ್ಟಿನಿಂದಲೂ ಹಿಂದೂ ಜೀವನ ಪದ್ಧತಿ ಅನುಸರಿಸಿಕೊಂಡು ಬಂದಿದ್ದು ಪಂಬದ ಸಮಾಜಕ್ಕೆ ಸೇರಿದವನು“ ಎಂದು ದೈವನರ್ತಕ ಸೂರಜ್ ಚಿಪ್ಪಾರು ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. 

”ನಮ್ಮದೇ ಪಂಬದ ಸಮುದಾಯದ ಗಣೇಶ್ ಪದವಿನಂಗಡಿ ಎಂಬವರು ಮದುವೆ ಆಗಿರುವುದು ಕ್ರಿಶ್ಚನ್ ಮಹಿಳೆಯನ್ನು ಎಂಬುದು ಸತ್ಯ. ಗಣೇಶ್ ಅವರನ್ನು ಮದುವೆಯಾದ ಬಳಿಕ ನಮ್ಮ ಹಿಂದೂ ಸಂಪ್ರದಾಯಕ್ಕೆ ಸೇರಿಕೊಂಡು ಹಾಗೂ ಪಂಬದ ಜಾತಿಯ ನೀತಿ ನಿಯಮಗಳನ್ನು ಪಾಲಿಸಿಕೊಂಡು ಬಂದಿರುತ್ತಾರೆ. ಯಾವಾಗ ಒಂದು ಹೆಣ್ಣು ತನ್ನ ಮೂಲ ಧರ್ಮವನ್ನೇ ಬಿಟ್ಟು ಮತ್ತೊಂದು ಧರ್ಮಕ್ಕೆ ಬಂದು ಇಲ್ಲಿನ ಆಚಾರ ವಿಚಾರ ಪದ್ದತಿಗಳನ್ನು ಅನುಸರಿಸುತ್ತಾರೆ, ಅವರು ನಮ್ಮವರೇ ಆಗುತ್ತಾರೆ. ಮಾತ್ರವಲ್ಲದೆ ಹೆಣ್ಣನ್ನು ಈ ವಿಚಾರದಲ್ಲಿ ದೂಷಣೆ ಮಾಡುವುದು ಅತಿ ದೊಡ್ಡ ಅನ್ಯಾಯವಾಗುತ್ತದೆ. ಹಾಗೆಯೇ ಪಂಬದ ಜನಾಂಗದ ಗಣೇಶ ಅವರು ಹಿಂದು ಸಂಪ್ರದಾಯದಂತೆ ಮದುವೆಯಾಗಿ ಅದರ ನಂತರ ಸುಶಾಂತ್ ಪಂಬದರನ್ನು ಮಗುವಾಗಿ ಪಡೆಯುತ್ತಾರೆ. ಅದರಂತೆ ಕಾನೂನು ಪ್ರಕಾರ ಜಾತಿ ಪ್ರಮಾಣ ಪತ್ರ ಹಾಗೂ ಎಲ್ಲಾ ದಾಖಲೆಗಳನ್ನು ಈಗಾಗಲೇ ಮಾಡಿಕೊಂಡಿರುತ್ತಾರೆ“ ಎಂದು ಸೂರಜ್ ಚಿಪ್ಪಾರು ಹೇಳಿದರು.

