ಅಕ್ರಮ ಗೋಹತ್ಯೆ, ಮಾಂಸಕ್ಕೆ ಬಳಕೆ ; ಆರೋಪಿಯ ಉಳ್ಳಾಲದ ಮನೆಯನ್ನು ಜಪ್ತಿಗೈದ ಧರ್ಮಸ್ಥಳ ಪೊಲೀಸರು 

05-11-25 03:35 pm       Mangalore Correspondent   ಕರಾವಳಿ

ಅಕ್ರಮ ಗೋಸಾಗಾಟದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿಗೆ ಸೇರಿದ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. 

ಬೆಳ್ತಂಗಡಿ, ನ.5 : ಅಕ್ರಮ ಗೋಸಾಗಾಟದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ ಆರೋಪಿಗೆ ಸೇರಿದ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. 

ನವೆಂಬರ್ 2 ರಂದು ಧರ್ಮಸ್ಥಳ ಪೊಲೀಸರು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್‌ ಯಾನೆ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು.

ದನ ನೀಡಿದ ಪಟ್ರಮೆ ಗ್ರಾಮದ ಪಟ್ಟೂರು ನಿವಾಸಿ ಝೊಹರಾ ಸೇರಿ ಮೂವರ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕಲಂ 5-12 ಕರ್ನಾಟಕ ಗೋ ಹತ್ಯೆ ನಿಷೇಧ ಕಾಯಿದೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020 ಮತ್ತು ಕಲಂ 11,(1)(D) ಪ್ರಾಣಿ ಹಿಂಸೆ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು. 

ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಮೂರು ದನಗಳನ್ನು ಆರೋಪಿ, ಉಳ್ಳಾಲ ತಾಲೂಕಿನ ಸಜೀಪನಡು ಗ್ರಾಮದ ತಂಚಿಬೆಟ್ಟು ನಿವಾಸಿ ಇಬ್ರಾಹಿಂ ಖಲೀಲ್ ಯಾನೆ ತೌಸೀಫ್ ನ ಮನೆಯಲ್ಲಿ ಗೋಮಾಂಸ ಮಾಡುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಈ ಹಿನ್ನಲೆಯಲ್ಲಿ ಧರ್ಮಸ್ಥಳ ಪೊಲೀಸರು ಉಳ್ಳಾಲದಲ್ಲಿರುವ ಇಬ್ರಾಹಿಂ ಖಲೀಲ್ ಯಾನೆ ತೌಸೀಫ್ ನ ಮನೆಯನ್ನು ನವೆಂಬರ್ 4 ರಂದು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ.