ದಕ್ಷ ಅಧಿಕಾರಿಗಳಿಂದಾಗಿ ಕೊಲೆ, ಸುಲಿಗೆ ನಿಂತಿದೆ, ಕರಾವಳಿಯಲ್ಲಿ ಕೋಮುವಾದ ಅಳಿದು ಸಾಮರಸ್ಯ ಬೆಳೆಯಬೇಕು ; ಅಶೋಕ್ ರೈ ಕೆಲಸಕ್ಕೆ ಶ್ಲಾಘಿಸಿದ ಸಿಎಂ ಸಿದ್ದರಾಮಯ್ಯ

20-10-25 10:28 pm       Mangalore Correspondent   ಕರಾವಳಿ

ಪುತ್ತೂರು ಶಾಸಕ ಅಶೋಕ್ ರೈ ತಮ್ಮ ರೈ ಅಸೋಸಿಯೇಟ್ಸ್ ಮೂಲಕ ಪ್ರತಿ ವರ್ಷ ದೀಪಾವಳಿಗೆ ಸಾವಿರಾರು ಜನರಿಗೆ ವಸ್ತ್ರದಾನ ಮಾಡುವುದು, ಈ ಬಾರಿ ಒಂದು ಲಕ್ಷ ಜನರಿಗೆ ವಸ್ತ್ರದಾನ ಮಾಡಿರುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಅಶೋಕ್ ರೈಯನ್ನು ತುಂಬಿದ ಸಭೆಯಲ್ಲಿ ಕೊಂಡಾಡಿದ್ದಾರೆ.

ಪುತ್ತೂರು, ಅ.20 : ಪುತ್ತೂರು ಶಾಸಕ ಅಶೋಕ್ ರೈ ತಮ್ಮ ರೈ ಅಸೋಸಿಯೇಟ್ಸ್ ಮೂಲಕ ಪ್ರತಿ ವರ್ಷ ದೀಪಾವಳಿಗೆ ಸಾವಿರಾರು ಜನರಿಗೆ ವಸ್ತ್ರದಾನ ಮಾಡುವುದು, ಈ ಬಾರಿ ಒಂದು ಲಕ್ಷ ಜನರಿಗೆ ವಸ್ತ್ರದಾನ ಮಾಡಿರುವ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ, ಅಶೋಕ್ ರೈಯನ್ನು ತುಂಬಿದ ಸಭೆಯಲ್ಲಿ ಕೊಂಡಾಡಿದ್ದಾರೆ.

