Mangalore, Lonavala Accident: ಲೋನಾವಾಲ ಘಾಟಿಯಲ್ಲಿ ಗ್ಯಾಸ್ ಟ್ಯಾಂಕರ್ ಪಲ್ಟಿ ; ಸಂಚಾರ ನಿಷೇಧ, ಸಿಕ್ಕಿಬಿದ್ದ ಸಾವಿರಾರು ವಾಹನಗಳು, ಮಂಗಳೂರಿನಿಂದ ಮುಂಬೈ ಹೊರಟಿದ್ದ ಪ್ರಯಾಣಿಕರ ತೀವ್ರ ಪರದಾಟ, ಜಾಲತಾಣದಲ್ಲಿ ಆಕ್ರೋಶ 

04-02-26 06:59 pm       Mangalore Correspondent   ಕರಾವಳಿ

ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದು ಲೋನಾವಾಲಾ- ಖಂಡಾಲಾ ಘಾಟಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ.‌ ಬುಧವಾರ ನಸುಕಿನ ನಾಲ್ಕು ಗಂಟೆಗೆ ಟ್ಯಾಂಕರ್ ಬಿದ್ದಿದ್ದು ಅನಿಲ ಸೋರಿಕೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತ ಆಗಿದೆ.

ಮಂಗಳೂರು, ಫೆ.4 : ಮುಂಬೈ-ಪುಣೆ ಎಕ್ಸ್‌ಪ್ರೆಸ್‌ ವೇ ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಮಗುಚಿ ಬಿದ್ದು ಲೋನಾವಾಲಾ- ಖಂಡಾಲಾ ಘಾಟಿಯಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ.‌ ಬುಧವಾರ ನಸುಕಿನ ನಾಲ್ಕು ಗಂಟೆಗೆ ಟ್ಯಾಂಕರ್ ಬಿದ್ದಿದ್ದು ಅನಿಲ ಸೋರಿಕೆಯಿಂದಾಗಿ ಟ್ರಾಫಿಕ್ ಅಸ್ತವ್ಯಸ್ತ ಆಗಿದೆ. ಎಕ್ಸ್‌ಪ್ರೆಸ್‌ವೇ ಮತ್ತು ಹಳೆಯ ಹೆದ್ದಾರಿ (NH-48) ಎರಡರಲ್ಲೂ ಸಂಚಾರ ಸ್ಥಗಿತಗೊಂಡಿದ್ದು ಮಂಗಳೂರು, ಹುಬ್ಬಳ್ಳಿ ಕಡೆಯಿಂದ ತೆರಳಿರುವ ಸಾವಿರಾರು ಬಸ್, ವಾಹನಗಳು ಸಿಕ್ಕಿಬಿದ್ದು ಪ್ರಯಾಣಿಕರು ಪರದಾಡುವ ಸ್ಥಿತಿಯಾಗಿದೆ. 

ಮಂಗಳೂರಿನಿಂದ ಮಂಗಳವಾರ ಮಧ್ಯಾಹ್ನ ಹೊರಟಿದ್ದ ವೋಲ್ವೋ ಪ್ಯಾಸೆಂಜರ್ ಬಸ್ ಗಳು ಬುಧವಾರ ಬೆಳಗ್ಗೆ ತಲುಪಬೇಕಿತ್ತು. ಆದರೆ ನಸುಕಿನಲ್ಲಿ ಹೆದ್ದಾರಿ ನಡುವೆ ಸಿಕ್ಕಿಬಿದ್ದ ಕಾರಣ ವಾಹನಗಳು ಸರತಿಯಲ್ಲಿ ನಿಂತಿದ್ದು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅನಿಲ ಸೋರಿಕೆಯಿಂದಾಗಿ ಹೆದ್ದಾರಿ ಸಂಚಾರ ನಿಲ್ಲಿಸಿದ್ದು ಎರಡೂ ಕಡೆಯಿಂದ ಮುಂಬೈ- ಪುಣೆ ಹೆದ್ದಾರಿ ಬ್ಲಾಕ್ ಆಗಿದೆ.‌ ಇದರಿಂದಾಗಿ ಬುಧವಾರ ಮಧ್ಯಾಹ್ನ ಕಳೆದರೂ ವಾಹನಗಳ ಸಂಚಾರ ಆರಂಭಗೊಂಡಿಲ್ಲ. ಬದಲಿ ರಸ್ತೆಯಲ್ಲಿ ಚಲಿಸಿದರೂ ಹಳೆ ರಸ್ತೆಯೂ ಟ್ರಾಫಿಕ್ ಜಾಮ್ ಉಂಟಾಗಿದೆ. 

​ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇಲ್ಲಿನ ಟ್ರಾಫಿಕ್ ತೊಂದರೆಯನ್ನು "ಅತ್ಯಂತ ಪರಿಸ್ಥಿತಿ ಎಂದು ಬಣ್ಣಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನ ಸಂಚಾರ ರದ್ದುಗೊಳಿಸಿದೆ. ಅಡೋಶಿ ಸುರಂಗದ ಸಮೀಪ ಬುಧವಾರ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಟ್ಯಾಂಕರ್‌ ಪಲ್ಟಿಯಾಗಿ ಭಾರಿ ಪ್ರಮಾಣದ ಅನಿಲ ಸೋರಿಕೆಯಾಗಿದೆ. ಇದರಿಂದಾಗಿ ಲೋನಾವಾಲಾ - ಖಂಡಾಲಾ ಘಾಟಿ ಸಂಚಾರ ಅಸ್ತವ್ಯಸ್ತವಾಗಿದ್ದು ವಾಹನ ಪ್ರಯಾಣಿಕರು ಅನ್ನ, ನೀರಿಲ್ಲದೆ ಸಿಲುಕಿಕೊಂಡಿದ್ದಾರೆ.‌ 

ಸಾವಿರಾರು ಪ್ರಯಾಣಿಕರು ಗಂಟೆಗಟ್ಟಲೆ ವಾಹನಗಳ ಸಾಲಿನಲ್ಲಿ ಸಿಲುಕಿದ್ದು, ಜಾಲತಾಣದಲ್ಲಿ ವಿಡಿಯೋ ಮಾಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಚಾರ ವಿಳಂಬದಿಂದಾಗಿ ವಿಮಾನಗಳು ಮತ್ತು ಪ್ರಮುಖ ಕಾರ್ಯಕ್ರಮಗಳನ್ನು ತಪ್ಪಿಸಿಕೊಂಡಿರುವುದಾಗಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಅಳಲು ತೋಡಿಕೊಂಡಿದ್ದಾರೆ. ಮಂಗಳೂರಿನಿಂದ ಬಸ್ಸಿನಲ್ಲಿ ಹೊರಟಿದ್ದ ಹತ್ತು ಮಂದಿ ಯುವಕರು ಮುಂಬೈನಲ್ಲಿ ಇವತ್ತು ಪ್ರಮುಖ ಇಂಟರ್ವ್ಯೂನಲ್ಲಿ ಭಾಗವಹಿಸಬೇಕಿತ್ತು. ಆದರೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಬಿದ್ದು ತೀವ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ. ಘಾಟ್ ಹೆದ್ದಾರಿ ಆಗಿರುವುದರಿಂದ ಊಟ ಇನ್ನಿತರ ಆಹಾರ, ಟಾಯ್ಲೆಟ್ ವ್ಯವಸ್ಥೆ ಇಲ್ಲದೆ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಈಡಾಗಿದ್ದಾರೆ. 

ಪರ್ಯಾಯ ರಸ್ತೆಗೆ ಸೂಚನೆ 

​ಲೋನಾವಾಲ- ಖಂಡಾಲ ಘಾಟ್ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಳಿಸಿದ್ದು ಪ್ರಯಾಣಿಕರು  ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಹೆದ್ದಾರಿ ಪ್ರಾಧಿಕಾರ ಸೂಚಿಸಿದೆ. ​ಈ ಮಾರ್ಗದ ಬದಲಿಗೆ ಮುಂಬೈ ಮತ್ತು ಪುಣೆ ನಡುವೆ ಸಂಚರಿಸುವ ಇಂಟರ್‌ಸಿಟಿ ಎಕ್ಸ್‌ಪ್ರೆಸ್, ಡೆಕ್ಕನ್ ಕ್ವೀನ್ ಮತ್ತು ಸಿಂಹಗಡ ಎಕ್ಸ್‌ಪ್ರೆಸ್ ರೈಲುಗಳನ್ನು ಬಳಸುವಂತೆ ಶಿಫಾರಸು ಮಾಡಲಾಗಿದೆ. 