ಚಿಪ್ಪಾರು ಗಣೇಶ್ ಪಂಬದ ಮಾತಾಡಿ, ”ಇಲ್ಲಿ ಎಲ್ಲಿಯೂ ಪಂಬದ ಜನಾಂಗದ ವೃತ್ತಿ ಗೌರವ ಕಳೆಯುವ ಕಾರ್ಯವಾಗಲಿ ಅಥವಾ ದೈವಾರಾಧನೆಗೆ ಅಪಚಾರ ಮಾಡುವ ಕೆಲಸವಾಗಲಿ ಆಗಲಿಲ್ಲ. ಅಂದು ಮಂಗಳೂರಿನ ಬೋಳೂರಿನಲ್ಲಿ ಜಾರಂದಾಯ ದೈವಸ್ಥಾನದ ಬಂಟ ದೇವಕ್ಕೆ ನರ್ತಕ ಸೇವೆಯನ್ನು ಶ್ರದ್ದಾಭಕ್ತಿಯಿಂದ ಕಿಂಚಿತ್ತು ಲೋಪದೋಷಗಳು ಬಾರದಂತೆ ದೈವೀ ಅಪ್ಪಣೆಯಂತೆ ನಡೆಸಲಾಗಿದೆ. ಇದರಿಂದ ಮಾಡಿಸಿದವರಿಗಾಗಲಿ, ಊರಿಗಾಗಲಿ, ನಮಗಾಗಲಿ ಯಾವುದೇ ತೊಂದರೆಗಳು ಬಾರದೆ ಅತ್ಯುತ್ತಮವಾಗಿ ನಡೆದಿದೆ. ನಾನು ಕಳೆದ 31 ವರ್ಷಗಳಿಂದ ಕುಂಬ್ಳೆ ಸೀಮೆ, ವಿಟ್ಲ ಸೀಮೆ, ಕೋಳಿಯೂರು ಸೀಮೆ, ಮಂಜೇಶ್ವರ ಮಾಗಣೆ, ಕುರ್ನಾಡು ಮಾಗಣೆ, ಹರೇಕಳ ಪಾವೂರು ಮಾಗಣೆ ಹೀಗೆ ಹತ್ತು ಹಲವು ಮಾಗಣೆಗಳಲ್ಲಿ ದೈವ ನರ್ತನ ಸೇವೆಯನ್ನು ನಿಷ್ಠೆಯಿಂದ ನಮ್ಮ ಜನಾಂಗಕ್ಕೆ ಮತ್ತು ಭಕ್ತ ಸಮುದಾಯದವರಿಗೆ ಧಕ್ಕೆ ಬಾರದ ಹಾಗೆ ನಡೆಸಿಕೊಂಡು ಬಂದಿದ್ದೇನೆ. ಇದರಲ್ಲಿ ಸರಿ ತಪ್ಪುಗಳ ಬಗ್ಗೆ ತಿಳಿದುಕೊಂಡಿದ್ದೇನೆ. ಮಾತ್ರವಲ್ಲದೆ ಕಾಸರಗೋಡು, ದಕ್ಷಿಣ ಕನ್ನಡ ಅವಿಭಜಿತ ಜಿಲ್ಲೆಯಲ್ಲಿ ಭಕ್ತಿಯಿಂದ ಯಾರೆಲ್ಲ ನನ್ನನ್ನು ಆಹ್ವಾನಿಸುತ್ತಾರೋ ಅವರಿಗೆಲ್ಲ ಖಂಡಿತವಾಗಿಯೂ ನನ್ನ ಸೇವೆಯನ್ನು ನೀಡಲು ಸಿದ್ಧನಿದ್ದೇನೆ. ಮಾತ್ರವಲ್ಲದೆ ಮುಂದಕ್ಕೂ ಯಾರೆಲ್ಲ ಕರೆಯುತ್ತಾರೋ ಅಲ್ಲಿಗೆ ಸೇವೆ ಸಲ್ಲಿಸಲು ಹೋಗುತ್ತೇನೆ“ ಎಂದರು. 

ದೈವ ನರ್ತಕ ಸುಶಾಂತ್ ಬಂಗೇರ ಮಾತನಾಡಿ, ”ನನ್ನನ್ನು ಕ್ರೈಸ್ತ ಧರ್ಮಕ್ಕೆ ಸೇರಿದವನು ಎಂದು ಅವಮಾನ ಮಾಡಿದ್ದಾರೆ. ಅವರು ಪತ್ರಿಕಾಗೋಷ್ಠಿ ನಡೆಸಿ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ಅವರ ವೈಯಕ್ತಿಕ ಲಾಭಕ್ಕಾಗಿ ನನ್ನ ಭವಿಷ್ಯ ಹಾಳು ಮಾಡುತ್ತಿದ್ದಾರೆ. ಅವರಿಂದ ನನಗೆ ಈ ಪರಿಸ್ಥಿತಿ ಒದಗಿಬಂದಿದೆ. ದೈವನರ್ತನ ಮಾಡಲು ಕಷ್ಟವಾಗುತ್ತಿದೆ“ ಎಂದರು.  ಪತ್ರಿಕಾಗೋಷ್ಟಿಯಲ್ಲಿ ಗಣೇಶ್ ಕಜೆ, ಕಮಲಾಕ್ಷ ಪಂಬದ ಗಂಧಕಾಡು, ಸವಿತಾ ಮತ್ತಿತರರು ಉಪಸ್ಥಿತರಿದ್ದರು.