ತಾಲೂಕು ಕ್ರೀಡಾಂಗಣದಲ್ಲಿ ನಡೆದ ಅಶೋಕ ಜನಮನ ಕಾರ್ಯಕ್ರಮದಲ್ಲಿ ಶ್ರೀಮಂತರು ಅಶೋಕ್ ರೈಯನ್ನು ನೋಡಿ ಕಲಿಯಬೇಕು, ಹಣ ಇದ್ದವರು ಬಹಳಷ್ಟು ಮಂದಿ ಇದ್ದಾರೆ. ಅದರಲ್ಲಿ ಒಂದು ಪಾಲನ್ನು ಬಡವರಿಗೆ ದಾನ ಮಾಡುವ ಅಶೋಕ್ ರೈ ಕಾರ್ಯಕ್ಕೆ ಸಿದ್ದರಾಮಯ್ಯ ಶಹಭಾಷ್ ಹೇಳಿದ್ದಾರೆ. ಅಲ್ಲದೆ, ಕರಾವಳಿ ಜಿಲ್ಲೆಗಳಲ್ಲಿ ಕೋಮುವಾದ ಅಳಿದು ಸಮಾನತೆ, ಭ್ರಾತೃತ್ವ ಬೆಳೆಯಬೇಕು. ಕಳೆದ ಕೆಲವು ತಿಂಗಳಲ್ಲಿ ಕೊಲೆ, ಸುಲಿಗೆ, ಕೊಲೆಯತ್ನ ಪ್ರಕರಣ ಕಡಿಮೆಯಾಗಿದೆಯಲ್ಲ. ದಕ್ಷ ಪೊಲೀಸ್ ಅಧಿಕಾರಿಗಳು ಬಂದರೆ ಎಲ್ಲವೂ ನಿಲ್ಲುತ್ತದೆ ಎಂಬುದಕ್ಕೆ ಇದೇ ನಿದರ್ಶನ. ಯಾರ ಮಾತೂ ಕೇಳದೆ ದಕ್ಷ ಕಮಿಷನರ್ ಮತ್ತು ಎಸ್ಪಿಯನ್ನು ಹಾಕಿದ್ದಕ್ಕೆ ಸಾರ್ಥಕ ಆಯ್ತು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಶಾಸಕ ಅಶೋಕ ರೈ, ಪುತ್ತೂರಿನ ಅಭಿವೃದ್ಧಿ ನನ್ನ ಕನಸು. ಜನರಿಗೆ ಇಲ್ಲಿಯೇ ಉದ್ಯೋಗ ದೊರಕಿಸುವುದು, ಅಭಿವೃದ್ಧಿಗೊಂಡ ಪುತ್ತೂರನ್ನು ಮುಂದಿಡುವ ಸಲುವಾಗಿ ಕಟಿಬದ್ಧನಾಗಿದ್ದೇನೆ. ಇದಕ್ಕಾಗಿ ಪುತ್ತೂರಿನಲ್ಲಿ ಮೆಡಿಕಲ್ ಕಾಲೇಜು ತರಲು ಶ್ರಮಿಸಿದ್ದೇನೆ. ಸಿದ್ದರಾಮಯ್ಯ ಅವರಲ್ಲಿ ಬೇಡಿಕೆ ಮುಂದಿಟ್ಟಾಗ ಕಳೆದ ಬಜೆಟ್ ನಲ್ಲಿ ಮೆಡಿಕಲ್ ಕಾಲೇಜು ಘೋಷಿಸಿದ್ದಲ್ಲದೆ, ಮೊದಲು ಸುಸಜ್ಜಿತ ಆಸ್ಪತ್ರೆ ಆಗಬೇಕೆಂದು ಅದನ್ನು ಮೇಲ್ದರ್ಜೆಗೇರಿಸಿದ್ದಾರೆ. ಕುಡಿಯುವ ನೀರು ಒದಗಿಸುವುದಕ್ಕಾಗಿ ಒಂದು ಸಾವಿರ ಕೋಟಿ ನೀಡಿದ್ದಾರೆ. ಕುಡಿಯುವ ನೀರು, ಡ್ರೈನೇಜ್, ಪ್ರವಾಸೋದ್ಯಮ ಕೆಲಸಕ್ಕಾಗಿ ಎರಡು ವರ್ಷದಲ್ಲಿ ಎರಡು ಸಾವಿರ ಕೋಟಿ ಅನುದಾನ ನೀಡಿದ್ದಾರೆ ಎಂದು ಹೇಳಿದರು.

13 ವರ್ಷಗಳಿಂದ ಪ್ರತಿ ದೀಪಾವಳಿಯನ್ನು ಜನರೊಂದಿಗೆ ಆಚರಿಸುತ್ತಿದ್ದೇನೆ. ವಸ್ತ್ರದಾನ, ಊಟ ಕೊಟ್ಟು ಆದರಿಸುತ್ತೇನೆ, ಇದರಲ್ಲಿ ಒಂದು ಪೈಸೆಯೂ ದೇಣಿಗೆ ಇಲ್ಲ. ಸ್ವಂತ ಉದ್ಯಮದ ಹಣವನ್ನು ಬಡವರಿಗೆ ನೀಡುತ್ತೇನೆ. ನಾನೂ ಬಡತನದಿಂದಲೇ ಮೇಲೆ ಬಂದವನು. ನನಗೆ ಬಡತನದ ಕಷ್ಟ ಗೊತ್ತಿದೆ.  ಇದಲ್ಲದೆ, ಆರೋಗ್ಯ, ವಸತಿ ಉದ್ದೇಶಕ್ಕಾಗಿ 5-6 ಕೋಟಿ ಪ್ರತಿ ವರ್ಷ ಖರ್ಚು ಮಾಡುತ್ತೇನೆ. ಪತಿಯನ್ನು ಕಳಕೊಂಡವರಿಗೆ ಈ ಬಾರಿ ಮನೆಗಳನ್ನು ಕಟ್ಟಿಕೊಡುತ್ತಿದ್ದು, ಅದನ್ನು ಸಿಎಂ ಅವರನ್ನೇ ಕರೆಸಿ ಉದ್ಘಾಟಿಸುತ್ತೇನೆ ಎಂದರು.

ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಒಡಿಯೂರು ಶ್ರೀ, ಮಾಣಿಲ ಶ್ರೀ, ಮಂಜುನಾಥ ಭಂಡಾರಿ, ಪದ್ಮರಾಜ್, ಶಕುಂತಳಾ ಶೆಟ್ಟಿ, ಕಾವು ಹೇಮನಾಥ ಶೆಟ್ಟಿ ಮತ್ತಿತರರಿದ್ದರು.

During the Ashoka Janamana event in Puttur, Chief Minister Siddaramaiah lauded MLA Ashok Rai for his large-scale charitable initiatives, including distributing clothes to one lakh people this Diwali through Rai Associates.