ಅನಿಲ ಸೋರಿಕೆ ಸಂಪೂರ್ಣ  ನಿಯಂತ್ರಣಕ್ಕೆ ಬರುವ ವರೆಗೂ ಎಲ್ಲಾ ಘನ ವಾಹನಗಳನ್ನು ಹತ್ತಿರದ ಲೇ-ಬೈಗಳು (lay-bys) ಅಥವಾ ಫುಡ್ ಮಾಲ್‌ಗಳಲ್ಲಿ ನಿಲ್ಲಿಸುವಂತೆ NHAI ವಿನಂತಿಸಿದೆ. ವಿಪತ್ತು ನಿರ್ವಹಣಾ ತಂಡ, ಹೆದ್ದಾರಿ ಪೊಲೀಸ್, ಸಂಚಾರ ಪೊಲೀಸ್ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದು, ಟ್ಯಾಂಕರ್ ತೆರವುಗೊಳಿಸಲು ಮತ್ತು ಅನಿಲ ಸೋರಿಕೆಯನ್ನು ತಡೆಯಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪ್ರಯಾಣಿಕರಿಗೆ ಪರ್ಯಾಯ ಮಾರ್ಗಗಳು 

  • ​ತಾಮ್ಹಿನಿ ಘಾಟ್ ಮಾರ್ಗ: ದಕ್ಷಿಣ ಮುಂಬೈ / ನವಿ ಮುಂಬೈ - ಪುಣೆ -ಪೌಡ್ - ತಾಮ್ಹಿನಿ ಘಾಟ್- ಮಾಂಗಾವ್- ಇಂದಾಪುರ. 
  • ​ಮಾಲ್ಶೇಜ್ ಘಾಟ್ ಮಾರ್ಗ: ಥಾಣೆ / ಕಲ್ಯಾಣ್ / ಉಪನಗರಗಳು - ಪುಣೆ- ಚಾಕನ್ -ನಾರಾಯಣಗಾಂವ್ - ಮಾಲ್ಶೆಜ್ ಘಾಟ್- ಮುರ್ಬಾಡ್ - ಕಲ್ಯಾಣ್ -ಮುಂಬೈ.
  • ​ಭೀಮಾಶಂಕರ / ಮಂಚರ್ ಮಾರ್ಗ: ಉತ್ತರ ಮುಂಬೈ / ಪಾಲ್ಘರ್ - ಪುಣೆ- ಮಂಚರ್ ಜುನ್ನರ್ - ಮಾಲ್ಶೆಜ್ ಮಾರ್ಗ 
  • ​ತುರ್ತು ಸಹಾಯವಾಣಿ ಸಂಖ್ಯೆಗಳು

​ಪ್ರಯಾಣಿಕರಿಗೆ ಯಾವುದೇ ವೈದ್ಯಕೀಯ ನೆರವು ಅಥವಾ ಸಹಾಯದ ಅಗತ್ಯವಿದ್ದಲ್ಲಿ ಈ ಕೆಳಗಿನ ಸಂಖ್ಯೆಗಳನ್ನು ಸಂಪರ್ಕಿಸಬಹುದು:
​ಎಕ್ಸ್‌ಪ್ರೆಸ್‌ವೇ ನಿಯಂತ್ರಣ ಕೊಠಡಿ: 9822498224
​ಹೆದ್ದಾರಿ ಪೊಲೀಸ್: 9833498334 / 100

A major traffic disruption occurred on the Mumbai–Pune Expressway after a gas tanker overturned in the Lonavala–Khandala ghat section early Wednesday morning, leading to a severe traffic jam. The accident took place around 4 a.m. near the Adoshi tunnel, resulting in a significant gas leak and forcing authorities to halt traffic on both the Expressway and the old Mumbai–Pune Highway (NH-48).